ಜಾಮಿಯಾ ಪ್ರತಿಭಟನೆ: 15 ಜನರ ವಿರುದ್ಧ ಎಫ್‌ಐಆರ್ ದಾಖಲು

ನವದೆಹಲಿಯಲ್ಲಿ ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆ ಭಾನುವಾರ ಹಿಂಸಾತ್ಮಕ ಸ್ವರೂಪ ಪಡೆಯಿತು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಭಟನಾಕಾರರು ಜಾಮಿಯಾ ನಗರ ಪ್ರದೇಶದ ಬಳಿ ನಾಲ್ಕು ಬಸ್ಸುಗಳಿಗೆ ಬೆಂಕಿ ಹಚ್ಚಿದರು.

Last Updated : Dec 17, 2019, 08:52 AM IST
ಜಾಮಿಯಾ ಪ್ರತಿಭಟನೆ: 15 ಜನರ ವಿರುದ್ಧ ಎಫ್‌ಐಆರ್ ದಾಖಲು title=
Pic courtesy: ANI

ನವದೆಹಲಿ: ಪೌರತ್ವ ಕಾಯ್ದೆ ವಿರುದ್ಧ ದಕ್ಷಿಣ ದೆಹಲಿಯ ಜಾಮಿಯಾ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿರುವ 15 ಜನರ ವಿರುದ್ಧ ದೆಹಲಿ ಪೊಲೀಸ(Delhi Police)ರು ಸೋಮವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೀಡಿಯೊ ತುಣುಕಿನ ಮೂಲಕ ಪ್ರತಿಭಟನಾಕಾರರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿರುವುದರಿಂದ ಅಗತ್ಯವಿದ್ದರೆ ಹೆಚ್ಚಿನ ಹೆಸರುಗಳನ್ನು ವರದಿಯಲ್ಲಿ ಸೇರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ನ್ಯೂ ಫ್ರೆಂಡ್ಸ್ ಕಾಲೋನಿ (ಎನ್‌ಎಫ್‌ಸಿ) ಮತ್ತು ಜಾಮಿಯಾ ನಗರ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಪ್ರಕರಣವನ್ನು ಅಪರಾಧ ಶಾಖೆಗೆ ಹಸ್ತಾಂತರಿಸಲಾಗಿದೆ.

ನವದೆಹಲಿಯಲ್ಲಿ ಪೌರತ್ವ ಕಾಯ್ದೆ(Citizenship Amendment Act)ಯ ವಿರುದ್ಧದ ಪ್ರತಿಭಟನೆ ಭಾನುವಾರ ಹಿಂಸಾತ್ಮಕ ಸ್ವರೂಪ ಪಡೆಯಿತು. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳನ್ನು ಒಳಗೊಂಡ ಪ್ರತಿಭಟನಾಕಾರರು ಜಾಮಿಯಾ ನಗರ ಪ್ರದೇಶದ ಬಳಿ ನಾಲ್ಕು ಬಸ್ಸುಗಳಿಗೆ ಬೆಂಕಿ ಹಚ್ಚಿದರು. ಘಟನೆಯಲ್ಲಿ ಕನಿಷ್ಠ ಆರು ಪೊಲೀಸರು ಮತ್ತು ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಗೊಂಡಿದ್ದಾರೆ. ಜಾಮಿಯಾ ನಗರ ಪ್ರದೇಶದ ಸರಾಯ್ ಜುಲೆಮಾ ಸ್ಥಳೀಯರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪೊಲೀಸರು ಕ್ರಮ ಕೈಗೊಂಡಾಗ ಪರಿಸ್ಥಿತಿ ಗಂಭೀರವಾಗಿದೆ. ಘರ್ಷಣೆಯಲ್ಲಿ ಹಲವಾರು ಜಾಮಿಯಾ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದೆಹಲಿ ಆಗ್ನೇಯ ಪೊಲೀಸ್ ಆಯುಕ್ತ ಚಿನ್ಮೊಯ್ ಬಿಸ್ವಾಲ್, ಸುಮಾರು 2 ಸಾವಿರ ಜನರ ಗುಂಪು ಸಾರ್ವಜನಿಕ ಸಾರಿಗೆ ಬಸ್ಸುಗಳನ್ನು ಗುರಿಯಾಗಿಸಿಕೊಂಡು ಈ ಹಿಂಸಾತ್ಮಕ ಕೃತ್ಯ ಎಸಗಿದೆ ಎಂದು ಹೇಳಿದರು.

"ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಲ್ಲಿ ಸುಮಾರು 6 ಪೊಲೀಸರು ಗಾಯಗೊಂಡಿದ್ದಾರೆ. ಇದಕ್ಕೆ ಕಾರಣರಾದವರನ್ನು ಇನ್ನೂ ಗುರುತು ಹಿಡಿಯಬೇಕಿದೆ" ಎಂದು ಬಿಸ್ವಾಲ್ ಹೇಳಿದ್ದಾರೆ.

ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಂಡ ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ, ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪೊಲೀಸರು ಜನಸಮೂಹವನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಯಾವುದೇ ವಿದ್ಯಾರ್ಥಿಗಳನ್ನು ಪೊಲೀಸರು ಗುರಿಯಾಗಿಸಿಲ್ಲ ಎಂದು ಬಿಸ್ವಾಲ್ ಒತ್ತಿ ಹೇಳಿದರು.

ಮತ್ತೊಂದೆಡೆ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ(Jamia Millia University) ಆವರಣಕ್ಕೆ ಭಾನುವಾರ ಪ್ರವೇಶಿಸಿದ ವರದಿಯನ್ನು  ಡೆಪ್ಯೂಟಿ ಕಮಿಷನರ್ (ಆಗ್ನೇಯ) ಚಿನ್ಮಯ್ ಬಿಸ್ವಾಲ್ ನಿರಾಕರಿಸಿದ್ದಾರೆ. ಜಾಮಿಯಾ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಹಲವಾರು ಜನರು ಗಾಯಗೊಂಡರು ಮತ್ತು ಅನೇಕ ವಾಹನಗಳು ಹಾನಿಗೊಳಗಾದವು.ಪ್ರತಿಭಟನಾಕಾರರನ್ನು ಹಿಂದಿರುವಂತೆ ಮಾತ್ರ ಒತ್ತಾಯಿಸಲಾಯಿತು. ಆದರೆ ಪೊಲೀಸರು ಯಾವುದೇ ದಾಳಿ ನಡೆಸಿರಲಿಲ್ಲ . ಆದರೆ, ಆವರಣದ ಒಳಗಿನಿಂದ ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಪೊಲೀಸರು ಅಂತಹವರನ್ನು ಗುರುತಿಸಲು ಪ್ರಯತ್ನಿಸಿದರು ಎಂದು ಅವರು ತಿಳಿಸಿದರು.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಹೇಳಿಕೆಯೊಂದನ್ನು ಹೊರಡಿಸಿದ್ದು, ವಿದ್ಯಾರ್ಥಿಗಳು ಬಸ್‌ಗಳನ್ನು ಸುಡುವುದರಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದೆ. "ವಿಶ್ವವಿದ್ಯಾನಿಲಯದಲ್ಲಿನ ಶಾಂತಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವನ್ನು ಭಂಗಗೊಳಿಸಲು ಬಯಸುವ ಕೆಲವು ಹೊರಗಿನವರು ಇದನ್ನು ಮಾಡುತ್ತಾರೆ" ಎಂದು ವಿಶ್ವವಿದ್ಯಾಲಯ ಹೇಳಿದೆ.

ಏತನ್ಮಧ್ಯೆ, ಭಾನುವಾರ ಪೌರತ್ವ ವಿರೋಧಿ ಕಾಯ್ದೆ ಪ್ರತಿಭಟನೆ ವೇಳೆ ಉತ್ತರ ಪ್ರದೇಶದ ಜಾಮಿಯಾ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ. ವಿದ್ಯಾರ್ಥಿಗಳ ಮೇಲಿನ ಉನ್ನತ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಾಧೀಶರನ್ನು ಎರಡು ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಸತ್ಯಾಸತ್ಯತೆ ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.

Trending News