ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಲ್ಲಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ: ಸಿದ್ದರಾಮಯ್ಯ

cm siddaramaiah speech: ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ದ್ರೋಹ, ವಂಚನೆ ಖಂಡಿಸಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

Written by - Prashobh Devanahalli | Last Updated : Feb 7, 2024, 03:07 PM IST
  • ದೆಹಲಿಯಲ್ಲಿ ಕೇಂದ್ರ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ
  • ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ದ್ರೋಹ
  • ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಲ್ಲಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ: ಸಿದ್ದರಾಮಯ್ಯ   title=

ನವದೆಹಲಿ: ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ದ್ರೋಹ, ವಂಚನೆ ಖಂಡಿಸಿ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಮೋದಿ ಅವರು ಪ್ರಧಾನಿ ಆದ ಬಳಿಕ ರಚಿಸಲಾದ 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ ಆಯಿತು. ದಕ್ಷಿಣ ಭಾರತದ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಗಿಂತ ಪರಿಣಾಮಕಾರಿ ಜನಸಂಖ್ಯೆ ನಿಯಂತ್ರಣ ಮಾಡಿದೆವು ಎಂದರು. 

ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಂದು ಹಾಕಬೇಡಿ, ಹಾಲು ಕೊಡುವ ಕೆಚ್ಚಲು ಕತ್ತರಿಸಬೇಡಿ ಎಂದು ಒತ್ತಾಯಿಸಲು ನಮ್ಮ ಪ್ರತಿಭಟನೆ. ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿಗೆ ಅನುದಾನ ಕೊಡುವ ಬಗ್ಗೆ ನಮಗೆ ತಕರಾರುಗಳಿಲ್ಲ. ಆದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದರು. 

ಕೇಂದ್ರ ಸರ್ಕಾರದ ಅಂಕಿ ಅಂಶಗಳೇ ನಮ್ಮ‌ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಹೇಳುತ್ಯಿವೆ. ಎರಡನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ನಮಗೇ ಏಕೆ ಈ ಮಟ್ಟದ ಅನ್ಯಾಯ. 430000 ಕೋಟಿ ನಾವು ಕನ್ನಡಿಗರು ತೆರಿಗೆ ಕಟ್ಟುತ್ತೇವೆ. ನಮಗೆ ವಾಪಾಸ್ ಬರುವುದು ಕೇವಲ 50000 ಕೋಟಿ ಮಾತ್ರ. ಅಂದರೆ ನಾವು ಕೊಡುವ ಪ್ರತಿ 100 ರೂ ನಲ್ಲಿ 13 ರೂ ಮಾತ್ರ ನಮಗೆ ವಾಪಾಸ್ ಬರ್ತದೆ. ಇದಕ್ಕಿಂತ ಭೀಕರ ಅನ್ಯಾಯ ಏನಿದೆ? ಈ ಅನ್ಯಾಯವನ್ನು ನಾವು ಸಹಿಸಬೇಕಾ? ಎಂದು ಸಿಎಂ ಪ್ರಶ್ನಿಸಿದರು. 

15 ನೇ ಹಣಕಾಸು ಆಯೋಗದಿಂದಾಗಿ ನಮಗೆ 62098 ಕೋಟಿ ರೂ ನಮಗೆ ತೆರಿಗೆಯೊಂದರಲ್ಲೇ ನಮಗೆ ಅನ್ಯಾಯ ಆಗಿದೆ. ಇದನ್ನು ನಾವು ಪ್ರಶ್ನಿಸಬಾರದಾ? ಈ ಕಾರಣಗಳಿಗೇ ನಾವು protest ಮಾಡುತ್ತಿದ್ದೇವೆ. ಆದರೆ ಬಿಜೆಪಿ ನಿರಂತರ ಸುಳ್ಳುಗಳ ಮೂಲಕ ತಮ್ಮ ದ್ರೋಹವನ್ನು ಮರೆ ಮಾಚಲು ನೋಡುತ್ತಿದೆ ಎಂದು ಹೇಳಿದರು. 

