‘ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ, ಉಳಿದವರ ಕಣ್ಣಿಗೆ ಸುಣ್ಣ’: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯನವರು ಹೇಳಿದ್ದ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಬೊಗಳೆ ಎಂದು ಸಾಬೀತುಪಡಿಸಿ, ಈಗ “ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ, ಉಳಿದವರ ಕಣ್ಣಿಗೆ ಸುಣ್ಣ” ಎಂಬ ನೀತಿ ಪಾಲಿಸುತ್ತಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ನಂಬಿಕೆ ದ್ರೋಹವೆಂದು ಬಿಜೆಪಿ ಟೀಕಿಸಿದೆ.

Written by - Puttaraj K Alur | Last Updated : Dec 13, 2023, 05:34 PM IST
  • ಕಾಂಗ್ರೆಸ್ ಸರ್ಕಾರ 6 ತಿಂಗಳ ಆಡಳಿತದಲ್ಲಿ ಜನವಿರೋಧಿ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ
  • ಭ್ರಷ್ಟಾಚಾರ, ಅರಾಜಕತೆ & ತುಷ್ಟೀಕರಣವನ್ನೇ ಮೂಲಮಂತ್ರವನ್ನಾಗಿಸಿಕೊಂಡಿರುವ ATMSarkara
  • ಕಾಂಗ್ರೆಸ್ ಸರ್ಕಾರ ಜನತೆಯ ಹಿತವನ್ನು ಕಡೆಗಣಿಸಿ ಜನತೆಯ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದ ಬಿಜೆಪಿ
‘ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ, ಉಳಿದವರ ಕಣ್ಣಿಗೆ ಸುಣ್ಣ’: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ  title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕೆ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಆರೂವರೆ ತಿಂಗಳ ಆಡಳಿತದಲ್ಲಿ ಸಾಬೀತುಪಡಿಸಿದ್ದು ಕೇವಲ ತಾನೊಂದು ಜನವಿರೋಧಿ ಸರ್ಕಾರ ಎಂಬುದನ್ನು ಮಾತ್ರವೆಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಆಡಳಿತದ ಪ್ರತಿ ಹಂತದಲ್ಲಿಯೂ ಭ್ರಷ್ಟಾಚಾರ, ಅರಾಜಕತೆ ಹಾಗೂ ತುಷ್ಟೀಕರಣವನ್ನೇ  ಮೂಲಮಂತ್ರವನ್ನಾಗಿಸಿಕೊಂಡಿರುವ #ATMSarkara ರಾಜ್ಯದ ಜನತೆಯ ಹಿತವನ್ನು ಸಂಪೂರ್ಣ ಕಡೆಗಣಿಸಿ ಮಾಡುತ್ತಿರುವುದು ಜನತೆಯ ರಕ್ತ ಹೀರುವ ಕೆಲಸ’ವೆಂದು ಕಿಡಿಕಾರಿದೆ.

‘ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಬೆಲೆಯೇರಿಕೆಯ ಮೂಲಕ ಆಡಳಿತ ಆರಂಭಿಸಿದ ಸಿಎಂ ಸಿದ್ದರಾಮಯ್ಯನವರು, ಚುನಾವಣೆಗೂ ಮುನ್ನ ಹೇಳಿದ್ದ ಸರ್ವಜನಾಂಗದ ಶಾಂತಿಯ ತೋಟ ಎಂಬುದನ್ನು ಬೊಗಳೆ ಎಂದು ಸಾಬೀತುಪಡಿಸಿ, ಈಗ “ಅಲ್ಪಸಂಖ್ಯಾತರ ಕಣ್ಣಿಗೆ ಬೆಣ್ಣೆ, ಉಳಿದವರ ಕಣ್ಣಿಗೆ ಸುಣ್ಣ” ಎಂಬ ನೀತಿ ಪಾಲಿಸುತ್ತಿರುವುದು ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ನಂಬಿಕೆ ದ್ರೋಹ’ವೆಂದು ಬಿಜೆಪಿ ಟೀಕಿಸಿದೆ.

‘ರಾಜ್ಯದಲ್ಲಿ ಕಂಡುಕೇಳರಿಯದ ಬರ ಆವರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಕರ್ನಾಟಕದ 240 ತಾಲೂಕುಗಳಲ್ಲಿ 240 ತಾಲೂಕುಗಳು ಸಹ ಬರಪೀಡಿತವಾಗಿವೆ ಎಂದು ಹೇಳಿದರೆ ತಪ್ಪಾಗಲಾರದು. ಕುಡಿಯಲು ನೀರಿಲ್ಲದೆ, ದುಡಿಯಲು ಉದ್ಯೋಗವಿಲ್ಲದೆ ಜನ ಸಾಗರೋಪಾದಿಯಲ್ಲಿ ಗುಳೆ ಹೋಗುತ್ತಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾಗಿದ್ದ “ಕೈ” ಸರ್ಕಾರ ಮಾಡುತ್ತಿರುವುದು ಬರೀ ಒಣ ರಾಜಕೀಯ. ರಾಜ್ಯದ ಬೊಕ್ಕಸವನ್ನು 6 ತಿಂಗಳಿನಲ್ಲಿಯೇ ದಿವಾಳಿ ಮಾಡಿರುವ ಸಿಎಂ ಸಿದ್ದರಾಮಯ್ಯರವರು, ಒಂದೆಡೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನವನ್ನು ಇದೇ ಆರ್ಥಿಕ ವರ್ಷದಲ್ಲಿ ನೀಡುತ್ತೇವೆಂದು ಘೋಷಿಸುತ್ತಾರೆ, ಮತ್ತೊಂದೆಡೆ ಬರದಿಂದ ಬಸವಳಿಯುತ್ತಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಜುಜುಬಿ 2,000 ರೂ. ಪರಿಹಾರ ಎನ್ನುತ್ತಾರೆ. ಇದು ಕಾಂಗ್ರೆಸ್‌ ರಾಜ್ಯದ ರೈತರಿಗೆ ನೀಡುತ್ತಿರುವ ಅಸಲಿ ಗೌರವ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಪ್ರಥಮ ಬಾರಿಗೆ ಶಾಸಕನಾದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿದ ಬಿಜೆಪಿ..! ಏಕೆ ಗೊತ್ತೆ..?

