"ದೇಶದಲ್ಲಿ ಬಿಜೆಪಿಯ ಅವನತಿ ಪರ್ವ ಶುರುವಾಗಿದೆ"-ಸಿದ್ಧರಾಮಯ್ಯ

 ದೇಶದಲ್ಲಿ ಬಿಜೆಪಿಯ ಅವನತಿ ಪರ್ವ ಶುರುವಾಗಿದೆ. ಪಶ್ಚಿಮ‌ ಬಂಗಾಳದಲ್ಲಿ‌ ದುಡ್ಡು,‌ ಅಧಿಕಾರ ಮತ್ತು ತೋಳ್ಬಲದ ವಾಮಮಾರ್ಗದ ಮೂಲಕ‌ ಸ್ವಲ್ಪಮಟ್ಟಿಗೆ ಬಲವನ್ನು ಹೆಚ್ಚಿಸಿಕೊಂಡರೂ ಗೆಲುವಿನ‌‌ ದಡ‌ದ ಸಮೀಪಕ್ಕೆ ಬರಲಾಗದೆ ಮುಖ ಭಂಗ ಅನುಭವಿಸಿದೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

Last Updated : May 2, 2021, 08:23 PM IST
  • ದೇಶದಲ್ಲಿ ಬಿಜೆಪಿಯ ಅವನತಿ ಪರ್ವ ಶುರುವಾಗಿದೆ. ಪಶ್ಚಿಮ‌ ಬಂಗಾಳದಲ್ಲಿ‌ ದುಡ್ಡು,‌ ಅಧಿಕಾರ ಮತ್ತು ತೋಳ್ಬಲದ ವಾಮಮಾರ್ಗದ ಮೂಲಕ‌ ಸ್ವಲ್ಪಮಟ್ಟಿಗೆ ಬಲವನ್ನು ಹೆಚ್ಚಿಸಿಕೊಂಡರೂ ಗೆಲುವಿನ‌‌ ದಡ‌ದ ಸಮೀಪಕ್ಕೆ ಬರಲಾಗದೆ ಮುಖ ಭಂಗ ಅನುಭವಿಸಿದೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
"ದೇಶದಲ್ಲಿ ಬಿಜೆಪಿಯ ಅವನತಿ ಪರ್ವ ಶುರುವಾಗಿದೆ"-ಸಿದ್ಧರಾಮಯ್ಯ title=

ಬೆಂಗಳೂರು: ದೇಶದಲ್ಲಿ ಬಿಜೆಪಿಯ ಅವನತಿ ಪರ್ವ ಶುರುವಾಗಿದೆ. ಪಶ್ಚಿಮ‌ ಬಂಗಾಳದಲ್ಲಿ‌ ದುಡ್ಡು,‌ ಅಧಿಕಾರ ಮತ್ತು ತೋಳ್ಬಲದ ವಾಮಮಾರ್ಗದ ಮೂಲಕ‌ ಸ್ವಲ್ಪಮಟ್ಟಿಗೆ ಬಲವನ್ನು ಹೆಚ್ಚಿಸಿಕೊಂಡರೂ ಗೆಲುವಿನ‌‌ ದಡ‌ದ ಸಮೀಪಕ್ಕೆ ಬರಲಾಗದೆ ಮುಖ ಭಂಗ ಅನುಭವಿಸಿದೆ ಎಂದು ರಾಜ್ಯ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಹಟದಿಂದ‌ ಬಿಜೆಪಿ ಕೊರೊನಾ‌‌ ಸೋಂಕಿನ‌ ಅಪಾಯವನ್ನೂ ಧಿಕ್ಕರಿಸಿ, ಚುನಾವಣಾ ಆಯೋಗದ ಮೇಲೆ‌ ಒತ್ತಡ ಹೇರಿ ಅಲ್ಲಿ ಚುನಾವಣೆಯನ್ನು ಘೋಷಿಸಿತ್ತು.ಪಶ್ಚಿಮ ಬಂಗಾಳದ ಸೋಲಿನ‌ ಹೊಣೆಯ ಜೊತೆ ಕೊರೊನಾದಿಂದ ಪ್ರಾಣ ಕಳೆದುಕೊಂಡ ಅಮಾಯಕ‌ ಜನರ ಸಾವಿನ ಹೊಣೆಯನ್ನೂ ನರೇಂದ್ರ ಮೋದಿ‌ ಮತ್ತು ಅಮಿತ್ ಶಾ ಜೋಡಿ ಹೊರಬೇಕಾಗುತ್ತದೆ. 
ತಾನು ದೇಶದ ಪ್ರಧಾನಿ ಎನ್ನುವುದನ್ನೇ ಮರೆತು, ಪೂರ್ಣಾವಧಿ ಬಿಜೆಪಿಯ ನಾಯಕನ ರೀತಿ ಅಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ನರೇಂದ್ರ ಮೋದಿಯವರಿಗೆ ಏಕಾಂಗಿಯಾಗಿ ಹೋರಾಟ ನಡೆಸಿದ್ದ ಮಮತಾ ಬ್ಯಾನರ್ಜಿ‌ ಮರ್ಮಾಘಾತ ನೀಡಿದ್ದಾರೆ.

