ಕುಮಾರಣ್ಣನ ಬಜೆಟ್ ಹೈಲೈಟ್ಸ್

ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಯೋಜನೆಗಳ ಮುಂದುವರಿಕೆ.

Last Updated : Jul 5, 2018, 01:01 PM IST
ಕುಮಾರಣ್ಣನ ಬಜೆಟ್ ಹೈಲೈಟ್ಸ್ title=

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಅನ್ನು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 2018-19 ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದರು. 2018-19ನೇ ಸಾಲಿನ ಬಜೆಟ್​ನ ಒಟ್ಟು ಗಾತ್ರ 2,18,488 ಕೋಟಿ ರೂ.

ಸಮನ್ವಯ ಸಮಿತಿಯ ಆಶಯದಂತೆ ಎರಡೂ ಮೈತ್ರಿ ಪಕ್ಷಗಳಲ್ಲಿರುವ ಪ್ರಣಾಳಿಕೆಗೆ ಅನುಗುಣವಾಗಿ ಬಜೆಟ್ ಮಂಡಿಸುತ್ತಿದ್ದೇವೆ. ರೈತರ ಸಾಲಮನ್ನಾದಂಥ ಬೃಹತ್ ಸವಾಲು ನಮ್ಮ ಮುಂದಿದೆ ಎಂದು ಆಯವ್ಯಯ ಮಂಡನೆ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದರು.

ಕರ್ನಾಟಕ ಈಗಾಗಲೇ ಸಾಕಷ್ಟು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಆದರೆ ಇಷ್ಟಕ್ಕೆ ಸತೃಪ್ತರಾಗದೆ ನಾವು ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಯೋಚಿಸಬೇಕಿದೆ ಎಂದು ತಿಳಿಸಿದರು. 

ಕುಮಾರಸ್ವಾಮಿ ಬಜೆಟ್ ಹೈಲೈಟ್ಸ್: 
* ಡಿಸೆಂಬರ್​ 2017 ರವರೆಗಿನ ರೈತರು ಮಾಡಿದ ಎಲ್ಲ ಸುಸ್ತಿ ಬೆಳೆ ಸಾಲಮನ್ನಾ. 2 ಲಕ್ಷವರೆಗಿನ ರೈತರ ಸಾಲಮನ್ನಾ ಘೋಷಣೆ.

* ಇಸ್ರೇಲ್‌ ಮಾದರಿ ಕೃಷಿಗಾಗಿ 150 ಕೋಟಿ ರೂ. ಮೀಸಲು.  ಕೋಲಾರ, ಗದಗ, ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕ ಜಾರಿ.
* ಆಂಧ್ರದ ಮಾದರಿಯಲ್ಲಿ  ಶೂನ್ಯ ಬಂಡವಾಳ ಕೃಷಿ ಪದ್ಧತಿ.
* ಅನ್ನಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಯೋಜನೆಗಳ ಮುಂದುವರಿಕೆ.
* ಮದ್ಯದ ಮೇಲಿನ ಶೇ.4 ರಷ್ಟು ತೆರಿಗೆ ಹೆಚ್ಚಳ
* ಮುಖ್ಯಮಂತ್ರಿ ಮಾತೃಶ್ರೀ ಯೋಜನೆ ಜಾರಿ. ಪ್ರತಿ ಬಿಪಿಎಲ್​ ಕುಟುಂಬದ ಗರ್ಭಿಣಿಯರಿಗೆ 6 ತಿಂಗಳವರೆಗೆ (ಹೆರಿಗೆಯ ಕೊನೆಯ ಮೂರು ತಿಂಗಳು ಮತ್ತು ಹೆರಿಗೆ ನಂತರದ ಮೂರು ತಿಂಗಳು) 1 ಸಾವಿರ ರೂಪಾಯಿ ಸಹಾಯಧನ. 
* ಮಾತೃಶ್ರೀ ಯೋಜನೆಗಾಗಿ 350 ಕೋಟಿ ರೂ. ಮೀಸಲು.
* ಜಲಧಾರೆ ಯೋಜನೆ ಜಾರಿ: ಕುಡಿಯುವ ನೀರಿನ ಶುದ್ಧೀಕರಣಕ್ಕೆ ಜಲಾಶಯಗಳಿಂದ ಕುಡಿಯುವ ನೀರು ಶುದ್ಧೀಕರಣ. ಜಲಧಾರೆ ಯೋಜನೆಗಾಗಿ 53 ಕೋಟಿ ಮೀಸಲು.
* ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ. 600 ರೂಪಾಯಿಯಿಂದ 1000 ರೂಪಾಯಿಗೆ ಮಾಸಾಶನ ಹೆಚ್ಚಳ. ಇದರಿಂದ 32 ಲಕ್ಷ ಹಿರಿಯ ನಾಗರಿಕರಿಗೆ ಲಾಭ. 
* ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ಮೀಸಲು.
* ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ.
* ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ.
* ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾಲಯ ಆರಂಭಿಸಲು 30 ಕೋಟಿ ರೂ.
* ಡಿಸೇಲ್‌ ಮೇಲಿನ ಸೆಸ್‌ ಹೆಚ್ಚಳ - ಸೆಸ್‌ ಶೇ. 19 ರಿಂದ ಶೇ.21 ರಷ್ಟು ಏರಿಕೆ. 
* ಪೆಟ್ರೋಲ್‌ ದುಬಾರಿ - ಸೆಸ್‌ ಶೇ. 30 ರಿಂದ ಶೇ.32 ರಷ್ಟುಹೆಚ್ಚಳ. 

