ರೈತರು, ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಕರೆದ ಸಭೆಗೆ ಕುಮಾರಸ್ವಾಮಿ ಗೈರು

ರೈತರು, ಅಸಂಘಟಿತ ಕಾರ್ಮಿಕರ ಸದ್ಯದ ಪರಿಸ್ಥಿತಿಯ ಬಗ್ಗೆ, ಸಾಂಪ್ರದಾಯಿಕ ವೃತ್ತಿಪರರ ಸಂಕಷ್ಟಗಳ ಬಗ್ಗೆ ಹಾಗೂ ಪ್ರಮುಖವಾಗಿ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವಿಳಂಬವಾದ ಬಗ್ಗೆ ಚರ್ಚೆ ಸಮಾಲೋಚನೆ ನಡೆಯುತ್ತಿದೆ. 

Written by - Yashaswini V | Last Updated : Apr 30, 2020, 11:59 AM IST
ರೈತರು, ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಕರೆದ ಸಭೆಗೆ ಕುಮಾರಸ್ವಾಮಿ ಗೈರು title=

ಬೆಂಗಳೂರು: ಲಾಕ್‍ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ  ರೈತರು (Farmers)  ಮುತ್ತು ಕಾರ್ಮಿಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ  ಸಿದ್ದರಾಮಯ್ಯ (Siddaramaiah) ಅವರು ಕರೆದಿದ್ದ ವಿರೋಧ ಪಕ್ಷಗಳ ನಾಯಕರ ಸಭೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಗೈರಾಗಿದ್ದಾರೆ. ಈ ಮೂಲಕ ಸದಾ ರೈತರ ಬಗ್ಗೆ ಮಾತನಾಡುವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸಿದ್ದರಾಮಯ್ಯ ಕರೆದ ಸಭೆಗೆ ತಾನೇಕೆ ಹೋಗಬೇಕೆಂಬ 'ಪ್ರತಿಷ್ಟೆ' ಮೆರೆದಿದ್ದಾರೆ.

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ನಡೆಯುತ್ತಿರುವ ಸಭೆಗೆ ಕಾಂಗ್ರೆಸ್, ಜೆಡಿಎಸ್, ಜೆಡಿಯು, ಸಿಪಿಐಎಂ, ಸಿಪಿಐಎಂ ಹಾಗೂ ವಿವಿಧ ರೈತ ಸಂಘಟನೆಗಳ ನಾಯಕರನ್ನು ಆಹ್ವಾನಿಸಲಾಗಿತ್ತು.‌ ಈ ಸಭೆಗೆ ಜೆಡಿಎಸ್ ವತಿಯಿಂದ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶಂಪೂರ, ವೆಂಕಟರಾವ್ ನಾಡಗೌಡ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಮತ್ತು ಚೌಡರೆಡ್ಡಿ ಮಾತ್ರ ಭಾಗಿಯಾಗಿದ್ದಾರೆ.  ರೈತರು ಮತ್ತು ಕಾರ್ಮಿಕರ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷಗಳು ನಡೆಸುತ್ತಿವ ಸಭೆಗೆ ಕುಮಾರಸ್ವಾಮಿ ಗೈರುಹಾಜರಾಗಿರುವುದು ಸಹಜವಾಗಿಯೇ ಗಮನಸೆಳೆದಿದೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಜೆಡಿಯುನ ಎಂ.ಪಿ. ನಾಡಗೌಡ, ಸಿಪಿಐಎಂನ ಜಿ.ಎನ್. ನಾಗರಾಜು, ಬಸವರಾಜು, ಸಿಪಿಎಂನ ಸ್ವಾತಿ ಸುಂದರೇಶ, ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ಮತ್ತಿತರರು ಭಾಗಿಯಾಗಿದ್ದಾರೆ.‌

