ಲೋಕಸಭಾ ಚುನಾವಣೆ ಅಂದ್ರೆ ಪ್ರಜಾಪ್ರಭುತ್ವದ ಹಬ್ಬ. ದೇಶಕ್ಕೆ ಪ್ರಧಾನ ಮಂತ್ರಿಯನ್ನ ಆರಿಸೋಕೆ ಜನಪ್ರತಿನಿಧಿಯನ್ನ ಚುನಾಯಿಸಿ ಕಳುಹಿಸುವ ಗುರುತರವಾದ ಕೆಲಸ. ಕಾನೂನು, ಆಡಳಿತ ಮತ್ತು ಸಂವಿಧಾನಬದ್ಧ ಸಂಸದರ ಚುನಾವಣೆಯಲ್ಲಿ ಭಾಗಿಯಾಗುವುದು ಜವಾಬ್ದಾರಿ ಮತ್ತು ಹೊಣೆಗಾರಿಕೆ ಕೂಡ. ಸಂಸದರೆಂಬುದೇ ಮಹತ್ವದ ಗೌರವ & ತನ್ನದೇ ಆದ ಘನತೆಯನ್ನ ಉಳಿಸಿಕೊಂಡಿರುವ ಸಂವಿಧಾನಬದ್ಧ ಅಧಿಕಾರ. ಹೀಗಾಗಿ ಸಂಸದರನ್ನ ಆಯ್ಕೆ ಮಾಡಲು ಮತದಾರ ಪ್ರಭುಗಳು ಕೂಡ ಬಹು ಎಚ್ಚರಿಕೆಯಿಂದ ಸೈದ್ಧಾಂತಿಕ ಮತ್ತು ಅಭಿವೃದ್ಧಿಯ ಮಾನದಂಡಗಳನ್ನು ಬಳಸಿ ಹಕ್ಕನ್ನು ಚಲಾಯಿಸುತ್ತಾನೆ. ಅದೇ ರೀತಿ ಸಂಸತ್ ಪ್ರವೇಶ ಬಯಸಿ ರಾಜಕೀಯ ಪಕ್ಷಗಳ ಮುಖಂಡರು ಕೂಡ ನಾನಾ ರೀತಿಯ ಲೆಕ್ಕಚಾರ ನಡೆತ್ತಾರೆ. ತಮ್ಮದೇ ರೀತಿಯಲ್ಲಿ ಮತದಾರರನ್ನು ಮತದಾರ ಪ್ರಭುಗಳ ಚಿಂತನೆಗಳನ್ನ ಕೂಡಿಸಿ ಗುಣಿಸಿ ಭಾಗಾಕಾರ ಮಾಡ್ತಾರೆ. ಇಲ್ಲಿ ಒಮ್ಮೆ ಮತದಾರನ ನಾಡಿಮಿಡಿತ ಅರಿತ ವ್ಯಕ್ತಿ ದೆಹಲಿ ಪ್ರವೇಶಿಸಿ 5 ವರ್ಷ ಸಂಸದರಾಗಿ ಅಧಿಕಾರ ಚಲಾಯಿಸುತ್ತಾರೆ. ಈ ರೀತಿಯ ಸಂಸತ್ ಅಭ್ಯರ್ಥಿ, ಮತದಾರರ ಮನದಾಳ ಮತ್ತು ಕ್ಷೇತ್ರಗಳ ಲೆಕ್ಕಾಚಾರದ ಸಮಗ್ರ ಮಾಹಿತಿಯನ್ನು ವೀಕ್ಷಕರ ಮುಂದಿಡುವುದೇ ಲೋಕ ಲೆಕ್ಕಾಚಾರ, ಸಂಸದರ ರಿಪೋರ್ಟ್ ಕಾರ್ಡ್
ಲೋಕಸಭೆ ಚುನಾವಣೆಗೆ ಕೆಲವು ದಿನ ಬಾಕಿ, ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಏಲಕ್ಕಿ ತವರು ಹಾವೇರಿ ಲೋಕಸಭೆ ಕ್ಷೇತ್ರದಲ್ಲೂ ರಂಗು ಜೋರಾಗಿದೆ. ಟಿಕೆಟ್ ಆಕಾಂಕ್ಷಿಗಳು ದಿನೇದಿನೇ ಹೆಚ್ಚುತ್ತಲೇ ಇದ್ದಾರೆ. ಕಾಂಗ್ರೆಸ್ - ಬಿಜೆಪಿ ಪಕ್ಷದ ಅಕಾಂಕ್ಷಿಗಳು ಟಿಕೆಟ್ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತರು, ಕುರುಬರು & ಮುಸ್ಲೀಂ ಮತಗಳು ನಿರ್ಣಾಯಕವಾಗಿವೆ. ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು, ರಾಣೇಬೆನ್ನೂರು ಸೇರಿ ಗದಗ ಜಿಲ್ಲೆಯ ಗದಗ , ರೋಣ, ಶಿರಹಟ್ಟಿ ವಿಧಾನಸಭೆ ಕ್ಷೇತ್ರ ಬರುತ್ತವೆ. ಈ ಹಿನ್ನಲೆ ಹಾವೇರಿ & ಗದಗ ಜಿಲ್ಲೆಯ ಆಕಾಂಕ್ಷೆಗಳ ಪಟ್ಟಿ ಜಾಸ್ತಿಯಾಗಿದೆ.
