Priyank Shukla: ಆ ಒಂದು ಘಟನೆಯಿಂದ ಡಾಕ್ಟರ್ ವೃತ್ತಿ ತೊರೆದು ಐಎಎಸ್ ಅಧಿಕಾರಿಯಾದ್ರು!

ಐಎಎಸ್‌ ಅಧಿಕಾರಿಯಾಗಿ ಜನರ ಸೇವೆ ಮಾಡಲು ನಿರ್ಧರಿಸಿದ ಪ್ರಿಯಾಂಕಾ ಶುಕ್ಲಾ ಡಾಕ್ಟರ್ ವೃತ್ತಿಗೆ ಗುಡ್ ಬೈ ಹೇಳಿದ್ದರು.

Written by - Puttaraj K Alur | Last Updated : May 7, 2022, 05:52 PM IST
  • 2006ರಲ್ಲಿ ಪ್ರಿಯಾಂಕಾ ಶುಕ್ಲಾ ಲಕ್ನೋದ ಪ್ರತಿಷ್ಠಿತ ಕಾಲೇಜಿನಲ್ಲಿ MBBS ಪದವಿ ಪಡೆದುಕೊಂಡಿದ್ದರು
  • ಸ್ಲಂ ಪ್ರದೇಶಕ್ಕೆ ಭೇಟಿ ನೀಡಿದಾಗ ನಡೆದ ಘಟನೆ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು
  • ಜನರ ಸೇವೆ ಮಾಡಲು ವೈದ್ಯ ವೃತ್ತಿ ತೊರೆದ ಪ್ರಿಯಾಂಕಾ ಐಎಎಸ್ ಅಧಿಕಾರಿಯಾದರು
Priyank Shukla: ಆ ಒಂದು ಘಟನೆಯಿಂದ ಡಾಕ್ಟರ್ ವೃತ್ತಿ ತೊರೆದು ಐಎಎಸ್ ಅಧಿಕಾರಿಯಾದ್ರು! title=
ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ

ನವದೆಹಲಿ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಕೆಲ ಘಟನೆಗಳು ಸ್ಫೂರ್ತಿಯಾಗುತ್ತವೆ. ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಸಂದರ್ಭಗಳು ಕೆಲವರ ಜೀವನವನ್ನೇ ಬದಲಾಯಿಸಿಬಿಡುತ್ತವೆ. ಇದೇ ರೀತಿಯ ಘಟನೆ ಛತ್ತೀಸ್‍ಗಡದ ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಅವರ ಜೀವನದಲ್ಲಿ ಸಹ ನಡೆದಿತ್ತು. ಅದು ಏನು ಅಂತೀರಾ..?

ಪ್ರಿಯಾಂಕಾ ಶುಕ್ಲಾ ಅವರು ಐಎಎಸ್ ಅಧಿಕಾರಿಯಾಗುವುದಕ್ಕೂ ಮೊದಲು ಎಂಬಿಬಿಎಸ್ ಪದವಿ ಮುಗಿಸಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಜೀವನದಲ್ಲಿ ನಡೆದ ಒಂದು ಘಟನೆಯಿಂದಾಗಿ ಡಾಕ್ಟರ್ ವೃತ್ತಿಗೆ ಗುಡ್‍ಬೈ ಹೇಳಿ ಪ್ರಿಯಾಂಕಾ ಐಎಎಸ್ ಅಧಿಕಾರಿಯಾಗಬೇಕಾಯಿತು. ಅದೊಂದು ದಿನ ಕೇಳಿದ ಒಂದೇ ಒಂದು ಮಾತಿನಿಂದ ಅವರ ಜೀವನವೇ ಸಂಪೂರ್ಣವಾಗಿ ಬದಲಾಯಿತು.

ಇದನ್ನೂ ಓದಿ: Zomato: ನೆಲಕಚ್ಚಿದ ಜೊಮ್ಯಾಟೊ ಷೇರು, ಆರೇ ತಿಂಗಳಲ್ಲಿ ಹೂಡಿಕೆದಾರರಿಗೆ 88,000 ಕೋಟಿ ರೂ. ನಷ್ಟ!

ನೀನೇನು IAS ಅಧಿಕಾರಿಯಾ..?

ಪ್ರಿಯಾಂಕಾ ಓದಿದಲ್ಲಿ ತುಂಬಾ ಮುಂದಿದ್ದರು. ಅವರು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿಯಿಂದ ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದರು. ಡಾಕ್ಟರ್ ವೃತ್ತಿಗೆ ಸೇರಿದ ಪ್ರಾರಂಭಿಕ ದಿನಗಳಲ್ಲಿ ಪ್ರಿಯಾಂಕಾ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಳ್ಳಲು ಸ್ಲಂ ಏರಿಯಾಗೆ ಭೇಟಿ ನೀಡಿದ್ದರು. ಸ್ಲಂ ನಿವಾಸಿಗಳ ಆರೋಗ್ಯ ತಪಾಸಣೆಗೆ ತೆರಳಿದ್ದ ಪ್ರಿಯಾಂಕಾರಿಗೆ ಅಲ್ಲಿ ಕಂಡ ಒಂದು ದೃಶ್ಯದಿಂದ ಮನಸ್ಸಿಗೆ ತುಂಬಾ ಬೇಸರವಾಗಿತ್ತು. ಮಹಿಳೆಯೊಬ್ಬರು ತಮ್ಮ ಮಗುವಿನೊಂದಿಗೆ ಆ ಸ್ಲಂ ಪ್ರದೇಶದಲ್ಲಿ ಅಶುದ್ಧ ನೀರನ್ನು ಕುಡಿಯುತ್ತಿರುವುದು ಕಂಡುಬಂದಿತ್ತು.

