ಕಲಬುರಗಿ ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಸಚಿವರು ಹೇಳಿದ್ದಿಷ್ಟು..!

ಕಲಬುರಗಿ ನಗರದಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿ, ಹೊಸ ಸಿ.ಸಿ.ರಸ್ತೆ ನಿರ್ಮಾಣ, ಉದ್ಯಾನವನ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್ ವ್ಯವಸ್ಥೆ ಮತ್ತು ನೈರ್ಮಲೀಕರಣ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಲಬುರಗಿಯನ್ನು ಸುಂದರ ಮತ್ತು ಮಾದರಿ ನಗರವನ್ನಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿಗಳು ಅಶ್ವಾಸನೆ ನೀಡಿದ್ದಾರೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.

Last Updated : Jun 24, 2020, 07:21 PM IST
ಕಲಬುರಗಿ ಸುಂದರ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ  ಸಚಿವರು ಹೇಳಿದ್ದಿಷ್ಟು..!  title=

ಕಲಬುರಗಿ: ಕಲಬುರಗಿ ನಗರದಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿ, ಹೊಸ ಸಿ.ಸಿ.ರಸ್ತೆ ನಿರ್ಮಾಣ, ಉದ್ಯಾನವನ ಅಭಿವೃದ್ಧಿ, ಶುದ್ಧ ಕುಡಿಯುವ ನೀರು, ಸಮರ್ಪಕ ವಿದ್ಯುತ್ ವ್ಯವಸ್ಥೆ ಮತ್ತು ನೈರ್ಮಲೀಕರಣ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಕಲಬುರಗಿಯನ್ನು ಸುಂದರ ಮತ್ತು ಮಾದರಿ ನಗರವನ್ನಾಗಿ ನಿರ್ಮಿಸಲಾಗುವುದು. ಇದಕ್ಕಾಗಿ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿಗಳು ಅಶ್ವಾಸನೆ ನೀಡಿದ್ದಾರೆ ಎಂದು ರಾಜ್ಯದ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.

ಸೋಮವಾರ ಇಲ್ಲಿನ ಗ್ರ್ಯಾಂಡ್ ಹೋಟೆಲ್‍ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ನಗರದ ಅಪ್ಪನ ಕೆರೆ ಸುತ್ತಮುತ್ತ ಮೂಲಸೌಕರ್ಯ ಕಾಮಗಾರಿಗೆ 10 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಕೆರೆ ಸುತ್ತಮುತ್ತ ಸೌಂದರ್ಯೀಕರಣ ಮತ್ತು ಮಹಾಪುರುಷರ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಇದಲ್ಲದೆ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತವನ್ನು ಸೌಂದರ್ಯಿಕರಣ ಮಾಡುವಂತೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಕೇಂದ್ರ ಸರ್ಕಾರದ “ಅಮೃತ” ಯೋಜನೆಯಡಿ ನಗರದ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರವು ಅಟಲ್ ಬಿಹಾರ ವಾಜಪೇಯಿ ಬಡಾವಣೆಯಲ್ಲಿ ಹರಾಜಿಗೆ ಬಾಕಿಯಿರುವ 1200 ನಿವೇಶನಗಳನ್ನು ಹರಾಜು ಮಾಡಿ ಅದರಿಂದ ಬಂದ ಹಣದಿಂದ ನಗರದ ಅಭಿವೃದ್ಧಿಗೆ ವಿನಿಯೋಗಿಸುವಂತೆ ಸೂಚಿಸಲಾಗಿದೆ ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.

ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ಕಲಬುರಗಿ ನಗರದ ವಿವಿಧೆಡೆ 150 ಕೋಟಿ ರೂ,. ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗರಿಗಳನ್ನು ಕೈಗೊಳ್ಳಲಾಗುವುದು. ಈ ಸಂಬಂಧ ಅಗತ್ಯ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ ಎಂದರು.

