'ನನ್ನನ್ನು ನಾನು ಮಾರಿಕೊಂಡಿಲ್ಲ': ಕ್ಷೇತ್ರದ ಮತದಾರರಿಗೆ ಎ.ಎಚ್. ವಿಶ್ವನಾಥ್ ಪತ್ರ

ಹುಣಸೂರು ವಿಧಾನಸಭಾ ಕ್ಷೇತ್ರದ ನನ್ನ ಮತದಾರ ಬಂಧುಗಳೇ ಎಂದು ಪತ್ರ ಪಡೆದಿರುವ ಅಡಗೂರು ಎಚ್. ವಿಶ್ವನಾಥ್

Last Updated : Jul 30, 2019, 02:05 PM IST
'ನನ್ನನ್ನು ನಾನು ಮಾರಿಕೊಂಡಿಲ್ಲ': ಕ್ಷೇತ್ರದ ಮತದಾರರಿಗೆ ಎ.ಎಚ್. ವಿಶ್ವನಾಥ್ ಪತ್ರ title=
File Image

ಮೈಸೂರು: ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ನನ್ನ ಮೇಲೆ ವಿಶ್ವಾಸವಿತ್ತು ದಯಪಾಲಿಸಿದ ಮತಗಳಿಗೂ ಅಪಚಾರ ಮಾಡಿಲ್ಲ ಎಂದು ರಾಜೀನಾಮೆ ನೀಡಿ ಅನರ್ಹಗೊಂಡಿರುವ ಹುಣಸೂರು ಶಾಸಕ ಅಡಗೂರು ಎಚ್. ವಿಶ್ವನಾಥ್ ತನ್ನ ಕ್ಷೇತ್ರದ ಮತದಾರರಿಗೆ ಪತ್ರ ಬರೆದಿದ್ದಾರೆ.

ಹುಣಸೂರು ವಿಧಾನಸಭಾ ಕ್ಷೇತ್ರದ ನನ್ನ ಮತದಾರ ಬಂಧುಗಳೇ ಎಂದು ಪತ್ರ ಪಡೆದಿರುವ ಅಡಗೂರು ಎಚ್. ವಿಶ್ವನಾಥ್,  ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ತಮಗೆ ತಿಳಿದೇ ಇದೆ. ಆದರೆ ಇವುಗಳಿಗೆ ಸಕಾರಗಳನ್ನು ನಿಮಗೆ ತಿಳಿಸಲು ನಾನು ಜವಾಬ್ದಾರನಾಗಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಪ್ರಚಾರ ಮಾಡುತ್ತಿರುವಂತೆ ನನ್ನನ್ನು ನಾನು ಮಾರಿಕೊಂಡಿಲ್ಲ. ನೀವು ನನ್ನ ಮೇಲೆ ವಿಶ್ವಾಸವಿತ್ತು ದಯಪಾಲಿಸಿದ ಮತಗಳಿಗೂ ಅಪಚಾರ ಮಾಡಿಲ್ಲ. ನಿಮ್ಮ ಪ್ರತಿ ಮತಕ್ಕಾಗಿ ನಿಮಗೆ ಸದಾ ಋಣಿಯಾಗಿದ್ದೇನೆ. ತಲೆ ಬಾಗಿದ್ದೇನೆ. ನಿಮ್ಮ ಮಠದ ಬಲದಿಂದ ಶಾಸಕನಾದ ನನ್ನನ್ನು ಈ ವ್ಯವಸ್ಥೆ ಶೋಷಿಸಿತು, ಅಪಮಾನಿಸಿತು, ಕಡೆಗಣಿಸಿತು. ಅನುಭವ, ಪ್ರಾಮಾಣಿಕತೆ ಮತ್ತು ಹಿರಿತನಕ್ಕೆ ಬೆಲೆಯಿಲ್ಲದಂತಾಯಿತು. ಒಟ್ಟಾರೆ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗುವಂತಹ ಅನೇಕ ಘಟನೆಗಳು ನಡೆದುಹೋದವು ತಮ್ಮ ಅಳಲು ತೋಡಿಕೊಂಡಿರುವ ವಿಶ್ವನಾಥ್, ಇವುಗಳನ್ನು ಸಹಿಸಲಾರದೆ ನಾನು ಮತ್ತು ನನ್ನಂತೆ ನೋವುಂಡ ಇತರ ಶಾಸಕ ಮಿತ್ರರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ತಿಳಿಸಿದ್ದಾರೆ. 

