"ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು"

ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.

Written by - Zee Kannada News Desk | Last Updated : Dec 10, 2022, 08:43 PM IST
  • ಬೊಮ್ಮಾಯಿ ಅವರು ಮಾತೆತ್ತಿದರೆ ನಾವು ಉತ್ತರ ಕರ್ನಾಟಕದವರು ಎಂದು ಹೇಳುತ್ತಾರೆ.
  • ಹಾಗಾದರೆ ನಾವು ಉತ್ತರ ಕರ್ನಾಟಕದ ಭಾಗವಲ್ಲವೇ?
  • ಕರ್ನಾಟಕದ ಹಿಂದುಳಿದ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹಣ ನೀಡದಿದ್ದರೆ ಅದು ಯಾರ ತಪ್ಪು?
"ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" title=
Photo Courtsey: Twitter

ಕಲಬುರ್ಗಿ : ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.

 ಎಐಸಿಸಿ ಅಧ್ಯಕ್ಷರಾದ ನಂತರ ಇದೆ ಮೊದಲ ಬಾರಿಗೆ ತವರು ಜಿಲ್ಲೆ ಕಲಬುರ್ಗಿ ಆಗಿಮಿಸಿದ ಖರ್ಗೆ ಅವರು ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುವಾಗ ಸೋನಿಯಾ ಗಾಂಧಿ ಅವರು ಸಂಸತ್ತಿಗೆ ಆಗಮಿಸಬೇಕು, ನಿಮ್ಮನ್ನು ಕೇಂದ್ರದ ಮಂತ್ರಿ ಮಾಡಲಾಗುವುದು ಎಂಬ ಭರವಸೆ ನೀಡಿದರು. ನಾನು ಈಗಷ್ಟೇ ಶಾಸಕನಾಗಿದ್ದು, ಮತ್ತೆ ಚುನಾವಣೆ ಎದುರಿಸಲು ಬಯಸುವುದಿಲ್ಲ ಎಂದು ಹೇಳಿದೆ. ಆಗ ಅವರು ನಿಮ್ಮ ಮೇಲೆ ವಿಶ್ವಾಸವಿದೆ, ಹೀಗಾಗಿ ಸ್ಪರ್ಧಿಸಬೇಕು ಎಂದರು. ಆಗ ಕಾಂಗ್ರೆಸ್ ಸರ್ಕಾರ ಬಂದಾಗ ಹೈದರಾಬಾದ್ ಕರ್ನಾಟಕಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡುವುದಾದರೆ ನಾನು ಸ್ಪರ್ಧಿಸುತ್ತೇನೆ ಎಂದು ಹೇಳಿದೆ. ಆಗ ಅವರು ಇದು ಸಾಧ್ಯವೇ ಎಂದು ಕೇಳಿದರು. ಹಿಂದಿನ ಗೃಹ ಸಚಿವರಾದ ಅಡ್ವಾಣಿ ಅವರು ತಿರಸ್ಕರಿಸಿದ್ದು, ನಾವು ಈ ಬಗ್ಗೆ ಆಶ್ವಾಸನೆ ನೀಡುವುದು ಸರಿಯಲ್ಲ ಎಂದು ಕೆಲವರು ಅವರಿಗೆ ಸಲಹೆ ನೀಡಿದ್ದರು. ಆಗ ನಾನು ಅವರನ್ನು ಭೇಟಿ ಮಾಡಿ ಬಿಜೆಪಿಯವರು ತಿರಸ್ಕರಿಸಿದ ಮಾತ್ರಕ್ಕೆ ಅದು ಅಂತಿಮವಲ್ಲ. ನಾವು ಅದಕ್ಕೆ ಪುನರ್ಜೀವ ನೀಡಬಹುದು ಎಂದು ಹೇಳಿದೆ. ಆಗ ಅವರು ಇದೇ ಮೈದಾನದಲ್ಲಿ ನೀವು ಖರ್ಗೆ ಅವರನ್ನು ಆರಿಸಿದರೆ ಈ ಭಾಗಕ್ಕೆ 371ಜೆ ವಿಶೇಷ ಸ್ಥಾನಮಾನ ನೀಡಿಯೇ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು. ಹೀಗಾಗಿ ನಾನು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದೆ.