ಇದನ್ನು ಕಂಡ ಪ್ರಿಯಾಂಕಾ ಅವರು ಏಕೆ ಶುದ್ಧ ನೀರಿನ ಬದಲು ಅಶುದ್ಧ ನೀರನ್ನು ಕುಡಿಯುತ್ತಿದ್ದಾರೆಂದು ಪ್ರಶ್ನಿಸಿದ್ದರು. ಹೀಗೆ ಪ್ರಶ್ನಸಿದ್ದಕ್ಕೆ ಅಲ್ಲಿನ ಮಹಿಳೆ ‘ನೀನೇನು ಜಿಲ್ಲಾಧಿಕಾರಿಯೇ’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಯಿಂದ ಪ್ರಿಯಾಂಕಾರಿಗೆ ಆಶ್ಚರ್ಯವಾಗಿತ್ತು. ಸ್ಲಂ ಪ್ರದೇಶದ ಮಹಿಳೆ ಕೇಳಿದ ಆ ಪ್ರಶ್ನೆಯ ಬಗ್ಗೆ ಪ್ರಿಯಾಂಕಾ ತುಂಬಾ ಯೋಚಿಸಿದರು. ನಮ್ಮ ದೇಶದಲ್ಲಿ ಲಕ್ಷಾಂತರ, ಕೋಟ್ಯಂತರ ಜನರಿಗೆ ಇನ್ನೂ ಸರಿಯಾಗಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲವೆಂಬುದು ಅವರಿಗೆ ಮನದಟ್ಟಾಗಿತ್ತು.

ಇದನ್ನೂ ಓದಿ: ರಾಜ್ ಠಾಕ್ರೆಗೆ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಹೆದರಿದೆ'- ಸಂಜಯ್ ನಿರುಪಮ್

ಐಎಎಸ್ ಅಧಿಕಾರಿಯಾಗಲು ಡಾಕ್ಟರ್ ವೃತ್ತಿಗೆ ಗುಡ್‍ಬೈ!

ದೇಶದ ಜನರಿಗೆ ಸರಿಯಾದ ಮೂಲಸೌಕರ್ಯಗಳೇ ಸಿಗುತ್ತಿಲ್ಲ. ಅವರಿಗಾಗಿ ತಾವು ಏನಾದರೂ ಮಾಡಲೇಬೇಕೆಂದು ಅಂದೇ ಪ್ರಿಯಾಂಕಾ ದೃಢನಿಶ್ಚಯ ಮಾಡಿದರು. ಆ ಒಂದು ಘಟನೆ ಪ್ರಿಯಾಂಕಾರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಹೀಗಾಗಿ ಅವರು ನಾಗರಿಕ ಸೇವಾ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕೆಂದು ನಿರ್ಧರಿಸಿದರು. ಈ ನಿಟ್ಟಿನಲ್ಲಿ ತಯಾರಿ ನಡೆಸಿದ ಅವರು ಪರೀಕ್ಷೆ ಬರೆದು 2ನೇ ಪ್ರಯತ್ನದಲ್ಲಿಯೇ 73 ರ್ಯಾಂಕ್ ಗಳಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡರು.

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಪ್ರಿಯಾಂಕಾ ಶುಕ್ಲಾ ಸದ್ಯ ಛತ್ತೀಸ್‍ಗಡದ ಜನರ ಜೀವನಮಟ್ಟ ಸುಧಾರಣೆಗಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಹೆಸರಾಗಿರುವ ಅವರಿಗೆ Census Silver Medal ದೊರೆತಿದೆ. ಅಲ್ಲದೆ ಜನರ ಸಾಕ್ಷರತೆ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಕ್ಕಾಗಿ ಅವರಿಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಲಭಿಸಿದೆ. ಜನರ ಜೀವನಮಟ್ಟ ಸುಧಾರಿಸಲು ಪ್ರಿಯಾಂಕಾ ಪ್ರತಿದಿನವೂ ಶ್ರಮಿಸುತ್ತಿದ್ದಾರೆ. ಅವರ ಸಾಮಾಜಿಕ ಕಳಕಳಿ, ಬದ್ಧತೆ ಪ್ರತಿಯೊಬ್ಬ ಯುಪಿಎಸ್‍ಸಿ ಆಕಾಂಕ್ಷಿಗೆ ಸ್ಫೂರ್ತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News