ಈ ನಡೆ ಮತದಾರರಿಗೆ ನಾನು ತೋರಿದ ನಿರ್ಲಕ್ಷ್ಯವೆಂದು ತಾವು ಭಾವಿಸಬಾರದು ಎಂದು ಮನವಿ ಮಾಡಿರುವ ವಿಶ್ವನಾಥ್, ಬದಲಾಗಿ ನೀವು ಮತ ಕೊಟ್ಟು ಹರಿಸಿದ ನಿಮ್ಮ ಶಾಸಕ ಪಡೆ ಪಡೆ ಆದ ಅವಮಾನಗಳನ್ನು, ತಾರತಮ್ಯಗಳನ್ನು ನುಂಗಲಾರದೆ ತನ್ನ ಆತ್ಮಗೌರವಕ್ಕಾಗಿ, ಕ್ಷೇತ್ರದ ಜನರ ಸ್ವಾಭಿಮಾನ ಮತ್ತು ಒಳಿತಿಗಾಗಿ ಕೊಟ್ಟ ರಾಜೀನಾಮೆ ಎಂದು ತಾವು ತಿಳಿಯಬೇಕು ಎಂದಿದ್ದಾರೆ.

ಇದಾದ ಮೇಲೂ ಈ ದ್ವೆಶಪೂರಿತ ವ್ಯವಸ್ಥೆ ನಮ್ಮನ್ನು ದಮನಿಸಲು ಯತ್ನಿಸಿದೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ನಮ್ಮ ರಾಜಕೀಯ ಮತ್ತು ಸಾರ್ವಜನಿಕ ಬದುಕನ್ನು ಮುಗಿಸುವ ಹುನ್ನಾರಗಳನ್ನು ನಡೆಸಿದೆ. ಈಗ ನಾವು ದೇಶದ ಸರ್ವೋಚ್ಚ ನ್ಯಾಯಾಲಯದ ಬಾಗಿಲನ್ನು ತಟ್ಟುತ್ತಿದ್ದೇವೆ. ನಿಮ್ಮನ್ನು ಸದ್ಯದಲ್ಲೇ ಹುಣಸೂರಿನಲ್ಲಿ ಭೇಟಿಯಾಗಿ ಅನೇಕ ವಿಚಾರಗಳನ್ನು ಹಂಚಿಕೊಳ್ಳಲಿದ್ದೇನೆ. ವಾಸ್ತವ ಸಂಗತಿಗಳನ್ನು ತಿಳಿಸಲಿದ್ದೇನೆ. ದಯವಿಟ್ಟು ತಾವು ನನ್ನನ್ನು, ನನ್ನ ಜೀವನವನ್ನು ಬಲ್ಲವರಾಗಿದ್ದರಿಂದ ವದಂತಿಗಳಿಗೆ ದಯವಿಟ್ಟು ಕಿವಿಗೊಡಬೇಡಿ.

ನಿಮ್ಮ ಬೆಂಬಲ, ಆಶೀರ್ವಾದ ಸದಾ ನನ್ನ ಮೇಲಿರಲಿ. 
ವಿಶ್ವಾಸಗಳೊಂದಿಗೆ
ನಿಮ್ಮ 

ಅಡಗೂರು ಎಚ್. ವಿಶ್ವನಾಥ್
ಹುಣಸೂರು ಕ್ಷೇತ್ರ, ಮೈಸೂರು ಜಿಲ್ಲೆ
 

Trending News