ಹಾಸನದಲ್ಲಿ ಮತ ಬೇಟೆಗೆ ಆಗಮಿಸುತ್ತಿದೆ ಘಟಾನುಘಟಿ ನಾಯಕರ ದಂಡು

Karnataka assembly Election: ಜೆಡಿಎಸ್ ಭದ್ರಕೋಟೆ ಎಂದು ಬಿಂಬಿತವಾಗಿರುವ ಜಿಲ್ಲೆಯಲ್ಲಿ ಹಿಡಿತ ಕಾಯ್ದುಕೊಳ್ಳಲು ವರಿಷ್ಠರು ರಾಜಕೀಯ ತಂತ್ರ ಪ್ರಯೋಗಿಸುತ್ತಿದ್ದು, ಅರಸೀಕೆರೆ, ಅರಕಲಗೂಡು ಕ್ಷೇತ್ರಕ್ಕೆ ಬೇರೆ ಪಕ್ಷದ ಪ್ರಬಲ ಅಭ್ಯರ್ಥಿಗಳನ್ನು ಪಕ್ಷಕ್ಕೆ ಕರೆ ತಂದು ಟಿಕೆಟ್ ನೀಡಿದೆ. ಉಳಿದ ಕ್ಷೇತ್ರದಲ್ಲೂ ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ.

Written by - Yashaswini V | Last Updated : Apr 27, 2023, 08:15 PM IST
  • ಹಾಸನ ಜಿಲ್ಲೆಯಲ್ಲಿ ಹಿಡಿತ ಕಾಯ್ದುಕೊಳ್ಳಲು ಜೆಡಿಎಸ್ ತಂತ್ರ
  • 2018ರ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಹಾಸನ ಕ್ಷೇತ್ರವನ್ನು ಬಿಟ್ಟು 6 ಕ್ಷೇತ್ರದಲ್ಲಿ ಜೆಡಿಎಸ್ ಗೆಲವು ಸಾಧಿಸಿತ್ತು.
  • ಈ ಬಾರಿಯ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಗುರಿ ಹೊಂದಿದ್ದರೂ ಅರಸೀಕೆರೆ, ಅರಕಲಗೂಡಿನಲ್ಲಿ ಹಾಲಿ ಶಾಸಕರು ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದ್ದರಿಂದ ಕಠಿಣ ಸವಾಲು ಎದುರಿಸಬೇಕಾಗಿದೆ.
ಹಾಸನದಲ್ಲಿ ಮತ ಬೇಟೆಗೆ ಆಗಮಿಸುತ್ತಿದೆ ಘಟಾನುಘಟಿ ನಾಯಕರ ದಂಡು title=

Karnataka assembly Election 2023: ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ 12 ದಿನಗಳು ಮಾತ್ರ ಬಾಕಿ ಉಳಿದಿದ್ದು, ಮೂರು ಪಕ್ಷಗಳಲ್ಲಿ ಪ್ರಚಾರದ ಭರಾಟೆ ರಂಗೇರುತ್ತಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೇರಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಘಟಾನುಘಟಿ ನಾಯಕರ ದಂಡೇ ಜಿಲ್ಲೆಗೆ ಹರಿದು ಬರಲಿದೆ. 

>> ಏ.29 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅರಕಲಗೂಡು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀಧರ್‌ಗೌಡ, ಸಕಲೇಶಪುರದಲ್ಲಿ ಮುರಳಿ ಮೋಹನ್ ಪರ ಮತಯಾಚನೆ ನಡೆಸಲಿದ್ದಾರೆ. 
>> ಏ.30 ರಂದು ಪ್ರಧಾನಿ ನರೇಂದ್ರ ಮೋದಿ ಬೇಲೂರು ಕ್ಷೇತ್ರಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಹೆಚ್.ಕೆ.ಸುರೇಶ್ ಸೇರಿ ಜಿಲ್ಲೆಯ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತ ಬೇಟೆ ನಡೆಸಿದ್ದಾರೆ. 
>> ಮೇ.1 ರಂದು ಅರಸೀಕೆರೆ ಕ್ಷೇತ್ರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ ಕೆ.ಎಂ.ಶಿವಲಿಂಗೇಗೌಡ ಪರ ಮತಯಾಚನೆ ನಡೆಸಲಿದ್ದಾರೆ. 
>> ಅದೇ ರೀತಿ ಜೆಡಿಎಸ್ ಅಭ್ಯರ್ಥಿಗಳ ಪರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ. 
>> ಇನ್ನು ಹಾಸನ ಕ್ಷೇತ್ರ ಎಎಪಿ ಅಭ್ಯರ್ಥಿ ಅಗಿಲೆ ಯೋಗೀಶ್ ಪರ ಚುನಾವಣಾ ಪ್ರಚಾರಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಮಿಸುವ ಸಾಧ್ಯತೆಗಳಿವೆ. 
>> ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಲೂರಿನಲ್ಲಿ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ನಡೆಸಿದ್ದರು. ಇದಲ್ಲದೆ ಬಿಜೆಪಿಯ ಬೇರೆ ಬೇರೆ ರಾಜ್ಯದ ಸಂಸದರು ಮತ್ತು ಪಕ್ಷದ ಪದಾಧಿಕಾರಿಗಳು ಆಗಮಿಸಿ ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. 
>> ಈಗಾಗಲೇ ದೇವೇಗೌಡರು, ಕುಮಾರಸ್ವಾಮಿ ಒಮ್ಮೆ ಭೇಟಿ ನೀಡಿ ಹೋಗಿದ್ದು, ಮತ್ತೊಂದು ಸುತ್ತಿನ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್‌ನವರು ಕೂಡ ಪ್ರಚಾರ ಕಾರ್ಯದಿಂದ ಹಿಂದೆ ಉಳಿದಿಲ್ಲ.

