"ಬಿಜೆಪಿ ಸರ್ಕಾರ ಸಣ್ಣ ಸಾಲ ತೋರಿಸಿ ದೊಡ್ಡ ಸಾಗರವನ್ನೇ ಕೊಳ್ಳೆ ಹೊಡೆದಿದೆ"

ಕೇವಲ ಹೆಚ್ಚುವರಿ ಅಬಕಾರಿ ಸುಂಕವೊಂದನ್ನೇ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಎಂಟು ವರ್ಷಗಳಲ್ಲಿ 26 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ.ನರೇಂದ್ರ ಮೋದಿ ಸರ್ಕಾರ ಕೊಳ್ಳೆಹೊಡೆದ ಈ ಹಣಕ್ಕೆ ಮೊದಲು ಲೆಕ್ಕ ಕೊಡಲಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

Written by - Zee Kannada News Desk | Last Updated : Apr 3, 2022, 06:27 PM IST
  • ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವುದರಿಂದ ಹಣದುಬ್ಬರ ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.
"ಬಿಜೆಪಿ ಸರ್ಕಾರ ಸಣ್ಣ ಸಾಲ ತೋರಿಸಿ ದೊಡ್ಡ ಸಾಗರವನ್ನೇ ಕೊಳ್ಳೆ ಹೊಡೆದಿದೆ"  title=

ಬೆಂಗಳೂರು: ಕೇವಲ ಹೆಚ್ಚುವರಿ ಅಬಕಾರಿ ಸುಂಕವೊಂದನ್ನೇ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಎಂಟು ವರ್ಷಗಳಲ್ಲಿ 26 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ.ನರೇಂದ್ರ ಮೋದಿ ಸರ್ಕಾರ ಕೊಳ್ಳೆಹೊಡೆದ ಈ ಹಣಕ್ಕೆ ಮೊದಲು ಲೆಕ್ಕ ಕೊಡಲಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

ಯುಗಾದಿ ಸಿಹಿ - ಕಹಿಗಳ ಹಬ್ಬ,ಆದರೆ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಚೀಲವೊಂದಕ್ಕೆ ರೂ.150 ಏರಿಕೆ ಮಾಡುವ ಮೂಲಕ ನಾಡಿನ ರೈತರಿಗೆ ಬರೀ ಕಹಿಯನ್ನು ನೀಡಿದೆ.ದೇಶದ ರೈತರು ವರ್ಷದಲ್ಲಿ 1 ಕೋಟಿ 20 ಲಕ್ಷ ಟನ್ ರಸಗೊಬ್ಬರ ಬಳಕೆ ಮಾಡುತ್ತಾರೆ. ಕೇಂದ್ರ ಸರ್ಕಾರ ರೂ. 3,600 ಕೋಟಿಯನ್ನು ಹಣವನ್ನು ರೈತರಿಂದ ಹೆಚ್ಚುವರಿಯಾಗಿ ಸುಲಿಗೆ ಮಾಡುತ್ತಿದೆ.

ಇದನ್ನು ಹಗಲು ದರೋಡೆ ಎಂದರೆ ತಪ್ಪೇನು? ಪ್ರಧಾನಿ ನರೇಂದ್ರ ಮೋದಿ (PM Modi) ಅವರು 2022 ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು.ಕೀಟನಾಶಕಗಳ ಮೇಲೆ 18%, ಕೃಷಿ ಯಂತ್ರೋಪಕರಣಗಳ ಮೇಲೆ 12%, ರಸಗೊಬ್ಬರದ ಮೇಲೆ 5% ಜಿಎಸ್‌ಟಿ ವಿಧಿಸುವ ಮೂಲಕ ರೈತರಿಗೆ ಬರುತ್ತಿದ್ದ ಅಲ್ಪ ಆದಾಯಕ್ಕೂ ಕಲ್ಲು ಹಾಕಿದ್ದಾರೆ.

