ಐಎಎಫ್ ದಾಳಿ: ಬಾಲಾಕೋಟ್‌ ಶಿಬಿರದಲ್ಲಿ JeMನ 42 ಆತ್ಮಹತ್ಯಾ ಬಾಂಬರ್​ಗಳ ಹತ್ಯೆ

ರಾವಲ್ಪಿಂಡಿ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಅಜ್ಹರ್ ತವರು ಜಿಲ್ಲೆಯಾಗಿದ್ದು, ಅಜ್ಹರ್ ಪ್ರಸ್ತುತ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯೊಳಗೆ ರಕ್ಷಣೆ ಪಡೆಯುತ್ತಿದ್ದಾನೆ ಎಂದು ನಂಬಲಾಗಿದೆ.

Last Updated : Feb 27, 2019, 11:43 AM IST
ಐಎಎಫ್ ದಾಳಿ: ಬಾಲಾಕೋಟ್‌ ಶಿಬಿರದಲ್ಲಿ JeMನ 42 ಆತ್ಮಹತ್ಯಾ ಬಾಂಬರ್​ಗಳ ಹತ್ಯೆ title=

ನವದೆಹಲಿ: ಪುಲ್ವಾಮಾದ ಆವಂತಿಪುರದಲ್ಲಿ ಸೇನಾ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಿ, 40ಕ್ಕೂ ಹೆಚ್ಚು ಯೋಧರನ್ನು ಬಲಿ ಪಡೆದಿದ್ದ ಪಾಕಿಸ್ತಾನದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ವಿರುದ್ಧ ಭಾರತೀಯ ವಾಯುಪಡೆ ಮಂಗಳವಾರ ಪ್ರತೀಕಾರ ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿ.ಮೀ. ಒಳನುಗ್ಗಿದ 12 ಮಿರಾಜ್ -2000 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಮಾತ್ರವಲ್ಲದೇ, ಪಾಕಿಸ್ತಾನ ಗಡಿ ಒಳಗಿದ್ದ ಜೈಶ್ ಉಗ್ರರ ಪ್ರಮುಖ ತರಬೇತಿ ಕೇಂದ್ರವನ್ನೂ ನಾಶಗೊಳಿಸಿವೆ. ಈ ದಾಳಿಯಲ್ಲಿ JeMನ ತರಬೇತಿ ಪಡೆದಿದ್ದ ಕನಿಷ್ಠ 42 ಆತ್ಮಹತ್ಯಾ ಬಾಂಬರ್​ಗಳನ್ನು ಬಲಿ ಪಡೆಯಲಾಗಿದೆ.

ಈ ಆತ್ಮಹತ್ಯಾ ಬಾಂಬರ್​ಗಳು ಭಾರತದ ಒಳನುಸುಳಿ ಹಲವೆಡೆ ದಾಳಿ ನಡೆಸಲು ಯೋಜಿಸಿದ್ದರು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಮಂಗಳವಾರ 12 ಮಿರಾಜ್‌ ಯುದ್ಧ ವಿಮಾನಗಳು ನಸುಕಿನ ವೇಳೆ 3:45 ರಿಂದ 3:53 ರವರೆಗೆ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ 15 ರಿಂದ 21 ನಿಮಿಷಗಳ ಕಾಲ ಭಯೋತ್ಪಾದನಾ ಶಿಬಿರಗಳ ಮೇಲೆ ಯಶಸ್ವಿ ಕಾರ್ಯಚರಣೆ ನಡೆಸಿದ ಭಾರತೀಯ ವಾಯುಪಡೆ  'ಏರ್ ಸ್ಟ್ರೈಕ್' ನಡೆಸುವ ಮೂಲಕ ಬಾಂಬ್‌ಗಳ ಸುರಿಮಳೆಗರೆದಿದೆ. ಪೋಕ್ ಪ್ರವೇಶಿಸಿ ಸುಮಾರು 1000 ಕೆಜಿ ಬಾಂಬ್‌ ಅನ್ನು ಉಗ್ರರ ಮೇಲೆ ಹಾಕಿರುವ ಸೇನೆ ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಮತ್ತು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಅಡಗುತಾಣಗಳು, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಲಾಂಚಿಂಗ್‌ ಪ್ಯಾಡ್‌ಗಳನ್ನು ಛಿದ್ರ ಛಿದ್ರಗೊಳಿಸಿದೆ. ಇದಲ್ಲದೆ ಈ ಕಾರ್ಯಾಚರಣೆಯಲ್ಲಿ ಉಗ್ರ ಸಂಘಟನೆಯ ಆಲ್ಫಾ 3 ಕಂಟ್ರೋಲ್ ರೂಮ್ ಗಳನ್ನು ಉಡಾಯಿಸಲಾಗಿದೆ.

