108 ಅಂಬುಲೆನ್ಸ್ ಚಾಲಕರಿಂದ ಖಾಸಗಿ ಅಸ್ಪತ್ರೆಗೆ ರೋಗಿಯನ್ನು ದಾಖಲಿಸುವ ದಂಧೆಗೆ ಕಡಿವಾಣ ಹಾಕಿ- ಡಾ.ಶರಣಪ್ರಕಾಶ ಪಾಟೀಲ

ಜಿಲ್ಲೆಯಲ್ಲಿ ರಸ್ತೆ ಅಫಘಾತ, ಹೆರಿಗೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಬಗ್ಗೆ ಇಲ್ಲದ ಸತ್ಯ ತಿಳಿಸಿ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ 108 ಅಂಬುಲೆನ್ಸ್ ವಾಹನ ಚಾಲಕರ ದಂಧೆಗೆ ಕಡಿವಾಣ ಹಾಕಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಖಡಕ್ ಸೂಚನೆ ನೀಡಿದರು.

Written by - Manjunath N | Last Updated : Dec 21, 2023, 12:28 AM IST
  • ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವಿವಿಧ ಕಾರಣದಿಂದ ತೆರವಾಗಿರುವ ವೈದ್ಯರ ಹುದ್ದೆಯನ್ನು ತಕ್ಷಣವೇ ವಾಕ್ ಇನ್ ಇಂಟರ್ ವ್ಯೂ ಮೂಲಕ ಭರ್ತಿ ಮಾಡಬೇಕು.
  • ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲಿಯೂ ಖಾಲಿ ಹುದ್ದೆ ಇರದಂತೆ ನೋಡಿಕೊಳ್ಳಬೇಕು
  • ಎನ್.ಎಚ್.ಎಮ್ ಯೋಜನೆಯಡಿ ಖಾಲಿ ವೈದ್ಯರ ಹುದ್ದೆ ಭರ್ತಿ ಪ್ರಕ್ರಿಯೆ ನಿರಂತರವಾಗಿ‌ ನಡೆಯುತ್ತಿದೆ ಎಂದು‌ ಭಂವರ್ ಸಿಂಗ್ ಮಾಹಿತಿ ನೀಡಿದರು.
108 ಅಂಬುಲೆನ್ಸ್ ಚಾಲಕರಿಂದ ಖಾಸಗಿ ಅಸ್ಪತ್ರೆಗೆ ರೋಗಿಯನ್ನು ದಾಖಲಿಸುವ ದಂಧೆಗೆ ಕಡಿವಾಣ ಹಾಕಿ- ಡಾ.ಶರಣಪ್ರಕಾಶ ಪಾಟೀಲ title=

ಕಲಬುರಗಿ: ಜಿಲ್ಲೆಯಲ್ಲಿ ರಸ್ತೆ ಅಫಘಾತ, ಹೆರಿಗೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಜಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಬಗ್ಗೆ ಇಲ್ಲದ ಸತ್ಯ ತಿಳಿಸಿ ರೋಗಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸುವ 108 ಅಂಬುಲೆನ್ಸ್ ವಾಹನ ಚಾಲಕರ ದಂಧೆಗೆ ಕಡಿವಾಣ ಹಾಕಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಖಡಕ್ ಸೂಚನೆ ನೀಡಿದರು.

