ಪ್ರಧಾನಿ ಮೋದಿ ವಿರುದ್ಧ ‘ರಹಸ್ಯ ಮಾತುಕತೆ’ಯ ಗಂಭೀರ ಆರೋಪ ಮಾಡಿದ ಸಿಎಂ ಸಿದ್ದರಾಮಯ್ಯ

ರಾಜ್ಯಗಳ ಪರಿಸ್ಥಿತಿ ಏನಾದರೂ ಸರಿಯೇ ಕೇಂದ್ರ ಸರ್ಕಾರದ ಪಾಲಿಗೆ ಹೆಚ್ಚಿನ ತೆರಿಗೆ ಹಣ ಉಳಿಸಿಕೊಳ್ಳಬೇಕು ಎನ್ನುವ ತಮ್ಮ ಕುತಂತ್ರ ಫಲಿಸದೆ ಹೋದಾಗ ಅನಿವಾರ್ಯವಾಗಿ ಪ್ರಧಾನಿ ಮೋದಿ ತಮ್ಮ ಅವಧಿಯ ಪ್ರಥಮ ಬಜೆಟ್‌ ಮಂಡನೆಗೂ 48 ಗಂಟೆಗಳ ಮುನ್ನವಷ್ಟೇ ಆಯವ್ಯಯವನ್ನು ತಿದ್ದಿ ಬರೆಯುವ ಕೆಲಸಕ್ಕೆ ಕೈಹಾಕಿದ್ದರು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Written by - Puttaraj K Alur | Last Updated : Jan 19, 2024, 01:32 PM IST
  • ರಾಜ್ಯಗಳಿಗೆ ಹಂಚಿಕೆಯಾದ ಹಣವನ್ನು ಗಮನಾರ್ಹವಾಗಿ ಕಡಿತಗೊಳಿಸುವ ಉದ್ದೇಶ
  • ಭಾರತೀಯ ಹಣಕಾಸು ಆಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ 2014ರಿಂದ ರಹಸ್ಯ ಮಾತುಕತೆ
  • ಇದು ಕಳವಳಕಾರಿ ಬೆಳವಣಿಗೆ ಎಂದು ಗಂಭೀರ ಆರೋಪ ಮಾಡಿದ ಸಿಎಂ ಸಿದ್ದರಾಮಯ್ಯ
ಪ್ರಧಾನಿ ಮೋದಿ ವಿರುದ್ಧ ‘ರಹಸ್ಯ ಮಾತುಕತೆ’ಯ ಗಂಭೀರ ಆರೋಪ ಮಾಡಿದ ಸಿಎಂ ಸಿದ್ದರಾಮಯ್ಯ    title=
ಪಿಎಂ ವಿರುದ್ಧ ಸಿಎಂ ಗಂಭೀರ ಆರೋಪ!

ಬೆಂಗಳೂರು: ರಾಜ್ಯಗಳಿಗೆ ಹಂಚಿಕೆಯಾದ ಹಣವನ್ನು ಗಮನಾರ್ಹವಾಗಿ ಕಡಿತಗೊಳಿಸುವ ಏಕೈಕ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು 2014ರಿಂದ ಭಾರತೀಯ ಹಣಕಾಸು ಆಯೋಗದೊಂದಿಗೆ ರಹಸ್ಯ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ಕಳವಳಕಾರಿ ಬೆಳವಣಿಗೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ರಾಜ್ಯಗಳ ತೆರಿಗೆ ಪಾಲಿನ ಹಣವನ್ನು ಪ್ರಸ್ತಾವಿತ 42% ನಿಂದ 32%ಗೆ ಇಳಿಸಲು ಕೇಂದ್ರ ಬಿಜೆಪಿ ಸರ್ಕಾರವು ತನ್ನ ಹಿಂದಿನ ಆಡಳಿತಾವಧಿಯಲ್ಲಿ ನಡೆಸಿದ್ದ ಸಂಚು ಕೂಡ ಬಯಲಾಗಿದೆ. ರಾಜ್ಯಗಳ ಪರಿಸ್ಥಿತಿ ಏನಾದರೂ ಸರಿಯೇ ಕೇಂದ್ರ ಸರ್ಕಾರದ ಪಾಲಿಗೆ ಹೆಚ್ಚಿನ ತೆರಿಗೆ ಹಣ ಉಳಿಸಿಕೊಳ್ಳಬೇಕು ಎನ್ನುವ ತಮ್ಮ ಕುತಂತ್ರ ಫಲಿಸದೆ ಹೋದಾಗ ಅನಿವಾರ್ಯವಾಗಿ ತಮ್ಮ ಅವಧಿಯ ಪ್ರಥಮ ಬಜೆಟ್‌ ಮಂಡನೆಗೂ 