ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಓರ್ವ ಸಾವು, 40ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ

ಕಳಪೆ ಕಾಮಗಾರಿಯೇ ಕಟ್ಟಡ ಕುಸಿಯಲು ಕಾರಣ ಎನ್ನಲಾಗಿದ್ದು, ಕಟ್ಟಡದ ಮಾಲೀಕರನ್ನು ಬಸವರಾಜ ನಿಗದಿ, ಗಂಗಾಧರ್ ಸಿಂತ್ರಿ ಮತ್ತು ರವಿ ಸೊರಬ ಎಂದು ಗುರುತಿಸಲಾಗಿದೆ. 

Last Updated : Mar 19, 2019, 06:55 PM IST
ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಓರ್ವ ಸಾವು, 40ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ title=
Photo Courtesy: ANI

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದಲ್ಲಿರುವ ನಿರ್ಮಾಣ ಹಂತದ 5 ಅಂತಸ್ತಿನ ಕಟ್ಟಡ ಕುಸಿದು ಪರಿಣಾಮ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ 4 ಗಂಟೆ ಸಮಯದಲ್ಲಿ ಸಂಭವಿಸಿದೆ. 

ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿ ಇದ್ದ ಐದು ಅಂತಸ್ತಿನ ಬೃಹತ್ ಕಾಂಪ್ಲೆಕ್ಸ್ ನ ನಾಲ್ಕು ಮತ್ತು ಐದನೇ ಅಂತಸ್ತಿನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದೆ. ಈ ಕಾಂಪ್ಲೆಕ್ಸ್ ನಲ್ಲಿ ಮೆಡಿಕಲ್ ಸ್ಟೋರ್, ಹೋಟೆಲ್, ಬಾರ್ಬರ್ ಶಾಪ್ ಸೇರಿದಂತೆ ಅನೇಕ ವಾಣಿಜ್ಯ ಮಳಿಗೆಗಳಿದ್ದವು ಎನ್ನಲಾಗಿದೆ. ಕಟ್ಟಡ ಕುಸಿದ ಸಂದರ್ಭದಲ್ಲಿ ಸುಮಾರು 80 ಮಂದಿ ಸ್ಥಳದಲ್ಲಿದ್ದರು ಎನ್ನಲಾಗಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ 20ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗಳಿಗೆ ಸಾಗಿಸಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. 

ಕಳಪೆ ಕಾಮಗಾರಿಯೇ ಕಟ್ಟಡ ಕುಸಿಯಲು ಕಾರಣ ಎನ್ನಲಾಗಿದ್ದು, ಕಟ್ಟಡದ ಮಾಲೀಕರನ್ನು ಬಸವರಾಜ ನಿಗದಿ, ಗಂಗಾಧರ್ ಸಿಂತ್ರಿ ಮತ್ತು ರವಿ ಸೊರಬ ಎಂದು ಗುರುತಿಸಲಾಗಿದೆ. ಇವರಲ್ಲಿ ಕಟ್ಟಡದ ಓರ್ವ ಮಾಲೀಕ ಗಂಗಾಧರ ಸಿಂತ್ರೆ ಅವರು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಮಾವ ಎನ್ನಲಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು 6 ಮಂದಿ ಗಾಯಗೊಂಡಿದ್ದಾರೆ. ಇನ್ನೂ 40 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ ಸಹ ಘಟನೆ ಬಗ್ಗೆ ಆತನಕ ವ್ಯಕ್ತಪಡಿಸಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣೆಗೆ ಕೂಡಲೇ ಕ್ರಮ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಗಾಯಾಳುಗಳ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ. 

Trending News