ನವದೆಹಲಿ: ಮಹಾರಾಷ್ಟ್ರದ ವಾಧ್ರಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ನೀತಿ ಸಂಹಿತೆ ಉಲ್ಲಂಘಿಸಿಲ್ಲ ಎಂದು ಚುನಾವಣಾ ಆಯೋಗ ಸೋಮವಾರ ಕ್ಲೀನ್ ಚಿಟ್ ನೀಡಿದೆ.
"ಚುನಾವಣಾ ನೀತಿ ಸಂಹಿತೆಯ ಮಾರ್ಗದರ್ಶನಗಳು/ನಿಬಂಧನೆಗಳ ಪ್ರಕಾರ ಈ ವಿಚಾರವನ್ನು ವಿವರವಾಗಿ ಪರಿಶೀಲಿಸಿ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿಗಳು ವರದಿ ನೀಡಿದ್ದಾರೆ. ಈ ವಿಚಾರದಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದಿಲ್ಲ ಎಂದು ಹೇಳಲಾಗಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದ ಸ್ಪರ್ಧಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ವಿರೋಧ ಪಕ್ಷವು ತಮ್ಮ ನಾಯಕನನ್ನು ಬಹುಮತ ಪ್ರಾಬಲ್ಯಿಸುವ ಕ್ಷೇತ್ರಗಳಿಂದ ಸ್ಪರ್ಧೆಗಿಳಿಸಾಲು "ಹೆದರುತ್ತಾರೆ" ಎಂದು ಹೇಳಿದ್ದರು.
"ಕಾಂಗ್ರೆಸ್ ಹಿಂದೂಗಳನ್ನು ಅವಮಾನಿಸಿದೆ, ಹಾಗಾಗಿ ದೇಶದ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಶಿಕ್ಷಿಸಲು ನಿರ್ಧರಿಸಿದ್ದಾರೆ. ಹಾಗಾಗಿ ಆ ಪಕ್ಷದ ನಾಯಕರು ಹಿಂದೂ ಪ್ರಾಬಲ್ಯ ಇರುವ ಕ್ಷೇತ್ರಗಳಿಂದ ಸ್ಪರ್ಧಿಸಲು ಹೆದರುತಿದ್ದಾರೆ. ಅದಕ್ಕಾಗಿ ಅಲ್ಪಸಂಖಾತರಿರುವ ಕ್ಷೇತ್ರವನ್ನು ಸ್ಪರ್ಧೆಗೆ ಆಯ್ಕೆ ಮಾಡಿಕೊಂಡಿದೆ" ಎಂದು ಮೋದಿ ಹೇಳಿದ್ದರು. ಈ ಸಂಬಂಧ ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದ ಕಾಂಗ್ರೆಸ್, ಮೋದಿ ಅವರ ಈ ಹೇಳಿಕೆಗಳು 'ದ್ವೇಷ ಮತ್ತು ದೇಶ ವಿಭಜನೆ'ಗೆ ಪ್ರಚೋದಿಸುತ್ತವೆ ಎಂದು ಆರೋಪಿಸಿತ್ತು.