ಇದನ್ನೂ ಓದಿ: ಡಿಕೆಶಿ-ಸಿದ್ದರಾಮಯ್ಯ ಒಗ್ಗಟಾಗಿ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲಲೇ ಬೇಕು: ರಾಹುಲ್ ಗಾಂಧಿ

ಕಳೆದ ಬಾರಿ ರಾಗಿ ಬೆಳೆಗೆ ಉತ್ತಮ ಬೆಲೆ ಬಂದಿದ್ದರಿಂದ ಈ ಬಾರಿ ರಾಜ್ಯದ ರೈತರು 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆದಿದ್ದಾರೆ. ಇದರಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ಖರೀದಿ ಮಾಡಿ ಎಂದು ರಾಗಿ ಬೆಳೆಗಾರರು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರ ಮೌನವಾಗಿದೆ.

ರಾಜ್ಯ ಸರ್ಕಾರ ಕೇವಲ 2.1 ಮೆಟ್ರಿಕ್ ಲಕ್ಷ ಟನ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಕೊಳ್ಳಲು ನಿಗದಿ ಮಾಡಿ, ಈ ವರೆಗೆ 1.9 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದೆ. ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸುವ ರಾಗಿಗೂ, ಮಾರುಕಟ್ಟೆ ಬೆಲೆಗೂ ಸುಮಾರು 1,500 ರೂಪಾಯಿ ವ್ಯತ್ಯಾಸವಿದೆ.

ಈ ನಷ್ಟ ತುಂಬಿಕೊಡುವವರು ಯಾರು?

ಕಳೆದ 10 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ರೂ. 7, ಮನೆಬಳಕೆ ಗ್ಯಾಸ್ ಬೆಲೆ ರೂ. 50, ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ರೂ. 250 ಜಾಸ್ತಿಯಾಗಿದೆ.ತೈಲ ಮಾರಾಟ ಮಾಡುವ ಸ್ವಾಯತ್ತ ಸಂಸ್ಥೆಗಳು ಅಂತಾರಾಷ್ಟ್ರೀಯ ಕಚ್ಚಾ ತೈಲಬೆಲೆ ಏರಿಳಿತಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರ ಕುಂಟು ನೆಪ ಹೇಳುತ್ತಿದೆ.ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಮಾಡುವುದು ಸ್ವಾಯತ್ತ ಸಂಸ್ಥೆಗಳಾಗಿದ್ದರೆ ಕಳೆದ ವರ್ಷ ನವೆಂಬರ್ ನಿಂದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬರುವವರೆಗೆ ಅಂದರೆ ಮಾರ್ಚ್ ಹದಿನೈದರ ವರೆಗೆ ಏಕೆ ದರ ಏರಿಕೆ ಮಾಡಿಲ್ಲ ಎಂಬುದು ನನ್ನ ಪ್ರಶ್ನೆ?

2014 ರ ಏಪ್ರಿಲ್ ನಲ್ಲಿ ಯು.ಪಿ.ಎ ಸರ್ಕಾರದ ಕೊನೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ವೊಂದಕ್ಕೆ 108 ಡಾಲರ್ ಇತ್ತು, ಆಗ ಡೀಸೆಲ್ ಬೆಲೆ 55 ರೂಪಾಯಿ 49 ಪೈಸೆ, ಪೆಟ್ರೋಲ್ ಬೆಲೆ 71 ರೂಪಾಯಿ 41 ಪೈಸೆ ಇತ್ತು ಎನ್ನುವುದು‌‌ ನೆನಪಲ್ಲಿರಲಿ.

ಯುಪಿಎ ಸರ್ಕಾರದ ಅವಧಿಯಲ್ಲಿ ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ 3 ರೂಪಾಯಿ 46 ಪೈಸೆ, ಪೆಟ್ರೋಲ್ ಮೇಲೆ 9 ರೂಪಾಯಿ 20 ಪೈಸೆ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪೆಟ್ರೋಲ್ ಮೇಲೆ 18 ರೂಪಾಯಿ 70 ಪೈಸೆ, ಡೀಸೆಲ್ ಮೇಲೆ 18 ರೂಪಾಯಿ 34 ಪೈಸೆ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ.ಡೀಸೆಲ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ 531%, ಪೆಟ್ರೋಲ್ ಮೇಲೆ 203% ಏರಿಕೆ ಮಾಡಲಾಗಿದೆ.ಕಾರ್ಪೊರೇಟ್ ತೆರಿಗೆ 35% ಇಂದ 23% ಗೆ ಇಳಿಸಿ, ಸಾಮಾನ್ಯ ಜನರ ಮೇಲೆ ತೆರಿಗೆ ಬರೆ ಹಾಕಲಾಗಿದೆ.ಇದೇನಾ ನರೇಂದ್ರ ಮೋದಿ ಅವರ ಅಚ್ಚೇದಿನ್? ಎಂದು ಅವರು ಪ್ರಶ್ನಿಸಿದರು.

