HD Deve Gowda : ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ಹೆಚ್​ಡಿಡಿ ಕಳವಳ

ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಕೇಂದ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಭವಿಷ್ಯದಲ್ಲಿ ನೀರು ಪೂರೈಕೆ ಬಹಳ ಕಷ್ಟವಾಗಲಿದೆ. ಈಗಲೇ ನಾವು ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ ಮುಂದೆ ನೀರಿನ ಹಾಹಾಕಾರ ಎದುರಿಸಬೇಕಾಗಲಿದೆ

Written by - Prashobh Devanahalli | Last Updated : May 11, 2022, 09:28 PM IST
  • ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ
  • ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕಳವಳ
  • ಬಸವನಗುಡಿಯಲ್ಲಿ ಜನತಾ ಜಲಧಾರೆ
HD Deve Gowda : ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ : ಹೆಚ್​ಡಿಡಿ ಕಳವಳ title=

ಬೆಂಗಳೂರು : ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ಕೇಂದ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ. ಭವಿಷ್ಯದಲ್ಲಿ ನೀರು ಪೂರೈಕೆ ಬಹಳ ಕಷ್ಟವಾಗಲಿದೆ. ಈಗಲೇ ನಾವು ಸಮಸ್ಯೆ ಪರಿಹರಿಸಿಕೊಳ್ಳದಿದ್ದರೆ ಮುಂದೆ ನೀರಿನ ಹಾಹಾಕಾರ ಎದುರಿಸಬೇಕಾಗಲಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‍ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಕಳವಳ ವ್ಯಕ್ತಪಡಿಸಿದ್ದಾರೆ.

ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮದ ವೇಳೆ ಗವಿಗಂಗಾಧರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಜಲಧಾರೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ನೀರಿಗಾಗಿ ಸಾಕಷ್ಟು ಕಷ್ಟ ಇದೆ ಟ್ಯಾಂಕರ್ ನೀರನ್ನು ತರಿಸಲಾಗುತ್ತಿದೆ. ಮುಂದಿನ ದಿನಗಳು ಇನ್ನೂ ಕಷ್ಟಕರವಾಗಿರಲಿದೆ. ಈ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದರು.

ಇದನ್ನೂ ಓದಿ : ರಸ್ತೆ ಗುಂಡಿ ಸಮಸ್ಯೆಯೇ..? ಚಿಂತಿಸಬೇಡಿ...ಇನ್ಮುಂದೆ ಮುಕ್ತಿ ನೀಡಲಿದೆ ಈ ಆ್ಯಪ್...!

ಜನತಾ ಜಲಧಾರೆ‌ ಕಾರ್ಯಕ್ರಮದ ಉದ್ದೇಶ ನಮ್ಮ ನದಿಗಳ ನೀರನ್ನ ನಾವು ಬಳಸಿಕೊಳ್ಳಬೇಕು ಎನ್ನುವುದಾಗಿದೆ. ಸದ್ಯ ನಮ್ಮ ನದಿ ನೀರನ್ನು ನಾವು ಬಳಸಿಕೊಳ್ಳಲು ಅನೇಕ ಸಮಸ್ಯೆಗಳಿವೆ. ಕೇಂದ್ರದ ನಿರ್ಲಕ್ಷ್ಯ ಮನೋಭಾವದಿಂದ ಸ್ವಾತಂತ್ರ್ಯ ಪಡೆದು ಇಷ್ಟು ವರ್ಷಗಳಾದರೂ ನಮ್ಮ ನೀರು ನಾವು ಪಡೆಯಲು ಆಗಲಿಲ್ಲ, ಎಲ್ಲಾ ಕಡೆ ಕಾವೇರಿ ನೀರನ್ನು ಕೊಡಲು ಆಗಿಲ್ಲ ಈಗಲೂ ಕುಡಿಯುವ ನೀರಿನ ಕೊರತೆ ಇದೆ ಎಂದು ಕುಡಿಯುವ ನೀರಿನ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

ಬೆಂಗಳೂರು ಅಭಿವೃದ್ಧಿ ಹೊಂದಿದೆ ಅಂದರೆ ಅದು ಜೆಡಿಎಸ್ ಸರ್ಕಾರ ಇದ್ದಾಗ ಕೊಟ್ಟ ಕಾರ್ಯಕ್ರಮಗಳಿಂದ. ಈಗಿನ ಜನಪ್ರತಿನಿಧಿಗಳು ಅಭಿವೃದ್ಧಿ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿದ್ದಾರೆ, ಮೊನ್ನೆ ಬಿದ್ದ ಮಳೆಯಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕ್ರೀಡಾಂಗಣದ ಛಾವಣಿ  ಬಿದ್ದು ಹೋಗಿದೆ, ಇದು ಇವರ ಅಭಿವೃದ್ಧಿ ಶೈಲಿ.ಮನೆಗಳೇ ಇಲ್ಲದೇ ಗುಡಿಸಿಲಿನಲ್ಲಿ ಅನೇಕ ಜನ ವಾಸ ಮಾಡುತ್ತಾ ಇದ್ದಾರೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.

