ಇಡೀ ದೇಶದಲ್ಲೇ ಎಫ್‌ಡಿಐ ಕುಸಿದಿದೆ; ಇದಕ್ಕೆ ಹೊಣೆ ಯಾರು: ಸಚಿವ ಎಂ. ಬಿ. ಪಾಟೀಲ ಪ್ರಶ್ನೆ

 'ಕರ್ನಾಟಕ ಬಿಡಿ, ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು - ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.  ಬಿ. ಪಾಟೀಲ ಅವರು ಪ್ರಶ್ನಿಸಿದ್ದಾರೆ.

Written by - Prashobh Devanahalli | Edited by - Manjunath N | Last Updated : Jun 2, 2024, 06:13 PM IST
  • ಎಫ್‌ಡಿಐ ಹೂಡಿಕೆ ಆಕರ್ಷಿಸುವಲ್ಲಿ ಮೊದಲ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿಯಲು ಕೇಂದ್ರ ಸರ್ಕಾರದ ನೀತಿ-ನಿರೂಪಣೆ ದೋಷಗಳೇ ಕಾರಣ
  • ಎಫ್‌ಡಿಐ ಒಳಹರಿವಿನ ಕುಸಿತಕ್ಕೆ “ಡಬಲ್‌ ಎಂಜಿನ್‌” ಸರ್ಕಾರದ ವೈಫಲ್ಯದ ಕೊಡುಗೆ ಗಮನಾರ್ಹ
  • ಮಹಾರಾಷ್ಟ್ರ, ಗುಜರಾತ್ ರಾಜ್ಯಗಳತ್ತ ಎಫ್‌ಡಿಐ ಹರಿವು ತಡೆಗಟ್ಟಲು ಹಿಂದಿನ ಬಿಜೆಪಿ ಸರ್ಕಾರ ಕೇಂದ್ರದ ಮೇಲೆ ಪ್ರಭಾವ ಬೀರುವಲ್ಲಿ ವಿಫಲ
 ಇಡೀ ದೇಶದಲ್ಲೇ ಎಫ್‌ಡಿಐ ಕುಸಿದಿದೆ; ಇದಕ್ಕೆ ಹೊಣೆ ಯಾರು: ಸಚಿವ ಎಂ. ಬಿ. ಪಾಟೀಲ ಪ್ರಶ್ನೆ title=

ಬೆಂಗಳೂರು:  'ಕರ್ನಾಟಕ ಬಿಡಿ, ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು - ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.  ಬಿ. ಪಾಟೀಲ ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್‌ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ ಎಂದು ಸಚಿವರು ವಿವರಗಳನ್ನು ಹಂಚಿಕೊಂಡಿದ್ದಾರೆ.

ʼದೇಶದಲ್ಲಿ ಎಫ್‌ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಹಾಗೆಯೇ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು' ಎಂದು ಅವರು ತಿಳಿಸಿದರು.

ಕುಸಿತದ ವಿವರಗಳು

ʼಹಣಕಾಸು ವರ್ಷ 2023ರಲ್ಲಿ 71 ಶತಕೋಟಿ  ಡಾಲರ್‌ಗಳಷ್ಟಿದ್ದ ದೇಶಿ ಎಫ್‌ಡಿಐ, ಹಣಕಾಸು ವರ್ಷ 2024 ರಲ್ಲಿ 70 ಶತಕೋಟಿ ಡಾಲರ್‌ಗೆ  ಕುಸಿದಿದೆ.ʼಹಣಕಾಸು ವರ್ಷ 2020-21ರಲ್ಲಿ ₹   4.42 ಲಕ್ಷ ಕೋಟಿ,  2021-22ರಲ್ಲಿ ₹   4.37  ಲಕ್ಷ ಕೋಟಿ, 2022-23ರಲ್ಲಿ ₹  3.67 ಲಕ್ಷ ಕೋಟಿ ಮತ್ತು  2023-24ರಲ್ಲಿ ₹ 3.47 ಲಕ್ಷ ಕೋಟಿಗೆ   ಇಳಿದಿದೆ.  ಕಳೆದ 4 ವರ್ಷಗಳಲ್ಲಿ ಎಫ್‌ಡಿಐ ನಿರಂತರವಾಗಿ ಹೀಗೆ ಕುಸಿಯುತ್ತಲೇ ಸಾಗಿರುವುದರತ್ತ ಸಚಿವರು ಬೆಳಕು ಚೆಲ್ಲಿದ್ದಾರೆ.

