Sudan Crisis : ಇಬ್ಬರು ಜನರಲ್‌ಗಳ ನಡುವಿನ ಯುದ್ದದಲ್ಲಿ ಹೊತ್ತಿ ಉರಿಯುತ್ತಿದೆ ಸುಡಾನ್ ! 180 ಕ್ಕೂ ಹೆಚ್ಚು ಮಂದಿ

Sudan Crisis: ಎರಡು ಬಣಗಳು ಸುಡಾನ್‌ನ ಹಲವಾರು ನಗರಗಳಲ್ಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಗಳನ್ನು ನಡೆಸುತ್ತಿವೆ. . ಸುಡಾನ್ ರಾಜಧಾನಿ ಖಾರ್ಟೂಮ್‌ ಮತ್ತು ಒಮ್‌ದುರ್‌ಮನ್ ಸೇರಿದಂತೆ ಅನೇಕ ನಗರಗಳಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.  

Written by - Ranjitha R K | Last Updated : Apr 19, 2023, 10:40 AM IST
  • ದೇಶವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಆ ದೇಶದ ಸೇನೆಯದ್ದಾಗಿರುತ್ತದೆ.
  • ಸುಡಾನ್‌ನಲ್ಲಿ ಇಲ್ಲಿಯವರೆಗೆ 180 ಕ್ಕೂ ಹೆಚ್ಚು ಮಂದಿ ಸಾವು
  • 2021 ರಲ್ಲಿ ಆರಂಭವಾದ ದಂಗೆ
Sudan Crisis : ಇಬ್ಬರು ಜನರಲ್‌ಗಳ ನಡುವಿನ ಯುದ್ದದಲ್ಲಿ ಹೊತ್ತಿ ಉರಿಯುತ್ತಿದೆ ಸುಡಾನ್ ! 180 ಕ್ಕೂ ಹೆಚ್ಚು ಮಂದಿ title=

Sudan Crisis : ದೇಶವನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಆ ದೇಶದ ಸೇನೆಯದ್ದಾಗಿರುತ್ತದೆ.  ಗಡಿಯೊಳಗೆ ನುಗ್ಗಿ ಬರುವ ಶತ್ರುಗಳನ್ನು ಹೊಡೆದುರುಳಿಸುವ ಕೆಲಸವನ್ನು ಆಯಾ ದೇಶದ ಸೇನೆ ಮಾಡುತ್ತದೆ. ತನ್ನ ದೇಶದ ಪ್ರಜೆಗಳನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸುವ ಮಹತ್ತರ ಜವಾಬ್ದಾರಿಯನ್ನು ಸೇನೆ ಹೊತ್ತು ನಿಂತಿರುತ್ತದೆ. ಆದರೆ ಒಂದು ದೇಶದ ಸೈನ್ಯ ಮತ್ತು ಅರೆಸೇನಾ ಪಡೆಗಳ ನಡುವೆಯೇ ಯುದ್ಧ ಪ್ರಾರಂಭವಾದರೆ, ಪರಿಣಾಮ ಘನ ಘೋರ. ದೇಶ ಕಾಯುವ ಸೇನಾ ನಾಯಕರೇ ದೇಶ ಆಕ್ರಮಿಸಿಕೊಳ್ಳುವ ಹೋರಾಟಕ್ಕೆ ಮುಂದಾದರೆ ಆ ದೇಶದ ಸ್ಥಿತಿಯನ್ನು ಊಹಿಸುವುದು ಕಷ್ಟ.   ಆಫ್ರಿಕನ್ ದೇಶ ಸುಡಾನ್ ಕಳೆದ 3 ದಿನಗಳಿಂದ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಸುಡಾನ್‌ನ ಸೈನ್ಯ ಮತ್ತು ಅರೆಸೇನಾ ಪಡೆಗಳು ಪರಸ್ಪರರ ರಕ್ತದ ಓಕುಳಿ ಹರಿಸಿವೆ. ದೇಶದ ಅಧಿಕಾರದ ಗದ್ದುಗೆ ಏರುವ ಸಲುವಾಗಿ ಈ ಯುದ್ದ ನಡೆಯುತ್ತಿದೆ. ಪ್ರಾಬಲ್ಯಕ್ಕಾಗಿ  ಇಬ್ಬರು ಕಮಾಂಡರ್‌ಗಳ ನಡುವಿನ ನಡೆದ ಕಿತ್ತಾಟ ಇಡೀ ದೇಶವನ್ನೇ ಯುದ್ಧ ಭೂಮಿಯನ್ನಾಗಿಸಿದೆ. 