 ಲಾಕ್​ಡೌನ್ (Lockdown) ನಿಂದ ಉಂಟಾದ ಪರಿಣಾಮಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ರೈತರು, ಅಸಂಘಟಿತ ಕಾರ್ಮಿಕರ ಸದ್ಯದ ಪರಿಸ್ಥಿತಿಯ ಬಗ್ಗೆ, ಸಾಂಪ್ರದಾಯಿಕ ವೃತ್ತಿಪರರ ಸಂಕಷ್ಟಗಳ ಬಗ್ಗೆ ಹಾಗೂ
ಪ್ರಮುಖವಾಗಿ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ, ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವಿಳಂಬವಾದ ಬಗ್ಗೆ ಚರ್ಚೆ ಸಮಾಲೋಚನೆ ನಡೆಯುತ್ತಿದೆ. ಸರ್ಕಾರಕ್ಕೆ ಏನೆಲ್ಲಾ ಸಲಹೆ ಸೂಚನೆಗಳನ್ನು ನೀಡಬೇಕು ಎಂಬುದರ ಬಗ್ಗೆ ಸಿದ್ದರಾಮಯ್ಯ ಮಾಹಿತಿ ಪಡೆಯುತ್ತಿದ್ದಾರೆ.

ಶ್ರಮಿಕ ವರ್ಗದವರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಸಿದ್ದರಾಮಯ್ಯ ಒತ್ತಾಯ

ಈಗಾಗಲೇ ರಾಜ್ಯದಲ್ಲಿ ಲಾಕ್‍ಡೌನ್ ಹೇರಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳಾಗುತ್ತಿದ್ದು, ನಿತ್ಯದ ದುಡಿಮೆಯನ್ನು ಆಧರಿಸಿ ಬದುಕುತ್ತಿರುವ, ಸಾಂಪ್ರದಾಯಿಕ ವೃತ್ತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ವಿವಿಧ ಸಮುದಾಯಗಳವರು, ಅಟೋ, ಟ್ಯಾಕ್ಸಿ ಚಾಲಕರು ಮತ್ತು ಬೀದಿ ಬದಿಯ ವ್ಯಾಪಾರಿಗಳ ಬದುಕು ದುಸ್ತರವಾಗಿರುವುದರ ಕುರಿತು ಕೂಡ ಸಿದ್ದರಾಮಯ್ಯ ಸಭೆ ನಡೆಸಿದ್ದರು.

ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡದಿರಿ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಮತ್ತೊಂದೆಡೆ ಲಾಕ್‍ಡೌನ್‍ನಿಂದಾಗಿ ರೈತರ ಸ್ಥಿತಿಯೂ ಶೋಚನೀಯವಾಗಿದೆ. ಬೆಳೆದ ಬೆಳೆಗಳನ್ನು ಖರೀದಿ ಮಾಡುವವರಿಲ್ಲದೆ, ಸಾಗಣೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಬೀದಿಪಾಲಾಗುವ ಹಂತ ತಲುಪಿದ್ದಾರೆ. ಅನೇಕ ಕಡೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ರಸ್ತೆಗೆ ಸುರಿಯುತ್ತಿರುವ ಬಗ್ಗೆ, ಅವರ ಜಮೀನುಗಳಲ್ಲಿಯೇ ಹಾಳಾಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ವರದಿಗಳು ಬರುತ್ತಿವೆ. 

ಕೊರೋನಾ ಸೋಂಕಿತರ ಪರೀಕ್ಷೆ ಪ್ರಮಾಣ ಹೆಚ್ಚಿಸುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಅಲ್ಲದೆ, ಪೂರ್ವ ಮುಂಗಾರಿನ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಿಂದಾಗಿ ಹಲವೆಡೆ ರೈತರು ಬೆಳೆದ ಭತ್ತ, ತರಕಾರಿ, ಹಣ್ಣಿನ ಬೆಳೆಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ನಷ್ಟಕ್ಕೆ ಒಳಗಾದ ರೈತರಿಗೂ ಪರಿಹಾರ ಸಿಕ್ಕಿಲ್ಲ. ಈ ನಡುವೆ ಪೂರ್ವ ಮುಂಗಾರು ಬಿತ್ತನೆಗೆ ಮುಂದಾಗಿರುವ ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಗುಣಮಟ್ಟದ ಬೀಜ, ಗೊಬ್ಬರ ದೊರೆಯದಿರುವ ಕುರಿತು ದೂರುಗಳು ಬರುತ್ತಿವೆ. 

ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು, ಈ ವಿಚಾರದಲ್ಲಿ ಎಲ್ಲ ನಾಯಕರ ಸಲಹೆ, ಸೂಚನೆ ಕೋರಲು  ಸಿದ್ದರಾಮಯ್ಯ ವಿರೋಧ ಪಕ್ಷಗಳು, ರೈತ ಮುಖಂಡರ ಸಭೆ ಕರೆದಿದ್ದರು.

Trending News