ಇದನ್ನೂ ಓದಿ: DCM DK Shivakumar: ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲವಾದರೆ ಆ ಸರ್ಕಾರ ಯಾಕೆ? ಡಿಸಿಎಂ ಪ್ರಶ್ನೆ 

ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ತೆರಿಗೆ ಪಾಲು ಹೆಚ್ಚಾಗಬೇಕಿತ್ತು. ಆದರೆ ಈ ಪ್ರಮಾಣದಲ್ಲೂ ನಮಗೆ ಹಂಚಿಕೆ ಆಗಿಲ್ಲ. ಇದನ್ನು ಕೇಂದ್ರದ ಅಂಕಿ ಅಂಶಗಳೇ ಹೇಳುತ್ತಿವೆ. ಕಳೆದ 10 ವರ್ಷಗಳಿಂದ ಹಂತ ಹಂತವಾಗಿ ರಾಜ್ಯದ ಪಾಲಿನ ತೆರಿಗೆ ಪಾಲು, ಕೇಂದ್ರದ ಅನುದಾನದ ಪಾಲು ನಿರಂತರವಾಗಿ ಕಡಿಮೆ ಆಗುತ್ತಿರುವುದನ್ನು ಮುಖ್ಯಮಂತ್ರಿಗಳು ಪ್ರತೀ ವರ್ಷದ ಅಂಕಿ ಅಂಶಗಳೊಂದಿಗೆ ವಿವರಿಸಿದರು. 

ಕೇಂದ್ರದ ಬಜೆಟ್ ಗಾತ್ರ ದುಪ್ಪಟ್ಟಾಗಿದೆ. ಆದರೆ ರಾಜ್ಯದ ಪಾಲಿನ ತೆರಿಗೆ ಪಾಲು ಅರ್ಧಕ್ಕಿಂತ ಕಡಿಮೆ ಆಗಿದೆ. ನಮ್ಮ ಪಾಲು ದುಪ್ಪಟ್ಟಾಗಬೇಕಾದ ಜಾಗದಲ್ಲಿ ಅರ್ಧಕ್ಕಿಂತ ಕಡಿಮೆ ಆಗಿರುವುದು ಅನ್ಯಾಯ ಅಲ್ಲವೇ? GST ಯಲ್ಲಿ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಇನ್ನೂ ಬೃಹತ್ತಾಗಿದೆ. GST ಯಲ್ಲಿ ಆಗುವ ಅನ್ಯಾಯವನ್ನು ವಿಶೇಷ ಪರಿಹಾರ ಕೊಟ್ಟು ಸರಿದೂಗಿಸುವುದಾಗಿ ಹೇಳಿದರು. ಈಗ ಪರಿಹಾರ ಕೊಡುತ್ತಿಲ್ಲ. ಇದರಿಂದ 59000 ಕೋಟಿಗೂ ಅಧಿಕ ಅನ್ಯಾಯ, ವಂಚನೆ ಆಯಿತು ಎಂದು ಹೇಳಿದರು. 

ಕೇಂದ್ರದ ನಿರಂತರ ದ್ರೋಹ, ವಂಚನೆಯಿಂದ ರಾಜ್ಯದ ತೆರಿಗೆ ಸಂಗ್ರಹ ಪ್ರಮಾಣ 15% ನಿಂದ ಕೆಳಗೆ ಜಾರಿ 9% ಗೆ ಕುಸಿದಿದೆ. ಈ ದೊಡ್ಡ ಕುಸಿತಕ್ಕೆ ಕೇಂದ್ರದ ಮಲತಾಯಿ ಧೋರಣೆ ಮತ್ತು ವಂಚನೆಯೇ ಕಾರಣ. ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಕೋಲೆ ಬಸವನ ರೀತಿಯಲ್ಲಿ ಮೋದಿ ಅವರ ಎದುರಿಗೆ ತಲೆ ಅಲ್ಲಾಡಿಸುವುದು ಬಿಟ್ಟರೆ ರಾಜ್ಯದ ಪಾಲನ್ನು ಬಾಯಿ ಬಿಟ್ಟು ಕೇಳಲೇ ಇಲ್ಲ ಎಂದರು.