ಸುಡಾನ್‌ನಲ್ಲಿ ಇಲ್ಲಿಯವರೆಗೆ 180 ಕ್ಕೂ ಹೆಚ್ಚು ಮಂದಿ ಸಾವು : 
ಎರಡು ಬಣಗಳು ಸುಡಾನ್‌ನ ಹಲವಾರು ನಗರಗಳಲ್ಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಗಳನ್ನು ನಡೆಸುತ್ತಿವೆ. ಸುಡಾನ್ ರಾಜಧಾನಿ ಖಾರ್ಟೂಮ್‌ ಮತ್ತು ಒಮ್‌ದುರ್‌ಮನ್ ಸೇರಿದಂತೆ ಅನೇಕ ನಗರಗಳಲ್ಲಿ 180 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸುಡಾನ್ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ  ಯುದ್ದದ ಕಾರಣದಿಂದಾಗಿ ನೆರೆಯ ದೇಶಗಳು ತಮ್ಮ ಗಡಿಗಳನ್ನು ಮುಚ್ಚಿವೆ. 1956 ರಲ್ಲಿ ಸ್ವತಂತ್ರಗೊಂಡ ಸುಡಾನ್ ಅಂದಿನಿಂದಲೂ ಅಂತರ್ಯುದ್ಧ, ಮತ್ತು ದಂಗೆಯಿಂದ ಸುತ್ತುವರಿದಿದೆ. ಆದರೆ ಈ ಬಾರಿ ಪರಿಸ್ಥಿತಿ ಅತಿರೇಕಕ್ಕೆ  ಹೋಗಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷದಿಂದಾಗಿ ಸೇನೆಯ ಫೈಟರ್ ಜೆಟ್‌ಗಳು ಸುಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿ ಕ್ಷಿಪ್ರ ಬೆಂಬಲ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿವೆ.

ಇದನ್ನೂ ಓದಿ : Most Precious Lizard: ಈ ಹಲ್ಲಿಯ ಬೆಲೆ ಒಂದು ಬಿಎಂಡಬ್ಲ್ಯೂಗೆ ಸಮಾನ ಎಂದ್ರೆ ನೀವು ನಂಬ್ತೀರಾ? 100% ನಿಜ!

 2021 ರಲ್ಲಿ ಆರಂಭವಾದ ದಂಗೆ : 
2021 ರಲ್ಲಿ ಸುಡಾನ್‌ನಲ್ಲಿ ದಂಗೆ ನಡೆದಿತ್ತು. ಅಂದಿನಿಂದ ಸೇನೆ ಮತ್ತು ಅರೆಸೈನಿಕ ಪಡೆ ಅಂದರೆ ಕ್ಷಿಪ್ರ ಬೆಂಬಲ ಪಡೆಗಳ ನಡುವೆ  ಎಲ್ಲವೂ ಸರಿ ಇರಲಿಲ್ಲ. ಕ್ಷಿಪ್ರ ಬೆಂಬಲ ಪಡೆ ಖಾರ್ಟೂಮ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ. ವಿಮಾನ ನಿಲ್ದಾಣದ ಆಕ್ರಮಣದ ಸಮಯದಲ್ಲಿ ಅನೇಕ ವಿಮಾನಗಳು ಸುಟ್ಟುಹೋದವು. ಆರ್‌ಎಸ್‌ಎಫ್‌ನ ವಶದಿಂದ ವಿಮಾನ ನಿಲ್ದಾಣವನ್ನು ಮುಕ್ತಗೊಳಿಸಲು ಸೇನೆಯು ವೈಮಾನಿಕ ದಾಳಿ ನಡೆಸಿದೆ. ಉಪಗ್ರಹ ಚಿತ್ರಗಳನ್ನು ನೋಡಿದಾಗ ವಿಮಾನ ನಿಲ್ದಾಣದಲ್ಲಿ ಭಾರೀ ಹಾನಿ ಸಂಭವಿಸಿರುವುದು  ತಿಳಿದು ಬರುತ್ತದೆ. ಎತ್ತ ನೋಡಿದರೂ ಬೆಂಕಿ ಹೊಗೆಗಳೇ ಕಾಣುತ್ತಿವೆ. 

