'ಹಿಂದುಳಿದ ವರ್ಗಗಳ ಹರಿಕಾರ' ಡಿ. ದೇವರಾಜ್ ಅರಸ್ ಅವರ ಜನ್ಮದಿನ

ಡಿ. ದೇವರಾಜ್ ಅರಸ್ ಅವರು ರಾಜ್ಯ ನೋಡಿದ ಶ್ರೇಷ್ಠ ಸಾಮಾಜಿಕ ಸುಧಾರಕರು.

Last Updated : Aug 20, 2018, 08:17 AM IST
'ಹಿಂದುಳಿದ ವರ್ಗಗಳ ಹರಿಕಾರ' ಡಿ. ದೇವರಾಜ್ ಅರಸ್ ಅವರ ಜನ್ಮದಿನ title=

ಜನನಾಯಕ, ಬಡವರ ಧ್ವನಿ, 'ಹಿಂದುಳಿದ ವರ್ಗಗಳ ಹರಿಕಾರ' ಎಂದೇ ಖ್ಯಾತರಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ಅವರ ಜನ್ಮದಿನವನ್ನು ನಾವಿಂದು ಆಚರಿಸುತ್ತಿದ್ದೇವೆ. ಉಳುವವನಿಗೆ ಭೂಮಿ, ಹಾವನೂರು ಆಯೋಗದಂತಹ ಅವರ ಪ್ರಮುಖ ನಿರ್ಧಾರಗಳ ಪ್ರತಿಫಲ ಇಂದಿನ ಪೀಳಿಗೆಗೆ ಸಿಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. 

ಡಿ.ದೇವರಾಜ್ ಅರಸ್ ಆಗಸ್ಟ್ 20, 1915 ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಲ್ಲಹಳ್ಳಿಯಲ್ಲಿ ಜನಿಸಿದರು. ತಂದೆ-ದೇವರಾಜ ಅರಸ್, ತಾಯಿ-ದೇವೀರ ಅಮ್ಮಣ್ಣಿ ಹಾಗೂ ಸಹೋದರ-ಕೆಂಪರಾಜ್ ಅರಸ್. ತಂದೆ ಭೂ-ಮಾಲೀಕರು, ತಾಯಿ-ಧಾರ್ಮಿಕ ಮತ್ತು ಸಾಂಪ್ರದಾಯಿಕ ಮಹಿಳೆ. ಇವರು ಬಹಳ ಶ್ರೀಮಂತ ಕುಟುಂಬದವರು ಹಾಗೂ ಒಡೆಯರ್ ಮನೆತನಕ್ಕೆ ದೂರದ ಸಂಬಂಧಿಕರಾಗಿದ್ದರು. ಅರಸ್ ತಮ್ಮ 15ನೇ ವಯಸ್ಸಿನಲ್ಲಿ 11ವರ್ಷದ ಚಿಕ್ಕಮ್ಮಣ್ಣಿಯವರನ್ನು ಮದುವೆಯಾದರು. ಅವರಿಗೆ ಚಂದ್ರ ಪ್ರಭಾ, ನಾಗರತ್ನಾ ಮತ್ತು ಭಾರತಿ ಮೂವರು ಪುತ್ರಿಯರು.

ಅರಸು ಸಮುದಾಯದ ಪುತ್ರರಿಗೆ ಯೋಗ್ಯವಾದ ಶಿಕ್ಷಣವನ್ನು ಒದಗಿಸಲು ಮೈಸೂರು ಮಹಾರಾಜರಿಂದ ಸ್ಥಾಪಿಸಲ್ಪಟ್ಟ ಮೈಸೂರಿನ ಅರಸು ಬೋರ್ಡಿಂಗ್ ಸ್ಕೂಲ್ನಲ್ಲಿ ದೇವರಾಜ್ ಅರಸ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಳ್ಳಿಗೆ ಹಿಂದಿರುಗಿದ ಅರಸ್ ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸ್ ನಂತರದ ದಿನಗಳಲ್ಲಿ ರಾಜಕೀಯಕ್ಕೆ ಧುಮುಕಿದರು. 

ಡಿ. ದೇವರಾಜ್ ಅರಸ್ ಅವರು ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕರು. ಸತತ ಹತ್ತು ವರ್ಷ ಶಾಸಕರಾಗಿ ಆಯ್ಕೆಯಾಗಿದ್ದ ಅರಸ್ ಮಾರ್ಚ್ 20, 1972 – ಡಿಸೆಂಬರ್ 31, 1977 ಹಾಗೂ ಫೆಬ್ರವರಿ 28, 1978 – ಜನವರಿ 7, 1980 ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಅಧಿಕಾರವಧಿಯಲ್ಲಿ ಸಮಾಜದಲ್ಲಿ ಕೆಳವರ್ಗ ಎಂದು ನೋಡಲಾಗುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಸುಧಾರಣೆಗಳನ್ನು ತರುತ್ತಿದ್ದರು. 

"ಬಡತನ ನಿರ್ಮೂಲನೆ" ಅವರ ಮೊದಲ ಆದ್ಯತೆ. ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ ಹಾಗೂ ತಂತ್ರಜ್ಞಾನ ಹೊಂದಿದ ಮಂತ್ರಿಮಂಡಲವನ್ನು ರಚಿಸಿದರು. "ಉಳುವವನಿಗೆ ಭೂಮಿ" ಅವರ ಮತ್ತೊಂದು ಮಹತ್ತರವಾದ ಯೋಜನೆ. 1973ರಲ್ಲಿ ಮೈಸೂರನ್ನು 'ಕರ್ನಾಟಕ' ಎಂದು ನಾಮಕರಣ ಮಾಡಿದರು. ಅವರ ಕಾಲದಲ್ಲಿ 16,000 ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಒದಗಿಸಲಾಯಿತು. ಇವರ ಯೋಜನೆಗಳಿಂದಾಗಿ ಕೂಲಿ ಮಾಡುವವರು ಭೂ-ಮಾಲೀಕರಾದರು, ಬಡವರು-ಶ್ರೀಮಂತರ ನಡುವಿನ ಅಂತರ ಕಡಿಮೆಯಾಯಿತು.  ರಾಜ್ಯದಲ್ಲಿ ಅಭಿವೃದ್ದಿಯ ಹೊಸ ಶಖೆಗೆ ಕಾರಣರಾದ ಸಾಮಾಜಿಕ ನ್ಯಾಯದ ಹರಿಕಾರನಿಗೆ  ಪ್ರೀತಿ-ಗೌರವದ ನಮನಗಳು.
 

Trending News