ಚಂದ್ರನ ಅಂಗಳಕ್ಕಿಳಿಯಲು ಭಾರತದ ಸಿದ್ಧತೆ: ಬಾಹ್ಯಾಕಾಶ ಯೋಜನೆಗಳ ಸಾಕಾರಕ್ಕೆ ಹೊಸ ಹಾದಿ

Chandrayan-3: ಅಂದಾಜು 75 ಮಿಲಿಯನ್ ಡಾಲರ್ ಮೊತ್ತದಲ್ಲಿ (615 ಕೋಟಿ) ಅಭಿವೃದ್ಧಿ ಪಡಿಸಲಾಗಿರುವ ಭಾರತದ ಚಂದ್ರಯಾನ-3 ಯೋಜನೆ ಭಾರತದ ದಕ್ಷಿಣದಲ್ಲಿರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಜುಲೈ 14ರ ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ.

Written by - Girish Linganna | Edited by - Yashaswini V | Last Updated : Jul 14, 2023, 10:02 AM IST
  • ಚಂದ್ರಯಾನ-3 ಯೋಜನೆ 2 ಮೀಟರ್ ಎತ್ತರದ ಲ್ಯಾಂಡರ್ ಹೊಂದಿದ್ದು, ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ಅನ್ನು ಬಿಡುಗಡೆಗೊಳಿಸಲಿದೆ.
  • ರೋವರ್ ಎರಡು ವಾರಗಳ ಅವಧಿಯಲ್ಲಿ ಚಂದ್ರನ ಮೇಲೆ ಹಲವು ಪ್ರಯೋಗಗಳನ್ನು ಕೈಗೊಳ್ಳಲಿದೆ.
  • ತಜ್ಞರ ಪ್ರಕಾರ, ಈ ಉಡಾವಣೆ ಇನ್ನೊಂದು ಉದ್ದೇಶವಾದ ಖಾಸಗಿ ವಲಯದಲ್ಲಿನ ವೇಗವಾದ ಬಾಹ್ಯಾಕಾಶ ಸ್ಪರ್ಧೆಗೆ ತಾನೂ ಸಿದ್ಧವಾಗಿರುವುದನ್ನು ಸಾಕಾರಗೊಳಿಸಲಿದೆ.
ಚಂದ್ರನ ಅಂಗಳಕ್ಕಿಳಿಯಲು ಭಾರತದ ಸಿದ್ಧತೆ: ಬಾಹ್ಯಾಕಾಶ ಯೋಜನೆಗಳ ಸಾಕಾರಕ್ಕೆ ಹೊಸ ಹಾದಿ title=
Chandrayaan 3 Launch

Chandrayan-3: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ, ಜುಲೈ 14ರ ಮಧ್ಯಾಹ್ನ ಚಂದ್ರನ ಮೇಲೆ ರೋವರ್ ಇಳಿಸುವ ಉದ್ದೇಶದಿಂದ ರಾಕೆಟ್ ಉಡಾವಣೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಈ ಐತಿಹಾಸಿಕ ಕಾರ್ಯಾಚರಣೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತವನ್ನು ಒಂದು ಪ್ರಮುಖ ರಾಷ್ಟ್ರವನ್ನಾಗಿಸುವ, ಬಾಹ್ಯಾಕಾಶ ಉದ್ಯಮ ವಲಯದಲ್ಲಿ ಪ್ರಮುಖ ವಾಣಿಜ್ಯ ಶಕ್ತಿಯಾಗುವ ಗುರಿ ಹೊಂದಿದೆ.

ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡರ್ ಇಳಿಸುವಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನ, ಈ ಹಿಂದಿನ ಸೋವಿಯತ್ ಒಕ್ಕೂಟ, ಹಾಗೂ ಚೀನಾಗಳು ಮಾತ್ರವೇ ಯಶಸ್ವಿಯಾಗಿವೆ. ದುರದೃಷ್ಟವಶಾತ್, 2023ರ ಆರಂಭದಲ್ಲಿ ಜಪಾನಿನ ಸ್ಟಾರ್ಟಪ್ ಸಂಸ್ಥೆಯೊಂದರ ಚಂದ್ರನ ಮೇಲೆ ಇಳಿಯುವ ಪ್ರಯತ್ನ ಪತನಗೊಂಡು, ವೈಫಲ್ಯ ಅನುಭವಿಸಿತು.

ಅಂದಾಜು 75 ಮಿಲಿಯನ್ ಡಾಲರ್ ಮೊತ್ತದಲ್ಲಿ (615 ಕೋಟಿ) ಅಭಿವೃದ್ಧಿ ಪಡಿಸಲಾಗಿರುವ ಭಾರತದ ಚಂದ್ರಯಾನ-3 ಯೋಜನೆ ಭಾರತದ ದಕ್ಷಿಣದಲ್ಲಿರುವ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ, ಜುಲೈ 14ರ ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ.