ರಂಜಾನ್‌ ಸಮಯದಲ್ಲೇ ಅನ್ನ ಆಹಾರ ಇಲ್ಲ : 
ಸಂಘರ್ಷದ ಕಾರಣ ಜನರು ರಾಜಧಾನಿ ಖಾರ್ಟೂಮ್‌ನಲ್ಲಿ ಜನ ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಲಸೆ ಹೋಗಿದ್ದಾರೆ. ಸುಡಾನ್‌ನಲ್ಲಿ  ಜನಸಂಖ್ಯೆಯ 97 ಪ್ರತಿಶತ ಮುಸ್ಲಿಮರು .ಇದೀಗ ಪವಿತ್ರ ರಂಜಾನ್ ತಿಂಗಳು ನಡೆಯುತ್ತಿದೆ. ಆದರೆ ಈ ಪವಿತ್ರ ಮಾಸದಲ್ಲಿಯೇ ಜನ ಅನ್ನ ನೀರಿಗೆ ಹಾತೊರೆಯುವಂತಾಗಿದೆ. ಅಧಿಕಾರಕ್ಕಾಗಿ ನಡೆಯುತ್ತಿರುವ  ಯುದ್ದದಲ್ಲಿ ಜನ ಸಾಮಾನ್ಯರು ಬಳಲಿ ಬೆಂಡಾಗಿದ್ದಾರೆ.  

ಇದನ್ನೂ ಓದಿ ಲವ್‌ ಲೈಫ್‌ಗಾಗಿ 1.35 ಕೋರ್ಟಿ ಖರ್ಚು ಮಾಡಿ ʼಐದು ಇಂಚು ಎತ್ತರʼ ಹೆಚ್ಚಿಸಿಕೊಂಡ ವ್ಯಕ್ತಿ..!

ಮೂರು ದಿನಗಳಿಂದ ದೇಶ ಹೊತ್ತಿ ಉರಿಯುತ್ತಿದೆ ದೇಶ : 
ಕಳೆದ 3 ದಿನಗಳಿಂದ ಸುಡಾನ್ ಹೊತ್ತಿ ಉರಿಯುತ್ತಿದೆ. ಎಲ್ಲೆಂದರಲ್ಲಿ ಬಾಂಬ್, ಗುಂಡುಗಳದ್ದೇ ಸದ್ದು. ಜನನಿಬಿಡ ಪ್ರದೇಶಗಳಲ್ಲಿ ಆರ್‌ಎಸ್‌ಎಫ್ ತನ್ನ ನೆಲೆಗಳನ್ನು ಕಾರ್ಯತಂತ್ರವಾಗಿ ನಿರ್ಮಿಸಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಎರಡು ದೇಶಗಳ ನಡುವಿನ ಯುದ್ಧವಾಗಿದೆ. ಆದರೆ ಸುಡಾನ್‌ನಲ್ಲಿ ಇಬ್ಬರು ಜನರಲ್‌ಗಳ ನಡುವಿನ ಯುದ್ಧಕ್ಕೆ ದೇಶ ಸಾಕ್ಷಿಯಾಗಿದೆ.  

ಸುಡಾನ್ ಪ್ರಸ್ತುತ ಸೇನಾ ಮುಖ್ಯಸ್ಥ ಅಲ್-ಬುರ್ಹಾನ್ ಮತ್ತು ಆರ್‌ಎಸ್‌ಎಫ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ದಗಾಲೊ ನಡುವೆ ಈ ಯುದ್ಧ ನಡೆಯುತ್ತಿದೆ. ಒಂದು ಕಾಲದಲ್ಲಿ ಬುರ್ಹಾನ್ ಮತ್ತು ಹಮ್ದಾನ್ ಪರಸ್ಪರ ಸಹಚರರಾಗಿದ್ದರು. ಇಬ್ಬರೂ ಸುಡಾನ್‌ನ ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಒಟ್ಟಿಗೆ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಅಧಿಕಾರದ ಸ್ವಾಧೀನಕ್ಕಾಗಿ ಇಬ್ಬರೂ ಶತ್ರುಗಳಾಗಿ ಹೋರಾಟ ನಡೆಸುತ್ತಿದ್ದಾರೆ.  

ಸಂಘರ್ಷದ ಹಿಂದಿನ ಕಾರಣ ? :  
ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಮೂಲ 2019 ವರ್ಷಕ್ಕೆ ಸಂಬಂಧಿಸಿವೆ. ಆ ಸಮಯದಲ್ಲಿ ಸುಡಾನ್ ಅಧ್ಯಕ್ಷ ಒಮರ್ ಅಲ್-ಬಶೀರ್ ವಿರುದ್ಧ ಸಾರ್ವಜನಿಕರು ದಂಗೆ ಎದ್ದರು. ಇದಾದ  ನಂತರ ಸೈನ್ಯವು ಅಲ್-ಬಶೀರ್‌ನ ಅಧಿಕಾರವನ್ನು  ಕೊನೆಯಾಗಿಸಿತು.  ಆದರೆ ಇದರೊಂದಿಗೆ ಸುಡಾನ್‌ನಲ್ಲಿ ಸಂಘರ್ಷದ ಮುಂದಿನ ಹಂತವು ಪ್ರಾರಂಭವಾಯಿತು. ಹೌದು  ಜನರಲ್ ಬುರ್ಹಾನ್ ಮತ್ತು ಜನರಲ್ ದಗಾಲೊ ಇಲ್ಲಿಂದಲೇ ಪರಸ್ಪರ ಶತ್ರುಗಳಾಗಿ ಎದುರು ಬದುರಾದರು. 