ಕೇವಲ ಹೆಚ್ಚುವರಿ ಅಬಕಾರಿ ಸುಂಕವೊಂದನ್ನೇ ಏರಿಕೆ ಮಾಡಿದ್ದರಿಂದ ಕೇಂದ್ರ ಸರ್ಕಾರಕ್ಕೆ ಕಳೆದ ಎಂಟು ವರ್ಷಗಳಲ್ಲಿ 26 ಲಕ್ಷ ಕೋಟಿ ರೂಪಾಯಿ ಆದಾಯ ಬಂದಿದೆ.ನರೇಂದ್ರ ಮೋದಿ ಸರ್ಕಾರ ಕೊಳ್ಳೆಹೊಡೆದ ಈ ಹಣಕ್ಕೆ ಮೊದಲು ಲೆಕ್ಕ ಕೊಡಲಿ.ಹಿಂದಿನ ಸರ್ಕಾರಗಳು ಸಾಲ ಮಾಡಿದ್ದವು ಅದನ್ನು ತೀರಿಸಲು ಪೆಟ್ರೋಲ್ ಬೆಲೆ ಹೆಚ್ಚು ಮಾಡಬೇಕಾಯ್ತು ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಹಸಿ ಸುಳ್ಳು ಎಂದು ಹೇಳಿದರು.

ಬಿಜೆಪಿ ಸರ್ಕಾರ ಸಣ್ಣ ಸಾಲ ತೋರಿಸಿ ದೊಡ್ಡ ಸಾಗರವನ್ನೇ ಕೊಳ್ಳೆ ಹೊಡೆದಿದೆ.ವಾಜಪೇಯಿ ಸರ್ಕಾರವೂ ಸೇರಿದಂತೆ ಹಿಂದಿನ ಸರ್ಕಾರಗಳು ಒಟ್ಟು 2 ಲಕ್ಷದ 20 ಸಾವಿರ ಕೋಟಿ ತೈಲ ಬಾಂಡ್ ಗಳ ಮೇಲೆ ಸಾಲ ಮಾಡಿದ್ದವು, ಅದರಲ್ಲಿ ನರೇಂದ್ರ ಮೋದಿ ಸರ್ಕಾರ ಪಾವತಿಸಿರುವ ಹಣ ರೂ. 3,500 ಕೋಟಿ ಮಾತ್ರ. ಆದರೆ ವಸೂಲಿ ಮಾಡಿದ್ದು 26 ಲಕ್ಷ ಕೋಟಿ ರೂಪಾಯಿ.‌ ಇದು‌ ಮೋಸ ಅಲ್ಲದೆ ಮತ್ತೇನು? ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ‘ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ?’

ಯು.ಪಿ.ಎ ಸರ್ಕಾರ ಗ್ಯಾಸ್ ಮೇಲೆ 50% ಸಬ್ಸಿಡಿ ನೀಡುತ್ತಿದ್ದ ಪರಿಣಾಮ ಗ್ಯಾಸ್ ಬೆಲೆ ರೂ. 414 ಮಾತ್ರ ಇತ್ತು. ನರೇಂದ್ರ ಮೋದಿ ಅವರು 2020 ರಿಂದ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದ್ದರಿಂದ ಗ್ಯಾಸ್ ಬೆಲೆ ಈಗ ಸಾವಿರದ ಗಡಿಗೆ ಬಂದು ನಿಂತಿದೆ.ಅಚ್ಚೇದಿನ್ ಕಹಾ ಹೈ? 