ಈ ಉಡಾವಣೆ ಯಶಸ್ವಿಯಾದ ನಂತರ, 43.5 ಮೀಟರ್ ಉದ್ದದ (143 ಅಡಿ) ಎಲ್ಎಂವಿ3 ಉಡಾವಣಾ ರಾಕೆಟ್ ಸ್ಪೇಸ್‌ಕ್ರಾಫ್ಟ್ ಅನ್ನು ದೀರ್ಘವೃತ್ತಾಕಾರದ ಭೂಮಿಯ ಕಕ್ಷೆಗೆ ಒಯ್ಯಲಿದೆ. ಅಲ್ಲಿಂದ, ಸ್ಪೇಸ್‌ಕ್ರಾಫ್ಟ್ ಚಂದ್ರನೆಡೆಗಿನ ಪಥವನ್ನು ಅನುಸರಿಸಿ ಚಲಿಸುತ್ತಾ, ಆಗಸ್ಟ್ 23ರ ಆಸುಪಾಸಿನಲ್ಲಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಗಳಿವೆ.

ಇದನ್ನೂ ಓದಿ- ಚಂದ್ರಯಾನ 3ರೊಡನೆ ಭವಿಷ್ಯದೆಡೆಗೆ ಉಡ್ಡಯನ: ವಿಕ್ರಮ್ ಮತ್ತು ಪ್ರಗ್ಯಾನ್‌ರ ಪರಿಚಯ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಂದಿನ ಉಡಾವಣೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಅವಧಿಯಲ್ಲಿನ ಅತ್ಯಂತ ಪ್ರಮುಖ ಯೋಜನೆಯಾಗಿದೆ. ಕೇಂದ್ರ ಸರ್ಕಾರ ತನ್ನ ಇತ್ತೀಚಿನ ನೀತಿಗಳಲ್ಲಿ ಖಾಸಗಿ ಬಾಹ್ಯಾಕಾಶ ಉಡಾವಣೆಗಳಿಗೆ ಮತ್ತು ಉಪಗ್ರಹ ಆಧಾರಿತ ಯೋಜನೆಗಳಿಗೆ ಉತ್ತೇಜನ ನೀಡುತ್ತಿರುವುದರಿಂದ, ಈ ಬೆಳವಣಿಗೆಗಳು ಸರ್ಕಾರದ ನೀತಿಗೆ ಅನುಗುಣವಾಗಿದೆ.

ಭಾರತೀಯ ಅಧಿಕಾರಿಗಳು, ಭಾರತದ ಬಾಹ್ಯಾಕಾಶ ಕಂಪನಿಗಳು ಮುಂದಿನ ದಶಕದಲ್ಲಿ ಜಾಗತಿಕ ಉಡಾವಣೆಗಳಲ್ಲಿ ಹೆಚ್ಚಿನ ಪಾಲು ಹೊಂದಲಿವೆ ಎಂಬ ಆಶಾಭಾವನೆ ಹೊಂದಿದ್ದಾರೆ. ಭಾರತದ ಮುಂದಿರುವ ಗುರಿಯೆಂದರೆ, 2020ರಲ್ಲಿ ಸಾಧಿಸಲಾದ ಆದಾಯದ 2% ಪಾಲನ್ನು ಐದಯ ಪಟ್ಟು ಹೆಚ್ಚಿಸುವುದು.

ಚಂದ್ರಯಾನ-3 ಯೋಜನೆ 2 ಮೀಟರ್ ಎತ್ತರದ ಲ್ಯಾಂಡರ್ ಹೊಂದಿದ್ದು, ಇದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ಅನ್ನು ಬಿಡುಗಡೆಗೊಳಿಸಲಿದೆ. ರೋವರ್ ಎರಡು ವಾರಗಳ ಅವಧಿಯಲ್ಲಿ ಚಂದ್ರನ ಮೇಲೆ ಹಲವು ಪ್ರಯೋಗಗಳನ್ನು ಕೈಗೊಳ್ಳಲಿದೆ.

ತಜ್ಞರ ಪ್ರಕಾರ, ಈ ಉಡಾವಣೆ ಇನ್ನೊಂದು ಉದ್ದೇಶವಾದ ಖಾಸಗಿ ವಲಯದಲ್ಲಿನ ವೇಗವಾದ ಬಾಹ್ಯಾಕಾಶ ಸ್ಪರ್ಧೆಗೆ ತಾನೂ ಸಿದ್ಧವಾಗಿರುವುದನ್ನು ಸಾಕಾರಗೊಳಿಸಲಿದೆ.

