ಬೆಂಗಳೂರಿನ ಕುಂದುಕೊರತೆ ಪರಿಹಾರಕ್ಕೆ ಜಾರಿಗೆ ಬರಲಿದೆ ಏಕೀಕೃತ ವ್ಯವಸ್ಥೆ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ರೋಡ್ ಹಿಸ್ಟರಿ ವ್ಯವಸ್ಥೆ ರೂಪಿಸಲಾಗಿದ್ದು, ಮುಂದಿನ ಜನವರಿಯಿಂದಲೇ ಇದು ಜಾರಿಯಾಗಲಿದೆ. ಪ್ರಸ್ತುತ ನಗರದಲ್ಲಿರುವ 33 ಸಾವಿರ ಕಿ.ಮೀ. ರಸ್ತೆಯ ಸಂಪೂರ್ಣ ಚರಿತ್ರೆ ಸಾರ್ವಜನಿಕರಿಗೆ ಲಭ್ಯವಾಗುತ್ತದೆ. 

Last Updated : Dec 26, 2019, 09:32 AM IST
ಬೆಂಗಳೂರಿನ ಕುಂದುಕೊರತೆ ಪರಿಹಾರಕ್ಕೆ ಜಾರಿಗೆ ಬರಲಿದೆ ಏಕೀಕೃತ ವ್ಯವಸ್ಥೆ title=

ಬೆಂಗಳೂರು: ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಕುಂದುಕೊರತೆಗಳ ಪರಿಹಾರಕ್ಕೆ ಏಕೀಕೃತ ವ್ಯವಸ್ಥೆ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ  ಬುಧವಾರ ಆಯೋಜಿಸಿದ್ದ ಸುಶಾಸನ ದಿನದ ‘ನಗರ ಚಿಂತಕರ ಸಮಾವೇಶ’ದಲ್ಲಿ  ಮಾತನಾಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕೆಲವು ಇಲಾಖೆಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿಯಲ್ಲಿ ಕುಂದುಕೊರತೆಗಳ ಪರಿಹಾರಕ್ಕೆ ಏಕೀಕೃತ ವ್ಯವಸ್ಥೆ ಇದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದ್ದು, ಎಲ್ಲಾ ಇಲಾಖೆಗಳ ಕುಂದುಕೊರತೆಗಳ ನಿವಾರಣೆಗೂ ಏಕೀಕೃತ ವ್ಯವಸ್ಥೆ ಜಾರಿಗೊಳಿಸಬೇಕಾಗಿದೆ ಎಂದು ಹೇಳಿದರು.

ಬೇರೆ ಬೇರೆ ಇಲಾಖೆಗಳು ಪ್ರತ್ಯೇಕವಾಗಿ ಕುಂದುಕೊರತೆಗಳ ಪರಿಹಾರ ಮಾಡುವುದರಿಂದ ಸಾಕಷ್ಟು ನ್ಯೂನತೆಗಳು ಆಗುತ್ತಿರುವುದನ್ನು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಮೇಲಾಗಿ ಕುಂದುಕೊರತೆಗಳ ಪರಿಹಾರಕ್ಕೆ ಏಕೀಕೃತ ವ್ಯವಸ್ಥೆ ಇದ್ದರೆ ಪರಸ್ಪರ ದೂರುಗಳನ್ನು ಹಂಚಿಕೊಂಡು ಒಟ್ಟಾಗಿ ಅದನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ನಗರದಲ್ಲಿ ವಿವಿಧ ಇಲಾಖೆಗಳಲ್ಲಿ ಎಷ್ಟು ದೂರುಗಳು ಬರುತ್ತವೆ, ಎಷ್ಟು ಪರಿಹಾರವಾಗಿದೆ ಯಾವುದು ಪರಿಹಾರವಾಗಿಲ್ಲ ಎಂಬ ಒಟ್ಟಾರೆ ಮಾಹಿತಿ ಎಲ್ಲೂ ಲಭ್ಯವಾಗುತ್ತಿಲ್ಲ. ಆದರೆ, ಏಕೀಕೃತ ವ್ಯವಸ್ಥೆ ಬಂದರೆ ಇವೆಲ್ಲವೂ ಒಂದೇ ಕಡೆ ಸಿಗುತ್ತದೆ. ಜತೆಗೆ ಇಲಾಖೆಗಳಲ್ಲಿ ಅಧಿಕಾರಿಗಳಿಗೆ ಅವುಗಳನ್ನು ಬಗೆಹರಿಸುವ ಹೊಣೆಗಾರಿಕೆಯೂ ಇದ್ದಂತಾಗುತ್ತದೆ ಎಂದು ಹೇಳಿದರು.