ಬುಧವಾರ ಇಲ್ಲಿ ನಡೆದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ( ಕೆ.ಡಿ.ಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆ ಚರ್ಚೆ ವೇಳೆಯಲ್ಲಿ ಮಾತನಾಡಿದ ಅವರು ರಸ್ತೆ ಅಪಘಾತ ಪ್ರಕರಣದಲ್ಲಿ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭದಲ್ಲಿ 108 ಅಂಬುಲೆನ್ಸ್ ವಾಹನ ಚಾಲಕರು ಜಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರಿರಿಲ್ಲ. ಸರಿಯಾಗಿ ಚಿಕಿತ್ಸೆ ಸಿಗಲ್ಲ ಎಂಬಿತ್ಯಾದಿ ಸುಳ್ಳು ಹೇಳಿ ಪ್ರತಿಷ್ಠಿತ ಖಾಸಗಿ ಅಸ್ಪತ್ರೆಗೆ ಸೇರಿಸಿ ರೋಗಿಯ ಒಟ್ಟಾರೆ ಬಿಲ್ಲಿನಿಂದ 15-20 ಪರ್ಸೆಂಟ್ ಅಕ್ರಮವಾಗಿ ಹಣ ಆಸ್ಪತ್ರೆಯಿಂದ ಪಡೆಯುವ ದೊಡ್ಡ ದಂಧೆ ನಡೆಯುತ್ತಿದೆ. ಇದಕ್ಕೆಲ್ಲ ಕೂಡಲೆ ಕಡಿವಾಣ ಹಾಕಿ. ಕೂಡಲೆ ಅಂಬುಲೆನ್ಸ್ ವಾಹನಗಳನ್ನು ಜಿ.ಪಿ.ಎಸ್. ತಪಾಸಣೆಗೆ ‌ಒಳಪಡಿಸಿ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಗೆಲ್ಲಲು ಕಾಂಗ್ರೆಸ್‌ ರಣತಂತ್ರ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿಯೆ ಸರ್ಕಾರದ ಮಟ್ಟದಲ್ಲಿ ಹೋರಾಡಿ ಇಲ್ಲಿ ತಾಯಿ-ಮಕ್ಕಳ ಆಸ್ಪತ್ರೆ, ಟ್ರಾಮಾ ಸೆಂಟರ್, ಜಯದೇವ ಹೃದ್ರೋಗ ಸಂಸ್ಥೆ ತರಲಾಗಿದೆ. ಬಡವರಿಗಾಗಿಯೆ ಈ ಆಸ್ಪತ್ರೆ ಇರುವಾಗ ಖಾಸಗಿ ಆಸ್ಪತ್ರೆಗೆ ಹೋಗಿ ಅಲ್ಲಿ 4-5 ಲಕ್ಷ ಸುರಿಯುವುದು ಎಷ್ಟು ಸರಿ. ಆರೋಗ್ಯ ಇಲಾಖೆ ಏನು ಮಾಡುತ್ತಿದೆ. ಖಾಸಗಿ ಅಸ್ಪತ್ರೆಯವರು ರೋಗಿಗೆ‌ ನೀಡಿದ ಚಿಕಿತ್ಸೆ ಮತ್ತು ಅದಕ್ಕೆ ವಿಧಿಸಿದ ಬಿಲ್ಲು ಎಂದಾದರು ತಪಾಸಣೆ ಮಾಡಲಾಗಿದಿಯೆ ಎಂದು ಡಿ.ಎಚ್.ಓ ಅವರನ್ನು ಪ್ರಶ್ನಿಸಿದ ಅವರು ಒಂದೆರಡು ಅಸ್ಪತ್ರೆಗೆ ಹೋಗಿ ಬಿಲ್ಲು ಪರಿಶೀಲಿಸಿ. ಚಿಕಿತ್ಸೆಗೆ ಅವಶ್ಯಕತೆ ಇಲ್ಲದ ಡ್ರಗ್ಸ್ ಸೇರಿಸಿ ಹೆಚ್ಚಿನ ಬಿಲ್ಲು ಸೇರಿಸುತ್ತಿದ್ದಾರೆ. ಬಿಲ್ಲು ಹೆಚ್ಚಾದ ಕೂಡಲೆ ಜನ ನಮ್ಮಲ್ಲಿ ಬರುತ್ತಾರೆ ಎಂದರು.

ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ವಿವಿಧ ಕಾರಣದಿಂದ ತೆರವಾಗಿರುವ ವೈದ್ಯರ ಹುದ್ದೆಯನ್ನು ತಕ್ಷಣವೇ ವಾಕ್ ಇನ್ ಇಂಟರ್ ವ್ಯೂ ಮೂಲಕ ಭರ್ತಿ ಮಾಡಬೇಕು. ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಎಲ್ಲಿಯೂ ಖಾಲಿ ಹುದ್ದೆ ಇರದಂತೆ ನೋಡಿಕೊಳ್ಳಬೇಕು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಜಿಲ್ಲಾ ಪಂಚಾಯತ್ ಸಿ.ಇ.ಓ ಅವರಿಗೆ ಸೂಚಿಸಿದರು. ಎನ್.ಎಚ್.ಎಮ್ ಯೋಜನೆಯಡಿ ಖಾಲಿ ವೈದ್ಯರ ಹುದ್ದೆ ಭರ್ತಿ ಪ್ರಕ್ರಿಯೆ ನಿರಂತರವಾಗಿ‌ ನಡೆಯುತ್ತಿದೆ ಎಂದು‌ ಭಂವರ್ ಸಿಂಗ್ ಮಾಹಿತಿ ನೀಡಿದರು.