ಇದನ್ನೂ ಓದಿ- ಫ್ಲೈಟ್ ಅಕ್ಸೆಪ್ಟೆನ್ಸ್ ಹಾಟ್ ಟೆಸ್ಟ್‌ನಲ್ಲಿ ಉತ್ತೀರ್ಣಗೊಂಡ ಭಾರತದ ಸಿಇ-20 ಕ್ರಯೋಜೆನಿಕ್ ಇಂಜಿನ್

ನವದೆಹಲಿಯ ಮನೋಹರ್ ಪರಿಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಆ್ಯಂಡ್ ಅನಾಲಿಸಿಸ್ ಸಂಸ್ಥೆಯ ತಜ್ಞರೊಬ್ಬರ ಪ್ರಕಾರ, ಚಂದ್ರಯಾನ-3ರ ಯಶಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಖ್ಯಾತಿ, ಗೌರವವನ್ನು ಹೆಚ್ಚಿಸುವುದರ ಜೊತೆಗೆ, ಉದ್ಯಮದ ವಾಣಿಜ್ಯಿಕ ಪ್ರಯೋಜನಗಳನ್ನು ಪಡೆಯಲು ಪೂರಕವಾಗಲಿದೆ.

2020ರಲ್ಲಿ, ಇಸ್ರೋದ ಚಂದ್ರಯಾನ-2 ಚಂದ್ರಸ್ಪರ್ಶ ನಡೆಸುವ ವೇಳೆಗೆ ಆಕಸ್ಮಿಕವಾಗಿ ಪತನಗೊಂಡರೂ, ಆರ್ಬಿಟರ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು. ಚಂದ್ರಯಾನ-2ರ ಲ್ಯಾಂಡರ್ ಕಳೆದು ಹೋದ ಪ್ರದೇಶದ ಸುತ್ತಮುತ್ತಲಲ್ಲೇ ಚಂದ್ರಯಾನ-3 ಇಳಿಯಲಿದೆ.

ಭಾರತದ ಉಡಾವಣಾ ಮಾರುಕಟ್ಟೆ ಖಾಸಗಿ ಸಂಸ್ಥೆಗಳಿಗೆ ತೆರೆಯಲ್ಪಟ್ಟ ಬಳಿಕ, ಭಾರತದಲ್ಲಿನ ಬಾಹ್ಯಾಕಾಶ ಸ್ಟಾರ್ಟಪ್‌ಗಳ ಸಂಖ್ಯೆ ಎರಡು ಪಟ್ಟಿಗೂ ಹೆಚ್ಚಾಗಿದೆ. ಕಳೆದ ವರ್ಷದ ಕೊನೆಯಲ್ಲಿ, ಸ್ಕೈರೂಟ್ ಏರೋಸ್ಪೇಸ್ ಭಾರತದ ಮೊದಲ ಖಾಸಗಿ ನಿರ್ಮಾಣದ ರಾಕೆಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತು.

ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಅಮೆರಿಕಾ ಪ್ರವಾಸದ ವೇಳೆಯಲ್ಲಿ, ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಬಾಹ್ಯಾಕಾಶ ವಲಯದಲ್ಲಿ ಸಹಕಾರವನ್ನು ಇನ್ನಷ್ಟು ವೃದ್ಧಿಸುವ ಕುರಿತು ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಅಮೆರಿಕಾದ ಡೆನ್‌ವರ್‌ನಲ್ಲಿರುವ ವೊಯೇಜರ್ ಸ್ಪೇಸ್ ಎಂಬ ಸಂಸ್ಥೆಗೆ ನಾಸಾ ತನ್ನ ಮುಂದಿನ ಸ್ಟಾರ್ ಲ್ಯಾಬ್ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸಲು ಗುತ್ತಿಗೆ ನೀಡಿತ್ತು. ಈ ಸಂಸ್ಥೆ ಕಳೆದ ವಾರ ತಾನು ಇಸ್ರೋ ಜೊತೆ ಎಮ್ಓಯು ಸಹಿ ಹಾಕಿರುವುದಾಗಿ ಘೋಷಿಸಿದೆ. ಈ ಒಪ್ಪಂದ ಭಾರತದ ರಾಕೆಟ್‌ಗಳನ್ನು ಬಳಸಿಕೊಳ್ಳುವುದು ಮತ್ತು ಭಾರತದ ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆಗಳೊಡನೆ ಸಹಯೋಗ ಹೊಂದುವುದನ್ನು ಒಳಗೊಂಡಿದೆ.

ಭಾರತ ಬಾಹ್ಯಾಕಾಶವನ್ನು ಒಂದು ಕಾರ್ಯತಂತ್ರದ ಆಸ್ತಿಯಾಗಿ ಪರಿಗಣಿಸಿದೆ. ಆದ್ದರಿಂದ ಭಾರತ ಬಾಹ್ಯಾಕಾಶ ವಲಯದಲ್ಲಿ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮುವ ಉದ್ದೇಶ ಹೊಂದಿದೆ. ಇದು ಭಾರತ ಬಾಹ್ಯಾಕಾಶ ವಲಯದ ಪ್ರಮುಖ ಶಕ್ತಿಗಳಲ್ಲಿ ಒಂದೆನಿಸುವ ಅವಕಾಶ ಕಲ್ಪಿಸಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News