ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ವಿಪಕ್ಷ ನಾಯಕ Siddaramaiah ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದೇನು?

ಶಿವಮೊಗ್ಗದಲ್ಲಿ ಸ್ಪೋಟ ಸಂಭವಿಸಿದಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಹಿರೇನಾಗವಲ್ಲಿಯಲ್ಲಿ ಇನ್ನೊಂದು ಸ್ಪೋಟ ಸಂಭವಿಸಿ, ಅಮಾಯಕ ಕಾರ್ಮಿಕರು ಸಾಯುತ್ತಿರಲಿಲ್ಲ. ಈ ಎರಡೂ ಘಟನೆಗಳಿಗೆ ಸರ್ಕಾರದ ನಿರ್ಲಕ್ಷ ಧೋರಣೆ ನೇರ ಕಾರಣ- ಸಿದ್ದರಾಮಯ್ಯ

Written by - Yashaswini V | Last Updated : Mar 18, 2021, 05:25 PM IST
  • ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ‌ ರಾಜಕೀಯ ನಾಯಕರ ಹಸ್ತಕ್ಷೇಪ ಇದೆ, ಇದನ್ನು ಪತ್ತೆಹಚ್ಚಬೇಕು
  • ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಾದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಆಗಬೇಕು
  • ಅಕ್ರಮ ಕಲ್ಲು ಗಣಿಗಾರಿಕೆಯ ತನಿಖೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಆಗ್ರಹ
ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ  ವಿಪಕ್ಷ ನಾಯಕ Siddaramaiah ವಿಧಾನಸಭಾ ಅಧಿವೇಶನದಲ್ಲಿ ಹೇಳಿದ್ದೇನು? title=
File Image

ಬೆಂಗಳೂರು: ಇದೇ ಜನವರಿ 21ರಂದು ಶಿವಮೊಗ್ಗ ನಗರ ಸಮೀಪದ ಹುಣಸೋಡು ಎಂಬಲ್ಲಿ ಜಿಲೆಟಿನ್ ಸ್ಪೋಟಗೊಂಡು 6 ಮಂದಿ ಕಾರ್ಮಿಕರು ಸಾವಿಗೀಡಾಗಿದ್ದರು, ಈ ವಿಚಾರವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ  ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former Chief Minister Siddaramaiah) ಘಟನೆಯ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಲ್ಲು ಗಣಿಗಾಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೆ. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕಾದರೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಮಾಡಿ, ಅವರ ಮೂಲಕ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದೆ ಆದರೆ ರಾಜ್ಯ ಸರ್ಕಾರ ಏನೊಂದು ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದರು.

ಹುಣಸೋಡಿನ ಅಕ್ರಮ ಗಣಿಗಾರಿಕೆಯಲ್ಲಿ ರಾಜಕೀಯ ನಾಯಕರು ಶಾಮೀಲಾಗಿರುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಸಿಐಡಿ (CID) ಅಥವಾ ಹಿರಿಯ ಅಧಿಕಾರಿಗಳ ತನಿಖಾ ತಂಡ ರಚಿಸಿ ಆ ಮೂಲಕ ತನಿಖೆ ಮಾಡಿಸಿದರೆ ರಾಜಕೀಯ ನಾಯಕರು ತಮ್ಮ ಪ್ರಭಾವ ಬಳಸಿ ಸತ್ಯ ಹೊರಬರೋದಕ್ಕೆ ಬಿಡಲ್ಲ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಅಂದು ನನ್ನ ಅಭಿಪ್ರಾಯಕ್ಕೆ ಸರ್ಕಾರ ಒಪ್ಪಿರಲಿಲ್ಲ ಎಂದರು.'

