ಸ್ವಾಮಿ ವಿವೇಕಾನಂದರು ಏಕೆ ಮಹಾನ್ ಎನಿಸಿಕೊಳ್ಳುತ್ತಾರೆ?

ಸ್ವಾಮಿ ವಿವೇಕಾನಂದರು ಯಾವತ್ತೂ ಆಧ್ಯಾತ್ಮ ಮತ್ತು ಧರ್ಮವನ್ನು ಸಮಾಜ ಮತ್ತು ಜನರ ಸಾಂಸ್ಕೃತಿಕ ಬದುಕಿನಿಂದ ಭಿನ್ನವಾಗಿಸಲು ಪ್ರಯತ್ನಿಸಲಿಲ್ಲ. ಅವರು ಭಾರತೀಯ ಸಮಾಜವನ್ನು ಜನರ ಬದುಕನ್ನು ಹಸನಾಗಿಸಲು ಪ್ರಯತ್ನ ನಡೆಸುವಂತೆ ಪ್ರೇರೇಪಿಸಿದರು. ಅವರು ಹಳೆಯ ಇತಿಹಾಸವನ್ನು ಮೆಲುಕು ಹಾಕುತ್ತಾ ಮಲಗಬೇಡಿ, ಎಚ್ಚರಗೊಳ್ಳಿ ಎಂದು ಕರೆ ನೀಡಿದರು.

Written by - Girish Linganna | Last Updated : Jan 12, 2023, 12:06 PM IST
  • ಸ್ವಾಮಿ ವಿವೇಕಾನಂದರು ಯಾವತ್ತೂ ಆಧ್ಯಾತ್ಮ ಮತ್ತು ಧರ್ಮವನ್ನು ಸಮಾಜ ಮತ್ತು ಜನರ ಸಾಂಸ್ಕೃತಿಕ ಬದುಕಿನಿಂದ ಭಿನ್ನವಾಗಿಸಲು ಪ್ರಯತ್ನಿಸಲಿಲ್ಲ.
  • ಅವರು ಭಾರತೀಯ ಸಮಾಜವನ್ನು ಜನರ ಬದುಕನ್ನು ಹಸನಾಗಿಸಲು ಪ್ರಯತ್ನ ನಡೆಸುವಂತೆ ಪ್ರೇರೇಪಿಸಿದರು.
  • ಅವರು ಹಳೆಯ ಇತಿಹಾಸವನ್ನು ಮೆಲುಕು ಹಾಕುತ್ತಾ ಮಲಗಬೇಡಿ, ಎಚ್ಚರಗೊಳ್ಳಿ ಎಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದರು ಏಕೆ ಮಹಾನ್ ಎನಿಸಿಕೊಳ್ಳುತ್ತಾರೆ? title=
Swami Vivekananda Jayanti

ಸ್ವಾಮಿ ವಿವೇಕಾನಂದರು 1863ರ ಜನವರಿ 12ರಂದು ಜನಿಸಿದರು. ಅವರು ತನ್ನ 39ನೆಯ ವಯಸ್ಸಿನಲ್ಲಿ, ಜುಲೈ 4, 1902ರಂದು ಅಸುನೀಗಿದರು. ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಗುರುಗಳಾಗಿದ್ದರು. ವಿವೇಕಾನಂದರು ದೇವರು ಮತ್ತು ಆಧ್ಯಾತ್ಮದ ಕುರಿತಾದ ತನ್ನ ತಿಳುವಳಿಕೆ ಬಹುತೇಕ ರಾಮಕೃಷ್ಣ ಪರಮಹಂಸರಿಂದ ಪಡೆದುದಾಗಿ ಹೇಳಿದ್ದರು. ಬಳಿಕ ವಿವೇಕಾನಂದರು ಈ ಜ್ಞಾನವನ್ನು ಭಾರತದಾದ್ಯಂತ, ಜಗತ್ತಿನಾದ್ಯಂತ ಪಸರಿಸಿದರು. ಅವರು 39ನೇ ಸಣ್ಣ ವಯಸ್ಸಿನಲ್ಲೇ ಮೃತರಾದರೂ, ಅವರ ಬೋಧನೆಗಳು, ಪ್ರಭಾವಶಾಲಿ ಮಾತುಗಳು ಅವರನ್ನು ಅಮರರನ್ನಾಗಿಸಿವೆ.

ಸ್ವಾಮಿ ವಿವೇಕಾನಂದರ ಮಹತ್ವವೇನು?
ವಿವೇಕಾನಂದರು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಅತಿಯಾಗಿ ಬಣ್ಣಿಸಲಿಲ್ಲ. ಅವರು ಅದರ ನೈಜತೆಯನ್ನಷ್ಟೇ ವಿವರಿಸಿದರು. ಅವರು ತತ್ವಶಾಸ್ತ್ರ ಬೋಧಿಸಬೇಕು ಎಂಬ ಕಾರಣಕ್ಕೆ ತತ್ವಶಾಸ್ತ್ರ ಹೇಳಲಿಲ್ಲ. ಅವರ ತತ್ವಗಳು ಸ್ವತಃ ಅರ್ಥೈಸಿಕೊಳ್ಳುವಂತಿದ್ದವು.