‘ರೈತರು ತಮ್ಮ ಹಕ್ಕುಗಳಿಗಾಗಿ, ಬೊಗಸೆ ನೀರಿಗಾಗಿ, ತುತ್ತು ಅನ್ನಕ್ಕಾಗಿ ಪ್ರತಿಭಟಿಸಿದರೆ ಅವರಿಗೆ ಲಾಠಿ, ಬೂಟಿನೇಟು ನೀಡುವ ಕಾಂಗ್ರೆಸ್‌, ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ವೇಳೆ ಸೆರೆಸಿಕ್ಕ ಭಯೋತ್ಪಾದಕರಿಗೆ ಅಮಾಯಕರು, ಬ್ರದರ್ಸ್‌ ಎಂಬ ಪಟ್ಟ ಕಟ್ಟುತ್ತದೆ. ನಾಡಿಗೆ ಅನ್ನ ಕೊಡುವ ನೇಗಿಲಯೋಗಿಗಳಾದ ರೈತರಿಗಿಂತಲೂ, ದೇಶದ್ರೋಹಿ ಭಯೋತ್ಪಾದಕರ ಮೇಲೆ ಕಾಂಗ್ರೆಸ್‌ ಸರ್ಕಾರಕ್ಕೆ ಪ್ರೀತಿ-ಪ್ರೇಮ-ವಾತ್ಸಲ್ಯ ಹೆಚ್ಚು. ಇದೊಂದು ರೈತ ವಿರೋಧಿ ಸರ್ಕಾರ’ವೆಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

‘ಸಿಎಂ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೇವಲ ರೈತ ವಿರೋಧಿ ಮಾತ್ರವಲ್ಲ, ಜೊತೆ ಜೊತೆಗೆ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಸಹ. ಪರಿಶಿಷ್ಟ ಜಾತಿ-ಪಂಗಡಗಳ ಕಲ್ಯಾಣಕ್ಕೆ ಮೀಸಲಾಗಿದ್ದ 11,500 ಕೋಟಿ ರೂ.ವನ್ನು ದುರ್ಬಳಕೆ ಮಾಡಿಕೊಂಡಿರುವುದು ಕಾಂಗ್ರೆಸ್‌ನ ಅಂತರಾಳದಲ್ಲಿ ಹುದುಗಿರುವ ದಲಿತ ವಿರೋಧಿ ಮನಸ್ಥಿತಿಯ ಪ್ರತೀಕ. ಇಂತಹ ದಲಿತ ವಿರೋಧಿ ಸರ್ಕಾರದಿಂದ ದಲಿತರ ಕಲ್ಯಾಣ ಸಾಧ್ಯವೇ..?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಿಎಂ ಸಿದ್ದರಾಮಯ್ಯರವರು ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಅನುದಾನ ಶೂನ್ಯ. ಹಿಂದುಳಿದ ವರ್ಗಗಳಿಗೆ ಚುನಾವಣೆಗೂ ಮುನ್ನ ನೀಡಿದ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸದಿರುವುದು ಹಾಗೂ ನಯಾಪೈಸೆ ಅನುದಾನ ನೀಡದಿರುವುದೇ ಕಾಂಗ್ರೆಸ್‌ ಸರ್ಕಾರ ಹಿಂದುಳಿದ ವರ್ಗಗಳಿಗೆ ನೀಡಿದ ಅಸಲಿ ಕೊಡುಗೆ. ಹಿಂದುಳಿದ ವರ್ಗಗಳ ಕಡು ವಿರೋಧಿ ಈ ಕಾಂಗ್ರೆಸ್ ಸರ್ಕಾರ. ಅಭಿವೃದ್ಧಿ ಎಂಬುದನ್ನು ಮರೀಚಿಕೆಯನ್ನಾಗಿಸಿ, ಅಸಮರ್ಥ ಆಡಳಿತವನ್ನೇ ಧ್ಯೇಯವನ್ನಾಗಿಸಿಕೊಂಡಿರುವ ಜನ ವಿರೋಧಿ, ನಾಡ ವಿರೋಧಿ, ರೈತ ವಿರೋಧಿ, ದಲಿತರ ವಿರೋಧಿ, ಹಿಂದುಳಿದ ವರ್ಗಗಳ ವಿರೋಧಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ’ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಭಜನ್‌ಲಾಲ್‌ ಶರ್ಮಾಗೆ ರಾಜಸ್ಥಾನದ ಸಿಎಂ ಪಟ್ಟ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News