"ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವಂತಹ ಆಘಾತಕಾರಿ ಹೇಳಿಕೆಯನ್ನು ಬಿಜೆಪಿ ತನ್ನ ಶಾಸಕರಿಂದಲೇ ಕೊಡಿಸುತ್ತಿದೆ"

ನೆಲ, ಜಲ, ಭಾಷೆಯಂಥ ಸೂಕ್ಷ್ಮ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭಿರ ಆರೋಪ ಮಾಡಿದರು.

Written by - Prashobh Devanahalli | Edited by - Manjunath Naragund | Last Updated : Aug 19, 2022, 07:59 PM IST
  • ರಾಯಚೂರು ಜಿಲ್ಲೆಯಲ್ಲಿಯೂ ಬರಡು ಭೂಮಿಗಳಿವೆ. ಕೃಷ್ಣಾ ನದಿ ನೀರನ್ನೇ ಕಾಣದ ಪ್ರದೇಶಗಳಿವೆ.
  • ಅಂಥ ಪ್ರದೇಶಗಳಿಗೆ ಕೃಷ್ಣೆಯ ನೀರನ್ನು ಹರಿಸುವುದು ನಮ್ಮ ಪಕ್ಷದ ಬದ್ಧತೆಯಾಗಿದೆ.
  • ಇಂಥ ಪ್ರಯತ್ನಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಸಹಕಾರ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.
"ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವಂತಹ ಆಘಾತಕಾರಿ ಹೇಳಿಕೆಯನ್ನು ಬಿಜೆಪಿ ತನ್ನ ಶಾಸಕರಿಂದಲೇ ಕೊಡಿಸುತ್ತಿದೆ" title=
file photo

ಮಾನ್ವಿ (ರಾಯಚೂರು): ನೆಲ, ಜಲ, ಭಾಷೆಯಂಥ ಸೂಕ್ಷ್ಮ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭಿರ ಆರೋಪ ಮಾಡಿದರು.

ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಜಾತ್ಯತೀತ ಜನತಾದಳ ಪಕ್ಷದ ಬೃಹತ್ ಸಮಾವೇಶ ಹಾಗೂ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಜನ್ಮದಿನ ಕಾರ್ಯವನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.

ತನ್ನ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಬಿಜೆಪಿ ಸರಕಾರವು ರಾಯಚೂರನ್ನು ತೆಲಂಗಾಣಕ್ಕೆ ಸೇರುವಂಥ ಆಘಾತಕಾರಿ ಹೇಳಿಕೆಯನ್ನು ತನ್ನ ಶಾಸಕರಿಂದಲೇ ಕೊಡಿಸುತ್ತಿದೆ. ಇದಕ್ಕಿಂತ ಕನ್ನಡ ದ್ರೋಹ, ನಾಡದ್ರೋಹ ಇನ್ನೊಂದಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಸ್ಥಳೀಯ ಬಿಜೆಪಿ ಶಾಸಕರು ಕ್ಷೇತ್ರಕ್ಕೆ ಬಂದ ಎಲ್ಲ ಅನುದಾನವನ್ನು ಲೂಟಿ ಹೊಡೆದು, ಏನನ್ನೂ ಜನರ ಕೆಲಸ ಮಾಡದೇ ಈಗ ಜನರ ಗಮನ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ರಾಯಚೂರನ್ನು ತೆಲಂಗಾಣಕ್ಕೆ ಸೇರ್ಪಡೆ ಮಾಡುವ ಕನ್ನಡ ದ್ರೋಹಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ನಮ್ಮ ದೌರ್ಬಲ್ಯ ಎಂದು ನಂಬಿ ತೆಲಂಗಾಣ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ. ಅಂಥ ಹೇಳಿಕೆಗೆ ಮೂಲ ಕಾರಣರು ಯಾರು? ಎಂದು ಕುಮಾರಸ್ವಾಮಿ ಅವರು ಹೇಳಿದರು.

ನಾನು ರಾಯಚೂರು ಶಾಸಕರ ಹೇಳಿಕೆಯನ್ನೂ ಗಮನಿಸಿದ್ದೇನೆ, ಅದೇ ರೀತಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳ ಹೇಳಿಕೆಯ ಪೂರ್ಣಪಾಠವನ್ನೂ ಕೇಳಿದ್ದೇನೆ. ಆದರೆ, ಸ್ಥಳೀಯ ಶಾಸಕರ ಬೇಜಾಬ್ದಾರಿ ಹೇಳಿಕೆಯಿಂದ ಗೊಂದಲ ಉಂಟಾಗಿದೆ. ಆ ಶಾಸಕನಿಗೆ ಛೀಮಾರಿ ಹಾಕುವ ಕೆಲಸವನ್ನು ಬಿಜೆಪಿ ರಾಜ್ಯ ನಾಯಕರು ಈವರೆಗೂ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