ಇದನ್ನೂಓದಿ:  Watch: ವಿದೇಶಿ ಪತ್ರಕರ್ತನ ಜೊತೆಗಿನ ಎಸ್ ನಿಜಲಿಂಗಪ್ಪನವರ ಸಂದರ್ಶನ ಎಂದಾದರೂ ನೋಡಿದ್ದಿರಾ?

ಕೊಟ್ಟ ಮಾತು ಉಳಿಸಲು ಸತತ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಖ್ಯಾಬಲ ಇರಲಿಲ್ಲ. ಕೇವಲ 208 ಸ್ಥಾನಗಳು ಮಾತ್ರ ಇದ್ದವು. ಆದರೆ ಆ ತಿದ್ದುಪಡಿಗೆ 381 ಸಂಸದರ ಬೆಂಬಲ ಅಗತ್ಯವಿತ್ತು. ನಮ್ಮ ಮೈತ್ರಿ ಪಕ್ಷಗಳ ಮುಖಂಡರಿಗೆ ಕರೆ ಮಾಡಿ ಹೇಳಿ, ನಾನು ಅವರನ್ನು ಖುದ್ದಾಗಿ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದೆ. ನಂತರ ಸೋನಿಯಾ ಗಾಂಧಿ ಅವರು ಕೆಲವರಿಗೆ ದೂರವಾಣಿ ಕರೆ ಮೂಲಕ ಸಹಕಾರ ನೀಡುವಂತೆ ಕೇಳಿದರು. ಉಳಿದಂತೆ ನಾನು ಎಲ್ಲ ಪಕ್ಷಗಳ ಮುಖಂಡರು, ಸಂಸದರ ನಿವಾಸ, ಕಚೇರಿಗಳಿಗೆ ಖುದ್ದಾಗಿ ಭೇಟಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿ ಸಂಖ್ಯಾಬಲವನ್ನು ಕ್ರೋಢೀಕರಿಸಿದೆ. ನಂತರ 2013ರಲ್ಲಿ ಇದಕ್ಕೆ ಅನುಮೋದನೆ ಪಡೆದುಕೊಂಡೆ. ನಂತರ ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದ ಕಾರಣ ಹೆಚ್.ಕೆ. ಪಾಟೀಲ್ ಅವರ ನೇತೃತ್ವದಲ್ಲಿ ಉಪಸಮಿತಿ ರಚನೆ ಮಾಡಲಾಯಿತು. ದೇಶದ ಇತಿಹಾಸದಲ್ಲಿ ಯಾರೂ ಇಷ್ಟು ವೇಗವಾಗಿ ಸಂವಿಧಾನ ತಿದ್ದುಪಡಿ ಮಾಡಿ ಅದನ್ನು ಅನುಷ್ಠಾನಕ್ಕೆ ತಂದಿಲ್ಲ. ಇದು ಕಾಂಗ್ರೆಸ್ ಪಕ್ಷದ ಬದ್ಧತೆ.