ನಾನು ವಿಧಾನಸಭಾ ಅಧಿವೇಶನದಲ್ಲಿ ಮೇಲಿಂದ ಮೇಲೆ ಒತ್ತಾಯಿಸಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಒತ್ತಾಯಿಸಿ ಕೇಂದ್ರದ ಮುಂದೆ ರಾಜ್ಯದ ಹಕ್ಕು ಮಂಡಿಸಿ ಎಂದು ಆಗ್ರಹಿಸಿದೆ. ಅವರು ಕೇಳಲಿಲ್ಲ. ಇವರು ಕೊಡಲಿಲ್ಲ. ನಮಗೆ ಅನ್ಯಾಯ ಸರಿಪಡಿಸಲು ವಿಶೇಷ  ಅನುದಾನದವಾಗಿ 11495 ಕೋಟಿ ಕೊಡ್ತೀವಿ ಎಂದು ಘೋಷಿಸಿದರು. ಆದರೆ ಈ ಹಣ ಕೊಡಬೇಡಿ ಎಂದು ತಡೆ ಹಿಡಿದವರೇ ಆರ್ಥಿಕ ಸಚೆವೆ ನಿರ್ಮಲಾ ಸೀತಾರಾಮನ್ ಅವರು. ಆದರೆ ಈಗೇಕೆ ಸುಳ್ಳು ಹೇಳ್ತಿದ್ದೀರಿ ಮೇಡಂ ಸಿಎಂ ವ್ಯಂಗ್ಯವಾಡಿದರು.

ಇದನ್ನೂ ಓದಿ: ಡೆಲ್ಲಿ ಚಲೋ: ಇದು ಕರ್ನಾಟಕದ ಕನ್ನಡಿಗರ ಹಿತ ಕಾಯುವ ಚಳವಳಿ- ಮುಖ್ಯಮಂತ್ರಿ ಸಿದ್ದರಾಮಯ್ಯ 

ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ಅವರೇ ಈ ಮಟ್ಟದ ದ್ರೋಹ ಮಾಡಿದ ಬಳಿಕವೂ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದರು. 

ಮೋದಿ ಅವರ ಕೇಂದ್ರ ಸರ್ಕಾರ ರಚಿಸಿದ 15 ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತ ರಾಜ್ಯಗಳಿಂದ ಒಬ್ಬೇ ಒಬ್ಬ ಸದಸ್ಯನೂ ಇರಲಿಲ್ಲ. ಇದರಿಂದ ನಮ್ಮ ರಾಜ್ಯಗಳಿಗೆ ಅನ್ತಾಯ ಆಗಿದೆ. ಇದಕ್ಕೆ ಕಾರಣ ಮೋದಿಯವರೇ. ನೀವು ಎಷ್ಟೇ ಸುಳ್ಳುಗಳನ್ನು ಹೇಳಿದರೂ ಸತ್ಯ ಮುಚ್ಚಿ ಹಾಕಲು ಸಾಧ್ಯವಿಲ್ಲ ಯಡಿಯೂರಪ್ಪ, ಬೊಮ್ಮಾಯಿ, ಮೋದಿಯವರೇ ಎಂದರು. 

ಕೇಂದ್ರ ಸರ್ಕಾರದ ಬಜೆಟ್ ದಾಖಲೆಗಳನ್ನೇ ಪರಿಶೀಲಿಸಿ ನೋಡಿ, ನಮಗಾಗಿರುವ ವಂಚನೆಯ ಪ್ರಮಾಣ ಅದರಲ್ಲಿ ದಾಖಲಾಗಿದೆ. 15 ನೇ ಹಣಕಾಸು ಆಯೋಗ ಒಂದರಿಂದಲೇ ಇದುವರೆಗೂ 1,87000 ಕೋಟಿ ಒಟ್ಟು ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದರು.

ರಾಜ್ಯಕ್ಕೆ ಭೀಕರ ಬರಗಾಲ ಬಂತು.  ಸೆಪ್ಟೆಂಬರ್ ನಿಂದ ನಿರಂತರವಾಗಿ ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಎಂದು ಒತ್ತಾಯಿಸುತ್ತಲೇ ಇದ್ದೇವೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಬರಪರಿಹಾರ ಕೊಟ್ಟಿಲ್ಲ. ನಾನೇ ಡಿ 19th ರಂದು ಪ್ರಧಾನಿ ಮೋದಿಜಿ ಮತ್ತು ಅಮಿತ್ ಶಾ ಅವರನ್ನು ಖುದ್ದಾಗಿ ಭೇಟಿ ಮಾಡಿ ವಿನಂತಿಸಿದೆ. ಆದರೂ ಇವತ್ತಿಗೂ ಒಂದು ಪೈಸೆ ಬಂದಿಲ್ಲ ಎಂದರು.