* ವಿದ್ಯುತ್‌ ಯೂನಿಟ್‌ಗೆ 20 ಪೈಸೆ ಹೆಚ್ಚಳ.
* ಬೆಂಗಳೂರಿನ 6 ಕಡೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣ.
* ಸ್ವ ಉದ್ಯೋಗ ಪ್ರೋತ್ಸಾಹಕ್ಕೆ ನೂತನ 'ಕಾಯಕ ಯೋಜನೆ'- ಈ ಯೋಜನೆಯಡಿ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ.
* ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು.
* ಬೆಳಗಾವಿ, ಕಲಬುರಗಿ, ಮೈಸೂರಿನಲ್ಲಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್
* ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕ ಸ್ಥಾಪನೆ.
* ಏಳು ಜಿಲ್ಲೆಯಲ್ಲಿ ಕೈಗಾರಿಕಾ ತರಬೇತಿಗೆ 500 ಕೋಟಿ ಮೀಸಲು.
* ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂ ಮೀಸಲು.
* ಮಂಡ್ಯ ಮಿಮ್ಸ್‌ ಅಭಿವೃದ್ಧಿಗೆ 30 ಕೋಟಿ ರೂ ಮೀಸಲು.
* ಹಸಿರು ಕರ್ನಾಟಕ ಯೋಜನೆ: ಪರಿಸರ ಸಂರಕ್ಷಣೆಗಾಗಿ 10 ಕೋಟಿ ರೂ. ಮೀಸಲು. 
* ಮೈಸೂರು ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ.
* ನಮ್ಮ ಮೆಟ್ರೋ ಮೂರನೇ ಹಂತದ ಅಭಿವೃದ್ಧಿ.
* ವಿವಿಧ ಧಾರ್ಮಿಕ ಪೀಠಗಳಿಗೆ 25 ಕೋಟಿ ರೂ.ಗಳ ಅನುದಾನ. 
* ಅನ್ನಭಾಗ್ಯ: ಅಕ್ಕಿ ಪ್ರಮಾಣ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಕೆ.
* ಬಿಪಿಎಲ್‌ ಪಡಿತರ ಚೀಟಿಗೆ 1 ಕೆಜಿ ಪಾಮ್‌ ಎಣ್ಣೆ, 1 ಕೆ.ಜಿ ಸಕ್ಕರೆ, 1 ಕೆಜಿ ಉಪ್ಪು, ರಿಯಾಯಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿ ಬೇಳೆ ವಿತರಣೆ.
* ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ.
* ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಅಧಿಕಾರಿಗಳು, ಆದಾಯ ತೆರಿಗೆ ಕಟ್ಟಿದ ರೈತರು ಸಾಲಮನ್ನಾ ಸೌಲಭ್ಯ ಪಡೆಯಲು ಅನರ್ಹರು.
* ಸಮಾಜ ಕಲ್ಯಾಣ ಇಲಾಖೆಗೆ 11,758 ಕೋಟಿ ರೂ. , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 6,199 ಕೋಟಿ ರೂ., ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 3,866 ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿಗೆ 14,449 ಕೋಟಿ ರೂ. ಮೀಸಲು.
* ಬೀದರ್ ನಲ್ಲಿ ಕೃಷಿ ಉತ್ಪನ್ನ ಸಂರಕ್ಷಣಾ ಘಟಕ ಸ್ಥಾಪನೆ.
* ಮೋಟಾರು ವಾಹನ ತೆರಿಗೆಯಲ್ಲಿ 50% ಹೆಚ್ಚಳ.

 

 

 

Trending News