ಇದನ್ನು ಸಾಧ್ಯವಾಗುವಂತೆ ಮಾಡಲು ನನಗೆ ಶಕ್ತಿ ನೀಡಿದ್ದು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ. ಇದರಿಂದ ಸಾವಿರಾರು ಜನರಿಗೆ ಸರ್ಕಾರಿ ಹುದ್ದೆ, ವಿದ್ಯಾರ್ಥಿಗಳಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಸಿಗುತ್ತಿದೆ. ನಮ್ಮ ಸರ್ಕಾರ ಇದ್ದಾಗ 1500 ಕೋಟಿಯನ್ನು ಈ ಭಾಗಕ್ಕೆ ನೀಡುವುದಾಗಿ ಹೇಳಿದ್ದೆವು. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ನಂತರ ಬಂದ ಬಿಜೆಪಿ ಸರ್ಕಾರ 150 ಕೋಟಿ ರು. ನೀಡಲಿಲ್ಲ, ಬದಲಿಗೆ ಅಲ್ಲಿನ ಹಣವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಿದರು. ಇದು ಉತ್ತರ ಕರ್ನಾಟಕದ ಭಾಗವೇ,  ಬೊಮ್ಮಾಯಿ ಅವರು ಮಾತೆತ್ತಿದರೆ ನಾವು ಉತ್ತರ ಕರ್ನಾಟಕದವರು ಎಂದು ಹೇಳುತ್ತಾರೆ. ಹಾಗಾದರೆ ನಾವು ಉತ್ತರ ಕರ್ನಾಟಕದ ಭಾಗವಲ್ಲವೇ? ಕರ್ನಾಟಕದ ಹಿಂದುಳಿದ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹಣ ನೀಡದಿದ್ದರೆ ಅದು ಯಾರ ತಪ್ಪು?

ಭ್ರಮೆಗಳಿಂದ ಹೊಟ್ಟೆ ತುಂಬುವುದಿಲ್ಲ. ಜನರಿಗೆ ದುಡಿಯಲು ಕೆಲಸ ಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕದಲ್ಲಿ ಸಾವಿರಾರು ಹುದ್ದೆಗಳಿವೆಯಾದರೂ ಯಾಕೆ ತುಂಬುತ್ತಿಲ್ಲ. ಜನ ಕೂಡ ಇವರನ್ನು ಯಾಕೆ ಪ್ರಶ್ನಿಸುತ್ತಿಲ್ಲ? 50 ಸಾವಿರ ಜನರಿಗೆ ಉದ್ಯೋಗ ನೀಡಬಹುದು. ನಮ್ಮ ಸರ್ಕಾರ ಬರುತ್ತದೆ. ಇದರಲ್ಲಿ ಅನುಮಾನವಿಲ್ಲ. ನಮ್ಮ ಸರ್ಕಾರ ಕೇವಲ ಹೈದರಾಬಾದ್ ಕರ್ನಾಟಕ ಮಾತ್ರವಲ್ಲ ರಾಜ್ಯದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ತುಂಬುತ್ತದೆ. ಇದನ್ನು ಮಾಡದಿದ್ದರೆ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ.

ನಾನು ಗುಜರಾತ್ ಗೆ ಹೋಗಿದ್ದಾಗ ಮೋದಿ ಅವರು 70 ಸಾವಿರ ಜನರಿಗೆ ಸರ್ಟಿಫಿಕೇಟ್ ಹಂಚುವ ಫೋಟೋ ಟಿವಿಯಲ್ಲಿ ನೋಡಿದೆ. ಸರ್ಕಾರಿ ಹುದ್ದೆಗಳನ್ನು ತುಂಬಿ ಅದರ ನೇಮಕಾತಿ ಪತ್ರವನ್ನು ಪ್ರಧಾನಿಗಳು ಕೊಟ್ಟು ಪ್ರಚಾರ ಪಡೆದರು. ಅದೇ ರೀತಿ ಗುಜರಾತಿನಲ್ಲೂ ಮಾಡಿದ್ದಾರೆ. ದೇಶಾದ್ಯಂತ 30 ಲಕ್ಷ ಸರ್ಕಾರಿ, ಅರೆ ಸರ್ಕಾರಿ, ಸೇನೆ, ಪೊಲೀಸ್, ಬ್ಯಾಂಕ್ ಗಳಲ್ಲಿನ ಹುದ್ದೆಗಳು ಖಾಲಿ ಇವೆ. ಇದು ಸಂಸತ್ತಿನಲ್ಲಿ ಪ್ರಶ್ನೆ ಕೇಳಿ ಪಡೆದಿರುವ ಮಾಹಿತಿ. ರಾಜ್ಯದಲ್ಲೂ ಅದೇ ರೀತಿ ಇದೆ. 70 ಸಾವಿರ ನೇಮಕಾತಿ ಪತ್ರ ನೀಡುವ ಫೋಟೋ ಪ್ರಚಾರ ಪಡೆಯುವವರು 30 ಲಕ್ಷ ಖಾಲಿ ಹುದ್ದೆ ಇರುವುದನ್ನು ತೋರುವುದಿಲ್ಲ. ಈ ಹುದ್ದೆ ತುಂಬಿದರೆ 30 ಲಕ್ಷ ಕುಟುಂಬದಲ್ಲಿ 2 ಕೋಟಿ ಜನರ ಜೀವನಕ್ಕೆ ಆಸರೆಯಾಗಲಿದೆ. ಇದನ್ನು ಬಿಜೆಪಿ ಮಾಡುತ್ತಿಲ್ಲ.