ಸ್ವಾಮಿ ವಿವೇಕಾನಂದರು ಧರ್ಮ ಎಂಬ ಪದವನ್ನು ಎಂದೂ ಜನಪ್ರಿಯವಾಗುವ ರೀತಿಯಲ್ಲಿ, ಮೂಢನಂಬಿಕೆ ಹಂಚುವ ರೀತಿಯಲ್ಲಿ ಬಳಸಲಿಲ್ಲ. ಅವರು ಧರ್ಮವನ್ನು ಮಾನವರ ಪ್ರಾಯೋಗಿಕ ಆಧ್ಯಾತ್ಮಿಕ ನೈಜತೆ ಎಂದು ಬಣ್ಣಿಸಿದ್ದರು.

ವಿವೇಕಾನಂದರು ಯಾವುದೇ ಭಾರತೀಯ ಆಧ್ಯಾತ್ಮಿಕ, ಧಾರ್ಮಿಕ ಪರಂಪರೆಯ ವಿಚಾರಧಾರೆಯ ಪರವಾಗಿ ಮಾತನಾಡಲಿಲ್ಲ. ಅವರು ಪ್ರತಿಯೊಂದು ವಿಚಾರಧಾರೆಯ ಅಂಶಗಳನ್ನು ವಿವರಿಸುತ್ತಾ, ಅವುಗಳ ಮಧ್ಯ ಸಾಮರಸ್ಯ ಮೂಡಿಸಲು ಪ್ರಯತ್ನಿಸಿದರು.

ಸ್ವಾಮಿ ವಿವೇಕಾನಂದರು ಯಾವತ್ತೂ ಆಧ್ಯಾತ್ಮ ಮತ್ತು ಧರ್ಮವನ್ನು ಸಮಾಜ ಮತ್ತು ಜನರ ಸಾಂಸ್ಕೃತಿಕ ಬದುಕಿನಿಂದ ಭಿನ್ನವಾಗಿಸಲು ಪ್ರಯತ್ನಿಸಲಿಲ್ಲ. ಅವರು ಭಾರತೀಯ ಸಮಾಜವನ್ನು ಜನರ ಬದುಕನ್ನು ಹಸನಾಗಿಸಲು ಪ್ರಯತ್ನ ನಡೆಸುವಂತೆ ಪ್ರೇರೇಪಿಸಿದರು. ಅವರು ಹಳೆಯ ಇತಿಹಾಸವನ್ನು ಮೆಲುಕು ಹಾಕುತ್ತಾ ಮಲಗಬೇಡಿ, ಎಚ್ಚರಗೊಳ್ಳಿ ಎಂದು ಕರೆ ನೀಡಿದರು.

ಸ್ವಾಮಿ ವಿವೇಕಾನಂದರ ಪ್ರಕಾರ ಆಧ್ಯಾತ್ಮ ಎನ್ನುವುದು ಮಾನವರ ಸಾಮಾಜಿಕ ಜೀವನದಿಂದ ದೂರವಾದದ್ದಾಗಿರಲಿಲ್ಲ. ಅವರು ಶಿಕ್ಷಣದ ಮಹತ್ವವನ್ನು ಸಾರಿ, ಪ್ರಾಯೋಗಿಕ ಆಧ್ಯಾತ್ಮಿಕತೆ, ಭಾರತದ ಸ್ವಾತಂತ್ರ್ಯ ಮತ್ತು ಹೆಮ್ಮೆಯ ಅಗತ್ಯತೆಗಳನ್ನು ತಿಳಿಸಿದ್ದರು.

ಅವರು ಸಂಪ್ರದಾಯವಾದಿ ಆಧ್ಯಾತ್ಮಿಕ ಭಾಷೆಯನ್ನು ಬಳಸಲಿಲ್ಲ. ಅವರು ಭಾರತೀಯ ಆಧ್ಯಾತ್ಮವನ್ನು ಆಧುನಿಕ ಭಾಷೆಯಲ್ಲಿ ಜನರಿಗೆ ಪರಿಚಯಿಸಿದರು. ಅವರು ಎಲ್ಲ ಭಾರತೀಯರನ್ನೂ ಸಮಾನವಾಗಿ ಕಂಡು, ಅವರ ಅಭ್ಯುದಯಕ್ಕಾಗಿ ಶ್ರಮಿಸಿದರು.