ಜನೌಷಧಿಗಳ ಬೆಲೆಯನ್ನು 10% ಏರಿಕೆ ಮಾಡಲಾಗಿದೆ. ಅಡುಗೆ ಎಣ್ಣೆ ಬೆಲೆ 220 ರೂಪಾಯಿ ಆಗಿದೆ, ಕಬ್ಬಿಣ ಟನ್ ಗೆ 90,000 ರೂಪಾಯಿ ಆಗಿದೆ.ಈ ರೀತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುವುದರಿಂದ ಹಣದುಬ್ಬರ ಏರಿಕೆಯಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಪ್ರತೀ ಲೀಟರ್ ಡೀಸೆಲ್ ಮೇಲೆ 32 ರೂಪಾಯಿ, ಪೆಟ್ರೋಲ್ ಮೇಲೆ 47 ರೂಪಾಯಿ ತೆರಿಗೆ ವಸೂಲಿ ಮಾಡುತ್ತಿವೆ.ಇದರಲ್ಲಿ ಅರ್ಧದಷ್ಟು ಕಡಿಮೆಯಾದರೂ ಕೋಟ್ಯಂತರ ಬಡ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಾರು.

ಬಿಜೆಪಿ ಸರ್ಕಾರ ತನ್ನ ಎಲ್ಲಾ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ನಿರ್ಬಂಧ, ಕಾಶ್ಮೀರಿ ಫೈಲ್ಸ್, ಹಲಾಲ್ ಮುಂತಾದವುಗಳ ಬಗ್ಗೆ ಮಾತ್ರ ಮಾತನಾಡುತ್ತದೆ.
ಜನರ ಕಷ್ಟಗಳ ಬಗ್ಗೆ ಬಿಜೆಪಿಯದು ದಿವ್ಯಮೌನ.

ಇದನ್ನೂ ಓದಿ: 'ಒಬ್ಬರ ಮೀಸಲಾತಿಯನ್ನು ಕಿತ್ತು ಇನ್ನೊಬ್ಬರಿಗೆ ಕೊಡುವುದು ಬೇಡ'-ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಎಪಿಎಂ‌ಸಿ ಕಾಯ್ದೆ ವಾಪಾಸು ಪಡೆದುಕೊಂಡರೂ ರಾಜ್ಯದಲ್ಲಿ ಏಕೆ ಕಾಯ್ದೆ ವಾಪಾಸು ಪಡೆದಿಲ್ಲ? ವರ್ಷಕ್ಕೆ ರೂ. 600 ಕೋಟಿ ಆದಾಯ ಗಳಿಸುತ್ತಿದ್ದ ರಾಜ್ಯದ ಎಪಿಎಂಸಿ ಗಳು ಇಂದು ಆದಾಯವಿಲ್ಲದೆ ಶಾಶ್ವತವಾಗಿ ಬಾಗಿಲು ಮುಚ್ಚಲು ಸಿದ್ಧವಾಗಿವೆ.ಇದಕ್ಕೆ ಹೊಣೆ ಯಾರು?ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ನೋಟು ರದ್ದತಿ, ಜಿಎಸ್‌ಟಿ ಜಾರಿ ಮೊದಲು 11 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ.ಇಂದು ಈ ಬಗ್ಗೆ ಚರ್ಚೆಯಾಗಬೇಕಿದೆ, ಹಲಾಲ್ - ಜಟ್ಕಾ ಬಗ್ಗೆ ಅಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ಕೊರೊನಾ ನಿರ್ವಹಣೆಗೆ ಸರ್ಕಾರ ರೂ.15,000 ಕೋಟಿ ಖರ್ಚು ಮಾಡಿದೆ ಎನ್ನುತ್ತಿದ್ದಾರೆ.ಕೇರಳ ಕೊರೊನಾ ನಿರ್ವಹಣೆಗೆ ರೂ. 40,000 ಕೋಟಿ,ತಮಿಳುನಾಡಿನವರು 30,000 ರೂ ಕೋಟಿ ಖರ್ಚು ಮಾಡಿದ್ದಾರೆ.ಆ ರಾಜ್ಯಗಳೆಲ್ಲಾ ದಿವಾಳಿಯಾಗಿದ್ದಾವ?  ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News