ನವದೆಹಲಿ: ವೈದ್ಯಕೀಯ ಚಿಕಿತ್ಸೆಗೆ ಬಳಿಕ ಕಳೆದ ವಾರವಷ್ಟೇ ಅಮೇರಿಕಾದಿಂದ ಮರಳಿರುವ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಮತ್ತೆ ಹಣಕಾಸು ಖಾತೆಯ ಅಧಿಕಾರ ವಹಿಸಿಕೊಂಡರು. ಪುಲ್ವಾಮದ ಭಯೋತ್ಪಾದಕ ದಾಳಿ ಕುರಿತು ಇಂದು ಕರೆಯಲಾಗಿದ್ದ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಭಾಗವಹಿಸಿದರು.
ಜನವರಿ 13 ರಂದು ಅಮೆರಿಕಾಕ್ಕೆ ತೆರಳಿದ್ದ ಅರುಣ್ ಜೇಟ್ಲಿ ಅವರಿಗೆ ಮೃದು ಅಂಗಾಂಶ ಕ್ಯಾನ್ಸರ್ ಬಗ್ಗೆ ತಪಾಸಣೆ ಮಾಡಲಾಗಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ನ್ಯೂಯಾರ್ಕ್ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಾರಣ ಮಧ್ಯಂತರ ಬಜೆಟ್ಗೆ ಒಂಬತ್ತು ದಿನಗಳ ಮೊದಲು ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಅವರಿಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು.
ಮೇ 14, 2018 ರಂದು ಏಮ್ಸ್ ನಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಇದು ಜೇಟ್ಲಿಯವರ ಮೊದಲ ಸಾಗರೋತ್ತರ ಭೇಟಿಯಾಗಿತ್ತು. ಕಳೆದ ವರ್ಷ ಮೇ ನಲ್ಲಿ ಕೂಡ ಗೋಯಲ್ ಗೆ ಹೆಚ್ಚುವರಿ ಸಚಿವ ಖಾತೆ ನೀಡಲಾಗಿತ್ತು. ಆ ಸಮಯದಲ್ಲಿ ಜೇಟ್ಲಿ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಒಳಗಾಗಿದ್ದರು. ಜೇಟ್ಲಿ ಅನುಪಸ್ಥಿತಿಯಲ್ಲಿ 100 ದಿನಗಳ ಕಾಲ ಗೋಯಲ್ ಅವರು ವಿತ್ತ ಸಚಿವಾಲಯದ ಜವಾಬ್ದಾರಿ ನಿರ್ವಹಿಸಿದ್ದರು. ಕಳೆದ ವರ್ಷ ಆಗಸ್ಟ್ 23 ರಂದು ಜೇಟ್ಲಿ ಕರ್ತವ್ಯಕ್ಕೆ ವಾಪಸಾದ ಬಳಿಕ ಹಣಕಾಸು ಮತ್ತು ಕಾರ್ಪೊರೇಟ್ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.