ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿ ಪುನರ್ರಚನೆ - ರಾಹುಲ್ ಗಾಂಧಿ

ಜಿಎಸ್‌ಟಿ ಜಾರಿಗೆ ಬಂದ ಬಳಿಕ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಜಿಎಸ್‌ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

Last Updated : Feb 13, 2018, 02:48 PM IST
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಿಎಸ್ಟಿ ಪುನರ್ರಚನೆ - ರಾಹುಲ್ ಗಾಂಧಿ title=

ಕಲ್ಬುರ್ಗಿ : ರಾಷ್ಟ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರಕು ಮತ್ತು ಸೇವಾ ತೆರಿಗೆಯನ್ನು ಪುನರ್ರಚಿಸಿ, ಅತಿ ಕಡಿಮೆ ಬಳಕೆ ವಸ್ತುಗಳನ್ನು ಜಿಎಸ್ಟಿ ಯಿಂದ ಹೊರಗಿಡಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. 

ಕರ್ನಾಟಕದಲ್ಲಿ ನಾಲ್ಕು ದಿನಗಳ ಜನಾಶೀರ್ವಾದ ಯಾತ್ರೆಯಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಕಲಬುರ್ಗಿಯ ಎಚ್‌ಕೆಇಎಸ್‌ ಕನ್ವೆಕ್ಷನ್ ಹಾಲ್‌ನಲ್ಲಿ ಉದ್ಯಮಿಗಳ ಜೊತೆ ಸಂವಾದ ನಡೆಸಿ ಮಾತನಾಡಿದರು.

ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೃಷಿ ಅಭಿವೃದ್ಧಿಗೆ ಹಿನ್ನಡೆ ಆಗಿದೆ. ನೆರೆಯ ದೇಶಗಳ ನಡುವೆ ಉತ್ತಮವಾದ ಬಾಂಧವ್ಯವಿಲ್ಲ. ಜಿಎಸ್‌ಟಿ ಜಾರಿಗೆ ಬಂದ ಬಳಿಕ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಜಿಎಸ್‌ಟಿ ಎಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್. ಜಿಎಸ್‌ಟಿಯಲ್ಲಿ ಹಲವಾರು ದೋಷಗಳಿವೆ ಎಂದರು.

ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಚೀನಾ ಪ್ರತಿ 24 ಗಂಟೆಗಳಿಗೆ 50 ಸಾವಿರ ಉದ್ಯೋಗ ಸೃಷ್ಟಿಸುತ್ತಿದೆ. ಆದರೆ ಭಾರತ 450 ಉದ್ಯೋಗವನ್ನು ಮಾತ್ರ ಸೃಷ್ಟಿಸುತ್ತಿದೆ.  ಅಂಕಿಸಂಖ್ಯೆಗಳ ಪ್ರಕಾರ ಎನ್‌ಡಿಎ ಸರ್ಕಾರಕ್ಕಿಂತ ಯುಪಿಎ ಅವಧಿಯಲ್ಲಿ ಎಂಎಸ್‌ಪಿ ಅಧಿಕವಾಗಿತ್ತು ಎಂದು ಅವರ ಹೇಳಿದರು. 

ಮುಂದುವರೆದು ಕೃಷಿ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾತನಾಡಿದ ರಾಹುಲ್, ಕಾಂಗ್ರೆಸ್ ಪಕ್ಷ, ನಮ್ಮ ದೇಶದಲ್ಲಿ ಆಹಾರ ಉತ್ಪನ್ನಗಳನ್ನು ನಮ್ಮ ರೈತರೇ ಬೆಳೆಯಲು ಪ್ರೋತ್ಸಾಹಿಸುತ್ತದೆ. ಆದರೆ ಬಿಜೆಪಿ, ನಮ್ಮ ರೈತರು ಆಹಾರ ಉತ್ಪನ್ನಗಳನ್ನು ಬೆಳೆಯದಿದ್ದರೂ ಪರವಾಗಿಲ್ಲಾ, ನಾವೂ ಆಸ್ಟ್ರೇಲಿಯಾ ದಿಂದ ಆಮದು ಮಾಡೋಣ ಎನ್ನುತ್ತಾರೆ ಎಂದು ವ್ಯಂಗ್ಯ ವಾಡಿದರು. 

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿವೇಣುಗೋಪಾಲ್, ಸಂಸದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ಮುಖಂಡರು ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.

Trending News