ವಿರೋಧ ಪಕ್ಷದ ಬಿಗಿಪಟ್ಟು: ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ

'ಸರ್ಕಾರಕ್ಕೆ ಬಹುಮತವೆ ಇಲ್ಲ. ಕಲಾಪ ನಡೆಸುವುದರಲ್ಲಿ ಅರ್ಥವೇ ಇಲ್ಲ'- ಕೋಟ ಶ್ರೀನಿವಾಸ ಪೂಜಾರಿ  

Last Updated : Feb 7, 2019, 03:33 PM IST
ವಿರೋಧ ಪಕ್ಷದ ಬಿಗಿಪಟ್ಟು: ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ title=
Pic Courtesy: ANI

ಬೆಂಗಳೂರು: ಬಜೆಟ್ ಅಧಿವೇಶನದ ಮೊದಲ ದಿನ ಗದ್ದಲ ಸೃಷ್ಟಿಸಿದ್ದ ವಿರೋಧ ಪಕ್ಷದ ಶಾಸಕರು ಇಂದೂ ಕೂಡ ವಿಧಾನಸಭೆಯಲ್ಲಿ ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಗದ್ದಲ ಸೃಷ್ಟಿಸಿದರು. ಪರಿಣಾಮವಾಗಿ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆಯೇ ಧರಣಿ ಆರಂಭಿಸಿದ ಬಿಜೆಪಿ ಸದಸ್ಯರು ಸರ್ಕಾರಕ್ಕೆ ಬಹುಮತವಿಲ್ಲ, ಧಿಕ್ಕಾರ ಧಿಕ್ಕಾರ; ಸಿ ಎಂ ಗೋ ಬ್ಯಾಕ್‍  ಎಂದು ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಪಡಿಸಿದರು. ಇದರ ಮಧ್ಯೆಯೇ ಸಚಿವ ಕೃಷ್ಣ ಭೈರೇಗೌಡ  ಕಾಗದಪತ್ರಗಳ ಮಂಡನೆ ಮಾಡಲು ಶುರುಮಾಡಿದರು. ಈ ನಡುವೆ ಮತ್ತೆ ಬಿಜೆಪಿ ಶಾಸಕರು ಕೂಗಾಟ ಹೆಚ್ಚಾದ ಹಿನ್ನಲೆ ಕಲಾಪವನ್ನು 15 ನಿಮಿಷ ಮುಂದೂಡಲಾಯಿತು. ಬಳಿಕವೂ ಬಿಜೆಪಿ ಸದಸ್ಯರಿಂದ ಧರಣಿ, ಗದ್ದಲ, ಘೋಷಣೆಗಳ ಕೂಗಾಟದಿಂದ ಸದನ ಗೊಂದಲದ ಗೂಡಾಯಿತು. ಈ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.

ಮತ್ತೊಂದೆಡೆ ವಿಧಾನ ಪರಿಷತ್ ನಲ್ಲೂ ವಿರೋಧ ಪಕ್ಷದವರು ಗದ್ದಲ ಸೃಷ್ಟಿಸಿದರು. ಯಾವ ಕಾರಣಕ್ಕಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ ಎನ್ನುವುದನ್ನಾದರೂ ಹೇಳಿ ಎಂದು ವಿರೋಧ ಪಕ್ಷದ ನಾಯಕರನ್ನು ಸಭಾಪತಿ ಪ್ರಶ್ನಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, 'ಸರ್ಕಾರಕ್ಕೆ ಬಹುಮತವೆ ಇಲ್ಲ. ಕಲಾಪ ನಡೆಸುವುದರಲ್ಲಿ ಅರ್ಥವೇ ಇಲ್ಲ' ಎಂದರು.

Trending News