ಇದನ್ನೂ ಓದಿ - Siddaramaiah: 'ಇನ್ಮುಂದೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸಾಧ್ಯವೇ ಇಲ್ಲ'

ರೀಜನಲ್ ಕಮಿಷನರ್ (Regional Commissioner) ಮೂಲಕ ತನಿಖೆ ನಡೆಸಿ, ಅವರ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ಕ್ರಮ ವಹಿಸುತ್ತೇವೆ ಎಂಬ ಭರವಸೆಯನ್ನು ಸರ್ಕಾರ ಸದನಕ್ಕೆ ನೀಡಿತ್ತು. ಶಿವಮೊಗ್ಗದ ಹುಣಸೋಡಿನಲ್ಲಿ ಜಿಲೆಟಿನ್ ಸ್ಪೋಟ ಸಂಭವಿಸಿದ ಒಂದು ತಿಂಗಳ ಒಳಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವಲ್ಲಿ ಎಂಬಲ್ಲಿನ ಕಲ್ಲು ಕ್ವಾರಿಯಲ್ಲಿ ಇನ್ನೊಂದು ಸ್ಪೋಟ ಸಂಭವಿಸಿ, 6 ಮಂದಿ ಬಡ ಕಾರ್ಮಿಕರು ಸಾವಿಗೀಡಾದರು. ಈ ಎಲ್ಲಾ 12 ಜನ ಕಾರ್ಮಿಕರ ಸಾವಿಗೆ ಯಾರು ಹೊಣೆ? ಇದನ್ನು ಸರ್ಕಾರದ ಬೇಜವಾಬ್ದಾರಿತನ ಅನ್ನದೆ ಇನ್ನೇನು ಹೇಳಬೇಕು? ಎಂದು ಪ್ರಶ್ನಿಸಿದರು.

ಹುಣಸೋಡಿನ ಅಕ್ರಮ ಗಣಿಗಾರಿಕೆ (Illegal Mining) ಹಿಂದೆ ರಾಜಕೀಯ ನಾಯಕರ ಅಭಯ ಹಸ್ತವಿದೆ ಅಂತ ಬಿಜೆಪಿಯ ಆಯನೂರ್ ಮಂಜುನಾಥ್ ಅವರು ಹೇಳಿದ್ದರು, ಅದೇ ರೀತಿ ಹಿರೇನಾಗವಲ್ಲಿಯ ಅಕ್ರಮ ಗಣಿಗಾರಿಕೆಯಲ್ಲೂ ನಾಗರಾಜ ಎಂಬ ಪ್ರಭಾವಿ ರಾಜಕಾರಣಿ ಶಾಮೀಲಾಗಿದ್ದರು. ಆತನನ್ನು ಸ್ಥಳೀಯ ಜನ ಗುಡಿಬಂಡೆ ಬಿಜೆಪಿ ನಾಗರಾಜ್ ಅಂತ ಕರೀತಾರೆ. ಈ ಎರಡೂ ಘಟನೆಗಳಿಂದ ತಿಳಿದುಬರುವ ಪ್ರಮುಖ ಅಂಶವೆಂದರೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಅಕ್ರಮ ಕಲ್ಲು ಕ್ವಾರಿಗಳ ಹಿಂದೆ ರಾಜಕೀಯ ನಾಯಕರ ಪಾಲುದಾರಿಕೆ ಇರುವುದು ಮತ್ತು ಇವುಗಳ ಬಗ್ಗೆ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿರುವುದು. ಇದಕ್ಕೆ ಸರ್ಕಾರ ಸದನದಲ್ಲಿ ಸೂಕ್ತ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು.