ರಾಜ್ಯದಿಂದ 25 ನಪುಂಸಕರ ಆಯ್ಕೆ:

ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, "ರಾಜ್ಯದಿಂದ ಲೋಕಸಭೆಗೆ ಇಪ್ಪತ್ತೈದು ಜನ ನಪುಂಸಕರನ್ನು ಆರಿಸಿ ಕಳಿಸಿದ್ದೀರಾ? ಅವರೆಲ್ಲಾ ಏನು ಮಾಡುತ್ತಿದಾರೆ, ಮೋದಿ ಮೋದಿ ಅಂತಾ ದಿನವಿಡೀ ಜಪ ಮಾಡುತ್ತಾ ಇದ್ದಾರೆ" ಎಂದು ವ್ಯಂಗ್ಯವಾಡಿದರು.

ರಾಜ್ಯಾದ್ಯಂತ ನಾನು ಸುತ್ತಾಡಿ ಕೆಲಸ ಮಾಡುತ್ತಿದ್ದೇನೆ. ನೂರಕ್ಕೆ ನೂರರಷ್ಟು ಈ ಪಕ್ಷ ಅಧಿಕಾರಕ್ಕೆ ಬರುತ್ತದೆ ಕರ್ನಾಟಕದ ಜನ ಎರಡೂ ಸಿನಿಮಾ ನೋಡಿ ಆಗಿದೆ ಒಂದು ಮೋದಿ ಸಿನಿಮಾ,ಮತ್ತೊಂದು ಸೋನಿಯಾ ಸಿನಿಮಾ. ಮುಂದೆ ಜೆಡಿಎಸ್ ಅನ್ನು ಜನ ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ನಾಟಕ ಮಾಡುತ್ತಾರೆ. ನಲ್ಲಿ ನೀರು ತಂದು ಗಂಗಾಜಲ ಅಂದರು. ನಾವು ಪುಣ್ಯಕ್ಷೇತ್ರಗಳಿಂದ ನೀರು ತಂದಿದ್ದೇವೆ.ಇದಕ್ಕಿಂತ ಹಿಂದುತ್ವ ಏನು ಬೇಕು? ದೇವೇಗೌಡರು ಇದ್ದಾಗ ಎಲ್ಲಾ ಲಕ್ಷ್ಮಿಯರು ಇದ್ದರು. ಈಗ ಕೇವಲ ದರಿದ್ರ ಲಕ್ಷ್ಮಿ ಮಾತ್ರಾ ಇದಾಳೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದವರು ದೇವೇಗೌಡರು. ಅವರನ್ನು ನಮ್ಮ ಮನೆ ದೇವರು ಅಂದುಕೊಂಡರೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.

ಹೆಚ್ʼಡಿಕೆ ಸಿಎಂ ಆಗುವುದು ನಿಶ್ಚಿತ:

ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಮಾತನಾಡಿ, ಜನತಾ ಜಲಧಾರೆ ಕಾರ್ಯಕ್ರಮ ಮೇ 13 ರಂದು ದೊಡ್ಡಮಟ್ಟದಲ್ಲಿ ನಡೆಯುತ್ತದೆ. ಅದಕ್ಕೆ ಐದರಿಂದ ಆರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಜನ ಬೆಂಬಲ ಅಭೂತಪೂರ್ವ ವಾಗಿ ಸಿಗುತ್ತಾ ಇದೆ ಎಂದರು. 

ಈ ಸಲ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾವುದು ನಿಶ್ಚಿತ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇತಿಹಾಸ ಮತ್ತೆ ಮರುಕಳಿಸಲಿದೆ. ದೀನದಲಿತರ ಸೇವೆಗೆ ಒಮ್ಮೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಇದನ್ನೂ ಓದಿ : Havildar Kashiray Bammanalli : ಹುತಾತ್ಮ ಯೋಧ ಕಾಶಿರಾಯ ಬಮ್ಮನಳ್ಳಿಗೆ "ಶೌರ್ಯಚಕ್ರ ಪ್ರಶಸ್ತಿ"..!

ಬಸವನಗುಡಿಯಲ್ಲಿ ನಾವು ಇನ್ನು ಪಕ್ಷವನ್ನು ಸಂಘಟನೆ ಮಾಡಬೇಕಿದೆ. ಬಿಬಿಎಂಪಿ ಚುನಾವಣೆ ಬಗ್ಗೆ ನಿನ್ನೆ ತಾನೇ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇಲ್ಲಿ ಆರು ವಾರ್ಡ್ ಗಳಿವೆ, ಆರೂ ವಾರ್ಡ್ ಗಳನ್ನು ಗೆಲ್ಲುವ ರೀತಿ ಸಂಘಟನೆ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ, ಮುಖಂಡ ಬಾಗೇಗೌಡ, ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.‌ಪ್ರಕಾಶ್‌, ಕೋರ್‌ ಕಮಿಟಿ ಸದಸ್ಯೆ ರೂತ್‌ ಮನೋರಮಾ ಮುಂತಾದವರು ಇದ್ದರು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News