48 ಗಂಟೆಗಳ ಮುನ್ನವಷ್ಟೇ ಆಯವ್ಯಯವನ್ನು ತಿದ್ದಿ ಬರೆಯುವ ಕೆಲಸಕ್ಕೆ ಕೈಹಾಕಿದ್ದರು ಎನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಟೀಕಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿರುವ ಭಾರತದ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನೇ ಬುಡಮೇಲು ಮಾಡುವಂತಹ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗೋಪ್ಯ ಅಜೆಂಡಾವನ್ನು ನೀತಿ ಆಯೋಗದ ಸಿಇಒ ಬಿವಿಆರ್‌ ಸುಬ್ರಮಣ್ಯಂ ಅವರು ಹೊರಗೆಡವಿದ್ದಾರೆ.  ‘ಅಲ್‌-ಜಝೀರಾ’ದಲ್ಲಿ ಪ್ರಕಟವಾಗಿರುವ ಲೇಖನ ನಾನು ಕಳೆದ 10 ವರ್ಷಗಳಿಂದ ಹೇಳುತ್ತಾ ಬಂದಿರುವುದನ್ನು ದೃಢೀಕರಿಸಿದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ

ಬಜೆಟ್‌ ಸಿದ್ಧತೆಯಲ್ಲಿ ಖುದ್ದು ಪಾಲ್ಗೊಂಡಿದ್ದ ಸುಬ್ರಮಣ್ಯಂ ಅವರು ಹೇಳಿರುವ ಕಟು ಸತ್ಯಗಳು ದೇಶದ ಅಸಂಖ್ಯಾತ ಬಡಜನರ ದೈನಂದಿನ ಬದುಕು, ಭವಿಷ್ಯವನ್ನು ಪ್ರಧಾನಿ ಮೋದಿಯವರು ಎಂತಹ ಕರಿನೆರಳಿಗೆ ದೂಡಿದ್ದರು ಮತ್ತು ತಮ್ಮ ಕುತ್ಸಿತ ಕಾರ್ಯಸಾಧನೆಗಾಗಿ ಅರ್ಥ ಸಚಿವರು, ಅರ್ಥ ಸಚಿವಾಲಯವನ್ನೇ ಹೊರಗಿಟ್ಟು ಹೀಗೆ ಆತುರಾತುರವಾಗಿ ರೂಪಿಸಿದ ಬಜೆಟ್‌ನಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಮೋದಿಯವರು ಎಳ್ಳುನೀರು ಬಿಟ್ಟಿದ್ದರು ಎನ್ನುವುದನ್ನು ತಿಳಿಸುತ್ತದೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ಉದಾಹರಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣದಂತಹ ಆದ್ಯತಾ ವಲಯಕ್ಕೆ ನಿಗದಿಪಡಿಸಲಾಗಿದ್ದ 36,000 ಕೋಟಿ ರೂ. ಅನುದಾನವನ್ನು ಸರಾಸರಿ ಅರ್ಧಕ್ಕೆ ಇಳಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳು ಎರಡನೆಯ ದರ್ಜೆಯ ನಾಗರಿಕರೇನೋ ಎನ್ನುವಂತಹ ಅನುಮಾನ ಹುಟ್ಟಿಸುವ ಧೋರಣೆಯನ್ನು ಅನುಸರಿಸಿದರು. ಇಷ್ಟು ಮಾತ್ರವೇ ಅಲ್ಲ, ಹಿಂದಿನ ವಿತ್ತೀಯ ಅವಧಿಯಲ್ಲಿ ಶಾಲಾ ಶಿಕ್ಷಣಕ್ಕೆ ನೀಡಲಾಗಿದ್ದ ಅನುದಾನದಲ್ಲಿ ಶೇ.18.4ರಷ್ಟು ಇಳಿಕೆ ಮಾಡಿ ಮಕ್ಕಳ ಭವಿಷ್ಯವನ್ನು