ಕರ್ನಾಟಕ ಕಾನೂನು ವಿವಿ ವಿರುದ್ಧ ಪಟ್ಟು ಸಡಿಲಿಸದ ವಿದ್ಯಾರ್ಥಿಗಳು, ಮುಂದುವರೆದ ಅಹೋರಾತ್ರಿ ಧರಣಿ ಸತ್ಯಾಗ್ರಹ

ಆಫ್ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

Written by - Manjunath N | Last Updated : Dec 7, 2021, 04:08 AM IST
  • ಕರ್ನಾಟಕ ಕಾನೂನು ವಿವಿ ಆಫ್ಲೈನ್ ವಿಧಾನವೊಂದನ್ನು ಹೊರತುಪಡಿಸಿ ಉಳಿದ ಮೂರು ಮಾದರಿಯನ್ನು ತನ್ನ ಪರೀಕ್ಷಾ ಮೌಲ್ಯಮಾಪನದಲ್ಲಿ ಅನುಸರಿಸಬೇಕೆಂದು ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಪಟ್ಟು ಹಿಡಿದಿದ್ದಾರೆ.
  • ಈಗ ಬಾರ್ ಕೌನ್ಸಿಲ್ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಧ್ವಂದ್ವ ಧೋರಣೆಯನ್ನು ಅನುಸರಿಸುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
 ಕರ್ನಾಟಕ ಕಾನೂನು ವಿವಿ ವಿರುದ್ಧ ಪಟ್ಟು ಸಡಿಲಿಸದ ವಿದ್ಯಾರ್ಥಿಗಳು, ಮುಂದುವರೆದ ಅಹೋರಾತ್ರಿ ಧರಣಿ ಸತ್ಯಾಗ್ರಹ  title=
Photo Courtesy: Twitter

ಹುಬ್ಬಳ್ಳಿ: ಆಫ್ಲೈನ್ ಮಾದರಿಯಲ್ಲಿ ಪರೀಕ್ಷೆ ನಡೆಸುವುದನ್ನು ವಿರೋಧಿಸಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿನ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯ ಸೇರಿದಂತೆ ದೇಶದ ಹಲವು ವಿವಿಗಳು ವಿದ್ಯಾರ್ಥಿಗಳಿಗೆ ಸೆಮಿನಾರ್, ಆಂತರಿಕ ಮೌಲ್ಯಮಾಪನ, ಆನ್ಲೈನ್ ಪರೀಕ್ಷೆಗಳ ಮೂಲಕವಾಗಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ಮಾಡಿದ್ದವು, ಆದ್ದರಿಂದ ಕರ್ನಾಟಕ ಕಾನೂನು ವಿವಿ ಆಫ್ಲೈನ್ ವಿಧಾನವೊಂದನ್ನು ಹೊರತುಪಡಿಸಿ ಉಳಿದ ಮೂರು ಮಾದರಿಯನ್ನು ತನ್ನ ಪರೀಕ್ಷಾ ಮೌಲ್ಯಮಾಪನದಲ್ಲಿ ಅನುಸರಿಸಬೇಕೆಂದು ವಿದ್ಯಾರ್ಥಿಗಳು ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಕಾನೂನು ವಿವಿ ಪರೀಕ್ಷೆಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್

ಈ ಹಿಂದೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಯುಜಿಸಿಯು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳನ್ನು ನಾಲ್ಕು ಪರೀಕ್ಷಾ ಮಾದರಿ ಆಧಾರದ ಮೇಲೆ ಮುಂದಿನ ತರಗತಿಗೆ ಬಡ್ತಿ ನೀಡಬೇಕೆಂದು ತಮ್ಮ ನಿಯಮಾವಳಿಗಳಲ್ಲಿ ಉಲ್ಲೇಖಿಸಿದ್ದವು.

ಇದನ್ನೂ ಓದಿ: ಕರ್ನಾಟಕ ಕಾನೂನು ವಿವಿಯ ಚೆಲ್ಲಾಟ, ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ..!

ಈಗಾಗಲೇ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿಯೂ ಕೂಡ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ನಡೆಯನ್ನು ಪ್ರಶ್ನಿಸಿದ್ದಾರೆ. ಕಳೆದ ನವೆಂಬರ್ 15 ರಂದು ನಡೆಯಬೇಕಾಗಿದ್ದ ವಿವಿ ಪರೀಕ್ಷೆಯ ವೇಳಾಪಟ್ಟಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಹೈಕೋರ್ಟ್ ಗೆ ಮೊರೆ ಹೋಗಿ ಅದಕ್ಕೆ ತಡೆ ತಂದಿದ್ದರು, ಆಗ ಹೈಕೋರ್ಟ್ನ ಏಕಸದಸ್ಯ ಪೀಠವು ಡಿಸೆಂಬರ್ 20 ರವರೆಗೆ ಯಾವುದೇ ರೀತಿಯ ಪರೀಕ್ಷೆಯನ್ನು ನಡೆಸುವಂತಿಲ್ಲ ಎಂದು ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು.

