ಮುಂಗಾರು ಜೋರು, ಮರೆಯದಿರಿ ನಿಮ್ಮ ಪೈರು: ರೈತರಿಗೆ ಇಲ್ಲಿವೆ ಸಲಹೆಗಳು

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಬಿತ್ತನೆ ಮಾಡಿರುವ ಬೆಳೆಗಳ ಕುರಿತು ಮುಂಜಾಗ್ರತೆ ವಹಿಸಬೇಕು. ಹೆಚ್ಚಿನ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತ ಸಂದರ್ಭದಲ್ಲಿ ಮೊದಲು ನೀರನ್ನು ಹೊರಗಡೆ ಬಸಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಹೇಳಿದೆ.

Written by - Manjunath N | Last Updated : Jul 8, 2022, 09:22 PM IST
  • ಬೆಳೆಗಳಲ್ಲಿ ನೀರು ನಿಲ್ಲುವುದರಿಂದ ಹೆಚ್ಚಿನ ತೇವಾಂಶ ಉಂಟಾಗುತ್ತದೆ.
  • ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಪೋಷಕಾಂಶಗಳ ಕೊರತೆಯಿಂದಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ.
ಮುಂಗಾರು ಜೋರು, ಮರೆಯದಿರಿ ನಿಮ್ಮ ಪೈರು: ರೈತರಿಗೆ ಇಲ್ಲಿವೆ ಸಲಹೆಗಳು title=
file photo

ಬೆಂಗಳೂರು: ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರೈತರು ಬಿತ್ತನೆ ಮಾಡಿರುವ ಬೆಳೆಗಳ ಕುರಿತು ಮುಂಜಾಗ್ರತೆ ವಹಿಸಬೇಕು. ಹೆಚ್ಚಿನ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತ ಸಂದರ್ಭದಲ್ಲಿ ಮೊದಲು ನೀರನ್ನು ಹೊರಗಡೆ ಬಸಿದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಹೇಳಿದೆ.

ಬೆಳೆಗಳಲ್ಲಿ ನೀರು ನಿಲ್ಲುವುದರಿಂದ ಹೆಚ್ಚಿನ ತೇವಾಂಶ ಉಂಟಾಗುತ್ತದೆ. ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಪೋಷಕಾಂಶಗಳ ಕೊರತೆಯಿಂದಾಗಿ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ. 

ಇಂತಹ ಸಂದರ್ಭದಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ಬೆಳೆಗಳಿಗೆ ನೀರಿನಲ್ಲಿ ಕರಗುವ ರಸಗೊಬ್ಬರಗಳಾದ 13:0:45 ಪೋಟ್ಯಾಶಿಯಂ ನೈಟ್ರೈಟ್ ಅಥವಾ 19:19:19 ಇವುಗಳಲ್ಲಿ ಯಾವುದಾರೊಂದು ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಬೆಳೆಗಳ ಮೇಲೆ ಸಿಂಪರಣೆ ಮಾಡಬೇಕು. ಇಂತಹ ಸಂದರ್ಭಗಳಲ್ಲಿ ನ್ಯಾನೋ ಯೂರಿಯಾ  ದ್ರಾವಣವನ್ನು ಪ್ರತಿ ಲೀಟರ್ ನೀರಿಗೆ 2.5 ಮಿಲಿ ಲೀಟರ್‍ದಂತೆ ಸಿಂಪರಣೆ ಮಾಡುವುದರಿಂದ ಬೆಳೆಗಳ ಬೆಳವಣಿಗೆ ಸುಧಾರಿಸುತ್ತದೆ ಎಂದು ತಿಳಿಸಿದೆ.

ಮುಂಗಾರು ಹಂಗಾಮಿನ ಮುಂದಿನ ದಿನಗಳಲ್ಲಿ ಬಿತ್ತನೆ ಮಾಡುವಂತಹ ಬೆಳೆಗಳಿಗೆ ಶಿಫಾರಿತ ಪ್ರಮಾಣಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಬೀಜೋಪಚಾರ ಮಾಡುವುದರಿಂದ ಬೆಳೆಗಳ ಸೊರಗು ರೋಗ, ಸಸಿ ಸಾಯುವ ರೋಗವನ್ನು ತಡೆಗಟ್ಟಬಹುದು. ಪ್ರತಿ ಕೆ.ಜಿ ಬೀಜಕ್ಕೆ 4 ಗ್ರಾಂ ಕಾರ್ಬನ್‍ಡೈಜೀಮ್ ಅಥವಾ 4 ಗ್ರಾಂ ಟ್ರೈಕೋಡರ್ಮಾ ವಿರಿಡೆ ಬೀಜೋಪಚಾರ ಔಷಧಿಯನ್ನು ಬಳಸುವುದು ಸೂಕ್ತ.

