Train Derailed: ರಾಜಸ್ಥಾನದ ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ನ 11 ಬೋಗಿಗಳು

Train Derailed: ಹೊಸ ವರ್ಷದ ಎರಡನೇ ದಿನವೇ ರಾಜಸ್ಥಾನದ ಪಾಲಿಯಲ್ಲಿ ರೈಲು ಅಪಘಾತ ಸಂಭವಿಸಿದೆ. ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 11 ಬೋಗಿಗಳು ಹಳಿತಪ್ಪಿದ್ದು,  ಈ ಅಪಘಾತದಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. 

Written by - Yashaswini V | Last Updated : Jan 2, 2023, 10:53 AM IST
  • ರಾಜಸ್ಥಾನದ ಪಾಲಿಯಲ್ಲಿ ರೈಲು ಅಪಘಾತ
  • ಮಾರ್ವಾರ್ ಜಂಕ್ಷನ್‌ನಿಂದ ಹೊರಟ 5 ನಿಮಿಷದಲ್ಲಿ ರೈಲಿನೊಳಗೆ ಕಂಪನದ ಸದ್ದು
  • ಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ನ 11 ಬೋಗಿಗಳು
Train Derailed: ರಾಜಸ್ಥಾನದ ಪಾಲಿಯಲ್ಲಿ ಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ನ 11 ಬೋಗಿಗಳು title=
Train Derailed (Pic- ANI)

Train Derailed: ಹೊಸ ವರ್ಷದ ಎರಡನೇ ದಿನವಾದ ಸೋಮವಾರ 02, 2023ರಂದು ಮುಂಜಾನೆ ರಾಜಸ್ಥಾನದ  ಪಾಲಿ ಬಳಿ  ಸೂರ್ಯನಗರಿ ಎಕ್ಸ್‌ಪ್ರೆಸ್‌ನ 11 ಬೋಗಿಗಳು ಹಳಿತಪ್ಪಿದ ದುರ್ಘಟನೆ ನಡೆದಿದೆ. ಜೋಧ್‌ಪುರ ವಿಭಾಗದ ರಾಜ್‌ಕಿವಾಸ್-ಬೊಮ್‌ದಾರ ವಿಭಾಗದ ನಡುವೆ ಮುಂಜಾನೆ 3:27ರ ಸುಮಾರಿಗೆ ರೈಲು ನಂ. 12480 ಬಾಂದ್ರಾ ಟರ್ಮಿನಸ್-ಜೋಧ್‌ಪುರ ಸೂರ್ಯನಗರಿ ಎಕ್ಸ್‌ಪ್ರೆಸ್ ರೈಲಿನ 11 ಬೋಗಿಗಳು ಹಳಿತಪ್ಪಿದ್ದು ಈ ದುರ್ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಜೀ ಮೀಡಿಯಾ ರಾಜಸ್ಥಾನ ವರದಿಗಾರರ ಪ್ರಕಾರ, ಈ ರೈಲು ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲಾ ಪ್ರಯಾಣಿಕರನ್ನು ಸ್ಥಳೀಯ ಬಂಗಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇದಲ್ಲದೆ, ಪ್ರಯಾಣಿಕರಿಗೆ ಗಮ್ಯಸ್ಥಾನವನ್ನು ತಲುಪಿಸಲು  ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ರೈಲು ಅಪಘಾತದ ನಂತರ 12 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಘಟನೆ ಕುರಿತಂತೆ ಪ್ರಯಾಣಿಕರೊಬ್ಬರು ಜೀ ನ್ಯೂಸ್ ಜೊತೆ ಮಾತನಾಡಿದ್ದು, ಮಾರ್ವಾರ್ ಜಂಕ್ಷನ್‌ನಿಂದ ಹೊರಟ 5 ನಿಮಿಷಗಳಲ್ಲಿ ರೈಲಿನೊಳಗೆ ಕಂಪನದ ಶಬ್ದ ಕೇಳಿಸಿತು ಮತ್ತು 2-3 ನಿಮಿಷಗಳ ನಂತರ ರೈಲು ನಿಂತಿತು. ತಕ್ಷಣ ಗಾಬರಿಯಿಂದ ಪ್ರಯಾಣಿಕರು ಕೆಳಗಿಳಿದು ನೋಡಿದಾಗ  ಕನಿಷ್ಠ 8 ಸ್ಲೀಪರ್ ಕ್ಲಾಸ್ ಕೋಚ್‌ಗಳು ಹಳಿತಪ್ಪಿದ್ದವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ- Nashik Factory Fire : ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ : 9 ಜನ ಸಜೀವ ದಹನ

