ಬೆಂಗಳೂರು: ಲಾಕ್ಡೌನ್ ಕೊನೆಯವಾರಕ್ಕೆ ಬರುತ್ತಿದ್ದರೂ ಕರೋನಾವೈರಸ್ (Coronavirus) ಕಾಟ ಕೊನೆಯಾಗುವ ಲಕ್ಷಣ ಕಂಡುಬರುತ್ತಿಲ್ಲ. ಕೊರೋನಾದಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಮೊದಲ ಬಲಿಯಾಗಿದ್ದ ಕಲ್ಬುರ್ಗಿ ಜಿಲ್ಲೆಯಲ್ಲಿ ಈಗ ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲೇ ಮೊಟ್ಟ ಮೊದಲು ಸಾವು ಸಂಭವಿಸಿದ್ದು ಕಲಬುರ್ಗಿಯಲ್ಲಿ. ಹೊರ ದೇಶದಿಂದ ಬಂದ ವೃದ್ಧ ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದ. ಇದಾದ ನಂತರ ಈ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗ ಈ ಮಾರಕ ಕೊರೋನಾಗೆ ಮತ್ತೊಬ್ಬ ವ್ಯಕ್ತಿ ಬಲಿಯಾದಂತಾಗಿದೆ.
ಜಾಗತಿಕ ಪಿಡುಗು ಕೊರೋನಾಗೆ ಮೃತಪಟ್ಟವರ ಸಂಖ್ಯೆ ಮಂಗಳವಾರದ ಅಂತ್ಯಕ್ಕೆ ದೇಶದಲ್ಲಿ 150ಕ್ಕೆ ಏರಿಕೆಯಾಗಿತ್ತು. ಅದೇ ರೀತಿ 4,789 ಜನರು ಕೊರೋನಾ ಸೋಂಕು ಪೀಡಿತರಾಗಿದ್ದರು. 24 ಗಂಟೆಗಳಲ್ಲಿ 508 ಹೊಸ ಪ್ರಕರಣಗಳು ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಂಕಿ ಅಂಶಗಳು ತಿಳಿಸಿತ್ತು. ಇವತ್ತು ಕೊರೋನಾದಿಂದ ಮೃತಪಟ್ಟವರ ಮತ್ತು ಸೋಂಕು ಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ.
ಕೊರೋನಾ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ಈಗಾಗಲೇ ಏಪ್ರಿಲ್ 14ರ ವರೆಗೆ 21 ದಿನಗಳ ಲಾಕ್ಡೌನ್ ಘೋಷಿಸಲಾಗಿದೆ. ಆದರೆ ಕೊರೋನಾ ಸೋಂಕು ಹರಡುವಿಕೆ ಕಡಿಮೆ ಆಗುತ್ತಿಲ್ಲ. ಬದಲಿಗೆ ತೀವ್ರಗೊಳ್ಳುತ್ತಿದೆ. ಆದುದರಿಂಸ ಈಗ ಲಾಕ್ ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಆರ್ಥಿಕ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತಿದೆ.
ಕರ್ನಾಟಕದಲ್ಲಿ ಕೊರೋನಾಗೆ ಮತ್ತೊಂದು ಬಲಿ, ರಾಜ್ಯದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