ವೈದ್ಯರ ಕೊರತೆ ಕುರಿತ ಚರ್ಚೆಯಲ್ಲಿ ಶಾಸಕ ಬಸವರಾಜ‌ ಮತ್ತಿಮೂಡ ಮಾತನಾಡಿ ಕ್ಷೇತ್ರದ ಶಹಾಬಾದ, ಕಮಲಾಪೂರದಲ್ಲಿ ವೈದ್ಯರ ಕೊರತೆ ಕಾರಣ ಪ್ರತಿ ರೋಗಿಗೆ ಜಿಮ್ಸ್ ಗೆ ಶಿಫಾರಸ್ಸು ಮಾಡಲಾಗುತ್ತಿದೆ. ಮಾರ್ಗ ಮದ್ಯದಲ್ಲಿಯೆ ಅಸುನೀಗಿದ ಪ್ರಕರಣ ವರದಿಯಾಗಿದ್ದು, ವೈದ್ಯರ ಸಮಸ್ಯೆ ಬಗೆಹರಿಸಬೇಕು ಎಂದರು. ಇದಕ್ಕೆ ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಅಫಜಲಪೂರ ಶಾಸಕ‌ ಎಂ.ವೈ.ಪಾಟೀಲ ಧ್ವನಿಗೂಡಿಸಿದರು. ತಮ್ಮ‌ ಕ್ಷೇತ್ರದಲ್ಲಿ ಸಾವಳಗಿ ಆಸ್ಪತ್ರೆ ವ್ಯಾಪ್ತಿಗೆ ಒಂದು ಲಕ್ಷ ಜನಸಂಖ್ಯೆ ಇದ್ದು, ಕೇವಲ ಒಬ್ಬ ಡಾಕ್ಟರ್ ಇದಾರೆ ಎಂದು ಶಾಸಕ ಅಲ್ಲಮಪ್ರಭು ಅಸಹಾಯಕತೆ ವ್ಯಕ್ತಪಡಿಸಿದರು. ಡಿ.ಎಚ್.ಓ ರಾಜಶೇಖರ ಮಾಲಿ ಮಾತನಾಡಿ ಜಿಲ್ಲೆಯ 83 ಪಿ.ಎಚ್.ಸಿ. ಯಲ್ಲಿ ಓರ್ವ ವೈದ್ಯರಿದ್ದು, ಕೆಲವು ಸಂದರ್ಭದಲ್ಲಿ ಅವರು ಬೇರೆ ಕೆಲಸಕ್ಕೆ ನಿಯೋಜನೆ ಮಾಡಿದಾಗ ವೈದ್ಯರ ಸಮಸ್ಯೆ ಕಾಣುತ್ತಿದೆ. ಕೆ.ಕೆ.ಆರ್.ಡಿ.ಬಿ. ನಿಂದ ಹೆಚ್ಚುವರಿಯಾಗಿ ವೈದ್ಯರ ಭರ್ತಿ ಮಾಡಿದಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಇದೇ ಸಂದರ್ಭದಲ್ಲಿ ನಕಲಿ ವೈದ್ಯರ ಕಡಿವಾಣ ಹಾಕಬೇಕೆಂದು ಶಾಸಕ ತಿಪ್ಪಣಪ್ಪ ಕಮಕನೂರ ಆಗ್ರಹಿಸಿದರು. ತಾವು ವಾಸಿಸುವ ಕಲಬುರಗಿ ನಗರಸ ಪ್ರದೇಶದಲ್ಲಿಯೆ 15-20 ಜನ ನಕಲಿ ವೈದ್ಯರಿದ್ದಾರೆ ಎಂದರು. ಇದಕ್ಕೆ ಶಾಸಕರೆಲ್ಲರು ಒಕ್ಕೂರಿಲಿನಿಂದ ಧ್ವನಿಗೂಡಿಸಿದರು.

ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ಮಾಡಬೇಕೆಂದರೆ ಶಿಕ್ಷಕರ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಖಾಲಿ‌ ಇರುವ 14 ಸಾವಿರ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಡಿ.ಡಿ.ಪಿ.ಐ ಅವರಿಗೆ ಸೂಚಿಸಿದರು.

