ಇದ್ದ ಮೂರ್ ಜನದಲ್ಲಿ ಕದ್ದವರ್ಯಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?

ಮೊದಲು ಆಡಿಯೋದಲ್ಲಿನ ಹೇಳಿಕೆ ತಮ್ಮದೇ ಎಂದು ಒಪ್ಪಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಮಿತ್ ಶಾ ತರಾಟೆಗೆ ತಗೊಂಡ ಮೇಲೆ ವರಸೆ ಬದಲಿಸಿದ್ದಾರೆ ಎಂದು ಬಿಎಸ್‌ವೈ ಕಾಲೆಳೆದ ಮಾಜಿ ಸಿಎಂ ಸಿದ್ದರಾಮಯ್ಯ  

Last Updated : Nov 5, 2019, 11:53 AM IST
ಇದ್ದ ಮೂರ್ ಜನದಲ್ಲಿ ಕದ್ದವರ್ಯಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ? title=
File image

ಬೆಂಗಳೂರು: ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ 17 ಅನರ್ಹ ಶಾಸಕರ ಭವಿಷ್ಯ ನಿರ್ಧರಿಸುವ ಸುಪ್ರೀಂಕೋರ್ಟ್ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. ಬಿ.ಎಸ್‌. ಯಡಿಯೂರಪ್ಪ, ಅನರ್ಹ ಶಾಸಕರ ರಾಜೀನಾಮೆ ನೀಡಿದ್ದರ ಬಗ್ಗೆ ಆಡಿದ್ದಾರೆನ್ನಲಾದ ಮಾತುಗಳಿರುವ ವಿಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇನ್ನೇನೂ ತೀರ್ಪು ಬಂದೇ ಬಿಟ್ಟಿತು ಎಂದುಕೊಂಡಿದ್ದ ಅನರ್ಹರಿಗೆ ಮತ್ತು ತಮ್ಮ ಪಕ್ಷದ ಪಾತ್ರವಿಲ್ಲ ಎಂದು ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ಹೊಸ ಆತಂಕ ಶುರುವಾಗಿದೆ.

ಏತನ್ಮಧ್ಯೆ, ಬಿಎಸ್‌ವೈ ಆಡಿಯೋ ರಿಲೀಸ್ ಮಾಡಿದ್ದು ಸಿದ್ದರಾಮಯ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಬಿಜೆಪಿ ಪಕ್ಷದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹಳ ಜನ ಶತ್ರುಗಳಿದ್ದಾರೆ. ಅವರಲ್ಲೇ ಯಾರೋ ಆಡಿಯೋ ರೆಕಾರ್ಡ್ ಮಾಡಿ, ಮಾಧ್ಯಮಗಳಿಗೆ ಕೊಟ್ಟಿದ್ದಾರೆ. ಇದ್ದ ಮೂರ್ ಜನದಲ್ಲಿ ಕದ್ದವರ್ಯಾರು ಅಂತ ನಮ್ಮನ್ನ ಕೇಳಿದ್ರೆ ಹೇಗಪ್ಪ? ಎಂದು ಕುಟುಕಿದ್ದಾರೆ.

ಇದರ ಬೆನ್ನೆಲ್ಲೇ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಶ್ರೀಮಂತ ಪಾಟೀಲ್ ಹೃದಯದ ಕಾಯಿಲೆ ಎಂದು ಸುಳ್ಳು ಹೇಳಿ 300 ಕಿ.ಮೀ ದೂರದ ಚೆನ್ನೈಗೆ ಹೋಗಿದ್ದರು. ಕೊನೆಗೆ ಅಲ್ಲಿಂದ ಹೃದ್ರೋಗ ತಜ್ಞರೇ ಇಲ್ಲದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ನಾಟಕಗಳೆಲ್ಲ ಆಪರೇಷನ್ ಕಮಲದ ಭಾಗವಲ್ಲವೇ? ಇದಕ್ಕೂ ಬಿಜೆಪಿಗೂ ಸಂಬಂಧವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮೊದಲು ಆಡಿಯೋದಲ್ಲಿನ ಹೇಳಿಕೆ ತಮ್ಮದೇ ಎಂದು ಒಪ್ಪಿಕೊಂಡಿದ್ದ ಯಡಿಯೂರಪ್ಪ ಅವರು, ಅಮಿತ್ ಶಾ ತರಾಟೆಗೆ ತಗೊಂಡ ಮೇಲೆ ವರಸೆ ಬದಲಿಸಿದ್ದಾರೆ. ಇದರಿಂದಾಗಿಯೇ ಅಮಿತ್ ಶಾ ನಿರ್ದೇಶನದಂತೆಯೇ ಸರ್ಕಾರವನ್ನು ಬೀಳಿಸಲಾಗಿದೆ ಎಂಬ ಯಡಿಯೂರಪ್ಪನವರ ಹೇಳಿಕೆ ಸತ್ಯ ಎಂದು ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಬಿಎಸ್‌ವೈ ಕಾಲೆಳೆದಿದ್ದಾರೆ.

Trending News