ಇದನ್ನೂ ಓದಿ:  ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್  

ʼದೇಶದಲ್ಲಿ ಹೂಡಿಕೆಯಾಗುವ ʼಎಫ್‌ಡಿಐʼನಲ್ಲಿ ಬಹುಪಾಲು ಈಕ್ವಿಟಿ ಸ್ವರೂಪದಲ್ಲಿ ಇರುತ್ತದೆ. ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ  ಎಫ್‌ಡಿಐ ಈಕ್ವಿಟಿ ಹೂಡಿಕೆಯು ಕಳವಳಕಾರಿ ಮಟ್ಟದಲ್ಲಿ ಇಳಿಕೆಯಾಗಿದೆ. 2022-23ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರಲ್ಲಿ ಹೂಡಿಕೆಯಲ್ಲಿನ ಇಳಿಕೆಯು ಶೇ 3 ರಷ್ಟು ಮಾತ್ರ ದಾಖಲಾಗಿದೆ. ಆದರೆ, ಅದಕ್ಕೂ ಮುಂಚಿನ 4 ಹಣಕಾಸು ವರ್ಷಗಳಲ್ಲಿನ ಇಳಿಕೆ ಪ್ರಮಾಣವು ಶೇ 25ಕ್ಕಿಂತಲೂ ಹೆಚ್ಚಿಗೆ ಇದೆʼ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಉದಾಸೀನ ಧೋರಣೆ

ʼಎಫ್‌ಡಿಐ ಆಕರ್ಷಿಸುವಲ್ಲಿ ಮೊದಲ ಸ್ಥಾನದಲ್ಲಿ ಇದ್ದ ರಾಜ್ಯವು ಈಗ 3ನೇ ಸ್ಥಾನಕ್ಕೆ ಇಳಿಯಲು ಕೇಂದ್ರ ಸರ್ಕಾರದ ಧೋರಣೆ ಹಾಗೂ ಈ ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರದ ಉದಾಸೀನ ನಿಲುವು ಮುಖ್ಯ ಕಾರಣಗಳಾಗಿವೆ.  ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಹೂಡಿಕೆಗೆ ಒಲವು ತೋರಿಸಿದ್ದ ವಿದೇಶಿ ಹೂಡಿಕೆದಾರರು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರದ ಒತ್ತಾಸೆಯ ಮೇರೆಗೆ  ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳತ್ತ ಮುಖ ಮಾಡಿರುವುದೂ  ಇದಕ್ಕೆ ಕಾರಣʼ ಎಂದು ಸಚಿವರು ವಿವರಿಸಿದ್ದಾರೆ.

 ʼದೇಶದ ಪರಿಸ್ಥಿತಿಯೇ ಹೀಗಿದ್ದ ಮೇಲೆ ಅದರ ಪರಿಣಾಮ ರಾಜ್ಯದ ಮೇಲೂ ಆಗುತ್ತದೆ. ಆದರೆ, ಅದು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಎಫ್‌ಡಿಐ ಪಾತಾಳಕ್ಕೆ ಇಳಿದಷ್ಟು ಆಗಿಲ್ಲ. 2023-24ರಲ್ಲಿ ಇಳಿಕೆ ಪ್ರಮಾಣ ಕಡಿಮೆ ಆಗಿದ್ದು, ಪರಿಸ್ಥಿತಿಯನ್ನು ಗಣನೀಯವಾಗಿ ಸುಧಾರಿಸಲು  ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರವು ರಚನಾತ್ಮಕವಾಗಿ ಕಾರ್ಯೋನ್ಮುಖವಾಗಿದೆ. ಎಫ್‌ಡಿಐ ಆಕರ್ಷಿಸುವಲ್ಲಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಸೂಕ್ತ ಭೂಮಿಕೆ ಸಿದ್ಧಪಡಿಸುವಲ್ಲಿ ರಾಜ್ಯ ಸರ್ಕಾರವು ಸರ್ವ ಪ್ರಯತ್ನ ಮಾಡುತ್ತಿದೆʼ ಎಂದು ಹೇಳಿದ್ದಾರೆ.

