ಲಕ್ನೋ: 2019ರ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೆರುತ್ತಿದ್ದು, ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳು 'ಹೋಳಿ' ಬಳಿಕ ಜಂಟಿ ಚುನಾವಣಾ ರ್ಯಾಲಿ ಆಯೋಜಿಸುತ್ತಿವೆ.
ಲೋಕಸಭಾ ಚುನಾವಣೆಗೂ ಮೊದಲೇ ಮೈತ್ರಿ ಮಾಡಿಕೊಂಡಿರುವ ಈ ಪಕ್ಷಗಳು ಪಶ್ಚಿಮ ಉತ್ತರ ಪ್ರದೇಶದಿಂದ ನವರಾತ್ರಿ ಪವಿತ್ರ ದಿನಗಳಲ್ಲಿ(ಹೋಳಿ ಸಂದರ್ಭದಲ್ಲಿ) ಏಪ್ರಿಲ್ 7ರಂದು ಮುಸ್ಲಿಂ ಸಮುದಾಯದ ಪ್ರಧಾನವಾಗಿರುವ ಸಹರಾನ್ಪುರದ ದೇವಬಂದ್ನಲ್ಲಿ ತಮ್ಮ ಮೊದಲ ಜಂಟಿ ರ್ಯಾಲಿಯನ್ನು ಆಯೋಜಿಸಿದ್ದು, ಬಿಎಸ್ಪಿ ನಾಯಕಿ ಮಾಯಾವತಿ, ಎಸ್ಪಿ ನಾಯಕ ಅಖಿಲೇಶ್ ಯಾದವ್ ಮತ್ತು ಆರ್ ಎಲ್ ಡಿ ನಾಯಕ ಅಜಿತ್ ಸಿಂಗ್ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇಂತಹ ಹಲವು ರ್ಯಾಲಿಗಳು ನಡೆಯಲಿದ್ದು, ಮೈತ್ರಿ ಮುಖಂಡರು ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದು
ಎಸ್ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಗುರುವಾರ ತಿಳಿಸಿದ್ದಾರೆ.
ಎಸ್ಪಿ-ಬಿಎಸ್ಪಿ-RLD ಮೈತ್ರಿ ರಾಜಕೀಯ ರಂಗದಲ್ಲಿ ಹೊಸ ತರಂಗ ಸೃಷ್ಟಿಸಿದೆ. ಸಿದ್ಧಾಂತ ಆಧಾರದ ಮೇಲೆ ಮಾಡಿಕೊಳ್ಳಲಾಗಿರುವ ಈ ಮೈತ್ರಿ ವಿರೋಧ ಪಕ್ಷದಲ್ಲಿ ಭೀತಿ, ಹತಾಶೆಯನ್ನು ಉಂಟುಮಾಡಿದೆ ಎಂದು ರಾಜೇಂದ್ರ ಚೌಧರಿ ಹೇಳಿದ್ದಾರೆ.