ಕರುಣಾನಿಧಿ ತಮಿಳುನಾಡಿನ ನಿಧಿ ಆಗಿದ್ದು ಹೇಗೆ ಗೊತ್ತಾ?-Photos

  

  • Aug 06, 2018, 21:25 PM IST

  

1 /11

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೇತ್ರ ಕಳಗಂ(DMK) ಪಕ್ಷದ ಅಧಿನಾಯಕ ಎಂ.ಕರುಣಾನಿಧಿ(94) ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಚಿತ್ರಸಮೇತ ಸಂಕ್ಷಿಪ್ತ ಮಾಹಿತಿ ನಿಮಗಾಗಿ...

2 /11

ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಮುದುವೆಲ್ ಕರುಣಾನಿಧಿ ಅವರು ಅಸಾಧಾರಣ ಅಭಿಮಾನಿ ಬಳಗವನ್ನು ಹೊಂದಿದ್ದರು. ಪ್ರತಿ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಮತದಾರರು, ಕರುಣಾನಿಧಿ ಅಭಿಮಾನಿಗಳು ಅವರನ್ನು ಗೆಲ್ಲಿಸಿದ್ದರು. ಹೀಗಾಗಿ ಕರುಣಾನಿಧಿ ಅವರನ್ನು ಸೋಲಿಲ್ಲದ ಸರದಾರ ಎಂದೇ ತಮಿಳುನಾಡು ಜನತೆ ಕರೆಯುತ್ತಾರೆ. 

3 /11

ತಮಿಳುನಾಡಿನಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ಕರುಣಾನಿಧಿ ಅವರು ಕಲೈಗ್ನಾರ್ ಎಂದೇ ಹೆಸರಾಗಿದ್ದಾರೆ. ಬರೋಬ್ಬರಿ 60 ವರ್ಷಗಳ ರಾಜಕೀಯ ಜೀವನ ನಡೆಸಿದ್ದ ಎಂ.ಕರುಣಾನಿಧಿ ಭಾರತದ ಪ್ರಮುಖ ರಾಜಕಾರಣಿ. 

4 /11

ತಿರು ಮುತುವೇಳರ್ ಮತ್ತು ತಿರುಮತಿ ಅಂಜುಗಮ್ ಅಮ್ಮೈಯಾರ್ ದಂಪತಿ ಮಗನಾಗಿ 1924ರ ಜೂನ್ 3ರಲ್ಲಿ ಜನಿಸಿದ ಕರುಣಾನಿಧಿಯವರ ಮೊದಲ ಹೆಸರು ದಕ್ಷಿಣಾಮೂರ್ತಿ. ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಆಗಿನ ತಂಜಾವೂರು(ಈಗ ತಿರುವರೂರ್ ಜಿಲ್ಲೆ) ಜಿಲ್ಲೆಯ ತಿರುಕ್ಕುವಲೈ ಇವರ ಹುಟ್ಟೂರು. ಇವರು ತಮಿಳುನಾಡಿನ ಇಸೈ ವೆಳ್ಳಲಾರ್ ಸಮುದಾಯಕ್ಕೆ ಸೇರಿದವರು.

5 /11

ಡಿಎಂಕೆ ಸ್ಥಾಪಕ ಸಿ.ಎನ್.ಅಣ್ಣಾದೊರೈ 1969ರಲ್ಲಿ ತೀರಿಹೋದ ನಂತರ ಇವರು ಡಿಎಂಕೆ ಪಕ್ಷದ ನಾಯಕತ್ವ ವಹಿಸಿಕೊಂಡರು. ಅಲ್ಲದೆ, ದೀರ್ಘಕಾಲದ ರಾಜಕೀಯ ವೃತ್ತಿಜೀವನದಲ್ಲಿ ಅವರು ಸ್ಪರ್ಧಿಸಿದ ಪ್ರತಿಯೊಂದು ಚುನಾವಣೆಯಲ್ಲಿ ತಮ್ಮ ಸ್ಥಾನದಲ್ಲಿ ಜಯಿಸುವ ಮ‌ೂಲಕ ದಾಖಲೆ ಮಾಡಿದ್ದಾರೆ.

6 /11

 ಕರುಣಾನಿಧಿ ಅವರ ಸಮ್ಮಿಶ್ರಕೂಟವು 2006ರ ಮೇಯಲ್ಲಿ ನಡೆದ ಚುನಾವಣೆಯಲ್ಲಿ ಪ್ರಮುಖ ವಿರೋಧಿ ಜೆ. ಜಯಲಲಿತಾರನ್ನು ಸೋಲಿಸಿದರಲ್ಲದೆ, 2006ರ ಮೇ 13ರಲ್ಲಿ ಕರುಣಾನಿಧಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ತಮಿಳುನಾಡು ವಿಧಾನಸಭೆಗೆ 1957ರಲ್ಲಿ ತಿರುಚಿರಾಪಲ್ಲಿ ಜಿಲ್ಲೆಯ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾದ ಕರುಣಾನಿಧಿ, 1962 ರಲ್ಲಿ ತಂಜಾವೂರು, 1967, 1971ರಲ್ಲಿ ಸೈದಾಪೇಟ್, 1977 ಮತ್ತು 1980ರಲ್ಲಿ ಅಣ್ಣಾನಗರ್, 1989 ಮತ್ತು 1991ರಲ್ಲಿ ಹಾರ್ಬರ್, 1996 ರಿಂದ 2006ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಚೇಪಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಶಾಲಿಯಾಗಿದ್ದರು. ಇವರು ತಮಿಳುನಾಡು ವಿಧಾನಸಭೆಗೆ 13 ಬಾರಿ ಆಯ್ಕೆಯಾಗಿದ್ದರು.