ಇದನ್ನೂ ಓದಿ: ಮತ ಎಣಿಕೆಗೂ ಮೊದಲುi ಅಭ್ಯರ್ಥಿಗಳಿಗೆ ಮಮತಾ ಬ್ಯಾನರ್ಜೀಯಿಂದ Virtual crash course

ಪಶ್ಚಿಮ ಬಂಗಾಳದ ಗೆಲುವಿನ ರೂವಾರಿ‌ ಮಮತಾ ಬ್ಯಾನರ್ಜಿ ಅವರಿಗೆ ನನ್ನ ಅಭಿನಂದನೆಗಳು. ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಮತ್ತು ಕೇರಳದಲ್ಲಿ‌‌ ಎಲ್‌ಡಿಎಫ್ ಸ್ಪಷ್ಟ ಬಹುಮತ ಗಳಿಸಿವೆ. ಅಲ್ಲಿನ‌‌ ಗೆಲುವಿನ ರೂವಾರಿಗಳಾದ ಎಂ.ಕೆ‌.ಸ್ಟಾಲಿನ್ ಮತ್ತು ಪಿಣರಾಯ್ ವಿಜಯನ್ ಅವರಿಗೂ ನನ್ನ ಅಭಿನಂದನೆಗಳು.ನಿರೀಕ್ಷೆಯಂತೆ ಅಸ್ಸಾಂ‌ ಮತ್ತು ಪುದುಚೇರಿ ರಾಜ್ಯಗಳ ಗೆಲುವಷ್ಟೇ ಸೋತು ಹೋದ ಬಿಜೆಪಿಗೆ ಸಿಕ್ಕಿರುವ ಸಮಾಧಾನಕರ ಬಹುಮಾನ. 

ಪಶ್ಚಿಮ ಬಂಗಾಳದಲ್ಲಿ‌ ಕಾಂಗ್ರೆಸ್ ಮತ್ತು ಎಡಪಕ್ಷಗಳ  ಜೊತೆಗಿನ ಮೈತ್ರಿಕೂಟಕ್ಕೆ ಹಿನ್ನಡೆಯಾಗಿರುವುದು ನಿಜ. ಆ ರಾಜ್ಯದ ಜಾಗೃತ ಮತದಾರರು ಜಾತ್ಯತೀತ ಮತಗಳ ವಿಂಗಡಣೆಯಾಗಿ ಬಿಜೆಪಿಗೆ ಲಾಭವಾಗಬಾರದು ಮತ್ತು ದೇಶ ಕಂಟಕ ಬಿಜೆಪಿಯನ್ನು ಸೋಲಿಸಲೇಬೇಕೆಂದು ಟಿಎಂಸಿಗೆ ಸಾರಾಸಗಟಾಗಿ ಮತ ಹಾಕಿದಂತಿದೆ.‌