ಈ ಬಗ್ಗೆ ಇನ್ನೂ ಒಂದೂ ಸಭೆಯನ್ನೂ ನೆಪಕ್ಕೂ ಕರೆದಿಲ್ಲ. ಇದರಿಂದ ಒಂದು ರೂಪಾಯಿ ಕೂಡ ಬಂದಿಲ್ಲ. ಆದರೂ ಬರದಿಂದ ರಾಜ್ಯದ ಜನತೆ ಕಂಗಾಲಾಗದಂತೆ ರಾಜ್ಯ ಸರ್ಕಾರವೇ ಪರಿಹಾರ ನೀಡಿದೆ. 31 ಲಕ್ಷ ರೈತರಿಗೆ 650 ಕೋಟಿ ಬರ ಪರಿಹಾರವನ್ನು ರಾಜ್ಯದ ಬೊಕ್ಕಸದಿಂದಲೇ ಕೊಟ್ಟಿದ್ದೇವೆ. ಇನ್ನೂ ಲಕ್ಷ ಲಕ್ಷ ರೈತರಿಗೆ ಪರಿಹಾರ ಕೊಡುವವರಿದ್ದೇವೆ ಎಂದರು.

ಕೇಂದ್ರ ತನ್ನ ಕೈಯಿಂದ ಪರಿಹಾರ ಕೊಡುವುದಲ್ಲ. ನಮ್ಮ ಹಣ ಅವರ ಬಳಿ ಇದೆ. ಅದರಲ್ಲಿ ರಾಜ್ಯದ ಪಾಲನ್ನು ವಾಪಾಸ್ ಕೊಡಬೇಕಿತ್ತು. ಇದರಲ್ಲೂ ಒಂದೇ ಒಂದು ರೂಪಾಯಿ ಕೊಡಲಿಲ್ಲ. ನಾವು ಇನ್ನೂ NDRF ನಿಧಿಗಾಗಿ ಕಾಯುತ್ಯಲೇ ಇದ್ದೇವೆ. ಈ ಹಣ ಕೊಡಿಸಿ ಯಡಿಯೂರಪ್ಪ, ಅಶೋಕ್, ನಿರ್ಮಲಾ ಸೀತಾರಾಮನ್ ಅವರೇ ಎಂದು ಕೇಳಿದರು. 

ಪಾರ್ಲಿಮೆಂಟಲ್ಲಿ ರಾಜ್ಯದ ಪರವಾಗಿ ಬಾಯಿ ಬಿಡಲು ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರಿಗೆ ಭಯ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಕೊಡುವುದಾಗಿ ನಿರ್ಮಲಾ ಸೀತಾರಾಮನ್ ಅವರು ಪಾರ್ಲಿಮೆಂಟಲ್ಲಿ ಬಜೆಟ್ ನಲ್ಲೇ ಘೋಷಿಸಿದರು. ಇದರಲ್ಲೂ ಒಂದು ರೂಪಾಯಿ ಕೂಡ ಬಂದಿಲ್ಲ. ಅವರೇ ಘೋಷಿಸಿ ಅವರೇ ಕೈ ಎತ್ತಿಬಿಟ್ಟರು. ಒಂದೇ ಒಂದು ರೂಪಾಯಿ ಕೂಡ ಇವತ್ತಿನವರೆಗೂ ಕೊಡಲಿಲ್ಲ ಎಂದು ಬಜೆಟ್ ಪ್ರತಿ ತೋರಿಸಿ ಪ್ರಶ್ನಿಸಿದರು. 

ಮಹದಾಯಿ ಯೋಜನೆಗೆ ಇವತ್ತಿನವರೆಗೂ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿಲ್ಲ. ಕೃಷ್ಣಾ ಮೇಲ್ದಂಡೆ ಬಗ್ಗೆ ಇವತ್ತಿನವರೆಗೂ ಗೆಜೆಟ್ ನೋಟಿಫಿಕೇಷನ್ ಆಗಲಿಲ್ಲ. ಇದರಿಂದ ಕೆಲಸವೇ ಶುರು ಆಗಿಲ್ಲ. ಯಾಕಿಂಥಾ ಅನ್ಯಾಯ ಎಂದು ಸಿಎಂ ಪ್ರಶ್ನಿಸಿದರು. 