ಕನ್ನಡಿಗರು, ತೆಲುಗರು ಗಡಿ ಪ್ರದೇಶದಲ್ಲಿ ಸಹೋದರ ಭಾವದಿಂದ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳ ನಾಯಕರು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಇಂಥ ವಿಘಟನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮ್ಮ ಪಕ್ಷ ಇಂಥ ಹೇಳಿಕೆಗಳನ್ನು ಖಂಡಿಸುತ್ತದೆ ಎಂದ ಕುಮಾರಸ್ವಾಮಿ ಅವರು; ನೂರಾರು ತೆಲುಗು ಕುಟುಂಬಗಳು ರಾಯಚೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೇಸಾಯ ಮಾಡಿಕೊಂಡು ಜೀವನ ಮಾಡುತ್ತಿವೆ. ಅವರೆಲ್ಲರೂ ಈಗ ಕನ್ನಡಿಗರೇ ಆಗಿದ್ದಾರೆ. ಆದರೆ, ಬಿಜೆಪಿ ಶಾಸಕರು ಇದರಲ್ಲಿಯೂ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಯಚೂರು ಜಿಲ್ಲೆಯಲ್ಲಿಯೂ ಬರಡು ಭೂಮಿಗಳಿವೆ. ಕೃಷ್ಣಾ ನದಿ ನೀರನ್ನೇ ಕಾಣದ ಪ್ರದೇಶಗಳಿವೆ. ಅಂಥ ಪ್ರದೇಶಗಳಿಗೆ ಕೃಷ್ಣೆಯ ನೀರನ್ನು ಹರಿಸುವುದು ನಮ್ಮ ಪಕ್ಷದ ಬದ್ಧತೆಯಾಗಿದೆ. ಇಂಥ ಪ್ರಯತ್ನಕ್ಕೆ ತೆಲಂಗಾಣ ಮುಖ್ಯಮಂತ್ರಿಗಳು ಸಹಕಾರ ನೀಡಬೇಕು ಎಂದು ಅವರು ಒತ್ತಾಯ ಮಾಡಿದರು.
ತೆಲಂಗಾಣ ಮುಖ್ಯಮಂತ್ರಿಗಳು ನನ್ನ ಜತೆ ಆತ್ಮೀಯರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ನೆಲ ಜಲದ ಬಗ್ಗೆ ರಾಜಿ ಮಾತೇ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಇಂಥ ಬದ್ಧತೆ ಇಲ್ಲ. ರಾಯಚೂರು ಶಾಸಕರ ಅಸಂಬದ್ಧ ಹೇಳಿಕೆಯನ್ನು ಖಂಡಿಸುತ್ತೇನೆ. ಮತ್ತೆ ಇಂಥ ಹೇಳಿಕೆಗಳು ಬೇಡ ಎಂದು ತೆಲಂಗಾಣ ಮುಖ್ಯಮಂತ್ರಿಗಳನ್ನು ಕೋರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ನುಡಿದರು.

ವಿಧಾನಸೌಧದಲ್ಲಿ ಡಕಾಯಿತರು:

ಮೊದಲು ಡಕಾಯಿತರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿತ್ತು. ಈಗ ವಿಧಾನಸೌಧಕ್ಕೆ ಹೋದರೆ ಸಾಕು. ಅಷ್ಟರಮಟ್ಟಿಗೆ ಜನರ ದುಡ್ಡು ಲೂಟಿಯಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ರಾಜ್ಯ ಸಂಪದ್ಭರಿತವಾಗಿದೆ. ಆದರೆ, ಇವರು (ಬಿಜೆಪಿಯವರು) ರಾಜ್ಯವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಜನರ ತೆರಿಗೆ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಂದು ಅವರು ಆರೋಪಿಸಿದರು.

ನನ್ನನ್ನು ಒಮ್ಮೆ ನಂಬಿ, ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ. ಯಾವ ಪಕ್ಕದ ಹಂಗಿಲ್ಲದೆ ಸ್ವತಂತ್ರ ಸರಕಾರ ಮಾಡುವ ಅವಕಾಶ ನೀಡಿ. ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ, ಮಹಿಳಾ-ಯುವಜನ ಸಬಲೀಕರಣ, ವಸತಿ ಸೇರಿರುವ ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲಾಗುವುದು. ನೆಲ, ಜಲ, ಭಾಷೆಯ ಹಿತಾಸಕ್ತಿಗೆ ಧಕ್ಕೆ ಆಗದಂತೆ ಕನ್ನಡ ಆಸ್ಮಿತೆಗೆ ಅಪಚಾರ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಘೋಷಿಸಿದರು.

ಈ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮುಂತಾದವರು ಮಾತನಾಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News