ಎಫ್‌ಡಿಐ ಒಳಹರಿವಿಗೆ ಅಡ್ಡಿಯಾದ ಪ್ರತಿಕೂಲತೆಗಳು

ʼಕರ್ನಾಟಕದಲ್ಲಿ  ಎಫ್‌ಡಿಐಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳು, ನವೋದ್ಯಮ ಹಾಗೂ ಐಟಿ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳಿಗೆ ನಿದರ್ಶನಗಳಾಗಿವೆ. ಕೇಂದ್ರ ಸರ್ಕಾರದ ನೀತಿ ನಿರೂಪಣೆಯಲ್ಲಿನ ದೋಷಗಳ ಕೊಡುಗೆಯೂ ಗಮನಾರ್ಹವಾಗಿವೆ. ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ತನ್ನದೇ ಪಕ್ಷದ ಅಧಿಕಾರದಲ್ಲಿದ್ದರೂ (ಡಬಲ್‌ ಎಂಜಿನ್‌ ಸರ್ಕಾರ) ಎಫ್‌ಡಿಐ ಕುಸಿತ ತಡೆಗಟ್ಟಲು ಕ್ರಮ ಕೈಗೊಳ್ಳದಂತೆ ಪ್ರಭಾವ ಬೀರುವಲ್ಲಿ ವಿಫಲವಾಗಿರುವುದೂ ವೇದ್ಯವಾಗುತ್ತದೆ. ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳತ್ತ ಹರಿಯುತ್ತಿದ್ದ ಎಫ್‌ಡಿಐ ಯನ್ನು ರಾಜ್ಯದತ್ತ ತಿರುಗುವಂತೆ ಮಾಡುವಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ರಚನಾತ್ಮಕ ಪ್ರಯತ್ನ ಮಾಡದಿರುವುದೇ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣವಾಗಿದೆʼ ಎಂದು ಪಾಟೀಲ ಅವರು ಹೇಳಿದ್ದಾರೆ.

ಹೂಡಿಕೆದಾರರ ಗಮನ ಸೆಳೆಯಲು ಸರ್ವ ಪ್ರಯತ್ನ

ʼಇಂತಹ ಪ್ರತಿಕೂಲತೆಗಳ ನಡುವೆಯೂ ರಾಜ್ಯವು ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆಯ ಆಕರ್ಷಕ ತಾಣವಾಗಿ ಗಮನ ಸೆಳೆಯುತ್ತಿದೆʼ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ʼಕರ್ನಾಟಕ ರಾಜ್ಯವು ವಿಶ್ವದಾದ್ಯಂತ ವಿವಿಧ ದೇಶಗಳ ಬಹುರಾಷ್ಟ್ರೀಯ ಕಂಪನಿಗಳಿಂದ ಬಂಡವಾಳ ಹೂಡಿಕೆಯನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ.  ಆದರೆ, ದೇಶದ ಆರ್ಥಿಕ ಪ್ರಗತಿಯ ಹಾದಿಯಲ್ಲಿನ ಅಡಚಣೆಗಳು, ಹೂಡಿಕೆದಾರರ ಬದಲಾದ ಒಲವು - ನಿಲುವು, ಜಾಗತಿಕ ವಿದ್ಯಮಾನಗಳ ಕಾರಣಕ್ಕೆ ರಾಜ್ಯದಲ್ಲಿಯೂ ʼಎಫ್‌ಡಿಐʼ ಒಳಹರಿವು ಕಡಿಮೆಯಾಗಿದೆʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಬೌಲರ್ ಆರ್ ಅಶ್ವಿನ್ ಪತ್ನಿ ಯಾರು ಗೊತ್ತಾ? ಈಕೆ ರೋಹಿತ್ ಶರ್ಮಾ ಪತ್ನಿಯ ಬೆಸ್ಟ್ ಫ್ರೆಂಡ್.. ನಟಿಯರನ್ನೂ ಮೀರಿಸುವ ಅಂದಗಾತಿ