ಇದನ್ನೂ ಓದಿ: ಹವಾಮಾನ ವೈಪರಿತದಿಂದ ಮಾವಿನ ಬೆಳೆಗೆ ತೊಂದರೆಯಾದರೆ ಈ ಸಂರಕ್ಷಣಾ ಕ್ರಮ ಅನುಸರಿಸಿ...!
ಹಾವೇರಿ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ನಾಯಕರು ಭಾರೀ ರಣತಂತ್ರ ನಡೆಸಿದ್ದಾರೆ. ಸತತವಾಗಿ ಮೂರು ಬಾರಿ ಗೆದ್ದಿರೋ ಬಿಜೆಪಿ ಸಂಸದ ಶಿವಕುಮಾರ ಉದಾಸಿ ರಾಜಕೀಯದಿಂದ ಹಿಂದೆ ಸರಿಯುವ ಮಾತನ್ನಾಡಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಸಂಖ್ಯೆ ಕೂಡಾ ಹೆಚ್ಚಾಗಿದೆ. ಕಳೆದ 3 ಸಲ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಬಿಜೆಪಿಯ ಭದ್ರಕೋಟೆಯಾಗಿ ಪರಿಣಮಿಸಿದೆ.
ಸಂಸದರ ಸಾಧನೆ
* ವಿವಿಧ ಯೋಜನೆಗಳಿಗೆ 1000 ಕೋಟಿ
* ರಸ್ತೆ, ಮೇಲ್ಸೇತುವೆಗಳಿಗೆ 245 ಕೋಟಿ
* ಗದಗ-ರಾಣೆಬೆನ್ನೂರು ನಗರ ಅಭಿವೃದ್ಧಿ 316 ಕೋಟಿ
* 1 ಲಕ್ಷ ಹೆಕ್ಟೇರ್ ಭೂಮಿಗೆ 208 ಕೋಟಿ ರೂ. ನೀರಾವರಿ
* ವಿವಿಧೆಡೆ ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಹಣ
* ಹುಬ್ಬಳ್ಳಿ-ಗದಗ-ಕೊಪ್ಪಳ-ಹೊಸಪೇಟೆ ರೈಲ್ವೆ ದ್ವಿಪಥ
* ರಾಣೆಬೆನ್ನೂರು-ಶಿಕಾರಿಪುರ ನೂತನ ರೈಲ್ವೆ ಮಾರ್ಗ
* ಗದಗ್ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶಕ್ಕೆ ಕಾಮಗಾರಿ
* 2009ರಿಂದ ಸಂಸತ್ ನೀತಿ ನಿರೂಪಣೆಗಳಲ್ಲಿ ಭಾಗಿ
* ಶೇ.89ರಷ್ಟು ಹಾಜರಾತಿ, 60 ಚರ್ಚೆಗಳಲ್ಲಿ ಭಾಗಿ
* ಕೇಂದ್ರದ ವಿವಿಧ ಸ್ಥಾಯಿ ಸಮಿತಿ ಸದಸ್ಯರಾಗಿ ಸೇವೆ
ಕಳೆದ ಮೂರು ಅವಧಿ ಅಂದ್ರೆ 2009ರಿಂದಲೂ ಸಂಸದರಾಗಿ ಶಿವಕುಮಾರ್ ಉದಾಸಿ ಇದ್ದಾರೆ. ಹಲವು ಅಭಿವೃದ್ಧಿ ಕಾರ್ಯಗಳು ನಡೀತಿದ್ರೂ... ಇನ್ನೂ ಉತ್ತಮ ಮತ್ತು ಹಲವು ಅವಕಾಶಗಳನ್ನ ಕೈಚೆಲ್ಲಿದ್ದಾರೆ ಅಂತ ಮತದಾರರು ದೂಷಿಸುತ್ತಿದ್ದಾರೆ.. ಆದರೆ ಶಾಸಕರ ಜೊತೆಗೆ ಸಮನ್ವಯ ಕೊರತೆ ಹಾಗೂ ಬದ್ಧತೆಯ ಕೊರತೆಯಿಂದ ಮತದಾರನ ನಿರೀಕ್ಷೆಗಳು ಹುಸಿಯಾಗಿವೆ.
