ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ ಸಾಧ್ಯತೆ

ಚುನಾವಣೆ ನಡೆಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚುವ ಸಾಧ್ಯತೆಯಿದೆ. ಚುನಾವಣೆ ನಡೆಸಿದ್ದೇ ಆದರೆ ಕೊರೋನಾ ಸೋಂಕನ್ನು ಮನೆ ಬಾಗಿಲಿಗೆ ತಂದು ಕೂರಿಸಿದಂತಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.  

Last Updated : Nov 6, 2020, 02:55 PM IST
  • ಚುನಾವಣೆ ಮುಂದೂಡುವಂತೆ ತಜ್ಞರ ಸಲಹೆ
  • ಚುನಾವಣೆ ನಡೆಸಿದರೆ ಕೊರೋನಾ ಸೋಂಕನ್ನು ಮನೆ ಬಾಗಿಲಿಗೆ ತಂದು ಕೂರಿಸಿದಂತೆ
  • ಗ್ರಾ. ಪಂ ಚುನಾವಣೆಯನ್ನು 2021ರ ಫೆಬ್ರವರಿಗೆ ಮುಂದೂಡುವ ಸಾಧ್ಯತೆ
ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ ಸಾಧ್ಯತೆ title=
File Image

ಬೆಂಗಳೂರು: ಕರೋನಾ ಅಟ್ಟಹಾಸ ಮುಂದುವರೆದಿರುವ ಈ ಸಮಯದಲ್ಲಿ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ನಡೆಸಬೇಕೋ? ಬೇಡವೋ? ಎಂಬ ಗೊಂದಲದ ನಡುವೆ ಡಾ.ಎಂ.ಕೆ ಸುದರ್ಶನ್ ನೇತೃತ್ವದ ತಜ್ಞರ ಸಮಿತಿಯು ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಅಪಾಯಕಾರಿ ಎಂಬ ಎಚ್ಚರಿಕೆಯ ವರದಿಯನ್ನು ಸಲ್ಲಿಸಿದೆ. ತಜ್ಞರ ಸಮಿತಿಯೇ ಗ್ರಾಮ ಪಂಚಾಯಿತಿ (Gram Panchayat) ಚುನಾವಣೆ ನಡೆಸುವುದು ಈ ಸಂದರ್ಭದಲ್ಲಿ ಸಕಾಲವಲ್ಲ ಎಂಬ ವರದಿ ನೀಡಿರುವುದರಿಂದ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ. ಹೀಗಾಗಿ ಬಹುನಿರೀಕ್ಷಿತ ಗ್ರಾಮ ಪಂಚಾಯಿತಿ ಚುನಾವಣೆ ಈ ವರ್ಷದ ಅಂತ್ಯದೊಳಗೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಇದೇ ಡಿಸೆಂಬರ್ ನಲ್ಲಿ ನಡೆಯಬೇಕಾಗಿದ್ದ ಗ್ರಾಮ ಪಂಚಾಯಿತಿ ಚುನಾವಣೆಯನ್ನು 2021ರ ಫೆಬ್ರವರಿಗೆ ಮುಂದೂಡುವ ಸಾಧ್ಯತೆಯೂ ಇದೆ.

ಚುನಾವಣೆ ನಡೆಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚುವ ಸಾಧ್ಯತೆಯಿದೆ. ಚುನಾವಣೆ ನಡೆಸಿದ್ದೇ ಆದರೆ ಕೊರೋನಾ ಸೋಂಕನ್ನು ಮನೆ ಬಾಗಿಲಿಗೆ ತಂದು ಕೂರಿಸಿದಂತಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ. ಗ್ರಾಮ ಪಂಚಾಯತಿ ಚುನಾವಣೆ ಸದ್ಯಕ್ಕೆ ಬೇಡ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ಸಂದರ್ಭದಲ್ಲಿ ಚುನಾವಣೆ ನಡೆಸುವುದರಿಂದ ಕೋವಿಡ್-19 (Covid 19) ಹೆಚ್ಚಾಗುವ ಸಾಧ್ಯತೆ ಇದ್ದು ಫೆಬ್ರವರಿವರೆಗೆ ಚುನಾವಣೆ ಮುಂದೂಡುವುದು ಒಳಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ರಾಜ್ಯದಲ್ಲಿ ಶಾಲೆ ತೆರೆದ ನಾಲ್ಕೇ ದಿನದಲ್ಲಿ ನೂರಾರು ವಿದ್ಯಾರ್ಥಿಗಳು, ಶಿಕ್ಷಕರಿಗೆ Corona Positive

ಗ್ರಾಮ ಪಂಚಾಯಿತಿ ಚುನಾವಣೆಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸ ಬೇಕಾಗುತ್ತದೆ. ಇದರಿಂದ ಸೋಂಕು ಹರಡುವ ಸಾಧ್ಯತೆಯಿರುತ್ತದೆ ಎಂದು ಸಮಿತಿಯು ಆತಂಕ ವ್ಯಕ್ತಪಡಿಸಿದೆ. ಈ ಚುನಾವಣೆಗಳ ನಂತರ ಗ್ರಾಮೀಣ ಪ್ರದೇಶಗಳಲ್ಲಿನ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಬಹುದು ಎಂದು ತಜ್ಞರ ಸಮಿತಿ ತಿಳಿಸಿದೆ. 50,000ಕ್ಕೂ ಹೆಚ್ಚು ಬೂತ್ ಗಳನ್ನು ಸ್ಥಾಪಿಸಬೇಕಾಗಿದ್ದು, ರಾಜ್ಯದ ಎಲ್ಲಾ 6,021 ಪಂಚಾಯಿತಿಗಳಿಂದ ಲಕ್ಷಾಂತರ ಜನರು ಸ್ಪರ್ಧಿಸಲಿದ್ದಾರೆ. ಈ ವೇಳೆ ಜನರು ಸಾಮಾಜಿಕ ಅಂತರ ಕಾಪಾಡುವುದು ಕಷ್ಟ ಎಂದು ಹೇಳಲಾಗಿದೆ.

ಕರೋನಾ ಹರಡುವಿಕೆಯನ್ನು ತಡೆಗಟ್ಟಲು ನಾವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ನಿಗಾ ವಹಿಸಲಾಗುವುದು. ಆದರೆ ಆರ್.ಆರ್.ನಗರ ಮತ್ತು ಶಿರಾ ಉಪಚುನಾವಣೆಗಳಲ್ಲಿ ಅನೇಕ ಜನರು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ನಾವು ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸರ್ಕಾರದ ವಾದವಾಗಿದೆ.

ಕರೋನಾ: ಈ ರಾಜ್ಯ ಸರ್ಕಾರದಿಂದ ದೀಪಾವಳಿ ಮಾರ್ಗಸೂಚಿ ಬಿಡುಗಡೆ, ಪ್ರಮುಖ ವಿಷಯಗಳನ್ನು ತಿಳಿಯಿರಿ

ಗ್ರಾಮ ಪಂಚಾಯಿತಿ ಚುನಾವಣೆಯನ್ನು ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಸುವಂತೆ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಸೂಚಿಸಿತ್ತು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ನಾವು ಚುನಾವಣೆಯನ್ನು ಫೆಬ್ರವರಿಗೆ ಮುಂದೂಡುವಂತೆ ಮನವಿ ಮಾಡಿದ್ದೇವೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

Trending News