ನವದೆಹಲಿ: ಲಾಕ್ಡೌನ್ ನಂಥ ಪರಿಣಾಮಕಾರಿ ಕ್ರಮ ಕೈಗೊಂಡ ಬಳಿಕವೂ, ಪರೀಕ್ಷೆಗಳನ್ನು ತೀವ್ರಗೊಳಿಸುತ್ತಿರುವ ನಡುವೆಯೂ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 42,533ಕ್ಕೆ ಏರಿಕೆಯಾಗಿದೆ. ಅಲ್ಲದೆ ದೇಶದಲ್ಲಿ ಕರೋನಾವೈರಸ್ (Coronavirus) ದಿಂದ ಮೃತಪಟ್ಟವರ ಸಂಖ್ಯೆ 1,373ಕ್ಕೆ ಏರಿಕೆಯಾಗಿದೆ. ಕೊರೋನಾ ಕೋವಿಡ್-19 (Covid-19) ದಿಂದ ಗುಣಮುಖರಾದವರು 11,707 ಜನ ಮಾತ್ರ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ ದೇಶದಲ್ಲಿ ಮೊದಲ ಬಾರಿಗೆ ಜನವರಿ 30ರಂದು ಕೇರಳದಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ನಂತರ ಅದು ನಿಧಾನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಸಾಗಿತ್ತು. ಮಾರ್ಚ್ 19ರ ಹೊತ್ತಿಗೆ ಅಂದರೆ ಮೊದಲ ಹಂತದ ಲಾಕ್ಡೌನ್ (Lockdown) ಘೋಷಣೆ ಮಾಡುವ ಮುನ್ನ, ಇಡೀ ದೇಶದಲ್ಲಿ ಇದ್ದ ಕೊರೋನಾ ಪೀಡಿತರ ಸಂಖ್ಯೆ ಕೇವಲ 166 ಆಗಿತ್ತು. ಈಗ ಕೇವಲ ಆ ಸಂಖ್ಯೆ 42,533ಕ್ಕೆ ಏರಿಕೆಯಾಗಿದೆ.
ಅಲ್ಲದೆ ಜಗತ್ತಿನಾದ್ಯಂತ ಕೊರೋನಾ ಸೋಂಕು ಪೀಡಿತರ ಸಂಖ್ಯೆ 35,66,295ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂರನೇ ಒಂದು ಭಾಗ ಅಮೇರಿಕಾದ ಪಾಲೇ ಇದೆ. ಅಮೇರಿಕಾದ ಕೊರೋನಾ ಪೀಡಿತರ ಸಂಖ್ಯೆ 11,88,122ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಸತ್ತವರ ಸಂಖ್ಯೆ 2,48,286ಕ್ಕೆ ಏರಿಕೆಯಾಗಿದೆ. ಈ ಪೈಕಿ ಅಮೇರಿಕಾದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 68,598ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಕೊರೋನಾಗೆ ಬಲಿಯಾಗಿದ್ದಾರೆ. ಪ್ರಪಂಚಾದ್ಯಂತ ಕೊರೋನಾದಿಂದ ಗುಣಮುಖರಾದವರು 11,54,061 ಜನ ಮಾತ್ರ.
ಕೊರೋನಾ ನಿಯಂತ್ರಿಸಲು ಮೊದಲಿಗೆ ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಆದರೂ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 3ರವರೆಗೆ ಎರಡನೇ ಹಂತದ ಲಾಕ್ಡೌನ್ ಜಾರಿಗೊಳಿಸಲಾಗಿತ್ತು. ಈ ನಡುವೆ ದೇಶದ ಆರ್ಥಿಕತೆ ಮತ್ತು ಉತ್ಪಾದನೆಗೆ ಧಕ್ಕೆ ಆಗಬಾರದೆಂದು ಮತ್ತು ದೇಶದ ಜನ ಜೀವನ ಅಸ್ತವ್ಯಸ್ತ ಆಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 20ರಿಂದ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಇದಲ್ಲದೆ ಮೇ 4ರಿಂದ ಮೇ 17ರವರೆಗೆ ಮೂರನೇ ಹಂತದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.
ಈಗ ಮೇ 3ರ ಬಳಿಕ ಲಾಕ್ಡೌನ್ ಅನ್ನು ತೆರವುಗೊಳೊಸಬೇಕೋ ಅಥವಾ ಮುಂದುವರೆಸಬೇಕೋ ಎಂಬ ಗೊಂದಲ ಕೇಂದ್ರ ಸರ್ಕಾರವನ್ನು ಕಾಡುತ್ತಿತ್ತು. ಲಾಕ್ಡೌನ್ ತೆರೆವುಗೊಳಿಸಿದರೆ ಕೊರೋನಾ ಸೋಂಕು ಹರಡುವಿಕೆ ತೀವ್ರಗೊಳ್ಳಬಹುದು, ಲಾಕ್ಡೌನ್ ಮುಂದುವರೆಸಿದರೆ ದೇಶದ ಆರ್ಥಿಕತೆ ಕುಸಿಯಲಿವೆ ಎಂಬ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಗೊಂದಲಕ್ಕೆ ಸಿಲುಕಿತ್ತು.
ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಬಹುತೇಕ ಮುಖ್ಯಮಂತ್ರಿಗಳು ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಸ್ತರಿಸಿ ಎಂಬ ಸಲಹೆ ನೀಡಿದ್ದಾರೆ. ಆ ಸಲಹೆಗಳನ್ನು ಆಧರಿಸಿ ಈಗ ಮೇ 3ರ ಬಳಿಕವೂ ಲಾಕ್ಡೌನ್ ಮುಂದುವರೆಸುವ ನಿರ್ಧಾರಕ್ಕೆ ಬರಲಾಗಿದೆ.