ಬಿಜೆಪಿ ಪ್ಲಸ್
1) ಸತತ 3 ಬಾರಿ ಗೆದ್ದು BJP ಭದ್ರಕೋಟಿ ಆಗಿರುವುದು
2) ಜಿಲ್ಲೆಯಲ್ಲಿ ಮೋದಿಗಿರುವ ಬಹುದೊಡ್ಡ ವರ್ಚಸ್ಸು
3) ಹಿಂದುತ್ವದ ಪರ ಸಂಘಟನೆ & ದೊಡ್ಡ ಸಮುದಾಯ
4) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
5) ಯಶಸ್ವಿ ರೈಲ್ವೆ ಕಾಮಗಾರಿ ಹಾಗೂ ಹೆದ್ದಾರಿ ಕಾಮಗಾರಿ
ಬಿಜೆಪಿಯ ಮೈನಸ್
1. ಬಿಜೆಪಿ ಸರ್ಕಾರವಿದ್ದಾಗ ಉತ್ತಮ ಕೆಲಸ ಮಾಡದಿರುವುದು
2. ಸಿಎಂ & ಕೃಷಿ ಸಚಿವರಿದ್ದರು ಅಭಿವೃದ್ಧಿಯಲ್ಲಿ ಹಿನ್ನಡೆ
3. ಜಿಲ್ಲೆಯ 5 ಕ್ಷೇತ್ರಗಳಲ್ಲೂ ಬಿಜೆಪಿಯ ಹೀನಾಯ ಸೋಲು
4. ಪಕ್ಷದಲ್ಲಿ ಟಿಕೆಟ್ ಸಂಬಂಧ ಭುಗಿಲೆದ್ದ ಅಸಮಾಧಾನ
5. ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಗೆಲುವು
ʻಮೋದಿಯೇ ಬಂದು ಕ್ಯಾಂಪು ಹಾಕಿದರೂ ಮತ್ತೆ ಉದಾಸಿಗೆ ಮಾತ್ರ ಮತ ಹಾಕುವುದಿಲ್ಲ” ಎಂದು ಜನಸಾಮಾನ್ಯರಷ್ಟೇ ಅಲ್ಲ, ಬಿಜೆಪಿ ನಿಷ್ಠಾವಂತ ಕಾರ್ಯಕರ್ತರೇ ಕಳೆದ ಎರಡು-ಮೂರು ವರ್ಷದಿಂದ ಠೇಂಕರಿಸುತ್ತಿದ್ದಾರೆ. ಹೀಗಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಸಲ ಭ್ರಮನಿರಸ ಗ್ಯಾರಂಟಿ ಅಂತಿದಾರೆ ಕಾಂಗ್ರೆಸ್ ಮುಖಂಡರು.. ಯಾಕಂದ್ರೆ ಐಜಿ ಸನದಿ ಥರ ಮುಸ್ಲಿಂ ಸೂತ್ರ ಅಳವಡಿಸದೆ ಲಿಂಗಾಯತ ಸಮುದಾಯದ ಮುಖಂಡರನ್ನೇ ಕಣಕ್ಕಿಳಿಸೋ ಲೆಕ್ಕಾಚಾರ ನಡೆದಿದ್ಯಂತೆ.
