ಮೋದಿ 'ಮನ್ ಕಿ‌ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ

'ಮನ್ ಕಿ ಬಾತ್' ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ದೇಶದ ಜನರು ತಟ್ಟೆ ಬಾರಿಸಿ, ಚಪ್ಪಾಳೆ ತಟ್ಟಿ ರೈತರ ಪ್ರತಿಭಟನೆಯನ್ನು ಬೆಂಬಲಿಸಬೇಕು.‌ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು' ಎಂದು ಮನವಿ ಮಾಡಲಾಗಿದೆ

Written by - Yashaswini V | Last Updated : Dec 21, 2020, 09:13 AM IST
  • ರೈತರ ಹೋರಾಟ ಬೆಂಬಲಿಸಿ ಡಿಸೆಂಬರ್ 23ರಂದು 'ಕಿಸಾನ್ ದಿವಾಸ್' ಆಚರಣೆ
  • 'ಕಿಸಾನ್ ದಿವಾಸ್' ಆಚರಣೆ ವೇಳೆ "ಒಂದು ದಿನ ಊಟ ತ್ಯಜಿಸಲು ದೇಶವಾಸಿಗಳಿಗೆ ಕರೆ
  • ಡಿಸೆಂಬರ್ 25 ರಿಂದ 27ರವರೆಗೆ ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಬ್ರೇಕ್
ಮೋದಿ 'ಮನ್ ಕಿ‌ ಬಾತ್' ಕಾರ್ಯಕ್ರಮದ ವೇಳೆ ತಟ್ಟೆ ಬಾರಿಸಿ ಪ್ರತಿಭಟನೆ ನಡೆಸಲು ಕರೆ title=
File Image

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ  ಇದೇ ಡಿಸೆಂಬರ್ 27ರಂದು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ಜನ ಚಪ್ಪಾಳೆ ತಟ್ಟೆ ಬಾರಿಸುವಂತೆ, ಆ ಮೂಲಕ ಕೇಂದ್ರದ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವಂತೆ ಜನರಿಗೆ ಮನವಿ ಮಾಡಲು ಬಯಸುತ್ತೇವೆ" ಎಂದು ಭಾರತೀಯ ಕಿಸಾನ್ ಯೂನಿಯನ್ (BKH) ತಿಳಿಸಿದೆ.

ಭಾರತೀಯ ಕಿಸಾನ್ ಯೂನಿಯನ್ ವತಿಯಿಂದ ಭಾನುವಾರ ಸುದ್ದಿಗೋಷ್ಟಿ ನಡೆಸಿದ ರೈತ ನಾಯಕ ರಾಕೇಶ್ ಟಿಕಾಯತ್, ಡಿಸೆಂಬರ್ 27 ರಂದು ಪ್ರಧಾನ ಮಂತ್ರಿ 'ಮನ್ ಕಿ ಬಾತ್' (Mann ki baat) ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ದೇಶದ ಜನರು ತಟ್ಟೆ ಬಾರಿಸಿ, ಚಪ್ಪಾಳೆ ತಟ್ಟಿ ರೈತರ ಪ್ರತಿಭಟನೆಯನ್ನು (Formers Protest) ಬೆಂಬಲಿಸಬೇಕು.‌ ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಮಾತುಕತೆಗೆ ಬರುವಂತೆ ರೈತರಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ಇದಲ್ಲದೆ ರೈತರ ಹೋರಾಟವನ್ನು ತೀವ್ರಗೊಳಿಸುವ ಹಿನ್ನಲೆಯಲ್ಲಿ ಡಿಸೆಂಬರ್ 23ರಂದು 'ಕಿಸಾನ್ ದಿವಾಸ್' ಆಚರಿಸಲು ನಿರ್ಧಾರ ಮಾಡಲಾಗಿದೆ. ಅಂದು ದೇಶವಾಸಿಗಳು "ಒಂದು ದಿನ ಊಟ ತ್ಯಜಿಸಬೇಕು" ಎಂದು ಕೂಡ ಜನರಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿದರು.

ರೈತ ಮುಖಂಡ ಜಗ್ಜೀತ್ ಸಿಂಗ್ ದಾಲೆವಾಲಾ ಮಾತನಾಡಿ, ಡಿಸೆಂಬರ್ 25 ರಿಂದ 27ರವರೆಗೆ ಹರಿಯಾಣದ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ರೈತರು ಅವಕಾಶ ನೀಡುವುದಿಲ್ಲ. "ಡಿಸೆಂಬರ್ 25 ರಿಂದ 27 ರವರೆಗೆ ಹರಿಯಾಣದ ಎಲ್ಲಾ ಟೋಲ್ ಬೂತ್‌ಗಳನ್ನು ಟೋಲ್ ಸಂಗ್ರಹಿಸಲು ನಮಗೆ ಅನುಮತಿಸಲಾಗುವುದಿಲ್ಲ. ನಾವು ಅವುಗಳನ್ನು ತಡೆಯುತ್ತೇವೆ ಎಂದರು.