ಝೀ ಮಿಡಿಯಾಗೆ ಉನ್ನತ ಮೂಲಗಳಿಂದ ಲಭಿಸಿರುವ 42 ಆತ್ಮಹತ್ಯಾ ಬಾಂಬರ್​ಗಳ ಪಟ್ಟಿಯಲ್ಲಿ ಗರಿಷ್ಠ 14 ಆತ್ಮಹತ್ಯಾ ಬಾಂಬರ್​ಗಳು ರಾವಲ್ಪಿಂಡಿ ಮತ್ತು ಅಟಾಕ್ ಗೆ ಸೇರಿದವರು ಎಂದು ತಿಳಿದು ಬಂದಿದೆ.

ರಾವಲ್ಪಿಂಡಿ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಅಜ್ಹರ್ ತವರು ಜಿಲ್ಲೆಯಾಗಿದ್ದು, ಅಜ್ಹರ್ ಪ್ರಸ್ತುತ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯೊಳಗೆ ರಕ್ಷಣೆ ಪಡೆಯುತ್ತಿದ್ದಾನೆ ಎಂದು ನಂಬಲಾಗಿದೆ.

ಬೆಟ್ಟಗುಡ್ಡ, ಪರ್ವತ ಪ್ರದೇಶಗಳು ಹೆಚ್ಚಾಗಿ ಇರುವುದರಿಂದ ಬಾಲಾಕೋಟ್‌ನ್ನು ಜೈಶ್ ಸಂಘಟನೆ ತನ್ನ ಪ್ರಮುಖ ನೆಲೆಯನ್ನಾಗಿ ಮಾಡಿಕೊಂಡಿತ್ತು. ಶಿಬಿರವು ಕುನ್ಹಾರ್ ನದಿಯಲ್ಲಿ ನೆಲೆಗೊಂಡಿರುವುದರಿಂದ, ಭಯೋತ್ಪಾದಕರು ಜಲಚರ ತರಬೇತಿಯನ್ನೂ ಕೂಡ ಪಡೆಯುತ್ತಿದ್ದರು.

ಜೈಶ್ ಮುಖ್ಯಸ್ಥ ಮಸೂದ್ ಅಜರ್​ನ ಬಾಮೈದ ಯೂಸೂಫ್ ಅಜರ್ ನೇತೃತ್ವದಲ್ಲಿ ಬಾಲಾಕೋಟ್‌ನ ಶಿಬಿರವನ್ನು ನೋಡಿಕೊಳ್ಳುತ್ತಿದ್ದನು ಎಂದು ಮೂಲಗಳು ತಿಳಿಸಿವೆ.  ಕಾಶ್ಮೀರ ಸೇರಿದಂತೆ ದೇಶದ ಇತರ ಭಾಗಗಳಿಂದ ಜೈಶ್ ಸಂಘಟನೆಗೆ ಕರೆತರಲಾಗುತ್ತಿದ್ದ ಯುವಕರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು. ಅಜರ್ ಮತ್ತು ಇತರ ಹಿರಿಯ ಭಯೋತ್ಪಾದಕರು ಈ ಶಿಬಿರದಲ್ಲಿ ಹೊಸದಾಗಿ ನೆಮಕವಾಗುತ್ತಿದ್ದ ಭಯೋತ್ಪಾದಕರಿಗೆ ಸ್ಪೂರ್ತಿದಾಯಕ ಉಪನ್ಯಾಸ ನೀಡಲು ನಿಯಮಿತವಾಗಿ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ತರಬೇತಿದಾರರು ಸೈನ್ಯದ ಮಾಜಿ ಸಿಬ್ಬಂದಿಗಳು ಎಂದು ಮೂಲಗಳು ತಿಳಿಸಿವೆ.

Trending News