ಕಾಂಗ್ರೆಸ್ ಪ್ಲಸ್
* ಕಾಂಗ್ರೆಸ್ ಕೆಳಮಟ್ಟದ ಸಂಘಟನೆ, ನಾಯಕರ ಐಕ್ಯತೆ
* ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲವು
* ಬಿಜೆಪಿ ವಿರೋಧಿ ಅಲೆ ಹೆಚ್ಚಾಗಿ ಕಾಣಿಸಿಕೊಂಡಿದೆ
* ನಾಯಕರ ಮಧ್ಯೆ ಅಸಮಾಧಾನ, ಗುಂಪುಗಾರಿಕೆ ಇಲ್ಲ
* ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ
ಕಾಂಗ್ರೆಸ್ ಮೈನಸ್
* ಮೂರು ಸಲ ಸಂಸತ್ ಚುನಾವಣೆಯಲ್ಲಿ ಸೋಲು
* ಸೂಕ್ತವಾದ ಅಭ್ಯರ್ಥಿ ಕಾಂಗ್ರೆಸ್ಗೆ ಸಿಗದಿರುವುದು
* ಜನರ ವಿಶ್ವಾಸ ಗಳಿಸುವ ಪ್ರಭಾವಿ ನಾಯಕರ ಕೊರತೆ
* ಶಾಸಕರಿಗೆ ಸೂಕ್ತ ಸ್ಥಾನಸಿಗದ ಹಿನ್ನಲೆ ಅಸಮಾಧಾನ
ಅಂದ್ ಹಾಗೆ.. ಇದಿಷ್ಟು ಕಾಂಗ್ರೆಸ್ ಪಕ್ಷದ ಸ್ಥಿತಿಗತಿ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕ್ಷೇತ್ರದ ಎಲ್ಲಾ ಕಡೆ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಹೊರತಾಗಿ ಜನರ ವಿಶ್ವಾಸ ಸಂಪಾದಿಸುವ ನಾಯಕ ಉದಯವಾಗಬೇಕಿದೆ.
ಈಗಾಗಲೇ ಹಳತು ಮುಖಗಳ ಬಗ್ಗೆ ಬೇಸರಗೊಂಡಿರೋ ಕಾರ್ಯಕರ್ತರು ಹೊಸ ಮುಖಕ್ಕಾಗಿ ಹಾತೊರೆಯುತ್ತಿದ್ದಾರೆ. ಹಾಗಾದ್ರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸೋ ಸಂಭಾವ್ಯ ಹುರಿಯಾಳುಗಳು ಯಾರು ಅಂತ ನೋಡೋಣ..
ಇದನ್ನೂ ಓದಿ: ಪ್ರಹ್ಲಾದ್ ಜೋಶಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಯಾರು ರಣಕಲಿಗಳು..?
* ಕೆ.ಈ.ಕಾಂತೇಶ, BJP
* ಬಿ.ಸಿ.ಪಾಟೀಲ, BJP
* ಶಿವರಾಜ್ ಸಜ್ಜನ್, BJP
* ಬಸವರಾಜ್ ಬೊಮ್ಮಾಯಿ, BJP
* ಡಾ.ಮಹೇಶ ನಾಲವಾಡ್, BJP
* ಸಲೀಂ ಅಹ್ಮದ್, INC
* ಆನಂದ ಗಡ್ಡದೇವರಮಠ, INC
* ಸಜೀವಕುಮಾರ ನೀರಲಗಿ, INC
* ಎಂ.ಎಂ.ಹಿರೇಮಠ, INC
ಒಟ್ನಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡುತ್ತಿದೆ. ಹ್ಯಾಟ್ರಿಕ್ ವೀರ ಶಿವಕುಮಾರ್ ಉದಾಸಿ ಹಿಟ್ ವಿಕೆಟ್ ಸೂಚನೆ ನೀಡಿದ್ದಾರೆ. ಇದು ಕೇಸರಿ ಬ್ರಿಗೇಡ್ಗೆ ಕೊಂಚ ಬೇಸರ ತರಿಸಿದೆ. ಮೋದಿ ಅಲೆಯಲ್ಲಿ ಸಲೀಸಾಗಿ ಸಂಸತ್ ಪ್ರವೇಶಿಸಬಹುದು ಅನ್ನೋದು ಕೇಸರಿ ಕಲಿಗಳ ಲೆಕ್ಕಾಚಾರ. ಆದ್ರೆ ಕಾಂಗ್ರೆಸ್ ಪಕ್ಷವೂ ತಕ್ಕ ಪ್ರತಿರೋಧ ನೀಡುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸಿಎಂ ಸಿದ್ದರಾಮಯ್ಯ ವರ್ಚಸ್ಸು ಮತ್ತು ಹಿಂದುಳಿದ ವರ್ಗಗಗಳ ಮತ ಹುರುಪು ನೀಡಿದೆ. ಆದ್ರೂ ಕೆಲವೇ ದಿನಗಳಲ್ಲಿ ಎಲ್ಲದಕ್ಕೂ ಸ್ಪಷ್ಟ ಉತ್ತರ ಸಿಗಲಿದೆ.