₹1.13 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆ

ʼದೇಶದಲ್ಲಿನ ʼಎಫ್‌ಡಿಐʼನ ಒಟ್ಟಾರೆ ಇಳಿಕೆ ಪ್ರವೃತ್ತಿ ಹಾಗೂ ರಾಜಕೀಯ ಕಾರಣಗಳ ಹೊರತಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್‌ ಸರ್ಕಾರವು ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಎಫ್‌ಡಿಐ ಒಳಹರಿವು ಉತ್ತೇಜಿಸಲು ಹಲವಾರು ಬಗೆಗಳಲ್ಲಿ ಕಾರ್ಯಪ್ರವೃತ್ತವಾಗಿದೆ. ಕರ್ನಾಟಕವು 2023-24 ರ ಹಣಕಾಸು ವರ್ಷದಲ್ಲಿ ದೇಶಿ ಹಾಗೂ ವಿದೇಶಿ ಕಂಪನಿಗಳಿಂದ ₹  1.13 ಲಕ್ಷ ಕೋಟಿ ಮೌಲ್ಯದ  ಬಂಡವಾಳ ಹೂಡಿಕೆ ಆಕರ್ಷಿಸಿದೆ. ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್‌ಡಿಎಂ), ವಿದ್ಯುತ್ ಚಾಲಿತ (ಇವಿ) ವಾಹನಗಳ ಲಿಆನ್ ಬ್ಯಾಟರಿ ತಯಾರಿಕೆ, ಉಕ್ಕು ತಯಾರಿಕೆಯಂತಹ  ಪ್ರಮುಖ ತಯಾರಿಕಾ ವಲಯ,   ದತ್ತಾಂಶ ಕೇಂದ್ರಗಳ ಸ್ಥಾಪನೆ ಮತ್ತಿತರ ಹಲವಾರು ಕ್ಷೇತ್ರಗಳಲ್ಲಿ ಈ ಹೂಡಿಕೆ ಮೊತ್ತವು ರಾಜ್ಯಕ್ಕೆ ಹರಿದು ಬರುತ್ತಿದೆʼ ಎಂದು ಸಚಿವರು ತಿಳಿಸಿದ್ದಾರೆ.

ʼಜಾಗತಿಕ ವಿದ್ಯಮಾನಗಳ ಜೊತೆಗೆ ಕೇಂದ್ರ ಸರ್ಕಾರದ ಕೆಲ ನಿರ್ಧಾರಗಳೂ ಎಫ್‌ಡಿಐ ಕುಸಿತಕ್ಕೆ ಕಾರಣಗಳಾಗಿವೆ. ತಯಾರಿಕಾ ವಲಯದಲ್ಲಿ ಸ್ಥಳೀಯವಾಗಿ ಜೋಡಣೆ ಸ್ವರೂಪದ ಉದ್ದಿಮೆಗಳಿಗೆ ಕೇಂದ್ರವು ಆದ್ಯತೆ ನೀಡುತ್ತಿದೆ. ಇಂತಹ ಉದ್ದಿಮೆಗಳು ತಮ್ಮ ಕಾರ್ಯನಿರ್ವಹಣೆಗೆ ವಿದೇಶಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. ವಿದೇಶಗಳಿಂದ ಬಿಡಿಭಾಗಗಳ ಪೂರೈಕೆಯಲ್ಲಿನ ಅಡಚಣೆಗಳು ಮತ್ತು ತೆರಿಗೆ ಪದ್ಧತಿಯು ಈ ಉದ್ದಿಮೆಗಳ ಕಾರ್ಯನಿರ್ವಹಣೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿವೆ.  ತಯಾರಿಕಾ ವಲಯದಲ್ಲಿನ ಎಫ್‌ಡಿಐ ಹೂಡಿಕೆಗೆ ಅಡ್ಡಿಯಾಗಿವೆ. ಈ ಉದ್ದಿಮೆಗಳ ಪೂರ್ಣ ಪ್ರಮಾಣದ ತಯಾರಿಕೆಗೆ ಅವಕಾಶ ಮಾಡಿಕೊಟ್ಟರೆ ಮತ್ತು ಅವುಗಳ ದಕ್ಷ ಕಾರ್ಯನಿರ್ವಹಣೆಗೆ ಇರುವ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಂಡರೆ ಈ ಕ್ಷೇತ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಎಫ್‌ಡಿಐ ಹರಿದು ಬರಲಿದೆ ಎನ್ನುವ ಹೂಡಿಕೆ ತಜ್ಞರ ಸಲಹೆಗಳನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿದೆʼ ಎಂದೂ ಸಚಿವ ಪಾಟೀಲ ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News