ಭಾರತೀಯ ಆಧ್ಯಾತ್ಮದ ಕುರಿತಾದ ಸ್ವಾಮಿ ವಿವೇಕಾನಂದರ ಕೃತಿಗಳು ಇಂದಿಗೂ ಭಾರತದ ಆಧ್ಯಾತ್ಮಿಕ ಪರಂಪರೆಯ ಕುರಿತಾದ ಸರಿಯಾದ ಜ್ಞಾನವನ್ನು ಒದಗಿಸುತ್ತವೆ. ಅವರ ಕಾಲದಲ್ಲಿ ವಿವೇಕಾನಂದರು ಪಾಶ್ಚಾತ್ಯ ಜಗತ್ತನ್ನು ಪ್ರಭಾವಿಸಿದ್ದರು.

ಸ್ವಾಮಿ ವಿವೇಕಾನಂದರ ಕುರಿತು ಹೆಚ್ಚು ತಿಳಿದಿರದ ವಿಚಾರಗಳು:
ಧೈರ್ಯಶಾಲಿ: ಸ್ವಾಮಿ ವಿವೇಕಾನಂದರು ಅತ್ಯಂತ ಧೈರ್ಯಶಾಲಿಯಾಗಿದ್ದು, ಯಾವುದಕ್ಕೂ ಹೆದರುತ್ತಿರಲಿಲ್ಲ. ಅವರ ತತ್ವಶಾಸ್ತ್ರ (ಅಭಯ) ಪ್ರಾಮಾಣಿಕತೆ ಮತ್ತು ಧೈರ್ಯವಂತಿಕೆಯ ಕೇಂದ್ರಿತವಾಗಿತ್ತು. ಆದ್ದರಿಂದ ವಿವೇಕಾನಂದರು ಸದಾ ತಾರ್ಕಿಕ ಸತ್ಯಗಳನ್ನೇ ಜನರಿಗೆ ಪ್ರಿಯವಾಗುವ ರೀತಿಯಲ್ಲಿ ಆಡುತ್ತಿದ್ದರು. ಅವರು ಯಾವತ್ತೂ ಯಾವುದೇ ವ್ಯಕ್ತಿಯ ಸಾಮಾಜಿಕ ಸ್ಥಿತಿ, ಶ್ರೀಮಂತಿಕೆ, ಅಥವಾ ಶಿಕ್ಷಣಕ್ಕೆ ಮಹತ್ವ ಕೊಡುತ್ತಿರಲಿಲ್ಲ. ಅವರು ವ್ಯಕ್ತಿಯ ಜ್ಞಾನ, ನಮ್ರತೆ ಮತ್ತು ಪರಿಶ್ರಮಕ್ಕೆ ಬೆಲೆ ಕೊಡುತ್ತಿದ್ದರು.

ಆಹಾರ: ಸ್ವಾಮಿ ವಿವೇಕಾನಂದರು ಆಹಾರ ಪ್ರಿಯರಾಗಿದ್ದರು. ಅದರಲ್ಲೂ ಖಾರದ ಆಹಾರವನ್ನು ಅವರು ಇಷ್ಟಪಡುತ್ತಿದ್ದರು. ಓರ್ವ ಸನ್ಯಾಸಿಯಾಗಿದ್ದರೂ, ಅವರು ಅವರಿಗೆ ನೀಡಲಾದ ಎಲ್ಲ ರೀತಿಯ ಆಹಾರವನ್ನೂ, ಮಾಂಸಾಹಾರವೂ ಸೇರಿದಂತೆ, ಸೇವಿಸುತ್ತಿದ್ದರು.

ಅವರಿಗೆ ಬಾಲ್ಯದಿಂದಲೂ ಆಹಾರದಲ್ಲಿ ಅಪಾರ ಆಸಕ್ತಿಯಿತ್ತು. ಅವರು ಸಣ್ಣ ವಯಸ್ಸಿನಲ್ಲೇ ಫ್ರೆಂಚ್ ಅಡಿಗೆಯ ಕುರಿತಾದ ಒಂದು ಪುಸ್ತಕವನ್ನೂ ಕಂತುಗಳಲ್ಲಿ ಹಣ ಪಾವತಿಸಿ ಖರೀದಿಸಿದ್ದರು. ಅವರ ಆಹಾರ ಆಸಕ್ತಿ ಭಾರತೀಯ ಮತ್ತು ಬೆಂಗಾಳಿ ಆಹಾರವನ್ನೂ ಮೀರಿತ್ತು.  ಅವರು ತಂದೆಯವರ ಆಸಕ್ತಿಯಂತೆ ಮುಸ್ಲಿಂ ಆಹಾರ, ಯುರೋಪಿಯನ್ ಮತ್ತು ಅಮೆರಿಕಾದ ಆಹಾರಗಳ ಕುರಿತೂ ಆಸಕ್ತಿ ಹೊಂದಿದ್ದರು. ಅವರ ಜೀವನದ ಕೊನೆಯ ದಶಕದಲ್ಲಿ ಅವರು ಯುರೋಪಿಯನ್ ಮತ್ತು ಅಮೆರಿಕನ್ ಆಹಾರವನ್ನು ಅಲ್ಲಿಯೇ ಸವಿದಿದ್ದರು.