ಇದನ್ನೂ ಓದಿ- ಕರಾವಳಿ ಗೆದ್ದ ಪಕ್ಷಕ್ಕೆ ರಾಜ್ಯದಲ್ಲಿ ಅಧಿಕಾರ! ದ. ಕನ್ನಡ ಜಿಲ್ಲೆಯ ಕ್ಷೇತ್ರಗಳಲ್ಲಿ ಹೇಗಿದೆ ಹವಾ

ಹಿಡಿತ ಕಾಯ್ದುಕೊಳ್ಳಲು ಜೆಡಿಎಸ್ ತಂತ್ರ: 
2018ರ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಹಾಸನ ಕ್ಷೇತ್ರವನ್ನು ಬಿಟ್ಟು 6 ಕ್ಷೇತ್ರದಲ್ಲಿ ಜೆಡಿಎಸ್ ಗೆಲವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ಗುರಿ ಹೊಂದಿದ್ದರೂ ಅರಸೀಕೆರೆ, ಅರಕಲಗೂಡಿನಲ್ಲಿ ಹಾಲಿ ಶಾಸಕರು ರಾಜೀನಾಮೆ ನೀಡಿ ಪಕ್ಷಾಂತರ ಮಾಡಿದ್ದರಿಂದ ಕಠಿಣ ಸವಾಲು ಎದುರಿಸಬೇಕಾಗಿದೆ. ಜೆಡಿಎಸ್ ಭದ್ರಕೋಟೆ ಎಂದು ಬಿಂಬಿತವಾಗಿರುವ ಜಿಲ್ಲೆಯಲ್ಲಿ ಹಿಡಿತ ಕಾಯ್ದುಕೊಳ್ಳಲು ವರಿಷ್ಠರು ರಾಜಕೀಯ ತಂತ್ರ ಪ್ರಯೋಗಿಸುತ್ತಿದ್ದು, ಅರಸೀಕೆರೆ, ಅರಕಲಗೂಡು ಕ್ಷೇತ್ರಕ್ಕೆ ಬೇರೆ ಪಕ್ಷದ ಪ್ರಬಲ ಅಭ್ಯರ್ಥಿಗಳನ್ನು ಪಕ್ಷಕ್ಕೆ ಕರೆ ತಂದು ಟಿಕೆಟ್ ನೀಡಿದೆ. ಉಳಿದ ಕ್ಷೇತ್ರದಲ್ಲೂ ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದಾರೆ.

ಸ್ಥಾನ ಹೆಚ್ಚಿಸಿಕೊಳ್ಳಲು ಬಿಜೆಪಿ ಯತ್ನ:
ಕಳೆದ ಬಾರಿ ಹಾಸನ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ ಕನಿಷ್ಠ 3 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಹಾಸನದೊಂದಿಗೆ ಬೇಲೂರು, ಸಕಲೇಶಪುರ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದಕ್ಕಾಗಿಯೇ ಪ್ರಧಾನಿ ಮೋದಿ ಅವರನ್ನೇ ಜಿಲ್ಲೆಗೆ ಕರೆಸುತ್ತಿದ್ದಾರೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಹಾಸನ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ರಣ ತಂತ್ರ ಹೆಣೆಯುತ್ತಿದೆ. 

ಇದನ್ನೂ ಓದಿ- ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮಲೆನಾಡು ಕ್ಷೇತ್ರವೇ ನಿರ್ಣಾಯಕ

ಕಾಂಗ್ರೆಸ್‌ನಲ್ಲಿ ಕಸರತ್ತು:
ಕಳೆದ ಚುನಾವಣೆಯಲ್ಲಿ ಒಂದೂ ಸ್ಥಾನವನನ್ನು ಗೆಲ್ಲಲು ಸಾಧ್ಯವಾಗದ ಕಾಂಗ್ರೆಸ್ ಈ ಬಾರಿ ಖಾತೆ ತೆರೆಯಲು ಸಾಕಷ್ಟು ಕರಸತ್ತು ನಡೆಸುತ್ತಿದೆ. ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಶಾಸಕರಾಗಿದ್ದ ಕೆ.ಎಂ.ಶಿವಲಿಂಗೇಗೌಡರನ್ನು ಕಾಂಗ್ರೆಸ್‌ಗೆ ಕರೆತಂದು ಗೆಲುವಿಗಾಗಿ ಪೈಪೋಟಿಗೆ ಇಳಿದಿದ್ದು, ರಾಹುಲ್ ಗಾಂಧಿಯವರನ್ನೇ ಪ್ರಚಾರಕ್ಕಾಗಿ ಕರೆಸಲಾಗುತ್ತಿದೆ. ಬೇಲೂರು, ಸಕಲೇಶಪುರ ಕ್ಷೇತ್ರದಲ್ಲೂ ಖಾತೆ ತೆರೆಯಲು ಕೈ ಮುಖಂಡರು ಪ್ರಯತ್ನದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News