ಈಗ ಮಾಜಿ ಪ್ರಧಾನಿ ದೇವೇಗೌಡರು ಮೋದಿಯವರನ್ನು ಹೊಗಳುತ್ತಾ ಕುಳಿತಿದ್ದಾರೆ. ಹಾಗಿದ್ರೆ ಮೇಕೆದಾಟು, ಕೃಷ್ಣ ಮೇಲ್ದಂಡೆಗೆ ಅನುಮತಿ ಕೊಡಿಸಲಿ. ರಾಜ್ಯಕ್ಕೆ ಬರಬೇಕಾದ ಹಣ ವಾಪಾಸ್ ಕೊಡಿಸಲಿ ಎಂದು ಕರೆ ನೀಡಿದರು. 

ರಾಯಚೂರು ಏಮ್ಸ್ ಕೊಡ್ತೀವಿ ಎಂದರು. ನಾನು CM ಆಗಿ ಮೂರು ಪತ್ರ ಬರೆದೆ. ಆದರೆ, ಇವತ್ತಿನವರೆಗೂ ಏಮ್ಸ್ ಬರಲಿಲ್ಲ. ಪತ್ರಗಳಿಗೆ ಉತ್ತರ ವೂ ಬರಲಿಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಬರೆದ ಪತ್ರಕ್ಕೆ ಕೇಂದ್ರ ಉತ್ತರ ಕೊಡಲಿಲ್ಲ. ಇದು 7.5 ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದರು. 

ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗೆ ನಾವು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು. ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಎಂದರೂ ಅಕ್ಕಿ ಕೊಡಲಿಲ್ಲ. ಇದರಿಂದ ನಾವು ನೇರವಾಗಿ ಜನರಿಗೇ ಹಣ ಕೊಟ್ಟೆವು ಎಂದರು. 

ಇಷ್ಟೆಲ್ಲಾ ರಾಜ್ಯದ ಜನರಿಗೆ ದ್ರೋಹ ಮಾಡಿ ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯ ಎನ್ನುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರಿಗೆ ನೆರವು ನೀಡುವುದು ಬಿಟ್ಟಿಭಾಗ್ಯ ಎಂದು ಅಹಂಕಾರ ಮೆರೆದರು ಎಂದು ಟೀಕಿಸಿದರು. 

ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆಗುವುದೇ ಇಲ್ಲ ಎಂದು ಮೊದಲ ಸುಳ್ಳು ಹೇಳಿದರು. ಬಳಿಕ ಗ್ಯಾರಂಟಿಗಳು ಜಾರಿ ಆದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿ ಬಿಡುತ್ತದೆ ಎಂದರು. ಈಗ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಯಾಗಿ, ರಾಜ್ಯ ಆರ್ಥಿಕವಾಗಿ ಸದೃಡವಾಗಿದೆ. ಮೋದಿ ಅವರ ಮಾತುಗಳು ಪರಮ‌ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದರು. 

ಸ್ವಾತಂತ್ರ ಬಂದಾಗಿನಿಂದ ದೇಶದ ಸಾಲ 2014ರ ವರೆಗೂ 54 ಲಕ್ಷ ಕೋಟಿ ಮಾತ್ರ ಇತ್ತು. ಈಗ 180 ಲಕ್ಷ ಕೋಟಿಗೆ ಭಾರತದ ಸಾಲ ಏರಿಕೆ ಆಗಿದೆ. ಮೋದಿ ಅವಧಿ ಒಂದರಲ್ಲೇ 130 ಲಕ್ಷ ಕೋಟಿ ಸಾಲ ಮಾಡಿದ್ದಾರೆ. 130 ಕೋಟಿ ಸಾಲ ಒಬ್ಬರೇ ಮಾಡಿದ್ದಾರಲ್ಲಾ ಇದು ಸಾಧನೆಯಾ ಎಂದರು. 

ಸೆಸ್, ಸರ್ಚಾರ್ಜ್ ಮೂಲಕವೂ ರಾಜ್ಯಕ್ಕೆ ನಿರಂತರ ದ್ರೋಹ, ಅನ್ಯಾಯ ಆಗುತ್ತಿದೆ. ಬರಗಾಲ ಬಂದಿದೆ. ನರೇಗಾ ಕೂಲಿಯ ದಿನಗಳನ್ನು ನಿಯಮದ ಪ್ರಕಾರ 150 ದಿನಗಳಿಗೆ ಏರಿಸಿ ಎಂದು ಮನವಿ ಮಾಡಿದರೂ ಏರಿಕೆ ಮಾಡಲಿಲ್ಲ ಎಂದು ಖಂಡಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News