ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ: ರಾಜ್ಯ ಸರ್ಕಾರದ ಆದೇಶ

ಸೆಪ್ಟೆಂಬರ್ 4ರಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು.

Written by - Puttaraj K Alur | Last Updated : Oct 20, 2022, 07:43 PM IST
  • ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರಿಗೆ 1,000 ರೂ. ದಂಡ
  • ಕೇಂದ್ರ ರಸ್ತೆ & ಹೆದ್ದಾರಿ ಸಚಿವಾಲಯದ ಸೂಚನೆ ಮೇರೆಗೆ ರಾಜ್ಯ ಸರ್ಕಾರದ ಆದೇಶ
  • ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ 500ರ ಬದಲು 1000 ದಂಡ ವಿಧಿಸಲು ನಿರ್ಧಾರ
ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ: ರಾಜ್ಯ ಸರ್ಕಾರದ ಆದೇಶ title=
ಸೀಟ್ ಬೆಲ್ಟ್ ಧರಿಸದವರಿಗೆ 1,000 ರೂ. ದಂಡ

ಬೆಂಗಳೂರು: ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರಿಗೆ 1,000 ರೂ. ದಂಡ ವಿಧಿಸುವುದಾಗಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಈ ಆದೇಶವನ್ನು ಹೊರಡಿಸಿದೆ.

ರಾಜ್ಯದ ಎಲ್ಲಾ ಕಮಿಷನರೇಟ್ ಮತ್ತು ಪೊಲೀಸ್ ಅಧೀಕ್ಷಕರಿಗೆ ಇಲಾಖೆಯಿಂದ ಈ ಬಗ್ಗೆ ಸೂಚನೆ ನೀಡಲಾಗಿದೆ. ಇದುವರೆಗೆ ಸೀಟ್ ಬೆಲ್ಟ್ ಧರಿಸದವರಿಗೆ 500 ರೂ. ದಂಡ ವಿಧಿಸಲಾಗುತಿತ್ತು. ಆದರೆ, ಇತ್ತೀಚಿಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ದಂಡದ ಮೊತ್ತವನ್ನು ಹೆಚ್ಚಿಸಿದೆ.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) (ರಸ್ತೆ ಸುರಕ್ಷತೆ) ಆರ್.ಹಿತೇಂದ್ರ ಅವರು ಹೊರಡಿಸಿದ ಆದೇಶದ ಪ್ರತಿಯಲ್ಲಿ, ಎಲ್ಲಾ ಪೊಲೀಸ್ ಕಮಿಷನರೇಟ್‌ಗಳು ಮತ್ತು ಎಸ್‌ಪಿಗಳಿಗೆ ಆದೇಶವನ್ನು ಅನುಸರಿಸಲು ತಿಳಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸೆಪ್ಟೆಂಬರ್ 19ರ ಪತ್ರವನ್ನು ಈ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬಾಲನ್ಯಾಯ ತಿದ್ದುಪಡಿ ಕಾಯ್ದೆ 2021 ಪಾಲಿಸಲು ಸರ್ಕಾರ ಸೂಚನೆ

ಸೆಪ್ಟೆಂಬರ್ 4ರಂದು ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದರು. ಅವರ ದುರ್ಮರಣವು ಸೀಟ್ ಬೆಲ್ಟ್‌ಗಳ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಿದೆ. KPMG ಗ್ಲೋಬಲ್ ಸ್ಟ್ರಾಟಜಿ ಗ್ರೂಪ್‌ನ ನಿರ್ದೇಶಕರಾದ ಜಹಾಂಗೀರ್ ಪಾಂಡೋಲ್ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಿಸ್ತ್ರಿ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಮಿಸ್ತ್ರಿ ಮತ್ತು ಪಾಂಡೋಲೆ ಸೀಟ್ ಬೆಲ್ಟ್ ಧರಿಸಿರಲಿಲ್ಲ, ಹೀಗಾಗಿ ಅವರಿಬ್ಬರೂ ಬದುಕುಳಿಯಲಿಲ್ಲವೆಂದು ಹೇಳಲಾಗಿದೆ. ಈ ಮಾರಣಾಂತಿಕ ಅಪಘಾತ ಸಂಭವಿಸಿದ ನಂತರ ಕೇಂದ್ರ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ವಾಹನದ ಹಿಂಬದಿಯ ಆಸನಗಳಲ್ಲಿ ಕುಳಿತಿರುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್‌ಗಳನ್ನು ಕಡ್ಡಾಯವಾಗಿ ಬಳಸಬೇಕಾಗಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳಡಿ 1,000 ರೂ. ದಂಡ ವಿಧಿಸಲಾಗುವುದು ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದಲ್ಲಿ 2022ರ ಆಗಸ್ಟ್ ಅಂತ್ಯದವರೆಗೆ ರಸ್ತೆ ಅಪಘಾತಗಳಿಂದ ಪ್ರತಿದಿನ ಸರಾಸರಿ 31 ಸಾವುಗಳು ವರದಿಯಾಗಿವೆ. ರಾಜ್ಯ ಪೊಲೀಸರ ಪ್ರಕಾರ, 2022ರಲ್ಲಿ ಆಗಸ್ಟ್ ಅಂತ್ಯದವರೆಗೆ ಸುಮಾರು 7,634 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಬೆಳಗಾವಿ, ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗರಿಷ್ಠ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು-ಪುಣೆ ಮಾರ್ಗದಲ್ಲಿ 10 ಕಿಮೀ ಟ್ರಾಫಿಕ್ ಜಾಮ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News