*ಜನವರಿಯಿಂದ ರೋಡ್ ಹಿಸ್ಟರಿ ವ್ಯವಸ್ಥೆ ಕಡ್ಡಾಯ ಜಾರಿ*

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ರೋಡ್ ಹಿಸ್ಟರಿ ವ್ಯವಸ್ಥೆ ರೂಪಿಸಲಾಗಿದ್ದು, ಮುಂದಿನ ಜನವರಿಯಿಂದಲೇ ಇದು ಜಾರಿಯಾಗಲಿದೆ. ಪ್ರಸ್ತುತ ನಗರದಲ್ಲಿರುವ 33 ಸಾವಿರ ಕಿ.ಮೀ. ರಸ್ತೆಯ ಸಂಪೂರ್ಣ ಚರಿತ್ರೆ ಸಾರ್ವಜನಿಕರಿಗೆ ಲಭ್ಯವಾಗುತ್ತದೆ. ಒಂದು ರಸ್ತೆಗೆ ಒಂದೇ ಕೋಡ್ ಇರುವುದರಿಂದ ಯಾವ ರಸ್ತೆಯಲ್ಲಿ ಏನೇನು ಕೆಲಸಗಳಾಗುತ್ತಿವೆ, ಎಲ್ಲಿ ಚರಂಡಿ ಕೆಲಸ ನಡೆಯುತ್ತಿದೆ ಎಂಬುದು ಸೇರಿದಂತೆ ರಸ್ತೆ ಮತ್ತು ರಸ್ತೆ ಪಕ್ಕ ನಡೆಯುವ ಪ್ರತಿಯೊಂದು ಕೆಲಸಗಳೂ ಅಂದರೆ ನೀರು, ವಿದ್ಯುತ್ ಸಂಪರ್ಕ, ಒಳಚರಂಡಿ ಸಂಪರ್ಕ ಇತ್ಯಾದಿಗಳು ರೋಡ್ ಹಿಸ್ಟರಿಯಲ್ಲಿ ದಾಖಲಾಗುತ್ತದೆ. ಇದರಿಂದ ಅಕ್ರಮ ಸಂಪರ್ಕಗಳನ್ನು ಪಡೆದರೆ ಗೊತ್ತಾಗುತ್ತದೆ. ಇದಲ್ಲದೆ, ಗುತ್ತಿಗೆದಾರರು ನಡೆಸುವ ಅಕ್ರಮಗಳಿಗೂ ಕಡಿವಾಣ ಬಿದ್ದು, ಆಡಳಿತ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಈ ವ್ಯವಸ್ಥೆಗೆ ಸಹಕರಿಸದೇ ಇದ್ದರೆ ಜನವರಿ ನಂತರದಲ್ಲಿ ಗುತ್ತಿದೆದಾರರಿಗೆ ಜಾಬ್ ಕೋಡ್ ಮತ್ತು ಹಣ ಪಾವತಿ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಮಸ್ಯೆಗಳನ್ನು ಕಡಿಮೆ ಮಾಡಿ ಸಂಪೂರ್ಣ ಬಗೆಹರಿಸುವುದು ಆಡಳಿತ ಯಂತ್ರಕ್ಕೆ ಇರುವ ದೊಡ್ಡ ಸಮಸ್ಯೆ. ಇದಕ್ಕೆ ಉತ್ತಮ ಆಡಳಿತದ ಅಗತ್ಯವಿದೆ. ಅದಕ್ಕೆ ಎನೆಲ್ಲಾ ವ್ಯವಸ್ಥೆಗಳ ಅಗತ್ಯವಿದೆ ಎಂಬುದು ಇಂತಹ ಚರ್ಚೆಗಳಿಂದ ಹೊರಹೊಮ್ಮುತ್ತದೆ. ಉತ್ತಮ ಆಡಳಿತಕ್ಕೆ ಸೂಕ್ತ ನೀತಿಗಳನ್ನು ರೂಪಿಸುವ ಅಗತ್ಯವೂ ಇದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.