ಚಿವುಟಿಹಾಕಲಾಗಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿಯವರ ಬಂಡವಾಳ ಬಯಲು ಮಾಡಿರುವ ಸುಬ್ರಮಣ್ಯಂ ಅವರು ಕೇಂದ್ರ ಬಿಜೆಪಿ ಸರ್ಕಾರವು ಹೇಗೆ ಆಯವ್ಯಯೇತರ ಸಾಲದ ಮೇಲೆ ಅವಲಂಬನೆ ಹೊಂದಿತ್ತು ಎನ್ನುವ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದು ಕೇಂದ್ರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತದೆ. ಹೀಗೆ ದಾಖಲೆಗಳಿಂದ ಸಾಲವನ್ನು ಹೊರಗಿಡುವ ಕಣ್ಕಟ್ಟಿನ ತಂತ್ರಗಳಿಂದ ಸರ್ಕಾರದ ಮೇಲಿನ ಋಣಭಾರವೇನೂ ಕಮ್ಮಿಯಾಗುವುದಿಲ್ಲ. ಅಂತಿಮವಾಗಿ ಸಾಲದ ಶೂಲೆ ಹೆಗಲಮೇಲೆ ಏರಿಯೇ ಕೂತಿರುತ್ತದೆ. ಆದರೆ ಇಂತಹ ಅಪ್ರಾಮಾಣಿಕ ಆರ್ಥಿಕ ಕಸರತ್ತುಗಳು ಸರ್ಕಾರದ ಪಾರದರ್ಶಕತೆಯ ಬಗ್ಗೆ, ಜವಾಬ್ದಾರಿಯುತ ಆಡಳಿತದ ಬಗ್ಗೆ ಗಾಢ ಸಂಶಯವನ್ನು ಉಂಟು ಮಾಡುತ್ತವೆ. ಇಂತಹ ಅಪ್ರಾಮಾಣಿಕ ನಡೆಗಳ ಪರಿಣಾಮ ಏನಾಗಿರುತ್ತದೆ ಎನ್ನುವುದನ್ನು ಕೇಂದ್ರದ ಅರ್ಥವ್ಯವಸ್ಥೆಗೆ ಕನ್ನಡಿ ಹಿಡಿದಿರುವ 2022ರ ಮಹಾಲೇಖಪಾಲರ ವರದಿ ವಿವರಿಸುತ್ತದೆ. ವರದಿಯ ಒಂದು ಪ್ರಮುಖ ಅಂಶವೆಂದರೆ, ಸರ್ಕಾರದ ಅಡಿಯಲ್ಲಿ ಬರುವ ವಿವಿಧ ಸಂಸ್ಥೆಗಳು 1.69 ಲಕ್ಷ ಕೋಟಿ ರೂ.ನಷ್ಟು ಸಾಲವನ್ನು ಮರೆಮಾಚಿರುವುದನ್ನು ಹೊರಗೆಡವಿರುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಖರ್ಗೆ ಫ್ಯಾಮಿಲಿ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ

ರಾಜ್ಯ ಸರ್ಕಾರಗಳ ಜೊತೆ ಹಂಚಿಕೊಳ್ಳದ ಸೆಸ್‌ ಮತ್ತು ಸರ್ಚಾರ್ಜ್‌ಗಳನ್ನು ನಿರಂತರವಾಗಿ ಏರಿಸುತ್ತಲೇ ಬಂದಿರುವ ಕೇಂದ್ರ ಸರ್ಕಾರದ ನಡೆಯ ಹಿಂದೆ ರಾಜ್ಯಗಳನ್ನು ಅವುಗಳಿಗೆ ದಕ್ಕಬೇಕಿರುವ ನ್ಯಾಯಯುತ ಹಕ್ಕುಗಳಿಂದ ವಂಚಿತವಾಗಿಸುವ ಹುನ್ನಾರವಿದೆ. ಆಯವ್ಯಯ ಮತ್ತು ಆಡಳಿತದ ಕುರಿತ ಸಂಶೋಧನಾ ಸಂಸ್ಥೆಯಾದ ‘ಆಯವ್ಯಯ ಮತ್ತು ಆಡಳಿತ ಹೊಣೆಗಾರಿಕಾ ಕೇಂದ್ರ’ದ ಮಾಲಿನಿ ಚಕ್ರವರ್ತಿಯವರು ಹೇಳಿರುವಂತೆ ಕೇಂದ್ರದ ಈ ನಡೆಯ ಹಿಂದೆ ರಾಜ್ಯಗಳ ಪಾಲನ್ನು ಕಸಿದು ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ತಂತ್ರವಿರುವುದು