ಇಂದು ಬೆಳಿಗ್ಗೆ ಕಲಬುರಗಿ ನಗರವನ್ನು ಪ್ರದಕ್ಷಿಣೆ ಮಾಡಿ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ, ಉದ್ಯಾನವನ, ನೈರ್ಮಲೀಕರಣ, ನೀರು ಶುದ್ಧೀಕರಣ ಘಟಕ, ರೊಚ್ಚು ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಚಿವನಾದ ನಂತರ ಜಿಲ್ಲಾವಾರು ಪ್ರವಾಸ ಆರಂಭಿಸಿದ್ದು, ನಗರದಲ್ಲಿನ ಕೆಲಸಗಳಿಗೆ ಚುರುಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿನ ಎಸ್.ಟಿ.ಪಿ. ಘಟಕಕ್ಕೆ ಭೇಟಿ ನೀಡಿದಾಗ ಅಲ್ಲಿನ ರೈತರು ಇದೂವರೆಗೆ ತಮ್ಮಿಂದ ಪಡೆದುಕೊಂಡ ಭೂಮಿಗೆ ಪರಿಹಾರ ಮೊತ್ತ ತಮ್ಮ ಕೈಸೇರಿಲ್ಲ ಎಂದು ನನ್ನ ಗಮನಕ್ಕೆ ತಂದಿದ್ದಾರೆ. ಪರಿಹಾರ ನೀಡುವ ಕುರಿತಂತೆ ಪ್ರಸ್ತುತ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಕುರಿತು ಶೀಘ್ರದಲ್ಲಿ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ರೈತರಿಗೆ ತ್ವರತಗತಿಯಲ್ಲಿ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ರೊಚ್ಚು ನೀರು ಉದ್ಯಾನವನ ಮತ್ತು ಕೆರೆ ತುಂಬಿಸಲು ಬಳಕೆ: ನಗರದ ಒಳಚರಂಡಿ ನೀರು ಇದೂವರೆಗೆ ಶುದ್ಧೀಕರಣ ಮಾಡಿ ಕೃಷಿಗೆ ಬಳಸಲಾಗುತಿತ್ತು. ಇನ್ನೂ ಮುಂದೆ ಇದನ್ನು ಪಾಲಿಕೆಯ ವ್ಯಾಪ್ತಿಯ ಉದ್ಯಾನವನಕ್ಕೆ ಮತ್ತು ಕೆರೆ ತುಂಬಿಸಲು ಬಳಸಲಾಗುವುದು. ಇದಕ್ಕೆ ಪೂರಕವಾಗಿ ಡಿ.ಪಿ.ಆರ್. ಸಿದ್ದಪಡಿಸಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದರು.
24x7 ಕುಡಿಯುವ ನೀರು ಕಾಮಗಾರಿಗೆ ಕಾರ್ಯಾದೇಶ: ಕಲಬುರಗಿ ಮಹಾನಗರದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ವಿಶ್ವ ಬ್ಯಾಂಕ್ ನೆರವಿನಿಂದ 838 ಕೋಟಿ ರೂ. ಮೊತ್ತದ 24x7 ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿಯ ಗುತ್ತಿಗೆ ಪಡೆದುಕೊಂಡ ಎಲ್ & ಟಿ ಕಂಪನಿಗೆ ಮಂಗಳವಾರ ಕಾರ್ಯಾದೇಶ ನೀಡಲಾಗಿದ್ದು, ಶೀಘ್ರವೆ ಮುಖ್ಯಮಂತ್ರಿಗಳಿಂದ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು.

ಪತ್ರಕರ್ತರಿಗೆ ನಿವೇಶನ: ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪತ್ರಕರ್ತರಿಗೆ ನಿವೇಶನ ನೀಡುವ ಪ್ರಸ್ತಾವನೆ ಮುಂದಿದ್ದು, ಈ ಸಂಬಂಧ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಶೇ.5ರಷ್ಟು ನಿವೇಶನ ಪತ್ರಕರ್ತರಿಗೆ ಹಂಚಲು ಕ್ರಮ ವಹಿಸಲಾಗುವುದು ಎಂದರು.

ಪಾಲಿಕೆ ವ್ಯಾಪ್ತಿಯ ಗ್ರಾ.ಪಂ.ಗಳ ನಿವೇಶನ ಸೇರ್ಪಡೆ ಮತ್ತು ಮುಟೇಷನ್ ಸ್ಥಗಿತಗೊಂಡಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಶೀಘ್ರವೆ ಈ ಸಂಬಂಧ ಅಧಿಕಾರಿಗಳ ಸಭೆ ಕರೆದು 2 ತಿಂಗಳನಲ್ಲಿಯೆ ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಇದ್ದರು.
 

Trending News