ಇದನ್ನೂ ಓದಿ : ಮಗನಿಗಾಗಿ 1 ಗಂಟೆಯಲ್ಲಿ 3206 ಪುಷ್‌ ಅಪ್‌ ತೆಗೆದು ದಾಖಲೆ ಬರೆದ ತಂದೆ..!

ಸುಡಾನ್‌ನಲ್ಲಿ ಚುನಾವಣೆ ನಡೆಸುವ ಬಗ್ಗೆ ಇಬ್ಬರ ನಡುವೆ ಒಮ್ಮತವಿರಲಿಲ್ಲ. ಆರ್‌ಎಸ್‌ಎಫ್‌ನ 10,000 ಸೈನಿಕರನ್ನು ಅಂದರೆ ಕ್ಷಿಪ್ರ ಬೆಂಬಲ ಪಡೆಗಳನ್ನು ಸೇನೆಗೆ ಸೇರಿಸಿಕೊಳ್ಳುವ ಬಗ್ಗೆ ಸೇನೆಯು ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ಸೇನೆಯೊಂದಿಗೆ ಅರೆಸೇನಾ ಪಡೆ ವಿಲೀನಗೊಂಡ ನಂತರ ರಚನೆಯಾಗಲಿರುವ ಹೊಸ ಪಡೆಯ ಮುಖ್ಯಸ್ಥರು ಯಾರು ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಕಳೆದ ಕೆಲವು ವಾರಗಳಿಂದ, ಸುಡಾನ್‌ನ ವಿವಿಧ ಭಾಗಗಳಲ್ಲಿ ಅರೆಸೈನಿಕ ಪಡೆಗಳ ನಿಯೋಜನೆಯು ಹೆಚ್ಚಾಗುತ್ತಾ ಹೋಯಿತು. ಇದನ್ನು ಸೇನೆಯು ಪ್ರಚೋದನೆ ಮತ್ತು ಬೆದರಿಕೆಯ ರೂಪವಾಗಿ ಕಂಡುಕೊಂಡಿದೆ.  

ಈ ಎರಡೂ ಗುಂಪುಗಳಿಗೆ ಇತರ ದೇಶಗಳಿಂದ ಸಿಗುತ್ತಿರುವ ಬೆಂಬಲ  ಬೆಂಕಿಗೆ ತುಪ್ಪ ಸುರಿದ ರೀತಿಯಲ್ಲಿದೆ. ಸುಡಾನ್ ಸೈನ್ಯವನ್ನು ಈಜಿಪ್ಟ್ ಬೆಂಬಲಿಸುತ್ತದೆ. ಆದರೆ ಅರೆಸೈನಿಕ ಗುಂಪನ್ನು ಯುಎಇ ಮತ್ತು ಸೌದಿ ಅರೇಬಿಯಾ ಬೆಂಬಲಿಸುತ್ತದೆ. ಆದ್ದರಿಂದಲೇ ಎರಡೂ ಗುಂಪಿನವರು ಪರಸ್ಪರ ತಲೆಬಾಗಲು ಸಿದ್ದರಿಲ್ಲ. ಎರಡೂ ಗುಂಪುಗಳು ತಮ್ಮದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿವೆ. 

ಸುಡಾನ್‌ನಲ್ಲಿದ್ದಾರೆ 4 ಸಾವಿರ ಭಾರತೀಯರು : 
ಸುಡಾನ್‌ನಲ್ಲಿ ಸುಮಾರು 4 ಸಾವಿರ ಭಾರತೀಯರಿದ್ದಾರೆ. ಈ ಘರ್ಷಣೆಯಲ್ಲಿ ಒಬ್ಬ ಭಾರತೀಯ ಕೂಡಾ ಸಾವನ್ನಪ್ಪಿದ್ದಾರೆ. ಇದೀಗ  ಭಾರತೀಯ ರಾಯಭಾರ ಕಚೇರಿ, ಭಾರತೀಯ ನಾಗರಿಕರಿಗೆ  ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮನೆಯಿಂದ ಹೊರ ಬಾರದಂತೆ ಸಲಹೆ ನೀಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News