ಆದರೆ ಈ ತಡೆಯಾಜ್ಞೆಯನ್ನು ತೆರವುಗೊಳಿಸಲು ಕರ್ನಾಟಕ ಕಾನೂನು ವಿವಿ ಮತ್ತೆ ಹೈಕೋರ್ಟ್ ಗೆ ಮನವಿ ಮಾಡಿತ್ತು, ಇದರಿಂದಾಗಿ ಮುಖ್ಯನ್ಯಾಯಮೂರ್ತಿಗಳ ಪೀಠವು ಕಾನೂನು ವಿವಿಯು ಪರೀಕ್ಷೆಯನ್ನು ನಡೆಸಲು ಯಾವುದೇ ಅಭ್ಯಂತರವಿಲ್ಲ, ಆದರೆ ಅಂತಿಮ ಫಲಿತಾಂಶ ಮಾತ್ರ ವಿದ್ಯಾರ್ಥಿಗಳ ಬಡ್ತಿ ವಿಚಾರಣೆಗೆ ಸಂಬಂಧಿಸಿದ ಪ್ರಕರಣ ಮುಗಿದ ನಂತರವಷ್ಟೇ ಪ್ರಕಟಿಸಬೇಕು ಎಂದು ಹೇಳಿತ್ತು, ಇನ್ನೊಂದೆಡೆಗೆ ಬಾರ್ ಕೌನ್ಸಿಲ್ ಕೂಡ ಪರೀಕ್ಷೆಯನ್ನು ನಡೆಸದೆ ಕಾನೂನು ವಿವಿ ಪದವಿಯನ್ನು ಪರಿಗಣಿಸುವುದಿಲ್ಲ ಎಂದು ವಿಚಾರಣೆ ವೇಳೆ ಹೇಳಿತ್ತು. ಈಗ ಪ್ರಕರಣ ಸುದೀರ್ಘ ವಿಚಾರಣೆ ಮತ್ತೆ ಮಾರ್ಚ್ ತಿಂಗಳಲ್ಲಿ ಬರಲಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದ ಕರ್ನಾಟಕ ಕಾನೂನು ವಿವಿಯ ಅಧಿಸೂಚನೆಗಳು..!

ಈಗ ಬಾರ್ ಕೌನ್ಸಿಲ್ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಧ್ವಂದ್ವ ಧೋರಣೆಯನ್ನು ಅನುಸರಿಸುತ್ತಿವೆ, ಈಗಾಗಲೇ ದೇಶದ ಹಲವಾರು ವಿವಿಗಳು ಆಫ್ ಲೈನ್ ಪರೀಕ್ಷೆಯನ್ನು ನಡೆಸದೆ ಉಳಿದ ಮೂರು ಮಾದರಿಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಿ ಅವರನ್ನು ಮುಂದಿನ ತರಗತಿಗಳಿ ಬಡ್ತಿ ಮಾಡಿವೆ. ಆದರೆ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ಮಾತ್ರ ವಿದ್ಯಾರ್ಥಿಗಳ ಹಿತರಕ್ಷಣೆ ಕಾಯುವ ಬದಲು ದ್ವೇಷ ಸಾಧಿಸುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

ಕರ್ನಾಟಕ ಕಾನೂನು ವಿವಿ ನಡೆಯ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿದ ಎಲ್.ಎಲ್.ಬಿ ಮೂರನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ಮೋಹನ್ ಕುಮಾರ್ ಮತ್ತು ಹರೀಶ್ ಅವರು 'ವಿಶ್ವವಿದ್ಯಾನಿಲಯದ ಕುಲಪತಿಗಳು ಆಫ್ಲೈನ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಹಠ ಸಾಧಿಸುತ್ತಿರುವುದೇಕೆ? ಇದು ನಿಜಕ್ಕೂ ಅರ್ಥವಾಗದ ಸಂಗತಿ' ಎನ್ನುತ್ತಾರೆ.

'ದೇಶದ ಹಲವು ವಿವಿಗಳು ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಈಗಾಗಲೇ ಮುಂದಿನ ತರಗತಿಗೆ ಬಡ್ತಿ ಮಾಡಿವೆ.ಈಗ ನಾವು ಮೂರನೇ ಸೆಮಿಸ್ಟರ್ ಗೆ ಪ್ರವೇಶಾತಿಯನ್ನು ಪಡೆದುಕೊಂಡು ಸುಮಾರು ಒಂದು ತಿಂಗಳು ಆಗುತ್ತಾ ಬಂತು. ಆದರೆ ಇದುವರೆಗೂ ಕೂಡ ಯಾವುದೇ ತರಗತಿಗಳು ಆರಂಭವಾಗಿಲ್ಲ, ಈಗಾಗಲೇ ನಮ್ಮ ಅಕಾಡೆಮಿಕ್ ವರ್ಷ ಉಳಿದೆಲ್ಲಾ ವಿಶ್ವವಿದ್ಯಾಲಯಗಳಿಗಿಂತ ಹಿಂದುಳಿದೆ, ಆದ್ದರಿಂದ ಕುಲಪತಿಗಳು ತಮ್ಮ ಆದೇಶದಿಂದ ಹಿಂದೆ ಸರಿಯಬೇಕು, ಆ ಮೂಲಕ ವಿದ್ಯಾರ್ಥಿಗಳ ಹಿತವನ್ನು ಕಾಪಾಡಬೇಕು. ಒಂದು ವೇಳೆ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ನಮ್ಮ ಈ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಾಗೆಯೇ ಮುಂದುವರೆಸುತ್ತೇವೆ' ಎನ್ನುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News