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ವಾಯುವ್ಯ ರೈಲ್ವೆಯ ಸಿಪಿಆರ್‌ಒ ಕ್ಯಾಪ್ಟನ್ ಶಶಿ ಕಿರಣ್, ಇಂದು ಮುಂಜಾನೆ 3:30 ರ ಸುಮಾರಿಗೆ ಸೂರ್ಯನಗರಿ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ರಾಜಕಿವಾಸ್ ಮತ್ತು ಬೊಮ್‌ದಾರ ನಡುವೆ ಹಳಿತಪ್ಪಿದ ಬಗ್ಗೆ ಮಾಹಿತಿ ಲಭಿಸಿದೆ. ಅಪಘಾತದಲ್ಲಿ ಸುಮಾರು 11 ಬೋಗಿಗಳಿಗೆ ಹಾನಿಯಾಗಿದೆ, ಆದರೆ ಯಾವುದೇ ಜೀವಹಾನಿಯ ಬಗ್ಗೆ ಇನ್ನೂ ಕೂಡ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ. 

ಪ್ರಯಾಣಿಕರಿಗೆ ಹಾಗೂ ಅವರ ಸಂಬಂಧಿಕರಿಗಾಗಿ ರೈಲ್ವೆ ಸಹಾಯವಾಣಿ ಸಂಖ್ಯೆ:
ಇನ್ನು ಘಟನೆ ಕುರಿತಂತೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗಾಗಿ ಮತ್ತವರ ಸಂಬಂಧಿಕರಿಗಾಗಿ ರೈಲ್ವೆ ಸಹಾಯವಾಣಿ ಸಂಖ್ಯೆಯನ್ನು ನೀಡಿದೆ. ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಪ್ರಯಾಣಿಕರು ಮತ್ತು ಅವರ ಸಂಬಂಧಿಕರು ಮಾಹಿತಿ ಪಡೆಯಬಹುದು ಎಂದು ಸಿಪಿಆರ್‌ಒ ಕ್ಯಾಪ್ಟನ್ ಶಶಿ ಕಿರಣ್ ಮಾಹಿತಿ ನೀಡಿದ್ದಾರೆ. 
ರೈಲ್ವೆ ಸಹಾಯವಾಣಿ ಸಂಖ್ಯೆಗಳು ಕೆಳಕಂಡಂತಿವೆ: 
* ಜೋಧಪುರದ ಸಹಾಯವಾಣಿ ಸಂಖ್ಯೆ 02912654979, 02912654993, 02912624125, 02912431646
* ಪಾಲಿ ಅವರ ಸಹಾಯವಾಣಿ ಸಂಖ್ಯೆ 02932250324 ಆಗಿದೆ. 

ಇದನ್ನೂ ಓದಿ- Gujarat Bus Accident: ಚಾಲಕನಿಗೆ ಹೃದಯಾಘಾತ: ಕಾರಿಗೆ ಬಸ್ ಡಿಕ್ಕಿ ಹೊಡೆದು 9 ಮಂದಿ ದುರ್ಮರಣ; 28 ಜನರಿಗೆ ಗಾಯ

ಈ ಅಪಘಾತಕ್ಕೆ ಕಾರಣ?
ಈ ರೈಲು ಅಪಘಾತಕ್ಕೆ ನಿಖರ ಕಾರಣಗಳು ಇನ್ನೂ ತಿಳಿದು ಬಂದಿಲ್ಲ. ಆದರೂ, ಪ್ರಾಥಮಿಕ ತನಿಖೆಯ ಪ್ರಕಾರ ಎರಡು ಬೋಗಿಗಳಿಗೆ ಸಂಪರ್ಕ ಕಲ್ಪಿಸುವ ಕೊಕ್ಕೆ ತುಂಡಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News