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವಕುಮಾರ ಉದಾಸಿ ಸ್ಪರ್ದೆ ಮಾಡಿ , ಕಾಂಗ್ರೇಸ್ ಅಭ್ಯರ್ಥಿ ಡಿ.ಆರ್.ಪಾಟೀಲ ವಿರುದ್ದ ಸತತವಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಸತತವಾಗಿ ಹಿಂದೆ ನಡೆದ ಚುನಾವಣೆಯಲ್ಲಿ ಎರಡು ಭಾರಿ ಸಲೀಂ ಅಹ್ಮದ್ ಸೋಲಿಸಿ, 3ನೇ ಭಾರಿಗೆ ಸಹ ಶಿವಕುಮಾರ ಉದಾಸಿ ಸೋಲಿಸಿ ಹಾವೇರಿ ಲೋಕಸಭಾ ಕ್ಷೇತ್ರವನ್ನ ಬಿಜೆಪಿಯ ಭದ್ರಕೋಟೆಯನ್ನ ಮಾಡಿದ್ದರು.ಮೂರನೇ ಭಾರಿಗೆ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು 6,83,660 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಅವರಿಂದ 1,40,882 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೊಸ ಅಭ್ಯರ್ಥಿಯನ್ನ ಹಾಕಿದ್ದ ಕಾಂಗ್ರೇಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದರು..
___
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
ಕಾಂಗ್ರೇಸ್ ಅಭ್ಯರ್ಥಿಯ ವಿರುದ್ದ ಹೆಚ್ಚಿನ ಅಂತರದಿಂದ ಗೆಲವು.
2009- ಬಿಜೆಪಿ- ಶಿವಕುಮಾರ ಉದಾಸಿ-87,920
2013- ಬಿಜೆಪಿ- ಶಿವಕುಮಾರ ಉದಾಸಿ-87,571
2019-ಬಿಜೆಪಿ-ಶಿವಕುಮಾರ ಉದಾಸಿ- 1,40,882
___
ಈ ಬಾರಿಯ ಆಕಾಂಕ್ಷಿಗಳು ಯಾರು?
2024 ರ ಲೋಕಸಭಾ ಚುನಾವಣೆಯಲ್ಲಿ ಶಿವಕುಮಾರ ಉದಾಸಿ ಚುನಾವಣೆಯ ಕಣದಿಂದ ಹಿಂದೆ ಸರಿಯುವ ಮಾತನ್ನಾಡಿದ್ದರಿಂದ ಬಿಜೆಪಿಯಲ್ಲಿ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಅಭ್ಯರ್ಥಿಗಳು ಟಿಕೆಟ್ ತಮ್ಮದೆ ರೀತಿಯ ಕಸರತ್ತು ನಡೆಸಿದ್ದಾರೆ.
ಬಿಜೆಪಿ ಆಕಾಂಕ್ಷಿಗಳ ಹೆಸರು.
* ಕೆ.ಈ.ಕಾಂತೇಶ - ಈಶ್ವರಪ್ಪ ಪುತ್ರ.
* ಬಿ.ಸಿ.ಪಾಟೀಲ - ಮಾಜಿ ಸಚಿವ
* ಶಿವರಾಜ್ ಸಜ್ಜನ್. ಮಾಜಿಶಾಸಕ
* ಬಸವರಾಜ್ ಬೊಮ್ಮಾಯಿ ( ಚರ್ಚೆಯಲ್ಲಿದೆ)
* ಡಾ.ಮಹೇಶ ನಾಲವಾಡ್.
* ಸಂದೀಪ್ ಪಾಟೀಲ
* ಅನಿಲ ಮೆಣಸಿನಕಾಯಿ
* ಮಂಜುನಾಥ ಮಡಿವಾಳರ ಹೀಗೆ ಅನೇಕರು ತೆರಮರೆಯ ಕಸರತ್ತು ನಡೆಸಿದ್ದಾರೆ.
__
ಕಾಂಗ್ರೇಸ್. ಆಕಾಂಕ್ಷಿಗಳ ಪಟ್ಟಿ.
* ಸಲೀಂ ಅಹ್ಮದ್.
* ಆನಂದ ಗಡ್ಡದೇವರಮಠ
* ಸಜೀವಕುಮಾರ ನೀರಲಗಿ.
