ಯಡಿಯೂರಪ್ಪ ಮೇಲೆ ಕಾಂಗ್ರೆಸ್ ಹೊಸ ಬಾಂಬ್: 'ಯಡ್ಡಿ ಡೈರಿ' ಸ್ಫೋಟ!

ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜನಾಥ್ ಸಿಂಗ್ ರಿಂದ ಅರುಣ್ ಜೇಟ್ಲಿವರೆಗೆ ಬಿಜೆಪಿ ಹಿರಿಯ ನಾಯಕರಿಗೆ 1,800 ಕೋಟಿ ರೂ.ಗಳಷ್ಟು ಹಣ ವರ್ಗಾವಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

Last Updated : Mar 22, 2019, 04:02 PM IST
ಯಡಿಯೂರಪ್ಪ ಮೇಲೆ ಕಾಂಗ್ರೆಸ್ ಹೊಸ ಬಾಂಬ್: 'ಯಡ್ಡಿ ಡೈರಿ' ಸ್ಫೋಟ! title=

ನವದೆಹಲಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್​ ಮುಖಂಡರು ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಹೊಸ ಬಾಂಬ್​ ಸಿಡಿಸಿದ್ದಾರೆ. 

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜನಾಥ್ ಸಿಂಗ್ ರಿಂದ ಅರುಣ್ ಜೇಟ್ಲಿವರೆಗೆ ಬಿಜೆಪಿ ಹಿರಿಯ ನಾಯಕರಿಗೆ 1,800 ಕೋಟಿ ರೂ.ಗಳಷ್ಟು ಹಣ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದರು. 

ಕಾರವಾನ್ ಎಕ್ಸ್ ಪ್ರೆಸ್ ವರದಿಯನ್ನು ಉಲ್ಲೇಖಿಸಿರುವ ರಣದೀಪ್ ಸುರ್ಜೆವಾಲ ಅವರು, ಯಡಿಯೂರಪ್ಪ ಅವರ ಬಳಿ ಇದ್ದ ಡೈರಿಯಿಂದ ಐದು ಅಂಶಗಳು ಬೆಳಕಿಗೆ ಬಂದಿವೆ. ಒಟ್ಟಾರೆ, 2690 ಕೋಟಿ ರು ಸಂಗ್ರಹವಾಗಿದ್ದು, 1800 ಕೋಟಿ ರೂ. ಹಣವನ್ನು ಯಡಿಯೂರಪ್ಪ ಅವರು ಸಿಎಂ ಆಗಿದ್ದ ಕಾಲದಲ್ಲಿ ಬಿಜೆಪಿ ಹೈಕಮಾಂಡಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದು, ಈ ಬಗ್ಗೆ ಲೋಕಪಾಲ ಸಂಸ್ಥೆಯಿಂದ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

ಅಲ್ಲದೆ,  ಬಿ.ಎಸ್.ಯಡಿಯೂರಪ್ಪ ಅವರ ಸಹಿ ಇರುವ ಈ ಡೈರಿಯಲ್ಲಿ ಪ್ರತಿಯೊಬ್ಬ ನಾಯಕರ ಹೆಸರು ಹಾಗೂ ಕೊಟ್ಟ ಹಣದ ವಿವರ ಇದ್ದು, ಈ ಡೈರಿ 2017ರಿಂದ ಆದಾಯ ತೆರಿಗೆ ಇಲಾಖೆ ವಶದಲ್ಲಿದೆ. ಆದರೂ, ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರನ್ನೇಕೆ ತನಿಖೆಗೆ ಒಳಪಡಿಸಿಲ್ಲ ಎಂದು ರಣದೀಪ್ ಸುರ್ಜೆವಾಲ ಪ್ರಶ್ನಿಸಿದ್ದಾರೆ.

Trending News