ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೂ ಭೀತಿ ಪಡಬಾರದು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

ಉತ್ತರ ಕನ್ನಡದಲ್ಲಿ 5 ಅಣೆಕಟ್ಟುಗಳ ಗೇಟ್ ತೆಗೆದು ನೀರನ್ನು ಬಿಟ್ಟಿರುವ ಕಾರಣ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆಯೆಂದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರಿಗೆ ಕೊಡಗು, ಉತ್ತರ ಕನ್ನಡ , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Aug 9, 2019, 07:50 AM IST
ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೂ ಭೀತಿ ಪಡಬಾರದು: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ title=
File Image

ಬೆಂಗಳೂರು: ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಅತಿವೃಷ್ಟಿಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ರಾಜ್ಯ ಆಡಳಿತವು ಚುರುಕುಗತಿಯಲ್ಲಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ. ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೂ ಭೀತಿ ಪಡಬಾರದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಅತ್ಯಂತ ಮುತುವರ್ಜಿ ವಹಿಸಿ ಉತ್ತರ ಕರ್ನಾಟಕದಲ್ಲಿ ತಾವೇ ಮುಂದಾಗಿ ನಿಂತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕ್ಕೊಂಡಿದ್ದಾರೆ ಹಾಗೂ ಜನ ಪ್ರತಿನಿಧಿಗಳನ್ನು ಒಳಗೊಂಡ ನಿರ್ವಹಣಾ ತಂಡ ರಚಿಸಿದ್ದಾರೆ. 

ನಾನು ಗುರುವಾರ ಕೊಡಗು, ಉತ್ತರ ಕನ್ನಡ , ದಕ್ಷಿಣ ಕನ್ನಡ ಮತ್ತು ಉಡುಪಿಯ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಈ ತನಕ ಯಾವುದೇ ಜೀವ ಹಾನಿ ಆಗಿಲ್ಲವೆಂದು, ಅಗತ್ಯವಿರುವೆಡೆಗೆ ನಿರಾಶ್ರಿತರ ಕೇಂದ್ರ, ಪರಿಹಾರ ಕಾರ್ಯ ಕೈಗೊಳ್ಳಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಸರ್ವ ಸನ್ನದ್ಧವಾಗಿ ಇಟ್ಟಿದ್ದೇವೆಂದು ಮಾಹಿತಿ ನೀಡಿದ್ದಾರೆ. 

ಉತ್ತರ ಕನ್ನಡದಲ್ಲಿ 5 ಅಣೆಕಟ್ಟುಗಳ ಗೇಟ್ ತೆಗೆದು ನೀರನ್ನು ಬಿಟ್ಟಿರುವ ಕಾರಣ ಹೆಚ್ಚಿನ ಪ್ರವಾಹ ಪರಿಸ್ಥಿತಿ ಉಂಟಾಗಿದೆಯೆಂದು ತಿಳಿಸಿದ್ದಾರೆ . ಅಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಸುಮಾರು 2500 ಜನರಿದ್ದು ಜಿಲ್ಲಾಡಳಿತ ಅಗತ್ಯ ಪರಿಹಾರ ಕ್ರಮ ತೆಗೆದುಕೊಂಡಿದೆ ಎಂದು ವಿವರಿಸಿದ್ದಾರೆ. 

ಜನ ಪ್ರತಿನಿಧಿಗಳಾದ ಶ್ರೀ ರಘುಪತಿ ಭಟ್, ಲಾಲ್ ಜಿ ಮೆಂಡನ್ , ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಯವರ ನಿರಂತರ ಸಂಪರ್ಕದಲ್ಲಿ ನಾನು ಇದ್ದೇನೆ. ಪ್ರವಾಹ ಪೀಡಿತರು ಯಾವುದೇ ಕಾರಣಕ್ಕೆ ಭೀತಿ ಪಡಬಾರದು. ಕೇಂದ್ರ ಸರಕಾರ, ರಾಜ್ಯ ಸರಕಾರ ಅವರ ಜೊತೆ ಇದೆ. 

ಕೆಲ ಅತಿವೃಷ್ಟಿ ಪ್ರವಾಹ ಸ್ಥಳಗಳಿಗೆ ಶುಕ್ರವಾರ ಭೇಟಿ ಮಾಡುವವನಿದ್ದೇನೆ. ರಾಜ್ಯದ ಜನತೆ ಕೂಡಾ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ತಮ್ಮ ಸಂಭಂದಿಕರು, ಮಿತ್ರರೊಂದಿಗೆ ಸಂಪರ್ಕದಲ್ಲಿದ್ದು ಜಿಲ್ಲಾ ಪರಿಹಾರ ಕೇಂದ್ರದ ದೂರವಾಣಿ ಸಂಖ್ಯೆಯನ್ನು ಕೊಡಬೇಕೆಂದು ಕೋರುತ್ತೇನೆ ಹಾಗೂ ನನ್ನ FACEBOOK ನಲ್ಲಿ ಮಾಹಿತಿ ಹಾಕಿದರೆ ಸಂಭಂದಿಸಿದ ಜಿಲ್ಲಾಡಳಿತಕ್ಕೆ ರವಾನಿಸಿ ಸೂಕ್ತ ಪರಿಹಾರ ಕ್ರಮ ತೆಗೆದುಕ್ಕೊಳ್ಳಲಾಗುವುದು ಎಂದು ಅಭಯ ನೀಡಿದ್ದಾರೆ.
 

Trending News