ಬೆಂಗಳೂರು: ಸಾಮಾನ್ಯವಾಗಿ ರಾಜಕಾರಣಿಗಳ, ನಟರ ಹುಟ್ಟುಹಬ್ಬಗಳನ್ನು ಅವರ ಅಭಿಮಾನಿಗಳು ಹಣ್ಣುಹಂಪಲು ಹಂಚುವ ಮೂಲಕವೊ, ಕೇಕ್ ಕತ್ತರಿಸುವ ಮೂಲಕವೋ, ಬಡವರಿಗೆ ಬಟ್ಟೆ ನೀಡುವ ಮೂಲಕವೋ ಆಚರಿಸುತ್ತಾರೆ. ಆದರೆ, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿಗಳು ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ಅದೇ `ಕುಮಾರಣ್ಣ ಬಾಂಡ್'!
ಇದೇ ಡಿ.16ರಂದು ಎಚ್.ಡಿ ಕುಮಾರಸ್ವಾಮಿ ಅವರು 59ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರ ಅಂಗವಾಗಿ ಅವರ ಅಭಿಮಾನಿಗಳಾದ ರಾಜ್ಯ ಯುವ ಜನತಾದಳದ ಉಪಾಧ್ಯಕ್ಷ ಸೈಯ್ಯದ್ ಶಾಹಿದ್ ಮತ್ತು ಬೆಂಗಳೂರು ನಗರ ಯುವ ಜನತಾದಳದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ ಕುಮಾರಣ್ಣ ಬಾಂಡ್ ಯೋಜನೆಯನ್ನು ಪ್ರಯೋಜಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯ, ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ ತಾಲೂಕುಗಳಲ್ಲಿ ಇದೇ ಡಿ.16ರಂದು ಜನಿಸುವ ಮಕ್ಕಳಿಗೆ ತಲಾ 5000 ರೂ.ಗಳ ವಿಶೇಷ ಬಾಂಡ್ ಸೌಲಭ್ಯವನ್ನು ಒದಗಿಸಲು ಮುಂದಾಗಿರುವ ಇವರು, ಈ ವಿಮಾ ಯೋಜನೆಗೆ `ಕುಮಾರಣ್ಣ ಬಾಂಡ್' ಎಂದು ನಾಮಕರಣ ಮಾಡಿದ್ದಾರೆ.
ಕುಮಾರಸ್ವಾಮಿ ಅವರ ಹುಟ್ಟಹಬ್ಬದ ದಿನವಾದ ಡಿ.16ರಂದು ಜನಿಸಿದ ಮಕ್ಕಳಿಗಷ್ಟೇ ಈ ಬಾಂಡ್ ಲಭ್ಯವಾಗಲಿದ್ದು, ಬಿಪಿಎಲ್ ಕಾರ್ಡ್ ಇರುವ ಕುಟುಂಬಗಳು ಮಾತ್ರ ಈ ಯೋಜನೆಗೆ ಅರ್ಹರು.