ಅವರು ಹೇಳಿದ ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಹೋದವೋ ಗೊತ್ತಿಲ್ಲ. ಸುಳ್ಳು ಭರವಸೆ ನೀಡಿದರು. ಯಾವುದೂ ಸಾಧ್ಯವಾಗಿಲ್ಲ. ಆದರೆ ನಾವು ನೀಡುತ್ತಿರುವ ಭರವಸೆ ಈಡೇರಿಸುತ್ತೇವೆ.

ನಾವು ಈ ಭಾಗಕ್ಕೆ 10 ಅಂಶಗಳ ಕಾರ್ಯಕ್ರಮ ಮಾಡಿದ್ದೇವೆ. ಮೊದಲ ವರ್ಷ ಈ ಭಾಗದ ಅಭಿವೃದ್ಧಿಗೆ 5 ಸಾವಿರ ಕೋಟಿ, ನಂತರ ಪ್ರತಿ ವರ್ಷ ಈ ಅನುದಾನದ ಮೊತ್ತ ಏರಿಕೆಯಾಗಲಿದೆ.

ಈ ಭಾಗದ ಜನರಿಗಾಗಿ ನೂತನ ಕೈಗಾರಿಕೆ ನೀತಿ ಮಾಡುತ್ತೇವೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 1 ಲಕ್ಷ ಹುದ್ದೆಗಳನ್ನು ಸೃಷ್ಟಿಸಿ 7 ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ.

ಕೃಷ್ಣ ಜಲಭಾಗ್ಯ, ಗೋದಾವರಿ ಭಾಗದ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಲಾಗುವುದು.

ಪ್ರತಿ ಜಿಲ್ಲಾ ಕೇಂದ್ರದಲ್ಲಿ ನಮ್ಮ ಭರವಸೆ ಈಡೇರಿಸಲು ಸಮಿತಿ ಮಾಡಿ ಅನುಷ್ಠಾನಕ್ಕೆ ತರುತ್ತೇವೆ.

ಕೇಂದ್ರಕ್ಕೆ ಮನವಿ ಮಾಡಿ ಐಐಟಿ, ಏಮ್ಸ್ ಸಂಸ್ಥೆಗಳು ಕಲ್ಯಾಣ ಕರ್ನಾಟಕಕ್ಕೆ ನೀಡುವಂತೆ ಕೋರುತ್ತೇವೆ.

ಪ್ರತಿ ಜಿಲ್ಲೆಗಳಲ್ಲಿ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಹಿಳೆಯರಿಗೆ ಪದವಿ ಕಾಲೇಜುಗಳ ಸ್ಥಾಪನೆ ಮಾಡುತ್ತೇವೆ.

ಎಲ್ಲಾ ಕುಟುಂಬಗಳಿಗೆ 5 ವರ್ಷಗಳಲ್ಲಿ ಮನೆಗಳ ನಿರ್ಮಾಣ ಮಾಡುತ್ತೇವೆ.

ಪ್ರತಿ ಗ್ರಾಮ ಪಂಚಾಯ್ತಿಗೆ ಹೆಚ್ಚಿನ ಅನುದಾನ ನೀಡಲಾಗುವುದು.