ಭಾಸವಾಗುತ್ತದೆ. ಕೇಂದ್ರದ ಈ ದಮನಕಾರಿ ನೀತಿಯಿಂದಾಗಿ ಒಟ್ಟು ತೆರಿಗೆಯಲ್ಲಿ ಸೆಸ್‌ ಮತ್ತು ಸರ್ಚಾರ್ಜ್‌ಗಳ ಪಾಲು 2011-12ರಲ್ಲಿ 10.4% ಇದ್ದದ್ದು 2021-22ರ ವೇಳೆಗೆ 18.4%ಗೆ ಏರಿಕೆಯಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿವಿಆರ್‌ ಸುಬ್ರಮಣ್ಯಂ ಅವರು ಹೊರಹಾಕಿರುವ ಈ ಎಲ್ಲಾ ಕಟುಸತ್ಯಗಳು ಮತ್ತು ಅಲ್‌ ಜಝೀರಾ ಪ್ರಕಟಿಸಿರುವ ಒಳನೋಟದ ಲೇಖನ ಪ್ರಧಾನಿ ಮೋದಿಯವರ ಸರ್ಕಾರವು ಒಕ್ಕೂಟ ಆರ್ಥಿಕ ವ್ಯವಸ್ಥೆಯೆಡೆಗೆ ಹೊಂದಿರುವ ಅನರ್ಥಕಾರಿ ಧೋರಣೆಗಳನ್ನು ಬಹಿರಂಗಗೊಳಿಸುತ್ತದೆ. ಇಂತಹ ಸಾರ್ವತ್ರಿಕ ಸಂಗತಿಗಳನ್ನು ಸಂವಿಧಾನಬದ್ಧವಾಗಿ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿರುವ ನಾವೆಲ್ಲರೂ ಸಾರ್ವಜನಿಕವಾಗಿಯೇ ಚರ್ಚಿಸಬೇಕಾಗಿರುವುದು ಅತ್ಯಂತ ತುರ್ತಾಗಿದೆ. ಇದು ಹೀಗೆ ಮುಂದುವರಿದರೆ ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳು ಕೇಂದ್ರದ ಕುಟಿಲ ಆರ್ಥಿಕ ಕ್ರಮಗಳ ಹೊರೆಯನ್ನು ಹೊರುತ್ತಲೇ ಹೋಗಬೇಕಾಗುತ್ತದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಈ ನಾಡಿನ ನನ್ನ ಪ್ರಭುಗಳಿಗೆ ಮೋಸ ಮಾಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಿಜೆಪಿ ಸರ್ಕಾರವು ಭಾರತದ ಒಕ್ಕೂಟದ ಎಲ್ಲಾ ರಾಜ್ಯಗಳೊಟ್ಟಿಗೆ ತನ್ನ ಸಂಪನ್ಮೂಲವನ್ನು ನ್ಯಾಯುತವಾಗಿ, ಸಮತೆಯ ತತ್ವದಡಿಯಲ್ಲಿ ಹಂಚಿಕೊಳ್ಳಲು ಇನ್ನೂ ಕಾಲಮಿಂಚಿಲ್ಲ. ಆ ಮೂಲಕ ತನ್ನನ್ನು ತಾನೇ ಅದು ತಹಬದಿಗೆ ತಂದುಕೊಳ್ಳಬೇಕಿದೆ. ತೆರಿಗೆಯ ಪಾಲು, ಸಂಪನ್ಮೂಲ ಹಂಚಿಕೆಯ ವಿಚಾರವಾಗಿ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲಾ ರಾಜ್ಯಗಳು ಎತ್ತುತ್ತಿರುವ ನ್ಯಾಯಯುತ ದನಿಯನ್ನು ಹತ್ತಿಕ್ಕುವ ಯತ್ನವನ್ನು ಕೇಂದ್ರವು ಇನ್ನಾದರೂ ಕೈಬಿಡಲಿ. ತನ್ನ ವಿತ್ತೀಯ ದುರ್ನಡತೆಯನ್ನು ಸರಿಪಡಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌‌ಗೆ ಜಾಮೀನು ಪ್ರಕರಣ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News