ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಜೆದಿನಗಳಲ್ಲೂ ಸಹ ಕಡ್ಡಾಯವಾಗಿ ಕಾರ್ಯನಿರ್ವಹಿಸುವಂತೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಮಹತ್ವದ ಆದೇಶ ನೀಡಿದ್ದಾರೆ.
ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಆಯುಕ್ತರು, ಬಿಬಿಎಂಪಿಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿ, ವಿಧಾನ ಸಭಾ ಕ್ಷೇತ್ರ 2018 ರ ನೀತಿ ಸಂಹಿತೆ ಜಾರಿಗೊಳಿಸಿದ್ದು, ಅದರಂತೆ ಚುನಾವಣಾ ಅವಧಿ ಪೂರ್ಣಗೊಳ್ಳುವವರೆಗೆ ಎಲ್ಲಾ ಸರ್ಕಾರಿ ರಜೆಗಳು ಹಾಗೂ ಎರಡನೇ ಶನಿವಾರ, ಎಲ್ಲಾ ಭಾನುವಾರಗಳಂದು ಸಹ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ರಜೆ ಪಡಯದೆ ಕರ್ತವ್ಯ ನಿರ್ವಹಿಸಲು ಆದೇಶಿಸಿಸಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಮಾನ್ಯ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿ ಪಡೆದು ರಜೆ ಮೇಲೆ ತೆರಳಲುವಂತೆ ತಿಳಿಸಲಾಗಿದೆ.
ಇದನ್ನು ಚುನಾವಣಾ ಕಾರ್ಯನಿರತ ಹಿರಿಯ ಅಧಿಕಾರಿಗಳೊಂಡಂತೆ, ಬಿಬಿಎಂಪಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಹೊರ ಗುತ್ತಿಗೆ ಸಿಬ್ಬಂದಿಗಳು ಎಲ್ಲರೂ ಸಹ ತಪ್ಪದೇ ಪಾಲಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಈ ಆದೇಶವನ್ನು ತಪ್ಪಿದ್ದಲ್ಲಿ ಮಾದರಿ ನೀತಿ ಸಂಹಿತೆಯಂತೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.