ಬಿಜೆಪಿಯಿಂದ ಆಪರೇಷನ್ ಕಮಲ, ಮುಂಬೈನಲ್ಲಿ ರಾಜ್ಯದ ಮೂವರು ಶಾಸಕರು: ಸಚಿವ ಡಿಕೆಶಿ

ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಕುದುರೆ ವ್ಯಾಪಾರಕ್ಕಿಳಿದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

Last Updated : Jan 14, 2019, 08:58 AM IST
ಬಿಜೆಪಿಯಿಂದ ಆಪರೇಷನ್ ಕಮಲ, ಮುಂಬೈನಲ್ಲಿ ರಾಜ್ಯದ ಮೂವರು ಶಾಸಕರು: ಸಚಿವ ಡಿಕೆಶಿ title=
File Image

ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನ ಉರುಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಕುದುರೆ ವ್ಯಾಪಾರಕ್ಕಿಳಿದಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಸದ್ಯ ಮೂವರು ಶಾಸಕರು ಮುಂಬೈನಲ್ಲಿದ್ದು ಆ ಶಾಸಕರನ್ನು ಬಿಜೆಪಿ ಕಾಯುತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.

ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಮತ್ತೆ ಅಪರೇಷನ್ ಕಮಲದಲ್ಲಿ ತೊಡಗಿದೆ ಎಂದು ಭಾನುವಾರ ಬಿಜೆಪಿ ವಿರುದ್ಧ ಆರೋಪಿಸಿರುವ ಡಿ.ಕೆ. ಶಿವಕುಮಾರ್, ಆ ಮೂವರು ಶಾಸಕರು ಯಾವ ಪಕ್ಷದವರು ಎಂಬುದು ಬೇಡ, ಅವರ ಹೆಸರೇಳಲು ನನಗೆ ಇಷ್ಟವಿಲ್ಲ. ಹೆಸರು ಹೇಳಿದರೆ ಅವರಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಶಾಸಕರ ಖರೀದಿ ಮುಂದುವರೆದಿದೆ. ಮುಂಬೈನ ಹೋಟೆಲ್ ನಲ್ಲಿ ಮೂವರು ಶಾಸಕರೊಂದಿಗೆ ಬಿಜೆಪಿಯ ಹಲವು ಶಾಸಕರಿದ್ದಾರೆ. ಅಲ್ಲಿ ಏನಾಗುತ್ತಿದೆ, ಅವರಿಗೆ ಎಷ್ಟು ಹಣ ನೀಡಲು ಮಾತನಾಡುತ್ತಿದ್ದಾರೆ ಎಂಬುದು ನಮಗೆ ಅರಿವಿದೆ. ಅಲ್ಲದೆ, ಬಿಜೆಪಿ ಆಪರೇಶನ್​ ಕಮಲಕ್ಕೆ ತಿರುಗೇಟು ನೀಡಲು ನಾವು ಸಿದ್ಧವಿದ್ದೇವೆ ಎಂದು ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್​ ಪಾಳಯದಲ್ಲಿ ಅತೃಪ್ತರ ಬಣವೂ ವಿಸ್ತರಿಸಿದ್ದು, ರೆಬೆಲ್​ ಶಾಸಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್  ಶಾ ಅವರನ್ನು ಸಂಪರ್ಕಿಸಲು ಮುಂದಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿಮಾಡಿವೆ. ಏತನ್ಮಧ್ಯೆ, 'ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ಕ್ರಾಂತಿ ಆಗುತ್ತದೆ' ಎಂದು ಹೇಳುವ ಮೂಲಕ ಬಿಜೆಪಿಯವರು ಮತ್ತಷ್ಟು ಗೊಂದಲ ಉಂಟುಮಾಡಿದ್ದಾರೆ.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಮಾತ್ರ ಸರ್ಕಾರ ಪತನಗೊಳಿಸುವ ಉದ್ದೇಶದಿಂದ ಅತೃಪ್ತ ಶಾಸಕರ ಜೊತೆ ಬಿಜೆಪಿ ಸಂಪರ್ಕದಲ್ಲಿಲ್ಲ. ಯಾರೂ ದೆಹಲಿಗೆ ಬಂದಿಲ್ಲ ಎಂದಿದ್ದಾರೆ.

Trending News