ಇದನ್ನೂ ಓದಿ: "ನನ್ನ ಪೋನ್ ನ್ನು ಟ್ಯಾಪ್ ಮಾಡಲಾಗುತ್ತಿದೆ"

ದುಡ್ಡು ಮತ್ತು ಅಧಿಕಾರದ ಬಲದಿಂದ ಚುನಾವಣೆಯನ್ನು ಗೆಲ್ಲಬಹುದೆಂಬ ಬಿಜೆಪಿಯವರ ಕುತಂತ್ರದ ರಾಜಕಾರಣಕ್ಕೆ ಈ ಚುನಾವಣೆಗಳು ದೊಡ್ಡ ಹೊಡೆತ ನೀಡಿದೆ.ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಿಂದಿನ ಚುನಾವಣೆಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಿರುವುದು ನಿಜವಾದರೂ ಆ ಎಲ್ಲ ಸ್ಥಾನಗಳು 'ಆಪರೇಷನ್ ಕಮಲ' ದ ಫಲವಾಗಿದೆ.ತಮ್ಮ ನಿಯಂತ್ರಣದಲ್ಲಿರುವ ಸಿಬಿಐ,‌ ಐಟಿ ಮತ್ತು‌ ಇಡಿ ಮೂಲಕ ಟಿಎಂಸಿ ನಾಯಕರನ್ನು ಹೆದರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಮೋದಿ-ಶಾ ಜೋಡಿ ಅವರನ್ನೇ ಬಳಸಿಕೊಂಡು ಚುನಾವಣೆಯನ್ನು ಎದುರಿಸಿದೆ. 

ಟಿಎಂಸಿ ಸರ್ಕಾರದಲ್ಲಿದ್ದ ಭ್ರಷ್ಟ ಮುಕುಲ್ ರಾಯ್, ಸುವೇಂದು ಅಧಿಕಾರಿಯಂತಹವರು ಈಗ ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು.  
ಬಿಜೆಪಿ ಬಾಯಿಬಿಟ್ಟರೆ ಐಡಿಯಾಲಜಿ ಬಗ್ಗೆ ಮಾತನಾಡುತ್ತದೆ. ಪಕ್ಷಾಂತರ ಮಾಡಿಕೊಳ್ಳುವಾಗ ಇವರಿಗೆ ಯಾವ ಐಡಿಯಾಲಜಿಯೂ ಇಲ್ಲ. 
ಪಶ್ಚಿಮ‌ ಬಂಗಾಳದಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸಿದೆ. ಹೀಗಿದ್ದರೂ ಪಶ್ಚಿಮ ಬಂಗಾಳದ ಮತದಾರರು ಹಣದ ಆಮಿಷಕ್ಕೆ ಈಡಾಗದೆ, ಬಿಜೆಪಿಯ ಹಿಂಸಾತ್ಮಕ ಒತ್ತಡಕ್ಕೆ‌ ಪೂರ್ಣವಾಗಿ ಮಣಿದಿಲ್ಲ. 

