ಇದು ಕಾಂಗ್ರೆಸ್ ಗೆಲುವಲ್ಲ, ಕರ್ನಾಟಕ ಮತ್ತು ಕನ್ನಡಿಗರ ಗೆಲುವು: ಸಿದ್ದರಾಮಯ್ಯ

Karnataka Assembly Election Result 2023: ರಾಜ್ಯದ ಮತದಾರರು ಬಿಜೆಪಿಯ ಹಿಂದುತ್ವದ ರಾಜಕೀಯವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷದ ಬಂಧುತ್ವದ ರಾಜಕೀಯವನ್ನು ಪುರಸ್ಕರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Written by - Puttaraj K Alur | Last Updated : May 14, 2023, 04:04 PM IST
  • ರಾಜ್ಯದಲ್ಲಿ ಧರ್ಮ ವಿಭಜನೆ, ಧರ್ಮ ದ್ವೇಷದ ಹಿಂದುತ್ವದ ರಾಜಕೀಯವನ್ನು ಮತದಾರರು ತಿರಸ್ಕರಿಸಿದ್ದಾರೆ
  • ಬಿಜೆಪಿಯ ಹಿಂದುತ್ವದ ರಾಜಕೀಯ ತಿರಸ್ಕರಿಸಿ, ಕಾಂಗ್ರೆಸ್‍ನ ಬಂಧುತ್ವದ ರಾಜಕೀಯವನ್ನು ಪುರಸ್ಕರಿಸಿದ್ದಾರೆ
  • ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುದ್ವೇಷದ ವಿರುದ್ಧದ ಜನಮತ
ಇದು ಕಾಂಗ್ರೆಸ್ ಗೆಲುವಲ್ಲ, ಕರ್ನಾಟಕ ಮತ್ತು ಕನ್ನಡಿಗರ ಗೆಲುವು: ಸಿದ್ದರಾಮಯ್ಯ    title=
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ ಕನ್ನಡಿಗರೂ ಅಭಿನಂದಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

‘ಯಾವುದೇ ಚುನಾವಣೆಯಲ್ಲಿ ಕೇವಲ ರಾಜಕೀಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ ಲಕ್ಷಾಂತರ ಸಂಖ್ಯೆಯ ಪಕ್ಷದ ಕಾರ್ಯಕರ್ತರಲ್ಲದ ಅಭಿಮಾನಿಗಳು ರಾತ್ರಿ ಹಗಲು ಶ್ರಮಪಟ್ಟಿರುತ್ತಾರೆ. ಅವರೆಲ್ಲರಿಗೂ ತುಂಬು ಹೃದಯದಿಂದ ಕೃತಜ್ಞತೆಗಳು. ಈ ಚುನಾವಣೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ನಡೆಸಿರುವ ಪ್ರಯತ್ನವನ್ನು ಮರೆಯಲಾಗದು. ಬಹಳ ಮುಖ್ಯವಾಗಿ ಕರ್ನಾಟಕದ ಚುನಾವಣಾ ಪ್ರಚಾರ ಪ್ರಾರಂಭವಾಗಿದ್ದೇ ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯಿಂದ. ಈ ಯಾತ್ರೆ ಇಡೀ ಕರ್ನಾಟಕದಲ್ಲಿ ಸಂಚಲನ ಉಂಟುಮಾಡಿತ್ತು. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಈ ಫಲಿತಾಂಶದ ಶ್ರೇಯಸ್ಸು ಅವರಿಗೂ ಸಲ್ಲುತ್ತದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Koppal Assembly Election Result 2023: ಕೊಪ್ಪಳದಲ್ಲಿ 3 ‘ಕೈ’ವಶ, 1 ‘ಕಮಲ’ ತೆಕ್ಕೆಗೆ!

‘ಈ ಫಲಿತಾಂಶ ಅನಿರೀಕ್ಷಿತ ಅಲ್ಲ. ಜನರ ಜೊತೆ ಸಂಪರ್ಕದಲ್ಲಿರುವವರಿಗೆ ಇದು ನಿರೀಕ್ಷಿತ ಫಲಿತಾಂಶ. ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ, ಕನ್ನಡ-ಕನ್ನಡಿಗ ವಿರೋಧಿ ನಿಲುವು, ದುರಾಡಳಿತ ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಜನ ರೋಸಿಹೋಗಿದ್ದರು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹೀಗೆ ಪ್ರತಿಯೊಂದು ವರ್ಗದ ಜನ ಕೂಡ ಬಿಜೆಪಿ ಪಕ್ಷದ ಸೋಲನ್ನು ಬಯಸಿದ್ದರು. 4 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕರ್ನಾಟಕ ಖಂಡಿತ 10 ವರ್ಷಗಳಷ್ಟು ಹಿಂದಕ್ಕೆ ಹೋಗಿದೆ, ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟು ಹೋಗಿದೆ. ಇವುಗಳನ್ನೆಲ್ಲ ಹಳಿಗೆ ಕರೆತರುವ ಪ್ರಯತ್ನವನ್ನು ನಾವು ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ರಾಜ್ಯದಲ್ಲಿ ಧರ್ಮ ವಿಭಜನೆ ಮತ್ತು ಧರ್ಮ ದ್ವೇಷದ ಹಿಂದುತ್ವದ ರಾಜಕೀಯವನ್ನು ಮತದಾರರು ತಿರಸ್ಕರಿಸಿದ್ದಾರೆ. ರಾಜ್ಯದ ಮತದಾರರು ಬಿಜೆಪಿಯ ಹಿಂದುತ್ವದ ರಾಜಕೀಯವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷದ ಬಂಧುತ್ವದ ರಾಜಕೀಯವನ್ನು ಪುರಸ್ಕರಿಸಿದ್ದಾರೆ. ಈ ಫಲಿತಾಂಶ ಕೇವಲ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುದ್ವೇಷದ ವಿರುದ್ಧದ ಜನಮತ ಮಾತ್ರ ಅಲ್ಲ, ಇದು ಜೆಡಿಎಸ್ ಪಕ್ಷದ ಸ್ವಾರ್ಥ ಮತ್ತು ಅವಕಾಶವಾದಿ ರಾಜಕಾರಣದ ವಿರುದ್ಧದ ಜನಮತ ಕೂಡ ಹೌದು’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಇದನ್ನೂ ಓದಿಒಂದು ಮತದ ಅಂತರದಿಂದ ಸೋತಿದ್ದ ಅಭ್ಯರ್ಥಿಗೆ ಈ ಬಾರಿ 59 ಸಾವಿರ ಅಂತರದ ಗೆಲುವು

‘ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಮ್ಮ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ರಾಜ್ಯದ ಜನತೆ ಇನ್ನು ನೆಮ್ಮದಿಯಿಂದ ಇರಬಹುದು. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡ ನಮ್ಮ ಗ್ಯಾರಂಟಿ. ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗಾಗಿ ದುಡಿದ ಪಕ್ಷದ ಕಾರ್ಯಕರ್ತರಿಗೂ, ಮುಖಂಡರಿಗೂ, ನಾಯಕರಿಗೂ ಹಾಗೂ ಮತನೀಡಿ ಆಶೀರ್ವದಿಸಿದ ಎಲ್ಲಾ ಮತದಾರ ಬಂಧುಗಳಿಗೂ ಮತ್ತೊಮ್ಮೆ ಧನ್ಯವಾದಗಳು. ನಾಡಿನ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News