ಹೆಸರು ಬೆಳೆ:

ಹೆಸರು ಬೆಳೆಯಲ್ಲಿ ಹಳದಿ ನಂಜಾಣು ರೋಗ ಹಾಗೂ ಇತರ ರಸಹೀರುವ ಬಾದೆಗಳಿದ್ದಲ್ಲಿ ನಂಜಾಣು ರೋಗ ಬಾದಿತ ಸಸ್ಯಗಳನ್ನು ಕಿತ್ತು ಹಾಕಬೇಕು. ರೋಗ ಹರಡುವುದನ್ನು ತಡೆಹಿಡಿಯಲು ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ 0.5 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಅಥವಾ ಥೈಯೋಮಿಥಾಕ್ಸಾಮ್ ಶೇ.25 ಡಬ್ಲೂಜಿ 1 ಗ್ರಾಂ ಪ್ರತಿ ಲೀಟರ್‍ಗೆ ಬೆರೆಸಿ ಸಿಂಪರಣೆ ಮಾಡಬಹುದು.
 

ಸೋಯಾಬೀನ ಬೆಳೆ:

ಸೋಯಾಬೀನ ಬೆಳೆಯಲ್ಲಿ ಎಲೆ ತಿನ್ನುವ ಕೀಟಗಳ ನಿರ್ವಹಣೆಗಾಗಿ ಕ್ಲೋರಾಂಟ್ರಿನಿಪ್ರೋಲ್ 18.5 ಇ.ಸಿ. 0.2 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಅಥವಾ ಕ್ಲೋರಾಂಟ್ರಿನಿಪ್ರೋಲ್, ಲ್ಯಾಮ್ಡಾಸೈಎಯಾಲೋಥ್ರಿನ್ 5 ಇಸಿ. 0.5 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಅಥವಾ ಸ್ಪೈನೋಸ್ಯಾಡ್ 20 ಡಬ್ಲೂಜಿ 0.2 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಸೋಯಾಬೀನ ಬೆಳೆಯಲ್ಲಿ ಕಾಂಡ ಕೊರೆಯುವ ನೊಣದ ಭಾದೆ ಮತ್ತು ಕಾಯಿ ಕೊರೆಯುವ ಹುಳ ನಿರ್ವಹಣೆಗಾಗಿ ಲ್ಯಾಮ್ಡಾಸೈಯಲೋಥ್ರಿನ್, ಥೈಯಾಮಿಥಾಕ್ಸಾಮ್ 1 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಸೋಯಾಬೀನ ತುಕ್ಕು ರೋಗ ಮತ್ತು ಎಲೆ ಚುಕ್ಕೆ ರೋಗ ನಿರ್ವಹಣೆಗಾಗಿ ಹೆಕ್ಸಾಕೊನೊಜೋಲ್ 5 ಇಸಿ. 1 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಅಥವಾ ಪ್ರೋಪಿಕೊನಾಜೋಲ್ 25 ಇಸಿ 1 ಎಮ್.ಎಲ್ ಅಥವಾ ಟೆಬ್ಯುಕೊನೊಜೊಲ್ ಶೇ.80, ಟ್ರೈಪ್ಲಾಕ್ಸ್ಸಿಸ್ಟ್ರೊಬಿನ್ ಶೇ.25 ಡಬ್ಲೂಜಿ 0.5 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ಹತ್ತಿ ಬೆಳೆ:

ಹತ್ತಿ ಬೆಳೆಗೆ ಗುಲಾಬಿ ಕಾಯಿ ಕೊರಕದ ರೋಗ ತಡೆಗಟ್ಟಲು ಮುಂಜಾಗ್ರತೆಗಾಗಿ ಉತ್ತಮ ಪೋಷಕಾಂಶಗಳ ನಿರ್ವಹಣೆ ಹಾಗೂ 100 ದಿನದ ಒಳಗಿನ ಬೆಳೆಗೆ ಪ್ರೊಪೆನೋಫಾಸ್ 50 ಇಸಿ 2 ಎಮ್.ಎಲ್ ಪ್ರತಿ ಲೀಟರ್ ನೀರಿಗೆ ಹಾಗೂ ಶೇ.1.0 ರ ಪೋಟ್ಯಾಷಿಯಂ ನೈಟ್ರೇಟ್ ದ್ರಾವಣ ಸಿಂಪರಿಸಬೇಕು.

ಏಕಬೆಳೆ ಪದ್ದತಿ ಇರುವಲ್ಲಿ ಮತ್ತು ತಡವಾದ ಹಿಂಗಾರು ಬೇಸಾಯ ಮಾಡಲು ನೀರು ವ್ಯವಸ್ಥೆ ಇರುವವರು ಗೋವಿನಜೋಳ, ಶೇಂಗಾ, ಹತ್ತಿ, ಮೆಣಸಿನಕಾಯಿ, ಸೂರ್ಯಕಾಂತಿ, ತೊಗರಿ, ಔಡಲ, ತಪ್ಪಲುಪಲ್ಯ, ಕೋತಂಬರಿ, ಪಾಲಕ, ಮೆಂತ್ಯ ಇತ್ಯಾದಿ ಕಾಯಿಪಲ್ಯ ಹಾಗೂ ಬಿನ್ಸ್, ಸವತೆ, ಹೀರೆಕಾಯಿ, ಇತ್ಯಾದಿ ಬೆಳೆಗಳ ಬಿತ್ತನೆ ಕೈಗೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News