ಭ್ರೂಣ ಹತ್ಯೆ,‌ಲಿಂಗ ಪತ್ತೆಗೆ ಕಡಿವಾಣ ಹಾಕಿ:

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜಿಲ್ಲೆಯಲ್ಲಿ ನಿನ್ನೆ ನಡೆದ‌ ಅಪ್ರಾಪ್ತೆ ಮೇಲಿನ ಲೈಂಗಿಕ‌ ದೌರ್ಜವ್ಯವನ್ನು ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ‌ಕೈಗೊಳ್ಳಬೇಕು. ಜೊತೆಗೆ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಹಠಾತ್ ದಾಳಿ ನಡೆಸಿ. ಭ್ರೂಣ ಹತ್ಯೆ, ಲಿಂಗ ಪತ್ತೆ ಮಾಡದಂತೆ ಕಡಿವಾಣ ಹಾಕಬೇಕು. ಅಪ್ರಾಪ್ತರು ಗರ್ಭಿಣಿಯರು ಆಗುತ್ತಿರುವ ಘಟನೆ ನಡೆಯುತ್ತಿವೆ.‌ ಈ ಎಲ್ಲ ಘಟನೆಗಳನ್ನು ತಡೆಯಲು ಪ್ರತ್ತೇಕ ತಂಡವೊಂದನ್ನು ರಚಿಸಬೇಕು ಹಾಗೂ ಎಂದು‌ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು‌.

ಇದನ್ನೂ ಓದಿ: ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹೋಗಿಲ್ಲ

ಆರೋಗ್ಯ ಇಲಾಖೆಯ ಅಧಿಕಾರಿಗಳ ಅಲಕ್ಷ್ಯತನವನ್ನು ಉಲ್ಲೇಖಿಸಿದ ಕೆ.ಕೆ.ಆರ್. ಡಿ.ಬಿ ಅಧ್ಯಕ್ಷ ಅಜಯ್ ಸಿಂಗ್ ಕಲ್ಯಾಣ ಕರ್ನಾಟಕ ಪ್ರದೇಶದಿಂದ ವಿವಿಧ ಜಿಲ್ಲೆಯಿಂದ 47 ಪಿ.ಎಚ್.ಸಿ ಪ್ರಸ್ತಾವನೆ ಬಂದಿವೆ.‌ಅವುಗಳಲ್ಲಿ ಕಲಬುರಗಿ ಜಿಲ್ಲೆಯಿಂದ ಒಂದು ಪ್ರಸ್ತಾವನೆ ಇಲ್ಲ ಎಂದರೆ ಹೇಗೆ? ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡಲೇ ಪ್ರಸ್ತಾವನೆ‌ ಸಲ್ಲಿಸಿ ಎಂದ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಹಿಂದಿದೆ. ಕಳೆದ ಬಾರಿ 28ನೇ ಸ್ಥಾನದಲ್ಲಿದೆ. ಈ ಸಲ 10ನೇ ಸ್ಥಾನಕ್ಕೆ ತರುವ ಬಗ್ಗೆ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕಾಗಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಮೂಲಕ ಅತಿಥಿ ಶಿಕ್ಷಕರ ಭರ್ತಿ ಮಾಡಿದೆ. ಕೊನೆ ಪಕ್ಷ 12-13 ನೇ ಸ್ಥಾನಕ್ಕಾದರೂ ತರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದರು.

ಬಯೋ ಮೆಡಿಕಲ್ ವೇಸ್ಟ್ ನಿರ್ವಹಣೆ,ತನಿಖೆ ಮಾಡಿ:

ಜಿಲ್ಲೆಯ ಆರೋಗ್ಯ ಸಂಸ್ಥೆಯಲ್ಲಿ ಉತ್ಪನ್ನೆಯಾಗುವ ವೈದ್ಯಕೀಯ ತ್ಯಾಜ್ಯ‌ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶರಣ ಸಿರಸಗಿಯಲ್ಲಿ ಘಟಕ ಸ್ಥಾಪಿಸಿದ್ದು, ಇದರ‌ ನಿರ್ವಹಣೆಗೆ ಬೃಮದ‌ಅವನ ಸಂಸ್ಥೆಯನ್ನು ನಿಯಮ‌ ಮೀರಿ 5 ವರ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದರಿ ಸಂಸ್ಥೆಯ ಅಣತಿಯಂತೆ ಅರೋಗ್ಯ ಇಲಾಖೆ, ಪರಿಸರ ಮಂಡಳಿ ಅಧಿಕಾರಿಗಳು ಆರೋಗ್ಯ ಸಂಸ್ಥೆಗಳ ಮೇಲೆ ದಾಳಿ‌ ಮಾಡಲಾಗುತ್ತಿದೆ. ಹಿಂದೆ ಪ್ರಾದೇಶಿಕ ಆಯುಕ್ತರು ಬೃಂದಾವನ‌ ಸಂಸ್ಥೆಗೆ ನೀಡಿದ ಒಪ್ಪಂದ ರದ್ದುಪಡಿಸುವಂತೆ ತಿಳಿಸಿದ್ದರು ಮುಂದುವರೆಸಿದ್ದು ಏಕೆ ಎಂದು ಪರಿಸರ ಮಂಡಳಿ ಅಧಿಕಾರಿ ಮಂಜಪ್ಪ ಅವರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು. ಈ ಸಂಬಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ ಪಾಟೀಲ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.