ಚಳಿಯಲ್ಲೂ ಛಲ ಬಿಡದ ರೈತರು:
ಕೇಂದ್ರ ಸರ್ಕಾರ (Central Government) ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಗಳಲ್ಲಿ ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿರುವ ಲಕ್ಷಾಂತರ ರೈತರು ತಮ್ಮ ಬೇಡಿಕೆ ಮತ್ತು ಹೋರಾಟದ ವಿಷಯದಲ್ಲಿ ದೃಢವಾದ ನಿರ್ಧಾರ ಹೊಂದಿದ್ದಾರೆ. ಕೊರೆಯುವ ಚಳಿಯಲ್ಲೂ ಛಲ ಬಿಡದೆ ರೈತರು ಹೋರಾಟವನ್ನು ಮುಂದುವರೆಸಿದ್ದಾರೆ. ದೆಹಲಿಯ ಸುತ್ತಾ ಮುತ್ತಾ ಈ ಖುತುವಿನಲ್ಲಿ ಶೀತಗಾಳಿ ಬೀಸಲಿದೆ. ತಾಪಮಾನವು ತೀವ್ರವಾಗಿ ಕಡಿಮೆಯಾಗುತ್ತದೆ. ಭಾನುವಾರ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು.  ಇದ್ಯಾವುದನ್ನೂ ಲೆಕ್ಕಿಸದ ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ.

ಇದನ್ನೂ ಓದಿ: 'ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ': ರೈತರಿಗೆ ಪ್ರಧಾನಿ ಮೋದಿ ಮನವಿ

ವಿದೇಶಿ ಹಣದ ವಿವಾದ
ಈ ನಡುವೆ ಪಂಜಾಬ್‌ನ ಅತಿದೊಡ್ಡ ರೈತ ಸಂಘಟನೆಗಳಲ್ಲಿ ಒಂದಾದ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರಾಹನ್) ವಿದೇಶಿ ಹಣವನ್ನು ಸ್ವೀಕರಿಸಲು ಅನುವು ಮಾಡಿಕೊಡುವ ನೋಂದಣಿ ವಿವರಗಳನ್ನು ಸಲ್ಲಿಸಲು ಕೇಂದ್ರ ಸರ್ಕಾರದ ಏಜೆನ್ಸಿಯೊಂದನ್ನು ಕೇಳಲಾಗಿದೆ. ದುರುದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರ ಈ ನಡೆ ಅನುಸರಿಸುತ್ತಿದೆ ಎಂದು ಹೇಳಲಾಗಿದೆ. ವಿದೇಶಿ ಹಣವನ್ನು ಪಡೆಯುವ ಯಾವುದೇ ಸಂಸ್ಥೆ ಕಡ್ಡಾಯ ನೋಂದಣಿಯನ್ನು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA)ಯಡಿ ಮಾಡಿಕೊಳ್ಳಬೇಕಿದೆ.

“ಕೇಂದ್ರದ ಅಡಿಯಲ್ಲಿರುವ ಇಲಾಖೆಯು ಪಂಜಾಬ್‌ನಲ್ಲಿರುವ ನಮ್ಮ ಬ್ಯಾಂಕಿನ ಶಾಖೆಯ ಮೂಲಕ ನಮಗೆ ಇಮೇಲ್ ಕಳುಹಿಸಿದೆ. ವಿದೇಶದಿಂದ ಬರುವ ಈ ದೇಣಿಗೆಗಳಿಗೆ ಸಂಬಂಧಿಸಿದಂತೆ ನಾವು ನೋಂದಣಿ ವಿವರಗಳನ್ನು ನೀಡಬೇಕು ಎಂದು ಇ-ಮೇಲ್ ಮಲ್ಲಿ ತಿಳಿಸಲಾಗಿದೆ" ಎಂದು ಹೇಳಿದ ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್, "ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಎಲ್ಲಾ ತಂತ್ರಗಳನ್ನು ಬಳಸುತ್ತಿದೆ, ಏಕೆಂದರೆ ಅವರ ಏಕೈಕ ಉದ್ದೇಶವೆಂದರೆ ಆಂದೋಲನವನ್ನು ಮುಕ್ತಾಯಗೊಳಿಸುವುದು" ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Farmers Protest: ಕೃಷಿ ಸಚಿವರ ಪತ್ರ, ನಂತರ ಪ್ರಧಾನಿ ಮೋದಿ ಮನವಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News