ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರಾಜ್ಯದಲ್ಲೇ ಮೊದಲು ಜಾರಿ

ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು.  

Last Updated : Aug 15, 2020, 03:44 PM IST
ನೂತನ ರಾಷ್ಟ್ರೀಯ ಶಿಕ್ಷಣ  ನೀತಿ: ರಾಜ್ಯದಲ್ಲೇ ಮೊದಲು ಜಾರಿ title=

ರಾಮನಗರ: ಕೇಂದ್ರ ಸರಕಾರ ರೂಪಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ  ನೀತಿಯನ್ನು ಕರ್ನಾಟಕವೇ ಮೊತ್ತ ಮೊದಲಿಗೆ ಜಾರಿ ಮಾಡುವ ರಾಜ್ಯವಾಗಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana) ಹೇಳಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶನಿವಾರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರೆವೇರಿಸಿ ಭಾಷಣ ಮಾಡಿದ ಅವರು, ಇಡೀ ದೇಶದ ದಿಕ್ಸೂಚಿಯನ್ನೇ ಬದಲಿಸುವ ಶಕ್ತಿ ಇರುವ ಹಾಗೂ ಶೈಕ್ಷಣಿಕ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಕ್ಕೆ ಹೊಸ ನೀತಿಯೂ ಮತ್ತಷ್ಟು ಬಲ ತುಂಬಲಿದೆ. ಹೀಗಾಗಿ ಈ ನೀತಿಯನ್ನು ಮೊತ್ತ ಮೊದಲು ಅಂಗೀಕರಿಸಿದ ರಾಜ್ಯ ಕರ್ನಾಟಕವೇ ಆಗಿದೆ ಎಂದು ಹೇಳಿದರು.

ಹೊಸ ನೀತಿಯ ಕರಡು ಪ್ರತಿ ಸಿಕ್ಕಿದ ಕೂಡಲೇ ಸರಕಾರ ಇದಕ್ಕೆ ಸಂಬಂಧಿಸಿ ಕಾರ್ಯಪಡೆಯನ್ನು ರಚನೆ ಮಾಡಿತ್ತು. ಕೇಂದ್ರ ನೀತಿಯನ್ನು ಪ್ರಕಟಿಸಿದ ಮೇಲೆ ಕಾರ್ಯಪಡೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ನೀತಿಯ ಜಾರಿಯ ಬಗ್ಗೆ ಆದಷ್ಟು ಬೇಗ ಈ ಕಾರ್ಯಪಡೆ ವರದಿ ನೀಡಲಿದೆ ಎಂದು ಡಿಸಿಎಂ ನುಡಿದರು.

ಉನ್ನತ ಶಿಕ್ಷಣದಲ್ಲಿ ಸುಧಾರಣೆ ಪರ್ವ:
ನಮ್ಮ ರಾಜ್ಯವನ್ನು ಕಟ್ಟುವುದರಲ್ಲಿ ಉನ್ನತ ಶಿಕ್ಷಣದ ಪಾತ್ರ ಸಾಕಷ್ಟಿದೆ. ಈ ಕಾರಣಕ್ಕಾಗಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಸರಕಾರ ಮುಂದಾಗಿದೆ. ಕಳೆದ ಒಂದು ವರ್ಷದಲ್ಲಿ ಅನೇಕ ಗುರುತರ ಸುಧಾರಣೆಗಳನ್ನು ತರಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ಗಣಕೀಕರಣವಾಗಿದೆ. ’ಇ-ಆಫೀಸ್’ ಅಸ್ತಿತ್ವಕ್ಕೆ ಬಂದಿದ್ದು, ಅದರ ಮೂಲಕ ಎಲ್ಲ ವ್ಯವಹಾರಗಳು ನಡೆಯುತ್ತಿವೆ. ಜತೆಗೆ, ಪ್ರತಿಷ್ಟಿತ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯಕ್ಕೆ ಆರ್ಥಿಕ, ಆಡಳಿತಾತ್ಮಕ, ಶೈಕ್ಷಣಿಕ ಸ್ವಾಯತ್ತತೆ ನೀಡಲು ಡಾ. ಎಸ್. ಸಡಗೋಪನ್ ಅವರ ನೇತೃತ್ವದ ಸಮಿತಿ ವರದಿ ನೀಡಿದೆ. ಆ ವರದಿಯನ್ನು ಸರಕಾರ ಜಾರಿ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಕೋವಿಡ್ ಬಿಕ್ಕಟ್ಟಿನಲ್ಲಿ ವಿದ್ಯಾರ್ಥಿಗಲಿಗೆ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಂಡಿತ್ತು.  ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಇಲಾಖೆಯು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ಒಟ್ಟು 69,000 ಆನ್’ಲೈನ್ ತರಗತಿಗಳನ್ನು ನಡೆಸಲಾಗಿದೆ. 12,500 ವಿಡಿಯೋ ತರಗತಿಗಳನ್ನು ಜ್ಞಾನ ನಿಧಿ ಯುಟ್ಯೂಬ್ ಚಾನೆಲ್’ನಲ್ಲಿ ಅಪ್’ಲೋಡ್ ಮಾಡಲಾಗಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಸಿಇಟಿ  ಪರೀಕ್ಷೆಗೆ  ಸಜ್ಜುಗೊಳಿಸಲು ನೆರವು ನೀಡಲಾಗಿತ್ತು. ಹಾಗೆಯೇ, ಕೋವಿಡ್-19 ನಡುವೆಯೂ ರಾಜ್ಯಾದ್ಯಂತ ಈ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. 1,94,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೋವಿಡ್ ಪಾಸಿಟೀವ್ ಬಂದಿದ್ದ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಹಾಜರಾಗಿದ್ದರು ಎಂದು ಉಪ ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.

ಸೋಂಕಿನಿಂದ ಆತಂಕಗೊಂಡಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಸರಕಾರದ ಈ ದಿಟ್ಟ ನಡೆಯಿಂದ ಅನುಕೂಲವಯಿತು. ದೇಶಕ್ಕೆ ಸಿಇಟಿಯನ್ನು ಪರಿಚಯಿಸಿದ ಕರ್ನಾಟಕವೂ ಬಿಕ್ಕಟ್ಟಿ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಹೇಗೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿತು ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

ಮುಂದೊನ ದಿನಗಳಲ್ಲಿ ಮತ್ತಷ್ಟು ಸುಧಾರಣಾ ಕ್ರಮಗಳು ಉನ್ನತ ಶಿಕ್ಷಣ ಇಲಾಖೆಯಲ್ಲಿ ಜಾರಿಗೆ ಬರಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Trending News