ಬಿಸಿಯೂಟಕ್ಕೆ 2 ಕಿ.ಮೀ ನಡಿಬೇಕಾ!

ಚಿತ್ತಾಪೂರ ಕ್ಷೇತ್ರದ ಲಾಡಲಾಪೂರ ಸರ್ಕಾರಿ ಶಾಲೆ‌ ಮಕ್ಕಳು ಮಧ್ಯಾಹ್ನದ ಬಿಸಿಯೂಟಕ್ಕೆ 2 ಕಿ.ಮೀ ನಡೆದುಕೊಂಡು ಹೋಗಬೇಕೆಂದು ಇತ್ತೀಚೆಗೆ ಪತ್ರಿಕೆಯಲ್ಲಿ ವರದಿಯಾಗಿದೆ. ಊಟಕ್ಕೆ ಮಕ್ಕಳು 2 ಕಿ.ಮೀ ನಡಿಬೇಕಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಡಿ.ಡಿ.ಪಿ.ಐ ಸಕ್ರೆಪ್ಪ ಬಿರಾದಾರ ಅವರನ್ನು ಪ್ರಶ್ನಿಸಿದರು.

ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಮಧ್ತಾಹ್ನದ ಬಿಸಿ ಊಟದಲ್ಲಿ ಕಳಪೆ ಮಟ್ಟದ ಬೇಳೆ ಪೂರೈಸಲಾಗುತ್ತಿದೆ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ‌ ಸಂದರ್ಭದಲ್ಲಿ ಇದನ್ನು ಕಣ್ಣಾರೆ ಕಂಡಿರುವೆ. ಕ್ಷೀರ ಭಾಗ್ಯ ಪೌಡರ್ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದರು.

ಪರಿಶಿಷ್ಟ ಮಹಿಳೆ ತಯ್ಯಾರಿಸಿದ ಊಟ ತನ್ನಬಾರದೆಂಬ ಡಂಗೂರ, ಇ.ಓ ಸಸ್ಪೆಂಡ್ ಮಾಡಲು ಸೂಚನೆ

ಹೊನ್ನಕಿರಣಗಿ ಪ್ರಾಥಮಿಕ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಮಾಡಿದ ಅಡುಗೆಯನ್ನು ಶಾಲಾ ಮಕ್ಕಳು ತಿನ್ನಬಾರದು ಎಂದು ಡಂಗೂರ ಹೊರಡಿಸಿದ ಪ್ರಕರಣ ಸಭೆಯಲ್ಲಿ ಪ್ರಸ್ತಾಪಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸದರಿ ಅಡುಗೆ ಮಾಡುವ ಮಹಿಳೆಯರನ್ನು ಸ್ಥಳಾಂತರಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಇದಖ್ಎ ಕಾರಣರಾದ ಕಲಬುರಗಿ ತಾಲೂಕ ಪಂಚಾಯತ್ ಇ.ಓ ಅವರನ್ನು ಕೂಡಲೆ‌ ಅಮಾನತ್ತು ಮಾಡುವಂತೆ ಮತ್ತು ಸದರಿ ಪರಿಶಿಷ್ಟ ಮಹಿಳೆಯನ್ನು ಅಲ್ಲಿಯೆ ಮುಂದುವರೆಸುವಂತೆ ಸಚಿವ‌ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ ನೀಡಿದರು. ಶಾಸಕ ಬಿ.ಆರ್.ಪಾಟೀಲ ಮಾತನಾಡಿ ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಡಂಗೂರ ಬಾರಿಸಲು ಅನುಮತಿ ಕೊಟ್ಟವರು ಯಾರು? ನಂತರ ಮಹಿಳೆಯನ್ನು ಬದಲಾಯಿಸಿದ್ದೇಕೆ ಎಂದರು. ಬಿಸಿಯೂಟ ಅಧಿಕಾರಿ ರಾಮಲಿಂಗಪ್ಪ ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ದಾಖಲಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಬಿ.ಆರ್.ಪಾಟೀಲ, ಕನೀಜ್ ಫಾತಿಮಾ, ಶಶೀಲ ಜಿ. ನಮೋಶಿ, ವಿಧಾನ ಪರಿಷತ್ ಶಾಸಕರಾದ ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಗಜಾನನ ಬಾಳೆ, ಹೆಚ್ಚುವರಿ ಎಸ್.ಪಿ. ಶ್ರೀನಿಧಿ ಸೇರಿದಂತೆ ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News