ತಿಂಗಳೊಳಗೆ ಮಹದಾಯಿ ವಿವಾದ ಬಗೆಹರಿದರೆ ಬಹಳ ಸಂತೋಷ- ಸಿಎಂ

                           

Last Updated : Nov 22, 2017, 03:08 PM IST
ತಿಂಗಳೊಳಗೆ ಮಹದಾಯಿ ವಿವಾದ ಬಗೆಹರಿದರೆ ಬಹಳ ಸಂತೋಷ- ಸಿಎಂ title=

ಬೆಳಗಾವಿ : ವಿವಾದದ ಬಗ್ಗೆ ಇದುವರೆಗೂ ಮಾತೇ ಆಡದ ಬಿಜೆಪಿ ನಾಯಕರು ಈಗ ಸಮಸ್ಯೆ ಬಗೆಹರಿಸುವ ವಿಚಾರದಲ್ಲಿ ಭಾರಿ ಉತ್ಸಾಹ ತೋರುತ್ತಿದ್ದಾರೆ. ಅದೆಲ್ಲ ಪರಿವರ್ತನಾ ಯಾತ್ರೆಗಾಗಿ ಒಂದು ತಿಂಗಳಲ್ಲಿ ವಿವಾದ ಬಗೆಹರಿದಿದ್ದೇ ಆದರೆ ಬಹಳ ಸಂತೋಷ. ಇದರಿಂದ ಜನರಿಗೂ ಕುಡಿಯುವ ನೀರು ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ರಾಜ್ಯ ಬಿಜೆಪಿ ನಾಯಕರು ಈ ಭಾಗದಲ್ಲಿ ಪರಿವರ್ತನಾ ಯಾತ್ರೆ ಮಾಡುತ್ತಿದ್ದಾರೆ. ಹೀಗಾಗಿ ಜನರ ಕಣ್ಣೊರೆಸುವ ತಂತ್ರವಾಗಿ ವಿವಾದ ಬಗೆಹರಿಸುವುದಾಗಿ ಯಡಿಯೂರಪ್ಪ ಅವರು ಹೇಳುತ್ತಿದ್ದಾರೆ ಅಷ್ಟೇ ಎಂದರು. 

ಮಹಾದಾಯಿ ವಿವಾದ ಬಗೆಹರಿಸಲು ಮಧ್ಯಪ್ರವೇಶ ಮಾಡುವಂತೆ ಸರ್ವಪಕ್ಷ ನಿಯೋಗದೊಂದಿಗೆ ಹೋಗಿ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಇದೇ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ. ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್, ಈಶ್ವರಪ್ಪ, ಅನಂತಕುಮಾರ್ ಅವರುಗಳು ಒಂದೇ ಒಂದು ಮಾತು ಹೇಳಲಿಲ್ಲ, ಪ್ರಧಾನಿಯವರ ಮೇಲೆ ಒತ್ತಡವನ್ನೂ ಹಾಕಲಿಲ್ಲ. 

ಮಹಾದಾಯಿ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತದೆ. ಅದರಲ್ಲಿ ಕುಡಿಯುವ ಉದ್ದೇಶಕ್ಕೆ 7.56 ಟಿಎಂಸಿ ಕೊಡಿ ಎಂಬುದು ನಮ್ಮ ಬೇಡಿಕೆ. ಈ ವಿಚಾರ ನ್ಯಾಯ ಮಂಡಳಿ ಮುಂದೆ ಇದೆ. ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನ್ಯಾಯ ಮಂಡಳಿ ಸಹ ಹೇಳಿದೆ. 

ಮಾತುಕತೆಗೆ ವೇದಿಕೆ ಕಲ್ಪಿಸುವ ಕಾರ್ಯವನ್ನು ಪ್ರಧಾನಿಯವರು ಮಾಡಬೇಕಿದೆ. ಮಾತುಕತೆಗೆ ಬನ್ನಿ ಎಂದು ನಾನು ಗೋವಾ ಮುಖ್ಯಮಂತ್ರಿಯವರಿಗೆ ಎರಡು ಬಾರಿ ಪತ್ರ ಬರೆದರೂ ಪ್ರತಿಕ್ರಿಯೆ ಬರಲಿಲ್ಲ. ಹೇಗಿದ್ದರೂ ಯಡಿಯೂರಪ್ಪ ಅವರು ಒಂದು ತಿಂಗಳ ಸಮಯ ಕೇಳಿದ್ದಾರೆ. ನಾವೂ ಕಾದು ನೋಡುತ್ತೇವೆ ಎಂದು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ತಿಳಿಸಿದರು. 

Trending News