ಫುಟ್‌ಬಾಲ್‌: ಸ್ವಾಮಿ ವಿವೇಕಾನಂದರು ಅವರ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಫುಟ್‌ಬಾಲ್‌ ಆಟವನ್ನು ಇಷ್ಟಪಡುತ್ತಿದ್ದರು. ಆಗಲೂ ಬಂಗಾಳದಲ್ಲಿ ಫುಟ್‌ಬಾಲ್‌ ಪ್ರೀತಿ ಹೆಚ್ಚಾಗಿತ್ತು. ಅವರ ಮಾತುಗಳಲ್ಲಿ, ಶಕ್ತ ದೇಹದಲ್ಲಿ ಮಾತ್ರವೇ ಶಕ್ತ ಮನಸ್ಸಿರಲು ಸಾಧ್ಯವಿತ್ತು.

ಮಧುಮೇಹ: ಬಹುತೇಕರಿಗೆ ಅರಿವಿರದಂತೆ, ಸ್ವಾಮಿ ವಿವೇಕಾನಂದರಿಗೆ ಮಧುಮೇಹವೂ ಸೇರಿದಂತೆ 31 ಇತರ ಆರೋಗ್ಯ ಸಮಸ್ಯೆಗಳಿದ್ದವು. ಅವರ ಆಧ್ಯಾತ್ಮಿಕ ಗುರುಗಳಾದ ರಾಮಕೃಷ್ಣ ಪರಮಹಂಸರ ನಿಧನದ ಬಳಿಕ ವಿವೇಕಾನಂದರು ಸದಾ ಅವಿಶ್ರಾಂತವಾಗಿ ಕೆಲಸ ನಿರ್ವಹಿಸುತ್ತಾ, ಅಪಾರವಾದ ಜವಾಬ್ದಾರಿ ಹೊಂದಿದ್ದರು. ಈ ಕಾರಣದಿಂದಲೂ ಅವರು ಆರೋಗ್ಯದ ಕಡೆಗೆ ಗಮನ ನೀಡಲು ಕಷ್ಟಕರವಾಗಿರಬಹುದು.

ತಾಯಿ: ಸ್ವಾಮಿ ವಿವೇಕಾನಂದರು ಅವರ ತಾಯಿ ಭುವನೇಶ್ವರಿ ದೇವಿಯವರನ್ನು ಬಹಳ ಹಚ್ಚಿಕೊಂಡಿದ್ದರು. ವಿವೇಕಾನಂದರು ಇತರ ಸನ್ಯಾಸಿಗಳು ಮತ್ತು ಶಿಷ್ಯರೊಡನೆ ಬರೆದ ಪತ್ರಗಳಲ್ಲಿ ತಾಯಿಯ ಆರೋಗ್ಯದ ಕುರಿತ ಕಾಳಜಿಯನ್ನು ಹಂಚಿಕೊಂಡಿದ್ದರು.

ಗುರುಭಕ್ತಿ: ಸ್ವಾಮಿ ವಿವೇಕಾನಂದರು ಗುರುಭಕ್ತಿಗೆ ಶ್ರೇಷ್ಠ ಉದಾಹರಣೆಯಾಗಿದ್ದರು. ಇತರ ಶಿಷ್ಯರಂತಲ್ಲದೆ, ಅವರು ರಾಮಕೃಷ್ಣ ಪರಮಹಂಸರೊಡನೆ ಹಲವು ವಿಚಾರಗಳಲ್ಲಿ ವಾಗ್ವಾದ ನಡೆಸುತ್ತಿದ್ದರು, ಮರಳಿ ಮಾತುಕತೆಯೂ ನಡೆಸುತ್ತಿದ್ದರು.

ಅವರ ಮಗುವಿನಂತಹ ಮುಗ್ಧ ಮನಸ್ಸು ರಾಮಕೃಷ್ಣ ಪರಮಹಂಸರನ್ನು ಆಕರ್ಷಿತರಾಗುವಂತೆ ಮಾಡಿರಬಹುದು.

ಸ್ವಾಮಿ ವಿವೇಕಾನಂದರು ನಿಜಕ್ಕೂ ಭಾರತದ ಪಾಲಿಗೆ ಒಂದು ಅನರ್ಘ್ಯ ವರವೇ ಆಗಿದ್ದರು. ಅವರ ಜಯಂತಿಯ ಸಂದರ್ಭದಲ್ಲಿ ಅವರಿಗೆ ಪ್ರಣಾಮಗಳು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News