ಪಶ್ಚಿಮ ಬಂಗಾಳ: ಟಿಎಂಸಿ ಕಚೇರಿಯಲ್ಲಿ ಸ್ಫೋಟ; ಇಬ್ಬರು ಸಾವು, 6 ಮಂದಿಗೆ ಗಾಯ

ಪಕ್ಷದ ಕಾರ್ಯಕರ್ತರಾದ ಸುದೀಪ್ಟೋ ಘೋಷ್ ಮತ್ತು ಬಿಮಲ್ ಚೌಧರಿ ಎಂಬುವರು ಗುರುವಾರ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.

Last Updated : Aug 24, 2018, 07:19 PM IST
ಪಶ್ಚಿಮ ಬಂಗಾಳ: ಟಿಎಂಸಿ ಕಚೇರಿಯಲ್ಲಿ ಸ್ಫೋಟ; ಇಬ್ಬರು ಸಾವು, 6 ಮಂದಿಗೆ ಗಾಯ title=

ಕೋಲ್ಕತ್ತ: ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ನಾರಾಯಣಗರ್ ಪ್ರದೇಶದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಪಕ್ಷದ 12 ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸ್ಪೋಟದ ತೀವ್ರತೆಗೆ ಪಕ್ಷದ ಕಚೇರಿಯ ಗೋಡೆ ಕುಸಿದಿದ್ದು, ಪಕ್ಕದ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಆದರೆ ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ ಎಂದು ನರಾಯಂಗಾರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ಘಟನೆಯಲ್ಲಿ ಮೃತಪಟ್ಟವರು ಅಥವಾ ಗಾಯಗೊಂಡವರು ತಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರು ಖಚಿತಪಡಿಸಿದ್ದಾರೆ. ಅಲ್ಲದೆ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ  ಕ್ರಮ ಕೈಗೊಳ್ಳುವಂತೆ ಪಕ್ಷವು ಒತ್ತಾಯಿಸಿದೆ. 

ಪಕ್ಷದ ಕಾರ್ಯಕರ್ತರಾದ ಸುದೀಪ್ಟೋ ಘೋಷ್ ಮತ್ತು ಬಿಮಲ್ ಚೌಧರಿ ಎಂಬುವರು ಗುರುವಾರ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಅಲ್ಲದೆ, ಗಾಯಗೊಂಡ 6 ಮಂದಿಯಲ್ಲಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು, ಕೊಲ್ಕತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆಡಳಿತ ಪಕ್ಷದ ಜಿಲ್ಲಾ ಅಧ್ಯಕ್ಷ ಅಜಿತ್ ಮೈಟಿ ತಿಳಿಸಿದ್ದಾರೆ.
 

Trending News