ಈಸ್ ಆಫ್ ಡೂಯಿಂಗ್ (ಸುಲಲಿತ ವ್ಯವಹಾರ)ನಲ್ಲಿ ದೇಶದ ನಾಲ್ಕು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಇದರಿಂದ ಸಾಕಷ್ಟು ಬದಲಾವಣೆಗಳಾಗಲಿವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಮಿನಿಮಮ್ ಗವರ್ನ್ ಮೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್ ನೀತಿಗೆ ನಮ್ಮ ಸರ್ಕಾರ ಬ್ಧವಾಗಿದ್ದು, ಅದಕ್ಕೆ ಪೂರಕವಾಗಿ ಈಸ್ ಆಫ್ ಡೂಯಿಂಗ್ ನಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ನ್ಯೂಜಿಲೆಂಡ್ ಸರ್ಕಾರದ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದರು.

*ಸಕಾಲ ಪರಿಣಾಕಾರಿ ಜಾರಿ*
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆ ಅತ್ಯುತ್ತಮವಾಗಿದೆ. ಆದರೆ, ಮಧ್ಯವರ್ತಿಗಳ ಹಾವಳಿಯಿಂದಾಗಿ ಸಕಾಲ ಯೋಜನೆ ಎಂದರೇನು ಎಂಬುದು ನಗರದ ಬಹುತೇಕರಿಗೆ ಗೊತ್ತಿಲ್ಲ. ಮಧ್ಯವರ್ತಿಗಳು ಇರುವವರೆಗೆ ಆಡಳಿತದ ಅನುಕೂಲಗಳನ್ನು ಜನ ಅನುಭವಿಸಿಯೇ ಇಲ್ಲ. ಆದ್ದರಿಂದ ಸಕಾಲ ಯೋಜನೆಯನ್ನು ಸಂಪೂರ್ಣ ಆನ್ ಲೈನ್ ಗೊಳಿಸುವ ಮೂಲಕ ಮಧ್ಯವರ್ತಿಗಳ ಹಾವಳಿ ಇಲ್ಲದೆ ಎಲ್ಲರಿಗೂ ಸುಲಭವಾಗಿ ಸರ್ಕಾರದ ಸೇವೆ ಸಿಗುವಂತೆ ಆಗಬೇಕು. ಆದ್ದರಿಂದ ಸಕಾಲ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು. 

ಅಟಲ್ ಜಿ ಅವರ ಜನ್ಮದಿನವಾದ ಸುಶಾಸನ ದಿನದಂದು ಎಲ್ಲಾ ಇಲಾಖೆಗಳು ಸಾರ್ವಜನಿಕರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವ ಮತ್ತು ಸಲಹೆಗಳನ್ನು ಕೇಳುವ ಈ ಕಾರ್ಯಕ್ರಮ ರೂಪಿಸಿರುವುದು ಅಭಿನಂದನೀಯ. ಇದರಿಂದ ವಿವಿಧ ಇಲಾಖೆಗಳ ನಡುವೆ ಸಮನ್ವಯ ಮೂಡುವುದರ ಜತೆಗೆ ಸಾರ್ವಜನಿಕರಿಗೂ ಇಲಾಖೆಗಳಲ್ಲಿ ಆಗಿರುವ ಕೆಲಸಗಳು ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಸಿಕ್ಕಿದಂತಾಗುತ್ತದೆ. ಇಂತಹ ಕಾರ್ಯಕ್ರಮವನ್ನು ಒಂದೇ ದಿನಕ್ಕೆ ಸೀಮಿತಗೊಳಿಸದೆ ಆಗಾಗ್ಯೆ ನಡೆಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
 

Trending News