ಇದನ್ನೂ ಓದಿ - Siddaramaiah: 'ನಾನು ನಿಮ್ಮ ಖುರ್ಚಿಯಲ್ಲಿ ಕೂರುವ ಕಾಲ ದೂರವಿಲ್ಲ'

ಹಿರೇನಾಗವಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರನ್ನು ಆರೋಪಿಗಳಾಗಿ ಗುರುತಿಸಿ, ಕೆಲವರನ್ನು ಬಂಧಿಸಲಾಗಿದೆ. ಇದರಲ್ಲಿ ಸ್ಪೋಟದಲ್ಲಿ ಸತ್ತ 6 ಮಂದಿ ಕಾರ್ಮಿಕರು ಹಾಗೂ ಒಬ್ಬ ಗಾಯಾಳುವಿನ ಹೆಸರನ್ನೂ ಸೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಿದ್ದು, ಇನ್ನುಳಿದ ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗುವುದು ಯಾವಾಗ? ಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

ಪತ್ರಿಕೆಯೊಂದು ಶಿವಮೊಗ್ಗದ ಕಲ್ಲು ಗಣಿ ಸ್ಪೋಟದ ಮಾಡಿದ ವರದಿಯಲ್ಲಿ ಬಿಜೆಪಿಯ ನಾಯಕರೊಬ್ಬರ ಹೇಳಿಕೆಯನ್ನು ದಾಖಲಿಸಿದೆ, ಅವರ ಹೇಳಿಕೆ ಈ ಕೆಳಕಂಡಂತಿದೆ -
"ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಅಕ್ರಮ ಕಲ್ಲು ಕ್ವಾರಿಗಳನ್ನು ನಡೆಸುತ್ತಿರುವವರು ಆಡಳಿತ ಪಕ್ಷದ ಕಡೆಯವರಾಗಿದ್ದು, ಹೀಗಾಗಿ ಸರ್ಕಾರ ಹುಣಸೋಡು ಗಣಿ ಸ್ಪೋಟದ ಅಪರಾಧಿಗಳ ರಕ್ಷಣೆಗೆ ನಿಂತಿದೆ".

ಇದನ್ನೂ ಓದಿ - Siddaramaiah: ಮುಂದಿನ ವಿಧಾನಸಭಾ ಎಲೆಕ್ಷನ್ ಗೆ 'ಸಿದ್ದರಾಮಯ್ಯ ಸ್ಪರ್ಧೆ ಖಚಿತ'..!

"ಜಿಲ್ಲೆಯಲ್ಲಿ ಅಕ್ರಮ ಕಲ್ಲು ಕ್ವಾರಿಗಳ ಮಾಲೀಕರ ಸಂಘಟನೆ ಇದ್ದು, ಬಿಜೆಪಿಯ ಹಿರಿಯ ನಾಯಕರೊಬ್ಬರು ಸಂಘಟನೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ಪೊಲೀಸ್ ಇಲಾಖೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಈ ವರೆಗೆ ಸಾಧ್ಯವಾಗಿಲ್ಲ, ಅಕ್ರಮ ಕಲ್ಲು ಕ್ವಾರಿಗಳನ್ನು ಮುಚ್ಚಲಾಗಿದೆಯಾದರೂ, ಘಟನೆಗೆ ಕಾರಣರಾದವರ ಮೇಲೆ ಯಾವ ಕ್ರಮವನ್ನು ಇಲಾಖೆ ಈ ವರೆಗೆ ತೆಗೆದುಕೊಂಡಿಲ್ಲ" ಎಂದಿದ್ದಾರೆ. ನನ್ನ ಪ್ರಕಾರ ಶಿವಮೊಗ್ಗದಲ್ಲಿ ಸ್ಪೋಟ ಸಂಭವಿಸಿದಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಹಿರೇನಾಗವಲ್ಲಿಯಲ್ಲಿ ಇನ್ನೊಂದು ಸ್ಪೋಟ ಸಂಭವಿಸಿ, ಅಮಾಯಕ ಕಾರ್ಮಿಕರು ಸಾಯುತ್ತಿರಲಿಲ್ಲ. ಈ ಎರಡೂ ಘಟನೆಗಳಿಗೆ ಸರ್ಕಾರದ ನಿರ್ಲಕ್ಷ ಧೋರಣೆ ನೇರ ಕಾರಣ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News