ನಾವು ನೀಡುವ ವಚನ ಅನುಷ್ಠಾನಕ್ಕೆ ತರಲು ಶ್ರಮಿಸುತ್ತೇವೆ. ಹೀಗಾಗಿ ನಮ್ಮ ಸರ್ಕಾರ ಆರಿಸಬೇಕು. ಅಧಿಕಾರ ಇದ್ದರೆ ನಾವು ಕೊಟ್ಟ ಭರವಸೆ ಜಾರಿಗೆ ತರಬಹುದು. ನೀವು ಅಧಿಕಾರ ನೀಡದಿದ್ದರೆ ರಸ್ತೆ, ಕಟ್ಟಡಗಳ ಸ್ಥಿತಿ ಏನಾಗಿದೆ ಎಂದು ನೀವೇ ನೋಡಿ. ನೀವು ನಮಗೆ ಶಕ್ತಿ ನೀಡುತ್ತೀರಿ ಎಂಬ ಭರವಸೆ ನನಗಿದೆ. ಕೆಲವರ ತಲೆಯಲ್ಲಿ ಬಿಜೆಪಿ ಬಗ್ಗೆ ಯಾಕೆ ಆಸಕ್ತಿ ಇದೆಯೋ ಗೊತ್ತಿಲ್ಲ. ಅವರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ಬಂಡವಾಳ, ಕೈಗಾರಿಕೆ ತಂದಿಲ್ಲದಿದ್ದರೂ ಮೋದಿಯವರ ಹೆಸರು ಜಪಿಸುತ್ತಿದ್ದಾರೆ. ಹೀಗಾಗಿ ವೇದಿಕೆ ಮೇಲಿರುವ ಎಲ್ಲ ಮುಖಂಡರು ಬಿಜೆಪಿ, ಮೋದಿ, ಶಾ ಅವರು ಹೇಗೆ ಹಳ್ಳಿ ಹಳ್ಳಿಗೆ ಹೋಗಿ ಪ್ರಚಾರ ಮಾಡುವಂತೆ ನೀವು ಜನರ ಬಳಿ ಹೋಗಿ ಪ್ರಚಾರ ಮಾಡಬೇಕು. ನಾವು ಒಂದಾಗಿ ಕೆಲಸ ಮಾಡದಿದ್ದರೆ ನಮ್ಮನ್ನು ನಂಬಿದ ಜನರಿಗೆ ಮೋಸ ಮಾಡಿದಂತಾಗುತ್ತದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾರಿಗೆ ಯಾವ ಅಧಿಕಾರ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಯಾರು ಸಿಎಂ ಆಗುತ್ತಾರೆ, ಮಂತ್ರಿ ಆಗುತ್ತಾರೆ ಎಂದು ಹೈಕಮಾಂಡ್ ತೀರ್ಮಾನಿಸುತ್ತದೆ. ಈಗ ನಾವು ಕಚ್ಚಾಡಿದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ದಯಮಾಡಿ ಎಲ್ಲರೂ ಒಂದಾಗಬೇಕು. ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್ ಹಾಗೂ ಎಂ.ಬಿ ಪಾಟೀಲ್ ಅವರು ಹೇಳಿದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಾವು ಹಿಮಾಚಲ ಪ್ರದೇಶದಲ್ಲಿ 10 ಅಂಶಗಳ ಕಾರ್ಯಕ್ರಮ ನೀಡಿದ್ದೆವು. ಅದಕ್ಕಾಗಿ ನಾವು ಅಲ್ಲಿ ಗೆಲುವು ಸಾಧಿಸಿದ್ದೇವೆ. ನಾಳೆ ಅಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣವಚನ ನಡೆಯಲಿದೆ. ಇದು ರಾಜ್ಯದಲ್ಲೂ ಆಗಬೇಕು. ನನಗೆ ಕಾಂಗ್ರೆಸ್ ಪಕ್ಷ ಬೇಕು. ಕಾಂಗ್ರೆಸ್ ಸರ್ಕಾರ ಬೇಕು. ನೀವು ಯಾರೇ ಆದರೂ ನಾನು ಬೇಡ ಎನ್ನುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಮನವಿ ಮಾಡುತ್ತೇನೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News