7 /11

ಎಂ.ಕರುಣಾನಿಧಿ ಕೇವಲ ರಾಜಕೀಯ ಧುರೀಣರಷ್ಟೇ ಅಲ್ಲ, ಕವಿ, ವಾಗ್ಮಿ ಮತ್ತು ಚಲನಚಿತ್ರಗಳಿಗೆ ಕಥಾಕಾರರೂ ಆಗಿದ್ದರು. ಅವರ ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳು ದ್ರಾವಿಡ ಚಳವಳಿಯ ಸಮಾಜವಾದಿ ಮತ್ತು ವಿಚಾರವಾದಿ ಸಿದ್ಧಾಂತಗಳನ್ನು ಪ್ರಸಾರ ಮಾಡಿತು. ಇದೇ ಮುಂದೆ ಅವರು ರಾಜಕಿಯ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯವಾಗಿಸಿತು. 

8 /11

ತಮ್ಮ 20ನೇ ವಯಸ್ಸಿನಲ್ಲಿಯೇ ಜುಪಿಟರ್ ಪಿಕ್ಚರ್ಸ್‌ನಲ್ಲಿ ಕಥಾಲೇಖಕರಾಗಿ ಕೆಲಸ ಆರಂಭಿಸಿದ ಕರುಣಾನಿಧಿಯವರ ಮೊದಲ ಸಿನಿಮಾ ರಾಜಕುಮಾರಿ ಅವರಿಗೆ ಬಹಳ ಜನಪ್ರಿಯತೆಯನ್ನು ತಂದುಕೊಟ್ಟಿತು. ಇಲ್ಲಿ ಕಥಾಲೇಖಕರಾಗಿ ಅವರ ಕೌಶಲಗಳು ಗೋಚರವಾದವು. ಅವರು 70ಕ್ಕಿಂತಲೂ ಹೆಚ್ಚು ಚಿತ್ರಕಥೆಗಳನ್ನು ಬರೆದಿದ್ದಾರೆ.

9 /11

ತಮ್ಮ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುತ್ತಿದ್ದ ಕರುಣಾನಿಧಿ ಅವರು, ಪ್ರತಿನಿತ್ಯ ತಪ್ಪದೇ ಯೋಗಾಭ್ಯಾಸ ಮಾಡುತ್ತಿದ್ದರು. 

10 /11

ಡಿಎಂಕೆ ಮುಖ್ಯಸ್ಥರಾಗಿರುವ ಎಂ.ಕರುಣಾನಿಧಿ ಅವರಿಗೆ ಮೂವರು ಪತ್ನಿಯರು. ಕರುಣಾನಿಧಿ ಅವರ ಮೊದಲ ಪತ್ನಿ ಪದ್ಮಾವತಿ, ಎರಡನೇ ಪತ್ನಿ ದಯಾಳು ಮತ್ತು ಮೂರನೇ ಪತ್ನಿ ರಜತಿ. ಅಲ್ಲದೆ, ಎಲ್ಲಾ ಪತ್ನಿಯರೂ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇದು, ತಮಿಳುನಾಡು ರಾಜಕೀಯದಲ್ಲಿ ಕರುಣಾನಿಧಿ ಅವರು ತಮ್ಮ ಅಧಿಕಾರವನ್ನು ವಿಸ್ತರಿಸಿ ರಾಜಕೀಯದಲ್ಲಿ ಮತ್ತಷ್ಟು ಭದ್ರವಾಗಿ ನೆಲೆಯೂರಲು ಸಹಕಾರಿಯಾಯಿತು. 

11 /11

ಈ ಮೂವರು ಪತ್ನಿಯರಿಂದ 6 ಮಕ್ಕಳನ್ನು ಕರುಣಾನಿಧಿ ಹೊಂದಿದ್ದಾರೆ. ಅವರಲ್ಲಿ ಎಂ.ಕೆ.ಮುತ್ತು, ಎಂ.ಕೆ.ಅಲಗಿರಿ, ಎಂ.ಕೆ.ಸ್ಟಾಲಿನ್ ಮತ್ತು ಎಂ.ಕೆ.ತಮಿಳರಸು ಪುತ್ರರಾದರೆ, ಸೆಲ್ವಿ ಮತ್ತು ಕನಿಮೋಜಿ ಪುತ್ರಿಯರಾಗಿದ್ದಾರೆ.