* ಎಂ.ಎಂ.ಹಿರೇಮಠ
* ಬಸವರಾಜ್ ಶಿವಣ್ಣನವರ್ ( ಪಕ್ಷ ಸೂಚನೆ ಮಾಡಿದರೆ ನಿಲ್ಲವ ಸಾಧ್ಯತೆ)
* ಹೀಗೆ ಎರಡು ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಮಾತ್ರ ದೊಡ್ಡದಾಗಿದೆ. ಕೊನೆಯಲ್ಲಿ ಹೈಕಮಾಂಡ್ ಯಾರಿಗೆ ಮಣೆಹಾಕುತ್ತೆ ಅನ್ನೋದು ಕಾದುನೋಡಬೇಕಿದೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಪಾರುಪತ್ಯ
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸತತವಾಗಿ ಬಿಜೆಪಿ ಮೂರು ಬಾರಿ ಗೆಲವು ಸಾಧಿಸಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ವಚ್ಚಸ್ಸು , ಲಿಂಗಾಯತ ಮತಗಳು ಹೆಚ್ಚು ಇರೋ ಕಾರಣಕ್ಕಾಗಿ ಬಿಜೆಪಿ ಆಭ್ಯರ್ಥಿ ಶಿವಕುಮಾರ ಉದಾಸಿ 3 ಭಾರಿ ಗೆಲವು ಸಾಧಿಸಿದ್ದರು. ಆದರೆ ಈಗ ಚುನಾವಣೆಯ ಕಣದಿಂದ ಹಿಂದೆಕ್ಕೆ ಸರಿದುಕೊಂಡಿದ್ದಾರೆ. ಅಲ್ಲದೆ 8 ವಿಧಾನಸಭಾ ಕ್ಷೇತ್ರದಲ್ಲಿ 1 ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಗೆದ್ದಿದ್ದಾರೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೇಸ್ ಶಾಸಕ ಕ್ಷೇತ್ರಗಳು ಹೆಚ್ಚಾಗಿದ್ದರಿಂದ 2 ಪಕ್ಷಗಳು ತಮ್ಮದೆ ಲೆಕ್ಕಚಾರವನ್ನ ಮಾಡುತ್ತಿವೆ. ಒಟ್ಟಾರೆ ಹಾವೇರಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ರಂಗೆರುತ್ತಿದೆ. ಇತ್ತ ಟಿಕೆಟ್ ಪಡೆಯಲು ಆಕಾಂಕ್ಷಿಗಳು ತೆರೆಮರೆ ಹಿಂದೆ ಕಸರತ್ತು ಮಾಡ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುಬೇಕು ಎಂಬ ಲೆಕ್ಕಚಾರದಲ್ಲಿದ್ದಾರೆ. JDS – BJP ವರಿಷ್ಠರು ಯಾರಿಗೆ ಟಿಕೆಟ್ ಕೊಡ್ಬೇಕು ಅಂತಾ ಯೋಚನೆ ಮಾಡ್ತಿದ್ದಾರೆ. ಇನ್ನು ರಾಷ್ಟ್ರೀಯ ಪಕ್ಷ ಟಿಕೆಟ್ ಘೋಷಣೆ ಬಳಿಕ, ಮತದಾರ ಪ್ರಭು ಈ ಸಾರಿ ಯಾರಿಗೆ ಆಶೀರ್ವಾದ ಮಾಡುತ್ತಾನೆಂದು ಕಾದು ನೋಡಬೇಕಿದೆ...
ಹಾವೇರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ-17,58,021
ಮಹಿಳೆಯರು-868510
ಪುರುಷರು-889421
ತೃತೀಯಲಿಂಗಿಗಳು-90
ಹಾವೇರಿ ಲೋಕಸಭಾ ಕ್ಷೇತ್ರದ ಜಾತಿವಾರು ಮತದಾರರ ಸಂಖ್ಯೆ.
ಲಿಂಗಾಯತರು ಮತಗಳು-6,80,000
ಕುರುಬ ಮತಗಳು-2,70,000
ಪರಿಶಿಷ್ಟ ಜಾತಿ Sc- 2.00,000
ಪಂಗಡದ ಮತಗಳು ST- 1,25,000
ಮುಸ್ಲಿಂ ಮತಗಳು-2,95,000
ಗಂಗಾಮತ ಮತಗಳು-50,000
ಬ್ರಾಮ್ಮಣ- 45,000
ಮರಾಠ- 45,000
ಇತರೆ-1,50,000
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