ದಕ್ಷಿಣದ ರಾಜ್ಯಗಳು ಎಂದೂ ಕೂಡಾ ಬಿಜೆಪಿಯ‌ ಕೋಮುವಾದಿ ರಾಜಕಾರಣವನ್ನು ಪುರಸ್ಕರಿಸಿಲ್ಲ. ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಿಜೆಪಿಗೆ ಇಲ್ಲಿಯ ವರೆಗೆ ಸ್ವಂತ ಬಲದಿಂದ ಅಧಿಕಾರ ಹಿಡಿಯಲಾಗಿಲ್ಲ. ಕರ್ನಾಟಕದಲ್ಲಿಯೂ ಬಿಜೆಪಿ ಅಧಿಕಾರ ಗಳಿಸಿದ್ದು ಪಾಪದ ಹಣದಿಂದ ನಡೆಸಿದ ' ಆಪರೇಷನ್ ಕಮಲ' ಎಂಬ ಅಡ್ಡಮಾರ್ಗದ ಮೂಲಕ.ಕೇರಳದಲ್ಲಿ ಈ ಬಾರಿ‌‌ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳಿತ್ತು. ಬಹುಷ: ಕೊರೊನಾ ಕಾಲದ ಪಿಣರಯ್ ವಿಜಯನ್ ನೇತೃತ್ವದ ಸರ್ಕಾರದ ಸಾಧನೆಯ ಪರವಾಗಿ ಅಲ್ಲಿನ‌ ಜನತೆ ಮತ ಹಾಕಿದಂತಿದೆ.

ಇದನ್ನೂ ಓದಿ: ನಂದಿಗ್ರಾಮದ ಜನರ ತೀರ್ಪನ್ನು ಸ್ವೀಕರಿಸುತ್ತೇನೆ-ಮಮತಾ ಬ್ಯಾನರ್ಜೀ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಿಂದ ಹಿಡಿದು ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯವರೆಗೆ ಎಲ್ಲ‌ ಕಡೆ ಜನ ಬಿಜೆಪಿಯನ್ನು ತಿರಸ್ಕರಿಸುತ್ತಿರುವುದು ಮುಂದಿನ ರಾಜಕೀಯ ಬೆಳವಣಿಗೆಯ ದಿಕ್ಸೂಚಿಯಾಗಿದೆ.ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದೆ. ಆಪರೇಷನ್ ಕಮಲಕ್ಕೆ ಈ ಮೂಲಕ ಅಲ್ಲಿಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಜೊತೆಗೆ ಚುನಾವಣಾ ಚಾಣಕ್ಯ ಎಂದು ಮಾಧ್ಯಮಮಗಳ ಮೂಲಕ ಹೊಗಳಿಸಿಕೊಂಡಿದ್ದ ವಿಜಯೇಂದ್ರ ಮತ್ತವರ ಹಣದ ಥೈಲಿಗೆ ಮತದಾರರು ಮಣೆ ಹಾಕಿಲ್ಲ.

ಬಸವಕಲ್ಯಾಣ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸಿದ್ದು, ಈಶ್ವರ ಖಂಡ್ರೆ ಅವರು ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದು ಹೀಗೆ ಹಲವು ಕಾರಣಗಳಿಂದ ನಮಗೆ ಸೋಲಾಯಿತು. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 4 ಲಕ್ಷ ಮತಗಳಿಂದ ಸೋತಿತ್ತು. ಈ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಗೆಲ್ಲುವ ವಿಶ್ವಾಸ ಇತ್ತು. ಆದರೂ ಅವರು ಭಾರಿ ಹೋರಾಟ ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿರುವ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಸ್ಕಿ ಅಭ್ಯರ್ಥಿ ಬಸವನಗೌಡ ತುರುವೀಹಾಳ ಅವರಿಗೆ ನನ್ನ ಅಭಿನಂದನೆಗಳು. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಶ್ರಮಿಸಿದ ಶಾಸಕರು, ಸಂಸದರು, ಮುಖಂಡರು ಹಾಗೂ ಎಲ್ಲ ಕಾರ್ಯಕರ್ತರಿಗೂ ನನ್ನ ಕೃತಜ್ಞತೆಗಳು.  
ರಾಜ್ಯ ಹಾಗೂ ದೇಶ ಸೂತಕದ ಮನೆಯಾಗಿರುವುದರಿಂದ ಇದು ಸಂಭ್ರಮಿಸುವ ಕಾಲವಲ್ಲ. ಹೀಗಾಗಿ ವಿಜಯತೋತ್ಸವದಂಥ ಆಚರಣೆಗಳು ಬೇಡ. ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ನಮ್ಮ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News